November 8, 2007

ಗುತ್ಯಾ ಮತ್ತು ಅವನ ಕಿರೀಟ

ಇದು ನಾನು ನೋಡಿದ ಘಟನೆಯಲ್ಲ. ಅಮ್ಮನಿಂದ ಕೇಳಿದ್ದು, ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದು. ಅಮ್ಮ ಸುಮಾರು 22 ಅಥವಾ 23 ವರ್ಷದವಳಿದ್ದಾಗಿನ ಕಥೆ. ಅವಳ ಊರು ಅಂದರೆ ನನ್ನ ಅಜ್ಜನ ಮನೆ ಶಿರಸಿ ತಾಲೂಕಿನ ದೊಡ್ನಳ್ಳಿಯಲ್ಲಿ ಆಗಿನ ಕಾಲದಲ್ಲಿ ನಾಟಕಗಳ ಗೀಳು ಎಲ್ಲರಿಗೂ ಸ್ವಲ್ಪ ಜಾಸ್ತಿಯೇ ಇತ್ತು ಎಂದು ಕೇಳಿದ್ದೇನೆ.

ಒಂದು ನಾಟಕವನ್ನು ತಯಾರಿ ಮಾಡಿಕೊಂಡಿದ್ದರು. ಅದರ ಕಥೆಯ ಸಾರಾಂಶವೆಂದರೆ ಒಬ್ಬ ಅರಸನಿದ್ದವನು ಏನೋ ಕಾರಣದಿಂದ ಬಡವನಾಗಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ತಲುಪುತ್ತಾನೆ. ತೀರಾ unrealistic ಅಂತೀರಾ? ಅದು ನನಗೂ ಗೊತ್ತು, ಅಮ್ಮನಿಗೂ ಗೊತ್ತು. ಆದರೆ ಅದು ನಾಟಕ ತಾನೇ, ಏನು ಬೇಕಾದರೂ ಆಗಬಹುದು. ಅದೇ ಊರಿನ ಎಮ್ಮೆ ಕಾಯುವ ಗುತ್ಯಾ ತನಗೆ ಅರಸನ ಪಾತ್ರವೇ ಬೇಕು ಎಂದು ಹಟಮಾಡಿ ಕೊನೆಗೂ ಆ ಪಾತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸಾಕಷ್ಟು ಮೊದಲಿನಿಂದಲೇ ತಾಲೀಮು ನಡೆಸಿದ್ದರು. ಎಲ್ಲವೂ ಸರಿಯಾಗಿಯೇ ನಡೆದಿತ್ತು.

ನಾಟಕ ಪ್ರದರ್ಶಿಸುವ ರಾತ್ರಿ ಬಂತು. ಎಲ್ಲರೂ ತಮ್ಮ ತಮ್ಮ ಉಡುಗೆಗಳೊಂದಿಗೆ ರಂಗಮಂಚಕ್ಕೆ ಬರಲು ಸಿದ್ಧರಾದರು. ಗುತ್ಯಾನಿಗೆ ಅರಸನ ವೇಷ ಕಟ್ಟಿದರು. ಬಣ್ಣ ಬಣ್ಣದ ಅಂಗಿ, ಬಂಗಾರ ಮತ್ತು ಮುತ್ತಿನ ಸರಗಳು, ಕೈಯ್ಯಲ್ಲಿ ಹೊಳೆಯುವ ಖಡ್ಗ, ತಲೆಯಮೇಲೆ ರತ್ನಖಚಿತ ಕಿರೀಟ...
ಗುತ್ಯಾನಿಂಗಂತೂ ಖುಷಿಯೋ ಖುಷಿ. ಹೆಚ್ಚು ಕಡಿಮೆ ಅವನು ನೆಲದ ಮೇಲೆಯೇ ಇಲ್ಲ ಆ ರಾತ್ರಿ. ನಾಟಕ ನಡೆಯುತ್ತಿರುವಾಗ ಗುತ್ಯಾನ ಪ್ರವೇಶದ ದೃಶ್ಯ ಬಂತು. ರಾಜ ಗಂಭೀಯದಿಂದಲೇ ಹೋಗಿ ತಾನು ಹೇಳಬೇಕಾಗಿದ್ದನ್ನೆಲ್ಲಾ, ಮಾಡಬೆಕ್ಕಾಗಿದ್ದನ್ನೆಲ್ಲಾ ಸರಿಯಾಗಿಯೇ ಮುಗಿಸಿ ಒಳಗೆ ಬಂದ. ನಿರ್ದೇಶಕರು ಒಮ್ಮೆ ನಿಟ್ಟುಸಿರು ಬಿಟ್ಟರು.

ಕಥೆ ಮುಂದುವರಿಯಿತು. ಅರಸ ದಿವಾಳಿಯಾಗುವ ದೃಶ್ಯ ಹತ್ತಿರ ಬಂತು. ಒಳಗಡೆ ಗುತ್ಯಾನಿಗೆ ಹರುಕು ಅಂಗಿ ತೋಡಿಸಿದರು, ತಲೆಕೊದಲನ್ನು ಕೆದರಿದರು, ಕೈಯ್ಯಲ್ಲಿ ಮುರುಕು ಪಾತ್ರೆಯನ್ನು ಹಿಡಿಸಿದರು. ಗುತ್ಯಾನಿಗೆ ಈ ವೇಷ ಏನು ಮಾಡಿದರೂ ಮನಸ್ಸಿಗೆ ಬರಲೊಲ್ಲದು. ನೋಡಲು ಕುಳಿತಿರುವ ನೂರಾರು ಜನರ ಮುಂದೆ ಹೀಗೆ ಹೋಗಬೇಕಾಯಿತಲ್ಲಾ ಎಂಬ ಕೊರಗು. ಏಕೆಂದರೆ ತಾಲೀಮಿನ ಸಮಯದಲ್ಲಿ ಅವನಿಗೆ ಇದ್ಯಾವುದರ ಕಲ್ಪನೆಯೂ ಇರಲಿಲ್ಲ.
ಗುತ್ಯಾನಿಗೆ ಭಿಕ್ಷುಕನ ವೇಷ ತೊಡಿಸಿದ ನಂತರ ವೇಷವನ್ನು ತೊಡಿಸುವವನು ಇನ್ನೊಬ್ಬನಿಗೆ ವೇಷ ತೊಡಿಸುವುದರಲ್ಲಿ ಮಗ್ನನಾಗಿದ್ದ. ಕೆಲ ಕ್ಷಣಗಳ ಬಳಿಕ ತಿರುಗಿ ನೋಡಿದರೆ ಗುತ್ಯಾ ಮತ್ತೆ ಕಿರೀಟ ತೊಟ್ಟು ಕುಳಿತಿದ್ದಾನೆ! ಗುತ್ಯಾನಿಗೆ ಕಿರೀಟವನ್ನಂತೂ ತೆಗೆಯುವುದು ಸುತಾರಾಂ ಇಷ್ಟವಿರಲಿಲ್ಲ. ಅರಸನ ಅಂಗಿಯಂತೂ ಇಲ್ಲ, ಕಿರೀಟವಾದರೂ ಇರಲಿ ಎಂಬ ಆಸೆ ಅವನಿಗೆ. ಅಂತೂ ಇಂತೂ ಅವನಿಗೆ ಬುದ್ಧಿ ಹೇಳಿ, 'ನೋಡು ಈಗ ನೀನು ರಾಜನಲ್ಲ, ಭಿಕ್ಷುಕ' ಎಂದು ಮನವರಿಕೆ ಮಾಡಿಕೊಟ್ಟರು. ಅವನು ಗೊತ್ತಾಯಿತು ಎನ್ನುವಂತೆ ತಲೆಯಾಡಿಸಿದ. ಸರಿ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು.

ಗುತ್ಯಾ ಭಿಕ್ಷೆ ಬೇಡುವ ದೃಶ್ಯ ಬಂತು. ತಕ್ಷಣ ಗುತ್ಯಾ stage ಮೇಲೆ ಬಂದ. ನೋಡಿದರೆ ಕಿರೀಟ ತಲೆಯ ಮೇಲೇ ಇದೆ! ಇನ್ನೇನು ಬರಬೇಕು ಎನ್ನುವಾಗ ಒಳಗಡೆ ಇದ್ದವರ ಕಣ್ಣು ತಪ್ಪಿಸಿ ಕಿರೀಟವನ್ನು ಹಾಕಿಕೊಂಡು ಬಂದುಬಿಟ್ಟಿದ್ದ!! ಹರುಕು ಅಂಗಿ, ತಲೆಯ ಮೇಲೆ ಕಿರೀಟವನ್ನು ಹಾಕಿಕೊಂಡ ಗುತ್ಯಾ ಭಿಕ್ಷುಕ ಕೈಯ್ಯಲ್ಲಿ ಮುರುಕು ಪಾತ್ರೆ ಹಿಡಿದುಕೊಂಡು 'ಹಸಿವಾಗಿ ಪ್ರಾಣವ ಬಿಡುತಿಹೆನಾ, ತಾಯೇ ಕೊಡವ್ವಾ ನಂಗೆ ನೀರವನ (ನೀರನ್ನು-ಗುತ್ಯಾನ ಬಾಯಲ್ಲಿ ಅದು ನೀರವನ ಆಗಿತ್ತು) ಎಂದು ಪ್ರಾಸಬದ್ಧವಾಗಿ ಹಾಡುತ್ತಿದ್ದರೆ, ಪ್ರೇಕ್ಷಕರು ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಗುತ್ತಿದ್ದರಂತೆ!

2 comments:

ಅನಿಕೇತನ said...

ಸೀಮಾ,
ಬಹಳ ಚೆನ್ನಾಗಿದೆ. ನೀವು ಇದನ್ನೇ ಆಡಿಯೋ ಫಾರ್ಮನಲ್ಲಿ ಇಲ್ಲಿ ನಮ್ಮ ಜೊತೆ ಹಂಚಿಕೊಂಡಿದ್ದರೆ ಅದರ ಗಮ್ಮತ್ತೆ ಬೇರೆ ಇತ್ತು ಅನ್ನಿಸುತ್ತೆ. ಇಂಥಹ ಪ್ರಸಂಗಗಳು ಕೇಳಲು ನಿಜಕ್ಕೂ ಸುಂದರ, ಅಲ್ವಾ !

Seema S. Hegde said...

ಅನಿಕೇತನ,
ಇಂಥದೇ ಇನ್ನೂ ಕೆಲವು ಪ್ರಸಂಗಗಳಿವೆ.
ಅವುಗಳನ್ನು ಮೊದಲು ನಿಮ್ಮ ಬಳಿ audio form ನಲ್ಲಿ ಹಂಚಿಕೊಂಡೇ ನಾನು ಮುಂದುವರೆಯುವುದು. Joking :D