Showing posts with label Story. Show all posts
Showing posts with label Story. Show all posts

August 4, 2011

ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'

ಹದಿನೈದು ದಿನಗಳ ಹಿಂದೆ ಊರಿಗೆ ಹೊರಟಿದ್ದೆವು. ಊರಿನ ಮಳೆಗಾಲವನ್ನು ಅನುಭವಿಸದೆ ಎಷ್ಟೋ ವರ್ಷಗಳಾಗಿತ್ತು. ನಾನು ಊರಿನ ಮಳೆಯನ್ನು ಕಣ್ಣಲ್ಲಿ ತುಂಬಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಬೆಳಿಗ್ಗೆ ಆರು ಘಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಡುವ ಜನಶತಾಬ್ದಿ ರೈಲಿನಲ್ಲಿ ಕಾಯ್ದಿರಿಸಿದ್ದ ಸೀಟಿನಲ್ಲಿ ಎಂದಿನಂತೆಯೇ ಕಿಟಕಿಯ ಪಕ್ಕ ನಾನು, ನನ್ನ ಪಕ್ಕ ರಾಜೀವ ಕುಳಿತೆವು. ಹಾವೇರಿಯಲ್ಲಿ ಇಳಿದು ಶಿರಸಿಗೆ ಬಸ್ಸಿನಲ್ಲಿ ಹೋದರೆ ಮಧ್ಯಾನ್ಹದ ಊಟಕ್ಕೆ ಮನೆ ತಲುಪಬಹುದು. ರಾಜೀವನ ಪಕ್ಕದಲ್ಲಿ ಇನ್ಯಾರೋ ಕುಳಿತರು. ಎದುರು-ಬದುರಿಗೆ ಇರುವಂಥ ಸೀಟುಗಳಾಗಿದ್ದರಿಂದ ನಮ್ಮ ಎದುರಿಗೆ ಅಜ್ಜಿ-ಮೊಮ್ಮಗ, ಇನ್ನೊಬ್ಬ ವ್ಯಕ್ತಿ ನಮಗಿಂತ ಮೊದಲೇ ಆಸೀನರಾಗಿದ್ದರು. ನಮಗೆ diagonally opposite ಆಗಿ ಯಾರೋ ಒಬ್ಬರು ಮಧ್ಯ ವಯಸ್ಸಿನ uncle ಕುಳಿತಿದ್ದರು. ರೈಲು ಹೊರಟಿತು. ರಾಜೀವನಿಗೆ ನನಗಿಂತಲೂ ಓದುವ ಹುಚ್ಚು ತುಂಬಾ ಜಾಸ್ತಿ. ಮೂರ್ನಾಲ್ಕು ಪುಸ್ತಕ ತಂದಿದ್ದ.... ಒಂದನ್ನು ಚೀಲದಿಂದ ಎಳೆದು ಶುರು ಹಚ್ಚಿಕೊಂಡ.

ನಾನು ಕಿಟಕಿಯಿಂದ ಹೊರಗಡೆ ನೋಡಿ ರೈಲ್ವೆ ಟ್ರಾಕ್ ನ ಪಕ್ಕದ ಪ್ಲಾಸ್ಟಿಕ್ ನೋಡಿ ದುಃಖಿಸತೊಡಗಿದ್ದೆ . ನನಗಾದ ಕಿರಿಕಿರಿಯನ್ನು ಅವನಿಗೂ ಸ್ವಲ್ಪ ಅಂಟಿಸಿ ಕೃತಾರ್ಥಳಾಗೋಣವೆಂದು "ರಾಜೀವ..." ಎಂದೆ. "ತಡಿಯೇ" ಎಂಬ ಉತ್ತರ ಬಂತು. ಸುಮ್ಮನಾದೆ. ಪುಸ್ತಕದಲ್ಲಿ ಮುಳುಗಿ ಹೋಗಿದ್ದ. ನನಗೆ ಸ್ವಲ್ಪ ನಿದ್ದೆಯ ಜೋಂಪು ಹತ್ತಿ ಎಚ್ಚರವಾಗುವಷ್ಟರಲ್ಲಿ ಒಂದು ಘಂಟೆ ಕಳೆದಿತ್ತು. ರಾಜೀವ ಓದುತ್ತಿದ್ದ ಪುಸ್ತಕ ಮುಗಿಸಿ ಆಗಿತ್ತು. ಏನೋ ವಿಚಾರ ಮಾಡುತ್ತಿದ್ದವನಂತೆ ಕಂಡ. "ಏನು?!!" ಎಂದೆ. "ಈ ಪುಸ್ತಕ ಓದು" ಎಂದು ಕೈಲಿರುವ ಪುಸ್ತಕ ಕೊಟ್ಟ. ನೋಡಿದೆ. ಅಗ್ನಿ ಶ್ರೀಧರ್ ಬರೆದ 'ಎದೆಗಾರಿಕೆ' ಆಗಿತ್ತು. “Underworld ಬಗ್ಗೆಯಾ? ನಂಗೆ ಇಷ್ಟ ಇಲ್ಲ, ಓದಲ್ಲ. ಬೇರೆ ಪುಸ್ತಕ ಕೊಡು" ಎಂದೆ. "ಒಮ್ಮೆ ಓದಿ ನೋಡು, ತುಂಬಾ ಚೆನ್ನಾಗಿದೆ" ಎಂದ. "ಒಬ್ಬರನ್ನೊಬ್ಬರು ಕೊಚ್ಚಿ ಸಾಯಿಸೋದು- ಇನ್ನೆಷ್ಟು ಚೆನ್ನಾಗಿರಲು ಸಾಧ್ಯ?" ಎಂದು ಗೊಣಗಿದೆ. “Different ಆಗಿದೆ, ನೋಡು ಒಮ್ಮೆ" ಎಂದ. ತಾನು ರಜನೀಕಾಂತ್ ಬಗ್ಗೆ ಇನ್ಯಾವುದೋ ಪುಸ್ತಕದಲ್ಲಿ ಮುಳುಗಿದ. ಅವನ ಒತ್ತಾಯಕ್ಕೆ ತೆಗೆದುಕೊಂಡು ಶುರು ಮಾಡಿದೆ. 'ಎದೆಗಾರಿಕೆ' ಹೆಚ್ಚು ಕಡಿಮೆ ಅರವತ್ತು ಪುಟಗಳ ಸಣ್ಣ ಪುಸ್ತಕ. ಒಂದು-ಒಂದೂವರೆ ತಾಸಿನಲ್ಲಿ ಓದಿ ಮುಗಿಸಬಹುದು. ಓದುತ್ತಾ ಹೋದೆ... ಓದುತ್ತಾ ಹೋದೆ...ಓದುತ್ತಾ ಹೋದೆ... ರಾಜೀವ "ಸೀಮಾ.." ಎಂದ... ನಾನು "ಸ್ವಲ್ಪ ತಡಿಯೋ" ಎಂದೆ. ನಂಗೆ ಗೊತ್ತಿತ್ತು ಎನ್ನುವವರ ತರ ನಕ್ಕ.

ರಾಜೀವ ಹೇಳಿದಂತೆ ತುಂಬಾ different ಆಗಿತ್ತು ಕಥೆ. ಹೇಳುವಂಥ ದೊಡ್ಡ ಕಥೆಯೇನೂ ಇಲ್ಲ. ಆದರೆ ನಿರೂಪಿಸಿರುವ ರೀತಿ ಮಾತ್ರ ಅಮೋಘ! ಸಾರಾಂಶ ಇಷ್ಟೇ- ಮುಂಬೈನ underworld ನ ರೌಡಿಯಾಗಿದ್ದವನ ಪೈಕಿ ಒಬ್ಬನನ್ನು (ಕಥಾನಾಯಕ) ಮುಗಿಸಲು ಬೆಂಗಳೂರಿನ ಏಳೆಂಟು ಜನ ರೌಡಿಗಳು ತುಮಕೂರಿನ ಹತ್ತಿರ ಒಳಗೆಲ್ಲೋ farmhouse ಗೆ ಕರೆದುಕೊಂಡು ಹೋಗುತ್ತಾರೆ. ಅವನಿಗೆ ತನ್ನನ್ನು ಸಾಯಿಸಲು ಹೊರಟಿದ್ದಾರೆ ಎಂಬುದರ ಅರಿವಾಗಿರುತ್ತದೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಅವರ ಊಹೆ ಸುಳ್ಳಾಗುತ್ತದೆ. ದಾರಿಯಲ್ಲಿ ಒಂದೆರಡು ಸಣ್ಣ-ಪುಟ್ಟ ಅವಕಾಶಗಳು ಸಿಕ್ಕಿದರೂ ಅವನು ಅವುಗಳನ್ನು ಬಳಸಿಕೊಳ್ಳುವುದಿಲ್ಲ. ಅವನು ವರ್ತನೆ ಎಷ್ಟು ಸಹಜವಾಗಿರುತ್ತದೆಯೆಂದರೆ ಅವನಿಗೆ ತಾನು ಸಾಯಲಿರುವುದು ಗೊತ್ತೇ ಆಗಿಲ್ಲವೇನೋ ಎಂಬ ಗುಮಾನಿ ಆ ರೌಡಿಗಳಿಗೆ ಬರತೊಡಗುತ್ತದೆ.

ನಡುವೆ ಬೆಕ್ಕುಗಳ ಒಂದು ಕಥೆ ಬರುತ್ತದೆ- ಸಾಯಿಸಲು ತೆಗೆದುಕೊಂಡು ಹೋಗುತ್ತಿರುವ ಎರಡು ಬೆಕ್ಕುಗಳ ಪೈಕಿ ಒಂದು ಸ್ಥಿತಪ್ರಜ್ನನಾಗಿ ಕುಳಿತು ಸಾವಿಗೆ ಮಾನಸಿಕ ತಯಾರಿ ನಡೆಸುತ್ತಿದ್ದಂತೆ ಕಂಡರೆ ಇನ್ನೊಂದು ಬೋನಿನಿಂದ ಜಿಗಿದು ಓಡಿ ಹೋಗಿ ತಪ್ಪಿಸಿಕೊಳ್ಳಲು ನೋಡಿ ಹಿಂದಿನಿಂದ ಬರುತ್ತಿರುವ ಕಾರಿನ ಚಕ್ರದಡಿ ಸಿಕ್ಕಿ ಸಾಯುತ್ತದೆ. ಇವೆರಡರಲ್ಲಿ ಯಾವ ಬೆಕ್ಕು ನಿಜವಾಗಿ ಹೀರೋ? ಸಾವನ್ನು ಎದುರಿಸಲು ಸಿದ್ಧವಾಗಿರುವ ಬೆಕ್ಕೋ ಅಥವಾ ಧೈರ್ಯ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಬೆಕ್ಕೋ?!

ಆ ರೌಡಿಗಳ ಪೈಕಿ ಒಬ್ಬರಲ್ಲಿ ನಾಯಕ ಮನಸ್ಸನ್ನು ತೆರೆದುಕೊಳ್ಳುತ್ತಾನೆ. ಆ ರೌಡಿಗೆ ತಮ್ಮನ್ನು ನಾಯಕ emotional blackmail ಮಾಡುತ್ತಿದ್ದಾನಾ ಎಂದು ಗುಮಾನಿ ಶುರುವಾಗುತ್ತದೆ. ನಾಯಕ ಒಮ್ಮೆ "ನನ್ನನ್ನು ಹೇಗೆ ಮತ್ತು ಯಾವಾಗ ಸಾಯಿಸಬೇಕೆಂದು ಪ್ಲಾನ್ ಮಾಡಿದ್ದೀರಿ?" ಎಂದೂ ಕೂಡ ಕೇಳುತ್ತಾನೆ. ತಾನು ಸಾಯಲಿರುವುದು ಅವನಿಗೆ ಗೊತ್ತಿದ್ದರೂ ಅವನ ಸಹಜ ವರ್ತನೆಯನ್ನು ಕಂಡು ರೌಡಿಗಳು ಹೌಹಾರುತ್ತಾರೆ! ಮುಂಬೈ ನಲ್ಲಿ ಅವನಿಗಾದ ಅನುಭವಗಳ ಪೈಕಿ ಎರಡು ಅನುಭವಗಳು ಅತ್ಯಂತ ನೋವುಂಟುಮಾಡಿದವು ಎಂದೆನ್ನುತ್ತಾ ಆ ಅನುಭವಗಳನ್ನು ಬಿಡಿಸಿಡುತ್ತಾನೆ. ಇಸ್ಪೀಟು ಆಡುವಾಗ ಇತರರು ಬೇಕೆಂತಲೇ ಅವನನ್ನು ಗೆಲ್ಲಿಸುತ್ತಾರೆ. ಅವನಿಗೂ ಗೊತ್ತು, ಹಾಗೆಂದು ಕೇಳಿಯೇ ಬಿಡುತ್ತಾನೆ.

ರೌಡಿಗಳ ಗ್ಯಾಂಗ್ ನ ಮುಖ್ಯಸ್ಥನೂ ಈತನನ್ನು ಪ್ರೀತಿಸತೊಡಗುತ್ತಾನೆ. ಗ್ಯಾಂಗ್ ನ ಇತರರಂತೂ ಅವನು ಹೇಗಾದರೂ ತಪ್ಪಿಸಿಕೊಂಡು ಓಡಿ ಹೋಗಲಿ ಎಂದು ಬಯಸತೊಡಗುತ್ತಾರೆ. ಆದರೆ ಕೊಲ್ಲದೆ ವಿಧಿಯಿಲ್ಲ- ಮುಂಬೈ ನಿಂದ ಆರ್ಡರ್ ಆಗಿದೆ. ಗ್ಯಾಂಗ್ ನ ಮುಖ್ಯಸ್ಥ ಅವನನ್ನು ಆದಷ್ಟು ಮಟ್ಟಿಗೆ ನೋವಾಗದಂತೆ ಸಾಯಿಸಿ. ಸಾಯಿಸುವಾಗ ಹೆಚ್ಚು ಸಮಯ ಹಿಡಿಯದಂತೆ ನೋಡಿಕೊಳ್ಳಿ" ಎಂದು ಆಜ್ಞೆ ನೀಡುತ್ತಾನೆ. ಅವನಿಂದ ಇಷ್ಟೇ ಸಾಧ್ಯ. ಸಾಯಿಸುವ ಹಿಂದಿನ ದಿನ ರಾತ್ರಿ ಜಾಗವನ್ನು ನೋಡಿಕೊಂಡು ಬರಲು ಗ್ಯಾಂಗ್ ನವರು ಹೋಗುತ್ತಾರೆ. ನಾಯಕನೂ ಜೊತೆಯಲ್ಲಿ ಹೋಗುತ್ತಾನೆ. ಗ್ಯಾಂಗ್ ನಲ್ಲಿ ಯಾರಿಗೆ ಇವನು ಹತ್ತಿರವಾಗಿದ್ದಾನೋ ಅವನು ಜಾರಿ ಬೀಳುತ್ತಾನೆ; ಅವನ ಪ್ಯಾಂಟ್ ಪೂರ್ತಿ ಕೆಸರಾಗುತ್ತದೆ. ಮನೆಗೆ ಬಂದ ನಂತರ ನಾಯಕನು ಅವನಿಗೆ ತನ್ನದೇ ಪ್ಯಾಂಟನ್ನು ಕೊಡುತ್ತಾನೆ, ಹೇಳಿಮಾಡಿಸಿದಂತೆ ಹೊಂದಿಕೆಯಾಗುತ್ತದೆ. ನಾಳೆ ಸಾಯಲಿರುವ ವ್ಯಕ್ತಿಯ ಪ್ಯಾಂಟನ್ನು ಹಾಕಿಕೊಳ್ಳಲು ಭಯವಾದರೂ ಒತ್ತಾಯಕ್ಕೆ ಮಣಿದು ಹಾಕಿಕೊಳ್ಳುತ್ತಾನೆ. ನಾಯಕನ ಪ್ಯಾಂಟ್ ನಲ್ಲಿರುವ ಈತ ನಾಯಕನ ಮನಸ್ಥಿತಿಯನ್ನು ತಾನೂ ಅನುಭವಿಸತೊಡಗುತ್ತಾನೆ.

ನಾಯಕನಿಗೆ ಗೊತ್ತು, ಇವತ್ತು ಓಡಿ ಹೋದರೂ ನಾಳೆ ಸಾವು ತಪ್ಪಿದ್ದಲ್ಲ ಎಂದು. ಸಾವನ್ನು ಎದುರುಗೊಳ್ಳುತ್ತಾನೆ; ಎದೆಗಾರಿಕೆ ತೋರಿಸುತ್ತಾನೆ. ನಾಯಕನ ಹೆಸರು ಎಲ್ಲಿಯೂ ಇಲ್ಲ. ಇತರ ಯಾರ ಹೆಸರೂ ಇಲ್ಲ. ಕೇವಲ ಕಥಾನಾಯಕಿಯ ಹೆಸರು ಮಾತ್ರ ಸಿಗುತ್ತದೆ; ರಶ್ಮಿ ಎಂದು. ಸಾವಿನ ಬಗ್ಗೆ ಅವನು ಹೇಳುವ ಕೆಲವು ಮಾತುಗಳಂತೂ ಮನ ಮುಟ್ಟುತ್ತವೆ. ಮನದಲ್ಲಿಯೇ ಉಳಿಯುತ್ತವೆ. ಹಿಂದಿನ ದಿನ ರಾತ್ರಿ ರಶ್ಮಿ ತನ್ನ ಕನಸಿನಲ್ಲಿ ಬಂದಿದ್ದಳು ಎಂದು ಹೇಳಿಕೊಳ್ಳುತ್ತಾನೆ.

ಮರುದಿನ ರಾತ್ರಿ ಅವನನ್ನು ಸಾಯಿಸುವ ಪ್ಲಾನ್…. ಅವನು ಓಡಿ ಹೋಗಬಾರದಾ ಎಂದು ಎಲ್ಲರೂ ಹಾತೊರೆಯುತ್ತಾರೆ, ಓದುಗನೂ ಹಾತೊರೆಯುತ್ತಾನೆ.... ಆದರೆ ಹಾಗಾಗುವುದೇ ಇಲ್ಲ. ಇಷ್ಟವಿಲ್ಲದಿದ್ದರೂ ಕುತ್ತಿಗೆಗೆ ಹಗ್ಗ ಬಿಗಿಯಲೇ ಬೇಕು, ಎಲ್ಲವೂ ಸರಾಗವಾಗಿ ನಡೆದುಹೋಗುತ್ತದೆ, ಯಾವುದೇ ಪ್ರತಿರೋಧವನ್ನೊಡ್ಡದೆಯೇ ಸಾವನ್ನಪ್ಪುತ್ತಾನೆ; ಕೆಲವೇ ಕೆಲವು ಸೆಕೆಂಡುಗಳಲ್ಲಿ ಪ್ರಾಣ ತ್ಯಜಿಸುತ್ತಾನೆ. ಇವರಿಗೆಲ್ಲ ಅವನ ಸಾವಿಗೆ ತಾವು ಕೇವಲ ನೆಪ ಮಾತ್ರವಾಗಿದ್ದೆವಾ ಎಂದೆನಿಸಿಬಿಡುತ್ತದೆ. ಅವನು ಯಾವಾಗಲೋ ಸಮಾಧಿ ಸ್ಥಿತಿ ತಲುಪಿಬಿಟ್ಟಿದ್ದ! "ದೇಹದಿಂದ ಬಟ್ಟೆಯನ್ನು ಕಳಚಿದ ಹಾಗೆ" ಎಂದು ಶ್ರೀಧರ್ ಬರೆಯುತ್ತಾರೆ. ಅವನಿಷ್ಟದಂತೆಯೇ ನಾಯಕಿಗೆ ಅವನು ಅಪಘಾತದಲ್ಲಿ ತೀರಿಹೋದಎಂದು ತಿಳಿಸಲು ಫೋನ್ ಮಾಡಲಾಗುತ್ತದೆ. ಮುಂದಿನ ಎಂಟು-ಹತ್ತು ಸಾಲುಗಳಲ್ಲಿ ಪುಸ್ತಕ ಮುಗಿದೇ ಹೋಗುತ್ತದೆ. ಅವುಗಳೇನೆಂದು ಇಲ್ಲಿ ಬರೆಯುವುದಿಲ್ಲ. ಓದಿ ಅನುಭವಿಸಿ.

ನಾನು ಒಂದೇ ಉಸಿರಿಗೆ ಪುಸ್ತಕ ಮುಗಿಸಿದೆ. ತಡೆಯಲಾಗಲಿಲ್ಲ; ಪಟಪಟನೆ ಕೆಲ ಹನಿ ಕಣ್ಣೀರು ಉದುರಿದವು. ಒರೆಸಿಕೊಳ್ಳುವಷ್ಟರಲ್ಲಿ diagonally opposite ಕೂತಿದ್ದ uncle ನೋಡಿಯೇ ಬಿಟ್ಟರು! ರಾಜೀವನ ಪಕ್ಕದಲ್ಲಿದ್ದ ವ್ಯಕ್ತಿ ಎದ್ದು ಹೋಗಿದ್ದ. ಕೆಲ ನಿಮಿಷಗಳ ನಂತರuncle ಬಂದು ರಾಜೀವನ ಪಕ್ಕದಲ್ಲಿ ಕುಳಿತರು; ಕುತೂಹಲವಿರಬೇಕು, ಏನು ಓದುತ್ತಿದ್ದಾರೆ ಎಂದು. ಪುಸ್ತಕ ಕೇಳಿ ಪಡೆದುಕೊಂಡರು. ರಾಜೀವ ಎರಡೂ ಪುಸ್ತಕ ಕೊಟ್ಟ. ಪುಸ್ತಕಗ ಮುಖಪುಟವನ್ನೊಮ್ಮೆ, ಹಿಂಭಾಗವನ್ನೊಮ್ಮೆ ಎರೆಡೆರೆಡು ಬಾರಿ ನೋಡಿದರು, ರಜನೀಕಾಂತ್ ಬಗೆಗಿನ ಪುಸ್ತಕದ ಒಂದು ಪುಟವನ್ನು ಓದಿ ಪುಸ್ತಕಗಳನ್ನು ಹಿಂದಿರುಗಿಸಿ ತಮ್ಮ ಸೀಟಿಗೆ ಮರಳಿದರು! ನಾನು ಕಿಟಕಿಯ ಕಡೆ ಮುಖ ಮಾಡಿಕೊಂಡು ಅಳುವನ್ನು ತಡೆಹಿಡಿಯುವ ಸಾಹಸ ನಡೆಸಿದ್ದೆ!

ಶ್ರೀಧರ್ ಹೊರಹಾಕಿರುವ ಎಲ್ಲಾ ಭಾವನೆಗಳನ್ನು ಇಲ್ಲಿ ಬರೆಯಲು ಏಕೋ ಸಾಧ್ಯವಾಗುತ್ತಿಲ್ಲ. ಕಥೆಯನ್ನು ಓದುವಾಗ ಮತ್ತು ಆ ನಂತರ ಅನುಭವಿಸಿದ ಕೆಲವೇ ಕೆಲವು ಭಾವನೆಗಳನ್ನು ಇಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಎಷ್ಟೋ ಹೊತ್ತು ಮಾತಾಡಲಿಲ್ಲ; ಯೋಚಿಸುತ್ತಿದ್ದೆ. ಕಣ್ಣಿನಲ್ಲಿ, ಮನಸ್ಸಿನಲ್ಲಿ ಮಳೆ! ಊರು ತಲುಪಿದರೂ ಕಥೆಯಿಂದ ಹೊರಬಂದಿರಲಿಲ್ಲ. ಈಗಲೂ ಕೂಡ ಮನಸ್ಸಿನ ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಕೊರೆಯುತ್ತಲೇ ಇದೆ. Hats off to ಅಗ್ನಿ ಶ್ರೀಧರ್!

February 13, 2008

ಸ್ವಾರ್ಥ

ಹೀಗೊಂದು ಕಥೆ...ನೀವು ಕೇಳಿದ್ದಿರಲೂ ಬಹುದು...
'ಮನುಷ್ಯ ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥ ಸಿದ್ಧಿಯಿಲ್ಲದೆ ಯಾವ ಮನುಷ್ಯನೂ ಯಾವ ಕೆಲಸವನ್ನೂ ಮಾಡಲಾರ.' ಹೀಗೆಂದು ಹೇಳಿದವರು ಅಮೇರಿಕಾದ ಹಿಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್. ಅವರು ತಮ್ಮ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ಇದನ್ನು ಹೇಳಿದರು. ಸ್ನೇಹಿತ ಸುತರಾಂ ಒಪ್ಪಲಿಲ್ಲ. ಸಾಧ್ಯವೇ ಇಲ್ಲ ಎಂದು ತಳ್ಳಿ ಹಾಕಿದರು.

ಒಂದು ಭಾನುವಾರದಂದು ಇಬ್ಬರೂ ಕಾರಿನಲ್ಲಿ ಕುಳಿತು ಹೊರಟರು. ಹಳ್ಳಿಗೆ ಹೊರಟಾಗ ನಡುವೆ ದಾರಿಯಲ್ಲಿ ಅಬ್ರಹಾಂ ಲಿಂಕನ್ ಅವರು ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದರು. ಏಕೆಂದರೆ ಅವರು ಮುಳ್ಳಿನ ಬೇಲಿಯಲ್ಲಿ ಒಂದು ಹಂದಿಯ ಮರಿ ಸಿಕ್ಕಿ ಬಿದ್ದು ತಪ್ಪಿಸಿಕೊಳ್ಳಲು ಬಾರದೆ ಒದ್ದಾಡುತ್ತಿರುವುದನ್ನು ಕಂಡಿದ್ದರು. ಕಾರಿನಿಂದ ಇಳಿದು ಹೋಗಿ ಅವರು ಆ ಹಂದಿಯ ಮರಿಯನ್ನು ಮುಳ್ಳು ಬೇಲಿಯಿಂದ ತಪ್ಪಿಸಿ ಬಿಟ್ಟು ಬಂದರು.


ಅವರ ಸ್ನೇಹಿತ ಕೇಳಿದರು, "ನೀವು ಈಗ ಮಾಡಿದ ಕೆಲಸದಲ್ಲಿ ನನಗೇನೂ ಸ್ವಾರ್ಥ ಕಾಣಲಿಲ್ಲ." ಅದಕ್ಕೆ ಅಬ್ರಹಾಂ ಲಿಂಕನ್ ಹೇಳಿದ್ದು, "ಆ ಕೆಲಸದಲ್ಲಿಯೂ ಕೂಡ ಸ್ವಾರ್ಥವೇ ಇತ್ತು. ಹಂದಿಯ ಮರಿಯನ್ನು ನೋಡಿಕೊಂಡು ಹಾಗೆಯೇ ಬಿಟ್ಟು ಮುಂದೆ ಹೋಗಿದ್ದರೆ ನನಗೆ ರಾತ್ರಿಯಿಡೀ ನಿದ್ದೆ ಬರುತ್ತಿರಲಿಲ್ಲ!"

ಎಷ್ಟು ನಿಜ ಅಲ್ಲವೇ? ನಾವೂ ಕೂಡ ಸ್ವಾರ್ಥ ಸಾಧನೆಗಾಗಿಯೇ ಏನೆಲ್ಲಾ ಮಾಡುತ್ತಿರುತ್ತೇವೆ; ಕೆಲವೊಂದು ನಮಗೆ ಅರಿವಿರುತ್ತದೆ, ಇನ್ನು ಕೆಲವು ನಮಗೆ ಅರಿವಿಲ್ಲದಂತೆಯೇ.

December 31, 2007

ಶಿಕ್ಷೆಯಲ್ಲಿ ಅರ್ಧ ತಾಯಿಗೆ

ಮೊನ್ನೆ ಅಕ್ಕನ ಜೊತೆ ಮಾತಾಡ್ತಾ ಇದ್ದೆ, gtalk ನಲ್ಲಿ. ಅಕ್ಕ ಅಂದರೆ ನನ್ನ ದೊಡ್ಡಮ್ಮನ ಮಗಳು. ಆದರೆ ಅವಳು ನನ್ನ ಸ್ವಂತ ಅಕ್ಕನಂತೆಯೇ. ಅಕ್ಕ ತಂಗಿಯರು ಮಾತಾಡಲು ತೊಡಗಿದರೆ ಪ್ರಪಂಚದ ಅರಿವೇ ಇರುವುದಿಲ್ಲ ಅನ್ನುವುದಂತೂ ಸತ್ಯ; ಅವರ ಸುದ್ದಿಗೆ ಕೊನೆ ಎನ್ನುವುದೇ ಇಲ್ಲ. ಹೀಗೆಯೇ ಕಷ್ಟ ಸುಖ ಮಾತನಾಡುತ್ತಿರುವಾಗ ಅವಳ ಮಗಳು ಬಂದು 'ಅಮ್ಮಾ, ಕುಡಿಯಲ್ಲೇ ಕೊಡೇ' ಎಂದು ಹೇಳಿದ್ದು ನನಗೆ ಇಲ್ಲಿಯವರೆಗೆ ಕೇಳಿಸಿತ್ತು. 'ಒಂದೆರಡು ನಿಮಿಷಗಳಲ್ಲಿ ಬರುತ್ತೇನೆ ತಾಳು' ಎಂದು ಹೇಳಿ ಎದ್ದು ಹೋದಳು ಅಕ್ಕ. Horlicks ಕೊಟ್ಟಿರಬೇಕು ಬಹುಶಃ. ತಿರುಗಿ ಬರುವಾಗ 'ದಿಶಾ, ನೀನು ಕುಡಿದ ಲೋಟ ತೊಳೆದು ಇಡು, ನಿನ್ನ ಬಟ್ಟೆ ತೊಳೆದು ಹಾಕಿದ್ದೇನೆ ಒಣಗಿದೆಯಾ ನೋಡಿ ಮಡಿಸಿ ಇಡು ಮತ್ತು ನಿನ್ನ ರೂಮ್ ಕ್ಲೀನ್ ಮಾಡಿ ಆಡಲು ಹೋಗು' ಎಂದು ಹೇಳುತ್ತಾ ಬಂದಿದ್ದು ಕೇಳಿಸಿತು.

ಅವಳೂ ಕೆಲಸಕ್ಕೆ ಹೋಗಿ ಬರುವುದರಿಂದ ಸುಸ್ತಾಗಿರಬೇಕು ಅದಕ್ಕೆ ಮಗಳಿಗೆ ಕೆಲಸ ಹೇಳುತ್ತಿದ್ದಾಳೆ ಎಂದು ಅನಿಸಿದರೂ ಮತ್ತೆ ಮಾತಿಗೆ ತೊಡಗಿದ ತಕ್ಷಣ ನಾನು ಕೇಳಿದೆ, 'ಯಾಕೆ ಅನ್ನಕ್ಕಾ (ಅನುಪಮಾ ಅವಳ ಹೆಸರು) ದಿಶಾನ ಕೈಲಿ ಕೆಲಸ ಮಾಡಿಸುತ್ತಿದ್ದೀಯಾ, ನೀನೆ ಮಾಡಿದರೆ ಆಗದೇ? ಪಾಪ ಅವಳು'. ಅದಕ್ಕವಳು, 'ಅವಳೀಗೀಗ ಹನ್ನೆರಡು ವರ್ಷ. ನಿನಗೆ ಹನ್ನೆರಡು ವರ್ಷವಾಗಿದ್ದಾಗ ನಿನಗೆ ಅಡುಗೆಯನ್ನೂ ಮಾಡಲು ಬರುತ್ತಿತ್ತು ನೆನಪಿದೆಯಾ' ಎಂದಳು ಮತ್ತು ಮುಂದುವರಿಸಿದಳು 'ನೋಡು ನಿನ್ನ ಅಮ್ಮ ನಿನಗೆ ಎಲ್ಲ ಕೆಲಸಗಳನ್ನೂ ಕಲಿಸಿದ್ದಕ್ಕೆ ನಿನಗಿವತ್ತು ಜೀವನ ಸುಲಭ. ಅಮ್ಮಂದಿರು ಮಕ್ಕಳನ್ನು ಕೇವಲ ಮುದ್ದು ಮಾಡಿದರೆ ಸಾಲದು, ಮುಂದೆ ಅದರಿಂದ ಅವರಿಗೇ ಕಷ್ಟ. ಈಗ ನಾನು ಕಲಿಸಿದಷ್ಟೂ ಮುಂದೆ ಅವಳಿಗೇ ಲಾಭ. ಮುಂದೆಲ್ಲಾ ಜೀವನ ಯುದ್ಧದಂತೆಯೇ, the more you sweat in peace, the less you bleed in war… ಅದಕ್ಕಾಗಿ ಹೀಗೆ.’

ಹಾಗೆಯೇ short ಆಗಿ sweet ಆಗಿ ಒಂದು ನೀತಿ ಕಥೆಯನ್ನೂ ಹೇಳಿದಳು. ಹಾಗೆಯೇ ಸ್ವಲ್ಪ ಓದಿ ಬಿಡಿ.
ಒಬ್ಬ ಕಳ್ಳನನ್ನು ನ್ಯಾಯಾಲಯಕ್ಕೆ ತಂದು ಕಟಕಟೆಯಲ್ಲಿ ನಿಲ್ಲಿಸಿದ್ದರು,ಯಾವುದೋ ಒಂದು ದೊಡ್ಡ ಕಳ್ಳತನದ ಆಪಾದನೆಯಲ್ಲಿ. ವಿಚಾರಣೆಯ ನಂತರ ಅವನಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. Judge ಅವನ ಬಳಿ, 'ನೀನೇನಾದರೂ ಹೇಳುವುದಿದೆಯಾ?' ಎಂದು ಕೇಳಿದರು. ಆಗ ಆ ಕಳ್ಳ, 'ಮಾಹಾಸ್ವಾಮಿ, ನನಗೆ ಕೊಟ್ಟ ಎಂಟು ವರ್ಷಗಳ ಜೈಲು ಶಿಕ್ಷೆಯಲ್ಲಿ ನಾಲ್ಕು ವರ್ಷಗಳ ಶಿಕ್ಷೆಯನ್ನು ನನ್ನ ತಾಯಿಗೆ ಕೊಡಿ' ಎಂದನು. ಇಡೀ ನ್ಯಾಯಾಲಯ ಒಮ್ಮೆ ಸ್ತಬ್ಧವಾಯಿತು. Judge ಕೂಡ ಆಶ್ಚರ್ಯದಿಂದ ಕೇಳಿದರು, 'ಹೀಗೇಕೆ?' ಅದಕ್ಕವನು,'ಬಾಲ್ಯದಲ್ಲಿ ನನ್ನ ತಾಯಿ ನನ್ನನ್ನು ಸರಿಯಾಗಿ ಬೆಳೆಸಲಿಲ್ಲ. ನಾನು ಮೂರನೇ ತರಗತಿಯಲ್ಲಿದ್ದಾಗ ಪೆನ್ಸಿಲ್ ಕದ್ದೆ. ಅಪ್ಪ ಬೈದರೂ ಅಮ್ಮ ನನ್ನ ಪರವಹಿಸಿದಳು. ಒಂಭತ್ತನೇ ತರಗತಿಯಲ್ಲಿದ್ದಾಗ ಸೈಕಲ್ ಕದ್ದೆ. ಅಪ್ಪ ಶಿಕ್ಷೆ ಕೊಡಲು ಮುಂದಾದರೂ ಅಮ್ಮ ನನ್ನ ಪರವಾಗಿ ಮಾತನಾಡಿದಳು. ನಾನು ಅದರ ಲಾಭ ಪಡೆಯುತ್ತಾ ಹೋದೆ. ಅಂದು ಅಪ್ಪನಂತೆಯೇ ಅಮ್ಮನೂ ನನ್ನನ್ನು ಶಿಕ್ಷಿಸಲು ಮುಂದಾಗಿದ್ದರೆ ಇಂದು ನಾನು ಹೀಗಾಗುತ್ತಿರಲಿಲ್ಲ. ಆದ್ದರಿಂದ ನನ್ನ ಶಿಕ್ಷೆಯಲ್ಲಿ ಅರ್ಧ ಅವಳಿಗೇ ಸಲ್ಲಬೇಕು' ಅಂದನಂತೆ.

ಅಕ್ಕ ಹೇಳುತ್ತಿದ್ದ ಕಥೆ ಮುಗಿಯಿತು. ಮುಂದೆ ಏನೇನೋ ಮಾತನಾಡಿದೆವು. ಆದರೆ ಅಕ್ಕ ಹೇಳಿದ ಕಥೆ ಏಕೋ ಮನಸ್ಸಿಗೆ ನಾಟಿತ್ತು. ಆಗೆಯೇ ನನ್ನನ್ನು ಸ್ವಾವಲಾಂಬಿಯಾಗಿ ಬೆಳೆಸಿದ ಅಪ್ಪ, ಅಮ್ಮನ ನೆನಪೂ ಆಗದೇ ಇರಲಿಲ್ಲ. ನಾನು ಹಾಗೆಯೇ ಯೋಚಿಸುತ್ತಾ ಒಮ್ಮೆ ಭೂತ ಕಾಲಕ್ಕೆ ಹೋಗಿ ಬಂದೆ. ನಮ್ಮ ಪ್ರತಿಯೊಂದು ಕೆಲಸವನ್ನೂ ನಾವೇ ಮಾಡಿಕೊಳ್ಳಬೇಕು ಎನ್ನುತ್ತಿದ್ದರು ಅಪ್ಪ, ಅಮ್ಮ. ನನ್ನ ಮತ್ತು ನನ್ನ ತಮ್ಮನ college admission ಕೂಡ ನಾವೇ ಮಾಡಿಕೊಂಡ ನೆನಪು. ಆಗೆಲ್ಲಾ ಅಪ್ಪ, ಅಮ್ಮನ ಮೇಲೆ ಸಿಟ್ಟು ಬರುತ್ತಿದ್ದುದು ನಿಜ. ಆದರೆ ನಂತರದ ದಿನಗಳಲ್ಲಿ ಅವರೇಕೆ ಹಾಗೆ ಮಾಡಿದರು ಎಂಬುದು ಅರ್ಥವಾಗುತ್ತಾ ಹೋಯಿತು. ನಮಗೆ ಈಗಿರುವ ಸ್ವಾಭಿಮಾನ, ಆತ್ಮವಿಶ್ವಾಸಕ್ಕೆಲ್ಲಾ ಕಾರಣ ಅಪ್ಪ, ಅಮ್ಮ ನಮ್ಮನ್ನು ಬೆಳೆಸಿದ ರೀತಿ. ಅಕ್ಕನಿಗೆ ನನಗಿಂತ ಮೊದಲೇ ಈ ವಿಷಯಗಳೆಲ್ಲಾ ಅರ್ಥವಾಗಿದ್ದಿರಬೇಕು, ಅದಕ್ಕೇ ಈಗ ತನ್ನ ಜೀವನದಲ್ಲೂ ಆಚರಣೆಗೆ ತಂದಿದ್ದಾಳೆ, ತನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸುತ್ತಿದ್ದಾಳೆ.

December 27, 2007

Two monks and a beautiful woman

Two monks were wandering through the forest when they came upon a beautiful courtesan standing on the banks of a flooded stream. Because they had sworn a vow of chastity, the younger monk ignored the woman and crossed the stream quickly.
Realising that the beautiful woman could not safely cross the stream by herself, the older monk gathered her up in his arms and carried her across the stream. Once they had reached the other side, he gently returned her to the ground. She smiled her thanks, and the two monks continued on their way.

The young monk quietly seethed as he replayed the incident again and again in his own mind. How could he? The young monk thought angrily to himself. Does our vow of chastity mean nothing to him? The more the young monk thought about what he had seen, the angrier he became, and the argument in his head grew louder: Why, had I done such a thing I would have been thrown out of our order. This is disgusting. I may not have been a monk as long as he has, but I know right from wrong.

He looked over at the older monk to see if he at least was showing remorse for what he had done, but the man seemed as serene and peaceful as ever. Finally, the young monk could stand it no longer. ‘How could you do that?’ he demanded. ‘How could you even look at that woman, let alone pick her up and carry her? Do you remember your vow of chastity?’

The older monk looked surprised, and then smiled with great kindness in his eyes.
‘I am no longer carrying her, brother. Are you?'


The story has made me think about all the unnecessary things I am carrying with me. How about you?

Taken from- Paul McKenna (2004), Change Your Life in 7 Days, Bantham Press, London, pp. 51-2.

September 6, 2007

ಏಳೂವರೆ ಗಡಿಗೆ ಹೊನ್ನು

ಚಿಕ್ಕಂದಿನಲ್ಲಿ ಅಜ್ಜ ಹೇಳಿದ ಕತೆ.
ಆಗ ಅದರಲ್ಲಿ ವಿಶೇಷವೇನೂ ಕಂಡಿರಲಿಲ್ಲ.
ವರುಷಗಳು ಉರುಳಿದಂತೆ ಅದರ ವಿಶೇಷತೆ ಮನವರಿಕೆಯಾಗುತ್ತಿದೆ...
ಅಜ್ಜ ಆ ಕತೆಯನ್ನು ಯಾಕೆ ಹೇಳಿದ್ದ ಎಂಬುದೂ ತಿಳಿಯುತ್ತಿದೆ...

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನು ಒಂದು ದಿನ ಕಟ್ಟಿಗೆ ತರಲು ಕಾಡಿಗೆ ಹೋದಾಗ ತನ್ನ ಬಡತನವನ್ನು ನೆನೆದು ದುಃಖಿಸತೊಡಗಿದ.
ಆಗ ಅವನ ಎದುರು ಒಂದು ದೇವತೆ ಪ್ರತ್ಯಕ್ಷವಾಗಿ ಹೇಳಿತು- "ಅಯ್ಯಾ, ನಿನ್ನ ಬಡತನಕ್ಕಾಗಿ ದುಃಖಿಸಬೇಡ. ನಾನು ನಿನಗೆ ಏಳೂವರೆ ಗಡಿಗೆ ಹೊನ್ನನ್ನು ಕೊಡುತ್ತೇನೆ. ಅದರಿಂದ ನೀನು ಜೀವನಪೂರ್ತಿ ಸುಖವಾಗಿರಬಹುದು."
ಆತ ಒಪ್ಪಿ ಏಳೂವರೆ ಗಡಿಗೆ ಹೊನ್ನನ್ನು ತೆಗೆದುಕೊಂಡು ಮನೆಗೆ ಬಂದ. ಜೀವಮಾನದಲ್ಲೇ ಅಷ್ಟು ಹೊನ್ನನ್ನು ಕಂಡಿರದ ಆತ ಒಂದು ಕ್ಷಣ ಗಡಿಗೆಗಳನ್ನೇ ನೋಡುತ್ತಾ ನಿಂತ.
ತಕ್ಷಣ ಅವನ ಮನಸ್ಸಿಗೆ ಒಂದು ಆಲೋಚನೆ ಬಂತು- "ಈ ಗಡಿಗೆಗಳಲ್ಲಿ ಒಂದು ಗಡಿಗೆ ಮಾತ್ರ ಅರ್ಧ ತುಂಬಿದೆ. ಅದನ್ನೊಂದು ತುಂಬಿಸಿಬಿಟ್ಟರೆ ಮುಂದೆ ಇಡೀ ಜೀವನ ಸುಖವಾಗಿ ಕಳೆಯಬಹುದು."
ನಂತರ ಆತ ಗಡಿಗೆಯನ್ನು ತುಂಬಿಸಲು ಹಗಲು ಇರುಳು ದುಡಿಯ ತೊಡಗಿದ.
ದಿನಾಲೂ ಸಂಜೆ ದಿನದ ಗಳಿಕೆಯ ಹೊನ್ನನ್ನು ತಂದು ಗಡಿಗೆಗೆ ಹಾಕುತ್ತಿದ್ದ.
ಎಷ್ಟೋ ದಿನಗಳ ವರೆಗೆ ಹೀಗೆಯೇ ನಡೆಯಿತು...
ಗಡಿಗೆ ಮಾತ್ರ ಅರ್ಧದಷ್ಟೇ ಇತ್ತು. ತುಂಬುವ ಲಕ್ಷಣವೇ ಕಾಣಿಸಲಿಲ್ಲ.
ಆತ ಮಾತ್ರ ತನ್ನ ಆರೋಗ್ಯವನ್ನು ಕಳೆದುಕೊಂಡ. ಮನಃಶಾಂತಿಯನ್ನು ಕಳೆದುಕೊಂಡ. ಗಡಿಗೆಯನ್ನು ತುಂಬಿಸುವ ಹಟದಲ್ಲಿ ಕೃಶವಾಗಿ ಹೋದ. ನಿದ್ದೆಯನ್ನು ಕಳೆದುಕೊಂಡು ಹುಚ್ಚನಾಂತಾದ.
ದಿನಗಳು ಉರುಳಿದಂತೆ ಅವನಿಗೆ ಒಂದು ದಿನ ಅರಿವಾಯಿತು, ತಾನು ಎಡವಿದ್ದೇನೆಂದು. ಪುನಃ ಕಾಡಿಗೆ ಹೋಗಿ ದೇವತೆಯನ್ನು ಕರೆದ. ದೇವತೆ ಪ್ರತ್ಯಕ್ಷವಾಯಿತು.
ಆತ ಹೇಳಿದ- "ದಯವಿಟ್ಟು ನನ್ನ ಬಳಿಯಿರುವ ಗಡಿಗೆಗಳನ್ನು ಹಿಂದೆಗೆದುಕೊ. ಇರುವುದರಲ್ಲಿಯೇ ನಾನು ಸುಖವಾಗಿರಬಲ್ಲೆ ಎಂಬುದು ನನಗೆ ಗೊತ್ತಾಗಿದೆ."
ದೇವತೆ ಗಡಿಗೆಗಳನ್ನು ತೆಗೆದುಕೊಂಡು ಮಾಯವಾಯಿತು. ಆತ ಮನೆಗೆ ಬಂದು ಎಷ್ಟೋ ದಿನಗಳ ನಂತರ ಸುಖವಾಗಿ ನಿದ್ದೆ ಮಾಡಿದ.

ಇಂದು ನಾವೂ ಕೂಡ ನಮ್ಮ ಬಳಿಯಿರುವ ಏಳು ಗಡಿಗೆ ಹೊನ್ನನ್ನು ಲಕ್ಷಿಸದೆಯೇ ಇನ್ನುಳಿದ ಅರ್ಧ ಗಡಿಗೆಯನ್ನು ತುಂಬಿಸುವ ಯತ್ನದಲ್ಲಿ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ?

August 9, 2007

ಹನ್ನೊಂದು ಹೊನ್ನಿನ ಪುರಾಣಿಕರ ಕಥೆ

'ಪಾಪಿ ಸಮುದ್ರ ಕ್ಕೆ ಹೋದರೂ ಮೊಳಕಾಲು ನೀರು'. ಇದು ಪ್ರಚಲಿತದಲ್ಲಿರುವ ಗಾದೆಮಾತು. ಇದಕ್ಕೆ ಪೂರಕ ಎನಿಸುವ ಈ ಕೆಳಗಿನ ಕಥೆಯನ್ನು ಓದಿ.ಹಣೆ ಬರಹವನ್ನು ಕೆಲವೊಮ್ಮೆ ನಂಬಬೇಕಾದಂತ ಪರಿಸ್ಥಿತಿ ಬಂದೊದಗುತ್ತದೆ.

ತ್ರೇತಾಯುಗದಲ್ಲಿ, ಒಂದು ಊರಿನಲ್ಲಿ ಒಬ್ಬ ಪುರಾಣಿಕರು (ಪೂಜಾರಿ) ಇದ್ದರು.
ಮನುಷ್ಯ ಸಹಜ ಧರ್ಮದಂತೆ ಅವರಿಗೂ ಸ್ವಲ್ಪ ಆಸೆ ಜಾಸ್ತಿ. ಯಾರ ಮನೆಯಲ್ಲಿ ಪೂಜೆ ಮಾಡಿದರೂ ಅವರಿಗೆ ಜನರು ಕೊಡುತ್ತಿದ್ದುದು ಹನ್ನೊಂದೇ ಹೊನ್ನು. ಆದ ಕಾರಣ, ಅವರಿಗೆ ಯಾವಾಗಲೂ ಬೇಜಾರಾಗುತ್ತಿತ್ತು. ಒಮ್ಮೆ ಅವರಿಗೆ ಯಾರೋ ಹೇಳಿದರು- "ನೀವು ರಾವಣನ ರಾಜ್ಯ ಲಂಕೆಗೆ ಏಕೆ ಹೋಗಬಾರದು? ರಾವಣ ತುಂಬಾ ಉದಾರಿ. ಕೇಳದಿದ್ದರೂ ದಾನ ಮಾಡುತ್ತಾನೆ" ಎಂದು. ಸರಿ, ಪುರಾಣಿಕರು ಲಂಕೆಯಲ್ಲಿ ಪೂಜೆ ಮಾಡಿದರು. ರಾವಣನೋ ತುಂಬಾ ಖುಷಿಯಿಂದ ಒಂದು ಚೀಲ ನಾಣ್ಯಗಳನ್ನು ದಾನವಾಗಿ ಕೊಟ್ಟ. ಪುರಾಣಿಕರಿಗೋ ಖುಷಿಯೋ ಖುಷಿ. ಮರಳಿ ತಮ್ಮ ದೇಶಕ್ಕೆ ಬಂದರು. ಲಂಕಾ ಪಟ್ಟನದಲ್ಲಿ ಕಬ್ಬಿಣವೇ ಆಭರಣ ಮತ್ತು ನಾಣ್ಯಗಳು ತಾನೇ, ಪುರಾಣಿಕರು ತಮಗೆ ದೊರೆತ ಒಂದು ಚೀಲ ಕಬ್ಬಿಣದ ನಾಣ್ಯಗಳನ್ನು ಮಾರಿ ಹೊನ್ನಿನ ನಾಣ್ಯಗಳನ್ನು ಕೊಂಡರು. ಆಗ ಅವರಿಗೆ ಸಿಕ್ಕಿದ್ದು ಕೇವಲ ಹನ್ನೊಂದು ಹೊನ್ನು.

ಹಿಂದಿಯಲ್ಲೂ ಇದಕ್ಕೊಂದು ಮಾತಿದೆ- समय से पेहले, नसीब से ज्ञादा कुछ नही मिलता

ಟಿಪ್ಪಣಿ: ಚೇತನಾ ರೋಹಿತ್ ಅವರು ತಮ್ಮ Blog ನಲ್ಲಿ ಬರೆದ ಕಥೆಯಿಂದ inspire ಆಗಿ ಈ ಕಥೆಯನ್ನು ಬರೆದಿದ್ದೇನೆ. My thanks are due to her.