December 29, 2010

ಒಂದೇ ಮಳೆಗೆ ಒಂದು ಕೊಡೆ (ಉತ್ತರ ಕನ್ನಡದ ಗಾದೆ – 246)

ಒಂದೇ ಮಳೆಗೆ ಒಂದು ಕೊಡೆ ಹರಿಯಬಾರದು
ಯಾರೊಬ್ಬರನ್ನೂ ಒಂದೇ ಸಂದರ್ಭವನ್ನು ನೋಡಿ ಅಳೆಯಬಾರದು. ಹಲವಾರು ಪ್ರಕರಣಗಳ ನಂತರ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರಬೇಕು- ಇಂಥ ಸಂದರ್ಭಗಳಲ್ಲಿ ಬಳಸುತ್ತಾರೆ.

ಕೊಡೆ ಯಾವುದೊ ಒಂದು ಜೋರು ಮಳೆಗೆ ಸ್ವಲ್ಪ ಚೆನ್ನಾಗಿಲ್ಲ ಅನಿಸಿದರೂ ಅದು ಎಸೆದು ಬಿಡುವಂಥ ಕೊಡೆ ಅಲ್ಲದಿರಬಹುದು. ಮಳೆಯ ಅಬ್ಬರಕ್ಕೆ ಕೊಡೆ ಆ ಕಡೆ ಈ ಕಡೆ ಆಗಬಹುದು. ಅಂತೆಯೇ ಒಬ್ಬ ವ್ಯಕ್ತಿಯೂ ಕೂಡ ಸಂದರ್ಭಕ್ಕೆ ಸಿಲುಕಿ ವಿಚಿತ್ರವಾಗಿ ವರ್ತಿಸಿರಬಹುದು. ಅಂದ ಮಾತ್ರಕ್ಕೆ ಆ ವ್ಯಕ್ತಿಯೇ ಹಾಗೆ ಎಂದು ನಿರ್ಧರಿಸಬಾರದು. ಒಂದೆರಡು ಮಳೆಯನ್ನೂ ನೋಡಿದಾಗ ಕೊಡೆಯ ಯೋಗ್ಯತೆ ಗೊತ್ತಾಗುತ್ತದೆ; ಒಂದೆರಡು ಸನ್ನಿವೇಶಗಳನ್ನು ನೋಡಿದಾಗ ಒಬ್ಬ ವ್ಯಕ್ತಿಯ ಯೋಗ್ಯತೆ ಗೊತ್ತಾಗುತ್ತದೆ.

ಎಂಥ ಅರ್ಥಪೂರ್ಣ ಸುಂದರ ಗಾದೆ ಅಲ್ವ?

December 22, 2010

ಅಮಟೆ ಮರ (ಉತ್ತರ ಕನ್ನಡದ ಗಾದೆ – 244 ಮತ್ತು 245)

ಅಮಟೆ ಮರ ಅಪ್ಪನ ಮನೆಗೆ ಹೋದಂತೆ.
ಅಮಟೆ ಮರ ತವರಿಗೆ ಹೋಗಬೇಕು ಎಂದು ವಿಚಾರ ಮಾಡುತ್ತದೆಯಂತೆ. ವರ್ಷದ ಒಂದು ಕಾಲದಲ್ಲಿ ಮೈತುಂಬಾ ಕಾಯಿ ತುಂಬಿಕೊಡು ಬಿಡುತ್ತದೆ. ಆಗ ಆ ಭಾರವನ್ನು ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ಹೋಗುವುದಿಲ್ಲವಂತೆ. ನಂತರ ಕಾಯೆಲ್ಲ ಹಣ್ಣಾಗಿ ಉದುರುವಷ್ಟರಲ್ಲಿ ಚಳಿಗಾಲಕ್ಕೆ ಪೂರ್ತಿ ಎಲೆಯನ್ನು ಉದುರಿಸಿ ಬೋಳಾಗಿ ನಿಲ್ಲುತ್ತದೆ. ಈ ರೀತಿ ಬೋಳು ಮೈಯ್ಯಲ್ಲಿ ಹೋಗುವುದು ಬೇಡವೆಂದುಕೊಳ್ಳುತ್ತದೆಯಂತೆ. ವಸಂತ ಬಂದಾಗ ಚಿಗುರುವ ಸಮಯ. ಹೋಗಲು ಸಮಯವೇ ಇಲ್ಲ.

ಎಲ್ಲಿಗಾದರೂ ಹೋಗುವುದನ್ನು ಅಥವಾ ಮಾಡುವ ಕೆಲಸಗಳನ್ನು ಕಾರಣಾಂತರಗಳಿಂದ ಮುಂದೆ ಹಾಕ ಬೇಕಾಗಿ ಬಂದರೆ ಇದನ್ನು ಹೇಳುತ್ತಾರೆ. "ಈ ಕೆಲಸ ನೋಡಿದರೆ ಗಣಪತಿಯ ಮದುವೆಯೇ ಎಂದು ಕಾಣುತ್ತದೆ" ಎಂದು ಹೇಳುವುದನ್ನು ಕೇಳಿರಬಹುದು.

ದೊಡ್ಡ ಕೆಲಸ ಮಾಡುತ್ತಿರುವಾಗ ಇತರ ಸಣ್ಣ ಪುಟ್ಟ ಕೆಲಸಗಳು ಅದ್ದಬಂದರೆ ಹೇಳುವ ಗಾದೆ 'ತೆರೆ ಕಳಿದು ಸಮುದ್ರ ಮುಳುಗಿದಂತೆ'. Check
http://seemahegde78.blogspot.com/2007/11/64.html

ಇವೆಲ್ಲಕ್ಕೂ ವ್ಯತಿರಿಕ್ತವಾಗಿ ಇನ್ನೊಂದು ಗಾದೆ- ಹಾಸ್ಯಗಾರನ ಹೆಂಡತಿ ಅಪ್ಪನ ಮನೆಗೆ ಹೋದ ಹಾಗೆ.
ವರ್ಷಕ್ಕೆ ಎರಡೇ ಬಾರಿ ಹೋಗುತ್ತಾಳೆ. ಒಮ್ಮೆ ಹೋದರೆ ಆರು ತಿಂಗಳು ಮಾತ್ರ ಉಳಿಯುತ್ತಾಳೆ!

November 19, 2010

ಅಜ್ಜಿ ಮುದುಕಿಯ ಕೋಳಿ (ಉತ್ತರ ಕನ್ನಡದ ಗಾದೆ – 243)

ಅಜ್ಜಿ ಮುದುಕಿಯ ಕೋಳಿ ಕೂಗದೆಯೇ ಬೆಳಗಾಗುತ್ತದೆ.
ಯಾರೋ ಒಬ್ಬರು ತನ್ನ ಸಹಾಯ ಇಲ್ಲದೆಯೇ ಯಾವುದೊ ಒಂದು ಕೆಲಸ ಆಗುವುದೇ ಇಲ್ಲ ಎಂದು ತಿಳಿದುಕೊಂಡಾಗ/ ಹೇಳಿದಾಗ ಈ ಗಾದೆಯನ್ನು ಬಳಸುತ್ತಾರೆ. ಈ ಗಾದೆಯ ಹಿನ್ನೆಲೆ ಈ ಕಥೆ.... ಒಂದು ಊರಲ್ಲಿ ಒಬ್ಬಳು ಅಜ್ಜಿಯಿದ್ದಳು. ಅವಳು ಒಂದು ಕೋಳಿಯನ್ನು ಸಾಕಿದ್ದಳು. ದಿನಾಲೂ ಆ ಕೋಳಿ ಬೆಳಗಾಗುವ ಮೊದಲು ಕೂಗುತ್ತಿತ್ತು. ಅಜ್ಜಿಯ ತಿಳುವಳಿಕೆ- ತನ್ನ ಕೋಳಿ ಕೂಗದಿದ್ದರೆ ಬೆಳಗೇ ಆಗುವುದಿಲ್ಲ. ಒಂದು ದಿನ ಅಜ್ಜಿ ಊರವರಿಗೆಲ್ಲಾ ಪಾಠ ಕಲಿಸಬೇಕೆಂದು ಬೆಳಗೇ ಆಗದಂತೆ ಮಾಡಬೇಕೆಂದುಕೊಂಡಳು. ಸಂಜೆಯಾಗುತ್ತಲೇ ಕೋಳಿಯನ್ನು ತೆಗೆದುಕೊಂಡು ಊರ ಹೊರಗೆ ಕಾಡಿಗೆ ಹೋಗಿ ಕುಳಿತುಕೊಂಡಳು. (ಅವಳ ಕೋಳಿ ಕಾಡಿನಲ್ಲಿ ಕೂಗಿತೋ ಇಲ್ಲವೋ ಗೊತ್ತಿಲ್ಲ :-). ಅವಳೆಣಿಸಿದಂತೆ ಆಗಲೇ ಇಲ್ಲ. ಊರಿನಲ್ಲಿ ಎಂದಿನಥೆಯೇ ಬೆಳಗಾಯಿತು.
ಯಾರು ಸಹಾಯ ಮಾಡಲಿ, ಮಾಡದಿರಲಿ, ಕೆಲಸಗಳು ನಡೆಯುವಂತೆ ನಡೆಯುತ್ತಲೇ ಇರುತ್ತವೆ.

October 31, 2010

ಅಪ್ಪಯ್ಯ ನನಗೆ ಹೊಡೆದ (ಉತ್ತರ ಕನ್ನಡದ ಗಾದೆ – 241 ಮತ್ತು 242 )

ಅಪ್ಪಯ್ಯ ನನಗೆ ಹೊಡೆದ, ನಾನು ಸಣ್ಣ ಮಾಣಿಗೆ ಹೊಡೆದೆ.
ತಪ್ಪು ಮಾಡಿದ್ದಕ್ಕಾಗಿ ಅಪ್ಪ ಹೊಡೆದಾಗ ಮಗ ಇನ್ನೇನೂ ಮಾಡುವಂತಿಲ್ಲ; ಹೊಡೆತ ತಿಂದ ಸಿಟ್ಟನ್ನು, ಬೇಸರವನ್ನೂ ತೀರಿಸಿಕೊಳ್ಳುವ ಸಲುವಾಗಿ ತನ್ನ ತಮ್ಮನಿಗೆ ಹೊಡೆಯುತ್ತಾನೆ. Boss ನಮ್ಮ ಮೇಲೆ ಸಿಟ್ಟನ್ನು ತೋರಿಸಿದಾಗ ನಾವು ಅಸಹಾಯಕರಾಗಿ, ಇನ್ನೇನೂ ಮಾಡಲರಿಯದೇ ನಮ್ಮ assistant ಮೇಲೆ ಸಿಟ್ಟು ಮಾಡುವಂಥದು. ಇಂಥದೇ ಇನ್ನೊಂದು- ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ. ಅತ್ತೆಯ ಮೇಲೆ ಸಿಟ್ಟನ್ನು ತೋರಿಸುವಂತಿಲ್ಲ. ಅದಕ್ಕೇ ಸೊಸೆ ಕೆಲಸದವಳ ಮೇಲೆ ಸಿಟ್ಟು ತೋರಿಸುತ್ತಾಳೆ.

October 8, 2010

ಶ್ವೇತಾ ಜೊತೆ ಕರಡಿ


ನನ್ನ ಬಾಲ್ಯ ಸ್ನೇಹಿತನೊಬ್ಬ photographer. ಅಪಾರ ಸಮಯಪ್ರಜ್ಞೆಯುಳ್ಳವ. ಎಲ್ಲಿ ಹೋದರೂ ನಮ್ಮ ಯಾರ ಕಣ್ಣಿಗೂ ಬೀಳದಿದ್ದುದು ಅವನ camera ಕಣ್ಣಿಗೆ ಬಿದ್ದಿರುತ್ತದೆ. ಈ photo ಒಂದು ಉದಾಹರಣೆ ಅಷ್ಟೇ. ಎಲ್ಲೋ ಮದುವೆಯ phtography ಗೆ ಹೋದಾಗ ಇದನ್ನು ತೆಗೆದು ನನಗೆ ಕಳಿಸಿಕೊಟ್ಟಿದ್ದಾನೆ. Thanks to him (ಅವನಿಷ್ಟದಂತೆಯೇ ಅವನ ಹೆಸರನ್ನು ಹಾಕುತ್ತಿಲ್ಲ). ಆದರೆ ಅವನ ಸಮಯಪ್ರಜ್ಞೆಯನ್ನು ಹೊಗಳದೇ ಇರಲಾದೀತೇ? ಅಂದಹಾಗೆ ಮದುಮಗನ ಹೆಸರು ಶಂಕರ ಡಿ.

September 7, 2010

ಅನುಭವ

ಅದೊಂದು ಸುಂದರ, ಸುವ್ಯಸ್ಥಿತ, ಕಟ್ಟಡ, ಪಟ್ಟಣದ ಗದ್ದಲದಿಂದ ದೂರ ಹಳ್ಳಿಯ ವಾತಾವರಣದಲ್ಲಿ. ಅದು ನನ್ನ ಆಫೀಸಾಗಿತ್ತು; ಕೆಲವು ದಿನಗಳ ಹಿಂದೆ. ಉಳಿದೆಲ್ಲಾ ಕಡೆ ಇರುವಂತೆಯೇ ಅಲ್ಲಿಯೂ ಕೂಡ ಎಲ್ಲಾ ಥರದ ಜನರಿದ್ದರು. ಕಂಡಾಗ ನಗೆ ಬೀರುವವರು, ನಗೆ ಬೀರದವರು, 'ಹಾಯ್' ಎನ್ನುವವರು, ಜೊತೆಯಲ್ಲಿ ಕೆಲಸ ಮಾಡುವವರು, ಸ್ನೇಹಿತರು, ಆಪ್ತ ಸ್ನೇಹಿತರು.... ಹೀಗೆ ಹಲವರು. ಅವರೆಲ್ಲರಿಂದ ಆದ ಅನುಭವಗಳೂ ಹತ್ತು ಹಲವಾರು. ಕೆಲವರು ಜೊತೆಯಲ್ಲಿದ್ದರೇ ಸಾಕು ಎನ್ನುವಷ್ಟು warm ಜನರು, ಇನ್ನು ಕೆಲವರು ದೂರ ಹೋದರೆ ಸಾಕಪ್ಪಾ ಎನಿಸುವಂಥವರು, ಕೆಲಸವನ್ನು ಒಟ್ಟಿಗೆ ಮಾಡೋಣ ಎನ್ನುವವರು, ತಮ್ಮ ಕೆಲಸವನ್ನೂ ತಂದು ಇನ್ನೊಬ್ಬರ ಮೇಲೆಯೇ ಹಾಕುವವರು, ಮಾಡಿದ ಕೆಲಸಕ್ಕೆ ಸಿಕ್ಕ reward ಅನ್ನು ಜೊತೆಗಾರರಲ್ಲಿ ಹಂಚಿಕೊಂಡು ಸಂತೋಷಪಡುವವರು, ಇನ್ನೊಬ್ಬರು ಮಾಡಿದ ಕೆಲಸಕ್ಕೆ ತಾವು ಪೂರ್ತಿ credit ತೆಗೆದುಕೊಳ್ಳುವವರು.....ಇನ್ನೂ ಹಲವು ಬಗೆಯವರು. ಅವರೆಲ್ಲರಿಂದ ತುಂಬಾ ಕಲಿತೆ ಜೀವನದ ಪಾಠವನ್ನು..... ಆದರೂ ಏಕೋ 'ಕತ್ತೆಯ ತರಹ ದುಡಿದು ಪ್ರಯೋಜನವೇ ಇಲ್ಲ' ಎನಿಸಿತು; ಕೆಲಸ ಬಿಟ್ಟೆ, ಹಗುರಾದೆ :-)