August 7, 2012
ನೊಣ ತಿಂದು (ಉತ್ತರ ಕನ್ನಡದ ಗಾದೆ – 255 ಮತ್ತು 256)
June 26, 2012
ಕಣ್ಣು ಹೆದರಿಸಿತ್ತು (ಉತ್ತರ ಕನ್ನಡದ ಗಾದೆ – 254)
June 21, 2012
ಉಣ್ಣಲಿಕ್ಕೆ ಇಲ್ಲದಿದ್ದರೆ (ಉತ್ತರ ಕನ್ನಡದ ಗಾದೆ – 253)
February 6, 2012
ಡಾಕ್ಟರ ಹೆಂಡತಿ (ಉತ್ತರ ಕನ್ನಡದ ಗಾದೆ – 252)
January 18, 2012
ಬಡಿ ಗೋವಿಗೇಕೆ (ಉತ್ತರ ಕನ್ನಡದ ಗಾದೆ – 251)
August 30, 2011
ಅರಿಶಿಣದ ಅನ್ನಕ್ಕೆ ಹೋಗಿ (ಉತ್ತರ ಕನ್ನಡದ ಗಾದೆ – 250)
ಅರಿಶಿಣದ ಅನ್ನಕ್ಕೆ ಹೋಗಿ ವರುಷನ ಅನ್ನ ಕಳೆದುಕೊಂಡಿದ್ದ.
ಅರಿಶಿಣ ಇದರ correct form ‘ಅನ್ನಕ್ಕೆ ಹೋಗಿ ವರುಷದ ಅನ್ನ ಕಳೆದುಕೊಂಡಿದ್ದ’ ಎಂಬುದು. ಪ್ರಾಸಕ್ಕೆ ಸರಿ ಹೊಂದುವಂತೆ‘ವರುಷನ’ ಎಂದು ಹೇಳುತ್ತಾರೆ. ಅರಿಶಿಣದ ಅನ್ನ ಅಂದರೆ ಚಿತ್ರಾನ್ನ. ಪೇಟೆಯ ಜನರಿಗೆ ಇಂದಿನ ಅನ್ನ ಉಳಿದರೆ ಅದನ್ನು ಹಾಳುಮಾಡದೆ ಬಳಸಬೇಕೆಂದರೆ ಇರುವ ಪ್ರಮುಖ ದಾರಿ- ನಾಳೆ ಚಿತ್ರಾನ್ನ! ಹಳ್ಳಿಗಳಲ್ಲಿ ಇಂದು ಅನ್ನ ಉಳಿದರೆ ಅದನ್ನು ನಾಳೆಯವರೆಗೆ ಇಡುವ ಪ್ರಮೇಯವಿರುವುದಿಲ್ಲ. ಇಂದೇ ದನ-ಕರುಗಳಿಗೆ ಕೊಟ್ಟು ಖಾಲಿಮಾಡಿಬಿಡುತ್ತಾರೆ. ಹಳ್ಳಿಗಳಲ್ಲಿ ಚಿತ್ರಾನ್ನ ಮಾಡುವುದು ಕೇವಲ ವಿಶೇಷದ ದಿನಗಳಲ್ಲಿ ಮಾತ್ರ. ಅಂದರೆ ಹಬ್ಬ ಹರಿದಿನಗಳು ಅಥವಾ ಶ್ರಾದ್ಧದ ದಿನಗಳು. ಯಾರೋ ಒಬ್ಬ ಹಬ್ಬದೂಟದ ಆಸೆಗೆ (ಅರಿಶಿಣದ ಅನ್ನಕ್ಕೆ) ಪ್ರತಿದಿನ ಬೇರೆಯವರ ಮನೆಗೆ ಹೋಗುತ್ತಿದ್ದನಂತೆ. ಇಂದಿನ ದಿನ ಕಳೆದರಾಯಿತೆಂಬಭಾವನೆ ಅವನಿಗೆ. ಪ್ರತಿದಿನ ಮನೆಯಲ್ಲಿರದ ಅವನಿಗೆ ತನ್ನ ಗದ್ದೆ-ತೋಟಗಳ ಕಡೆ ಗಮನವೇ ಇರಲಿಲ್ಲ. ಅವು ಹಾಳುಬಿದ್ದು ಆ ವರ್ಷ ಅವನಿಗೆ ಬೆಳೆಯೇ ಸಿಗಲಿಲ್ಲ. ಅರಿಶಿಣದ ಅನ್ನದ ಆಸೆಯಲ್ಲಿ ವರ್ಷಾವಧಿಯ ಅನ್ನವನ್ನು ಕಳೆದುಕೊಂಡುಬಿಟ್ಟಿದ್ದ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡದೆ ಇಂದು ಸಿಗುವ ಸಣ್ಣ ಸುಖದ ಬೆನ್ನುಹತ್ತಿ ಹೋಗುವವರನ್ನು ಕುರಿತುಹೇಳಬಹುದಾದಂತ ಗಾದೆ ಇದು.
April 14, 2011
ಕುರುಡನಿಗೆ ದೀಪ ಬೇಡವಾದರೆ (ಉತ್ತರ ಕನ್ನಡದ ಗಾದೆ – 249)
February 21, 2011
ತಾನು ಕೆಟ್ಟು ಇರಬಹುದು (ಉತ್ತರ ಕನ್ನಡದ ಗಾದೆ – 248)
ಹೆಣ್ಣು ಮಕ್ಕಳಿಗೆ ತವರುಮನೆಯ ಬಗ್ಗೆ ಇರುವ ಪ್ರೀತಿಯನ್ನು ಹೇಳುವ ಗಾದೆ ಇದು. ತಮಗೇನಾದರೂ ಕಷ್ಟ ಬಂದರೆ ಸಹಿಸಿಕೊಳ್ಳುತ್ತಾರೆ. ಆದರೆ ತವರು ಮನೆಯಲ್ಲಿ ಕಷ್ಟ ಎಂದು ತಿಳಿದಾಗ ಹೆಣ್ಣುಮಕ್ಕಳು ಅನುಭವಿಸುವ ಚಡಪಡಿಕೆ ಅವರ್ಣನೀಯ. ತವರಿನ ಕಷ್ಟಕ್ಕೆ ಸಹಾಯ ಮಾಡಬೇಕೆಂದೆನಿಸಿದರೂ ಗಂಡನ ಮನೆಯಲ್ಲಿ ಬರುವ ಪ್ರತಿಕ್ರಿಯೆಯನ್ನು ನೆನೆನು ಸುಮ್ಮನಾಗುತ್ತಾರೆ. ಒಂದುವೇಳೆ ಅವರು ಸಹಾಯಕ್ಕೆ ಬಂದರೂ ಸಹಾಯ ತೆಗೆದುಕೊಳ್ಳಲು ತವರುಮನೆಯವರು ಸಮಾಜದಲ್ಲಿ ಜನರು ವಿಧ ವಿಧವಾಗಿ ಮಾತನಾಡುತ್ತಾರೆ ಎಂಬ ಭಯದಿಂದ ಹಿಂಜರಿಯುತ್ತಾರೆ. ಇದು ಹಿಂದಿನಕಾಲಕ್ಕೆ ಅನ್ವಯಿಸುವಂಥ ಮಾತು. ಈಗ ಪರಿಸ್ಥಿತಿ ಬದಲಾಗಿದೆ. ಆದರೆ ಹೆಣ್ಣುಮಕ್ಕಳ ತವರಿನ ಮೇಲಿನ ಪ್ರೀತಿ ಬದಲಾಗಲಿಲ್ಲ. ಇಬ್ಬರೂ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಾಯಮಾಡುವಂಥ ಸೌಹಾರ್ದ ಪರಿಸ್ಥಿತಿ ಇದೆ.
'ತವರುಮನೆ' ಎಂಬ ಶಬ್ದವನ್ನು ಕೇಳಿದಾಕ್ಷಣವೇ ಏನೋ ಒಂಥರಾ ಪುಳಕ. ಮದುವೆಯಾಗಿ ಬಂದ ಎಲ್ಲ ಹೆಣ್ಣುಮಕ್ಕಳೂ ಅನುಭವಿಸುತ್ತಾರೆ. ಮದುವೆಯಾಗಿ ಎಷ್ಟೋ ವರ್ಷಗಳ ನಂತರವೂ ಬಹುಪಾಲು ಹೆಣ್ಣುಮಕ್ಕಳಿಗೆ ತವರುಮನೆಯ ಮೇಲಿನ ಪ್ರೀತಿ ಅಷ್ಟೇ ತೀವ್ರವಾಗಿರುತ್ತದೆ; ಇರಬೇಕು ಕೂಡ. ನಾನೂ ಹಾಗೆ ಸ್ವಲ್ಪ ಭೂತಕಾಲಕ್ಕೆ.....
ನನ್ನ ಮದುವೆಯಾದ ಹೊಸದರಲ್ಲಿ ನಾವು ಶಿರಸಿಯಲ್ಲಿ ವಾಸವಾಗಿದ್ದೆವು. ನಮ್ಮ ಮನೆ main road ಗೆ ತುಂಬಾ ಹತ್ತಿರವಿದ್ದುದರಿಂದ ಊರ ಕಡೆಯಿಂದ ಬರುವ ಬಸ್ಸುಗಳನ್ನೆಲ್ಲ ನಾನು excited ಆಗಿ ನೋಡುತ್ತಿದ್ದೆ ಮತ್ತು "ನಮ್ಮನೆಗೆ ಹೋಗುವ ಬಸ್ಸು" ಎಂದು ಹೇಳುತ್ತಿದ್ದೆ! ಆಗ ರಾಜೀವ ತಮಾಷೆ ಮಾಡುತ್ತಿದ್ದುದು ಇನ್ನೂ ನೆನಪಿದೆ- "ನೋಡು, ನೋಡು ಆ ಬಸ್ಸಿನ ಮೇಲೆ ನಿನ್ನ ಅಮ್ಮ ತನ್ನ ಕೈ ಅಚ್ಚು ಹೊಡೆದು ಕಳಿಸಿದ್ದಾಳೆ.... ಸರಿಯಾಗಿ ನೋಡು...ಅಯ್ಯೋ ಬಸ್ಸು ಹೋಯಿತು ಬಿಡು...ನಂಗೆ ಕಾಣಿಸಿತು... ಮುಂದಿನ ಬಸ್ಸಿಗೂ ಇರುತ್ತದೆ...ಆಗ ನೋಡಬಹುದು." ನಗುತ್ತಿದ್ದೆ; ಆದರೆ ಕಣ್ಣಲ್ಲಿ ನೀರು ಬರುತ್ತಿದ್ದುದು ನಿಜ. ಈಗಿನ ನನ್ನ ಮನೆ 'ನನ್ನ ಮನೆ' ಎಂದು ಅನಿಸಲು ಎಷ್ಟೋ ದಿನಗಳು ಬೇಕಾದವು. ಎಷ್ಟೋ ಸಲ ರಾಜೀವನ ಬಳಿ "ನಿನ್ನ ಮನೆಯಲ್ಲಿ....." ಎನ್ನುತ್ತಾ ಮಾತಿಗಾರಂಭಿಸುತ್ತಿದ್ದೆ. ಮತ್ತೆ ನಗುವ ಸರದಿ ಅವನದು- "ಈ ಮನೆ ನಿಂದೂ ಕೂಡಾ" ಎನ್ನುತ್ತಿದ್ದ. ಅವನಿಗೂ ಗೊತ್ತು, ನನ್ನ ಒಳಗೆ ಏನು ನಡೆಯುತ್ತಿದೆಯೆಂದು. ಅವನು ಕೆಲವೊಮ್ಮೆ ಹೀಗೆ ಹೇಳಿದ್ದೂ ಇದೆ- "ನೋಡು, ನಿನಗಾದರೆ ಈಗ ಎರಡು ಮನೆ; ನನಗೆ ಒಂದೇ ಮನೆ". ಒಂದು ಕ್ಷಣ ಸಮಾಧಾನವಾದರೂ ಮರುಕ್ಷಣ ಮತ್ತದೇ ಬೇಜಾರು.
ನಂತರ ಕೆಲಸಗಳಲ್ಲಿ busy ಆಗುತ್ತಿತ್ತದ್ದಂತೆ ಈ ಬೇಜಾರು ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಾ ಹೋಯಿತು. ಅಷ್ಟರಲ್ಲಿ ಮನಸ್ಸು ಕೂಡ ಪರಿಸ್ಥಿತಿಯನ್ನು ಒಪ್ಪಿಕೊಳ್ಳತೊಡಗಿತು. ಆದರೆ ಈಗ ಕೂಡ ಕೆಲವೊಮ್ಮೆ ಅಷ್ಟೇ ತೀವ್ರವಾಗಿ 'ನನ್ನ ಮನೆಯ' ನೆನಪು ಕಾಡುತ್ತದೆ. ಒಮ್ಮೆ ಹೋಗಿಯಾದರೂ ಬರೋಣ ಎನಿಸುತ್ತದೆ. ಇಲ್ಲಿರುವ ಕೆಲಸಗಳು ಕಟ್ಟಿಹಾಕುತ್ತವೆ; ಸುಮ್ಮನಾಗುತ್ತೇನೆ; ಮನಸ್ಸಿಗೆ ಬುದ್ಧಿ ಹೇಳುತ್ತೇನೆ.
January 7, 2011
ಕೋಡ ಕೋಡ ಹೆಣ್ಣುಮಕ್ಕಳಿಗೆ (ಉತ್ತರ ಕನ್ನಡದ ಗಾದೆ – 247)
ಕೋಡ= ಕೊಡಗ= ಮಂಗ. ಕೋಡುಬಳೆಯನ್ನು ಯಾರೂ ಸಾಮಾನ್ಯವಾಗಿ ಕಜ್ಜಾಯ ಎಂದು ಪರಿಗಣಿಸುವುದಿಲ್ಲ.
ಮಂಗಗಳಂತೆ ನಡುವಳಿಕೆಯುಳ್ಳ ಹೆಣ್ಣುಮಕ್ಕಳಿಗೆ ಕೋಡುಬಳೆಯನ್ನೇ ಕಜ್ಜಾಯವೆಂದು ನೀಡುತ್ತಾರೆ; ಅವರ ಯೋಗ್ಯತೆಗೆ ಅದೇ ಸಾಕು ಎಂದು. ಹಗುರವಾದ ವ್ಯಕ್ತಿತ್ವವುಳ್ಳವರನ್ನು ಇತರರು ಯಾವುದೋ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಅಂಥವರಿಗೆ ಕೊಡುವ ಬೆಲೆ ಕಡಿಮೆ ಎಂಬರ್ಥದ ಗಾದೆ.
December 29, 2010
ಒಂದೇ ಮಳೆಗೆ ಒಂದು ಕೊಡೆ (ಉತ್ತರ ಕನ್ನಡದ ಗಾದೆ – 246)
ಯಾರೊಬ್ಬರನ್ನೂ ಒಂದೇ ಸಂದರ್ಭವನ್ನು ನೋಡಿ ಅಳೆಯಬಾರದು. ಹಲವಾರು ಪ್ರಕರಣಗಳ ನಂತರ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರಬೇಕು- ಇಂಥ ಸಂದರ್ಭಗಳಲ್ಲಿ ಬಳಸುತ್ತಾರೆ.
ಕೊಡೆ ಯಾವುದೊ ಒಂದು ಜೋರು ಮಳೆಗೆ ಸ್ವಲ್ಪ ಚೆನ್ನಾಗಿಲ್ಲ ಅನಿಸಿದರೂ ಅದು ಎಸೆದು ಬಿಡುವಂಥ ಕೊಡೆ ಅಲ್ಲದಿರಬಹುದು. ಮಳೆಯ ಅಬ್ಬರಕ್ಕೆ ಕೊಡೆ ಆ ಕಡೆ ಈ ಕಡೆ ಆಗಬಹುದು. ಅಂತೆಯೇ ಒಬ್ಬ ವ್ಯಕ್ತಿಯೂ ಕೂಡ ಸಂದರ್ಭಕ್ಕೆ ಸಿಲುಕಿ ವಿಚಿತ್ರವಾಗಿ ವರ್ತಿಸಿರಬಹುದು. ಅಂದ ಮಾತ್ರಕ್ಕೆ ಆ ವ್ಯಕ್ತಿಯೇ ಹಾಗೆ ಎಂದು ನಿರ್ಧರಿಸಬಾರದು. ಒಂದೆರಡು ಮಳೆಯನ್ನೂ ನೋಡಿದಾಗ ಕೊಡೆಯ ಯೋಗ್ಯತೆ ಗೊತ್ತಾಗುತ್ತದೆ; ಒಂದೆರಡು ಸನ್ನಿವೇಶಗಳನ್ನು ನೋಡಿದಾಗ ಒಬ್ಬ ವ್ಯಕ್ತಿಯ ಯೋಗ್ಯತೆ ಗೊತ್ತಾಗುತ್ತದೆ.
ಎಂಥ ಅರ್ಥಪೂರ್ಣ ಸುಂದರ ಗಾದೆ ಅಲ್ವ?
December 22, 2010
ಅಮಟೆ ಮರ (ಉತ್ತರ ಕನ್ನಡದ ಗಾದೆ – 244 ಮತ್ತು 245)
ಅಮಟೆ ಮರ ತವರಿಗೆ ಹೋಗಬೇಕು ಎಂದು ವಿಚಾರ ಮಾಡುತ್ತದೆಯಂತೆ. ವರ್ಷದ ಒಂದು ಕಾಲದಲ್ಲಿ ಮೈತುಂಬಾ ಕಾಯಿ ತುಂಬಿಕೊಡು ಬಿಡುತ್ತದೆ. ಆಗ ಆ ಭಾರವನ್ನು ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ಹೋಗುವುದಿಲ್ಲವಂತೆ. ನಂತರ ಕಾಯೆಲ್ಲ ಹಣ್ಣಾಗಿ ಉದುರುವಷ್ಟರಲ್ಲಿ ಚಳಿಗಾಲಕ್ಕೆ ಪೂರ್ತಿ ಎಲೆಯನ್ನು ಉದುರಿಸಿ ಬೋಳಾಗಿ ನಿಲ್ಲುತ್ತದೆ. ಈ ರೀತಿ ಬೋಳು ಮೈಯ್ಯಲ್ಲಿ ಹೋಗುವುದು ಬೇಡವೆಂದುಕೊಳ್ಳುತ್ತದೆಯಂತೆ. ವಸಂತ ಬಂದಾಗ ಚಿಗುರುವ ಸಮಯ. ಹೋಗಲು ಸಮಯವೇ ಇಲ್ಲ.
ಎಲ್ಲಿಗಾದರೂ ಹೋಗುವುದನ್ನು ಅಥವಾ ಮಾಡುವ ಕೆಲಸಗಳನ್ನು ಕಾರಣಾಂತರಗಳಿಂದ ಮುಂದೆ ಹಾಕ ಬೇಕಾಗಿ ಬಂದರೆ ಇದನ್ನು ಹೇಳುತ್ತಾರೆ. "ಈ ಕೆಲಸ ನೋಡಿದರೆ ಗಣಪತಿಯ ಮದುವೆಯೇ ಎಂದು ಕಾಣುತ್ತದೆ" ಎಂದು ಹೇಳುವುದನ್ನು ಕೇಳಿರಬಹುದು.
ದೊಡ್ಡ ಕೆಲಸ ಮಾಡುತ್ತಿರುವಾಗ ಇತರ ಸಣ್ಣ ಪುಟ್ಟ ಕೆಲಸಗಳು ಅದ್ದಬಂದರೆ ಹೇಳುವ ಗಾದೆ 'ತೆರೆ ಕಳಿದು ಸಮುದ್ರ ಮುಳುಗಿದಂತೆ'. Check http://seemahegde78.blogspot.com/2007/11/64.html
ಇವೆಲ್ಲಕ್ಕೂ ವ್ಯತಿರಿಕ್ತವಾಗಿ ಇನ್ನೊಂದು ಗಾದೆ- ಹಾಸ್ಯಗಾರನ ಹೆಂಡತಿ ಅಪ್ಪನ ಮನೆಗೆ ಹೋದ ಹಾಗೆ.
ವರ್ಷಕ್ಕೆ ಎರಡೇ ಬಾರಿ ಹೋಗುತ್ತಾಳೆ. ಒಮ್ಮೆ ಹೋದರೆ ಆರು ತಿಂಗಳು ಮಾತ್ರ ಉಳಿಯುತ್ತಾಳೆ!
November 19, 2010
ಅಜ್ಜಿ ಮುದುಕಿಯ ಕೋಳಿ (ಉತ್ತರ ಕನ್ನಡದ ಗಾದೆ – 243)
ಯಾರೋ ಒಬ್ಬರು ತನ್ನ ಸಹಾಯ ಇಲ್ಲದೆಯೇ ಯಾವುದೊ ಒಂದು ಕೆಲಸ ಆಗುವುದೇ ಇಲ್ಲ ಎಂದು ತಿಳಿದುಕೊಂಡಾಗ/ ಹೇಳಿದಾಗ ಈ ಗಾದೆಯನ್ನು ಬಳಸುತ್ತಾರೆ. ಈ ಗಾದೆಯ ಹಿನ್ನೆಲೆ ಈ ಕಥೆ.... ಒಂದು ಊರಲ್ಲಿ ಒಬ್ಬಳು ಅಜ್ಜಿಯಿದ್ದಳು. ಅವಳು ಒಂದು ಕೋಳಿಯನ್ನು ಸಾಕಿದ್ದಳು. ದಿನಾಲೂ ಆ ಕೋಳಿ ಬೆಳಗಾಗುವ ಮೊದಲು ಕೂಗುತ್ತಿತ್ತು. ಅಜ್ಜಿಯ ತಿಳುವಳಿಕೆ- ತನ್ನ ಕೋಳಿ ಕೂಗದಿದ್ದರೆ ಬೆಳಗೇ ಆಗುವುದಿಲ್ಲ. ಒಂದು ದಿನ ಅಜ್ಜಿ ಊರವರಿಗೆಲ್ಲಾ ಪಾಠ ಕಲಿಸಬೇಕೆಂದು ಬೆಳಗೇ ಆಗದಂತೆ ಮಾಡಬೇಕೆಂದುಕೊಂಡಳು. ಸಂಜೆಯಾಗುತ್ತಲೇ ಕೋಳಿಯನ್ನು ತೆಗೆದುಕೊಂಡು ಊರ ಹೊರಗೆ ಕಾಡಿಗೆ ಹೋಗಿ ಕುಳಿತುಕೊಂಡಳು. (ಅವಳ ಕೋಳಿ ಕಾಡಿನಲ್ಲಿ ಕೂಗಿತೋ ಇಲ್ಲವೋ ಗೊತ್ತಿಲ್ಲ :-). ಅವಳೆಣಿಸಿದಂತೆ ಆಗಲೇ ಇಲ್ಲ. ಊರಿನಲ್ಲಿ ಎಂದಿನಥೆಯೇ ಬೆಳಗಾಯಿತು.
ಯಾರು ಸಹಾಯ ಮಾಡಲಿ, ಮಾಡದಿರಲಿ, ಕೆಲಸಗಳು ನಡೆಯುವಂತೆ ನಡೆಯುತ್ತಲೇ ಇರುತ್ತವೆ.
October 31, 2010
ಅಪ್ಪಯ್ಯ ನನಗೆ ಹೊಡೆದ (ಉತ್ತರ ಕನ್ನಡದ ಗಾದೆ – 241 ಮತ್ತು 242 )
ತಪ್ಪು ಮಾಡಿದ್ದಕ್ಕಾಗಿ ಅಪ್ಪ ಹೊಡೆದಾಗ ಮಗ ಇನ್ನೇನೂ ಮಾಡುವಂತಿಲ್ಲ; ಹೊಡೆತ ತಿಂದ ಸಿಟ್ಟನ್ನು, ಬೇಸರವನ್ನೂ ತೀರಿಸಿಕೊಳ್ಳುವ ಸಲುವಾಗಿ ತನ್ನ ತಮ್ಮನಿಗೆ ಹೊಡೆಯುತ್ತಾನೆ. Boss ನಮ್ಮ ಮೇಲೆ ಸಿಟ್ಟನ್ನು ತೋರಿಸಿದಾಗ ನಾವು ಅಸಹಾಯಕರಾಗಿ, ಇನ್ನೇನೂ ಮಾಡಲರಿಯದೇ ನಮ್ಮ assistant ಮೇಲೆ ಸಿಟ್ಟು ಮಾಡುವಂಥದು. ಇಂಥದೇ ಇನ್ನೊಂದು- ಅತ್ತೆಯ ಮೇಲಿನ ಸಿಟ್ಟು ತೊತ್ತಿನ ಮೇಲೆ. ಅತ್ತೆಯ ಮೇಲೆ ಸಿಟ್ಟನ್ನು ತೋರಿಸುವಂತಿಲ್ಲ. ಅದಕ್ಕೇ ಸೊಸೆ ಕೆಲಸದವಳ ಮೇಲೆ ಸಿಟ್ಟು ತೋರಿಸುತ್ತಾಳೆ.
September 2, 2009
ಹೂವಲ್ಲದಿದ್ದರೆ (ಉತ್ತರ ಕನ್ನಡದ ಗಾದೆ 239, ಮತ್ತು 240)
ಯಾವುದೋ ವಸ್ತು ಪೂರ್ತಿ ಸಿಗದೇ ಹೋದರೂ ಕೂಡ ಸ್ವಲ್ಪವಾದರೂ ಸಿಕ್ಕಾಗ (ಅಥವಾ ಬೇರೆಯವರು ಕೊಟ್ಟಾಗ) ಹೇಳುವ ಮಾತು. ಇದೇ ತರಹದ, ಆದರೆ ಬೇರೆ ಸಂದರ್ಭದಲ್ಲಿ ಬಳಸುವಂಥ ಮಾತೆಂದರೆ- ಬೆಲ್ಲವಿಲ್ಲದಿದ್ದರೂ ಬೆಲ್ಲದಂಥಾ ಮಾತು. ಒಳ್ಳೆಯದನ್ನು ಮಾಡುಲು ಸಾಧ್ಯವಿಲ್ಲದಿದ್ದರೂ ಒಳ್ಳೆಯದನ್ನು ಬಯಸಬಹುದು, ಹಾರೈಸಬಹುದು ಎನ್ನುವಾಗ ಬಳಸಬಹುದು.
August 7, 2009
ಅಜ್ಜ ಊರಿದ್ದಕ್ಕೂ (ಉತ್ತರ ಕನ್ನಡದ ಗಾದೆ 236, 237, ಮತ್ತು 238)
ಅಜ್ಜ ಒಂದು ಹೆಜ್ಜೆ ಊರಿದ್ದನ್ನು ಸರಿಗಟ್ಟಲು ಮೊಮ್ಮಗ ಶಕ್ತಿ ಮೀರಿ ಹಾರಬೇಕಾಗುತ್ತದೆ. ದೊಡ್ಡವರು ಅನುಭವದಿಂದ ಸುಲಭದಲ್ಲಿ ಮಾಡಿ ಮುಗಿಸುವ ಕೆಲಸವನ್ನು ಸಣ್ಣವರು ಕಷ್ಟಪಟ್ಟು ಮಾಡುವ ಸಂದರ್ಭಗಳಿರುತ್ತವೆ. ದೊಡ್ಡವರ ಅನುಭವವನ್ನು ಸಣ್ಣವರ ಜ್ಞಾನ ಸರಿಗಟ್ಟಲಾರದು ಎನ್ನುವಾಗ ಬಳಸಬಹುದು. ಅಜ್ಜನಿಗೆ ಕೆಮ್ಮಲು ಕಲಿಸಲು ಹೋಗಿದ್ದ ಎಂಬ ಗಾದೆಯೂ ಸಹ ಇದೆ; ಅಂದರೆ ಹಿರಿಯರಿಗೆ ಮೊದಲೇ ಗೊತ್ತಿರುವ ಕೆಲಸವನ್ನು ಸಣ್ಣವರು ವಿವರಿಸಲು ಹೋದಾಗ ಹಿರಿಯರಿಂದ ಈ ಮಾತು ಕೇಳಿಸಿಕೊಳ್ಳುತ್ತಾರೆ. ' ಸುಮ್ಮನಿರು, ನಾನು ಉಪ್ಪು ತಿಂದಷ್ಟು ನೀನು ಅನ್ನ ತಿನ್ನಲಿಲ್ಲ' ಎಂದು ಹಿರಿಯರು ಹೇಳುವುದನ್ನಂತೂ ಸಾಮಾನ್ಯವಾಗಿ ಎಲ್ಲರೂ ಕೇಳಿಯೇ ಇರುತ್ತಾರೆ.
December 17, 2008
ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )
ಮಗಳಿಗೆ ಸಹಾಯ ಮಾಡುವಷ್ಟು ಮಾಡಬಹುದು ನಂತರ ಕೈಮೀರಿದಾಗ ಹಣೆಬರಹದಲ್ಲಿದ್ದಂತೆ ಆಗುತ್ತದೆ ಎಂದು ಸುಮ್ಮನಿರಬೇಕಾಗುತ್ತದೆ. ಬುದ್ಧಿ ಮಾತನ್ನು ಹೇಳುವಷ್ಟು ಹೇಳುವುದು ಒಂದು ವೇಳೆ ಅವರು ಕೇಳದಿದ್ದರೆ ನಂತರ ಅದೃಷ್ಟವಿದ್ದಂತೆ ಆಗುತ್ತದೆ ಎಂದು ಕೈಚೆಲ್ಲುವುದು. ಹೆಚ್ಚು-ಕಮ್ಮಿ ಇದೇ ಅರ್ಥದ ಇನ್ನೂ ಒಂದು ಮಾತಿದೆ- ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು. ಮೊನ್ನೆ ಅಪ್ಪನ ಜೊತೆ phone ನಲ್ಲಿ ಮಾತನಾಡುವಾಗ ಅಪ್ಪ ಯಾರೋ ಒಬ್ಬರ ಬಗ್ಗೆ ಹೇಳುತ್ತಿದ್ದರು. ನಾನು ಆಗ ಹೇಳಿದೆ, "ಹೋಗ್ಲಿ ಬಿಡು ಅಪ್ಪ, ನೀನು ಎಷ್ಟು ಎಂದು ಸಹಾಯ ಮಾಡಲು ಸಾಧ್ಯ? ಮರ ಹತ್ತುವವನನ್ನು ಎಲ್ಲಿಯ ತನಕ ನೂಕಲು ಸಾಧ್ಯ?". ಆಗ ಅಪ್ಪ ಹೇಳಿದ್ದು- "ಈಗಿನ ಕಾಲಕ್ಕೆ ಮರ ಹತ್ತುವವನನ್ನು ಸ್ವಲ್ಪವೂ ನೂಕಲು ಸಾದ್ಯವಿಲ್ಲ, ಎಲ್ಲರೂ ಅವರವರೆ ಹತ್ತಬೇಕು. ನೋಡು ಅಲ್ಲೊಂದು ಮರ ಇದೆ, ಬೇಕಾದರೆ ಹತ್ತು ಎಂದು ತೋರಿಸಬಹುದು ಅಷ್ಟೇ!!"
December 8, 2008
ವಾಜೆ ಕಲಿಯೇ (ಉತ್ತರ ಕನ್ನಡದ ಗಾದೆ – 233)
'ವಾಜೆ' ಎಂದರೆ ಕೆಲಸ, ಒಳ್ಳೆಯ ನಡತೆ ಎಂದು ಹೇಳಬಹುದು. ಒಳ್ಳೆಯ ಕೆಲಸವನ್ನು ಕಲಿ ಎಂದರೆ ಒಲೆಯ ಮುಂದೆ ಉಚ್ಚೆ ಹೊಯ್ದಿದ್ದಳಂತೆ. ಯಾರಿಗಾದರೂ ಏನಾದರೂ ಒಳ್ಳೆಯದನ್ನು ಕಲಿ ಎಂದರೆ ಅವರು ಏನೋ ಅನಾಹುತಕಾರಿ ಕೆಲಸವನ್ನು ಮಾಡಿದರೆ ಈ ಮಾತನ್ನು ಹೇಳಬಹುದು.
December 4, 2008
ಕದಿಯಲು ಹೋಗುವವನು (ಉತ್ತರ ಕನ್ನಡದ ಗಾದೆ – 232)
‘ಬಳ್ಳ’ ಎಂದರೆ ನರಿ. ನರಿಗಳು ವಿಚಿತ್ರ ರೀತಿಯಲ್ಲಿ ಕೂಗುವುದಕ್ಕೆ ಹೆಸರುವಾಸಿ. ಅವಕ್ಕೆ ತಾಳ್ಮೆ ಕಡಿಮೆ ಎನ್ನುತ್ತಾರೆ. ಕದಿಯಲು ಹೋಗುವಾಗ ನರಿಯನ್ನು ಕಟ್ಟಿಕೊಂಡು ಹೋದರೆ ಅವು ಕೂಗಿಬಿಡುತ್ತವೆ, ಅದರಿಂದಾಗಿ ಅಪಾಯ ಎಂದು ಅರ್ಥ. ಗುಟ್ಟಿನ ವಿಚಾರವನ್ನು ವಿಚಾರಹೀನರ ಬಳಿ ಹೇಳಬಾರದು ಎನ್ನುವಾಗ ಬಳಸಬಹುದು. ಇಂಥದೇ ಇನ್ನೊಂದು ಮಾತಿದೆಯಲ್ಲ- ಕಹಳೆಯ ಬಾಯಿಗೆ ಮುತ್ತಿಟ್ಟಂತೆ.
December 3, 2008
ಖಾಲಿ ಕೈಲಿರುವುದಕ್ಕಿಂತ (ಉತ್ತರ ಕನ್ನಡದ ಗಾದೆ – 231)
ಬಂಗಾರದ ಬಳೆ ಇಲ್ಲವೆಂದು ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆಯ ಬಳೆಯಾದರೂ ಅಡ್ಡಿಯಿಲ್ಲ ಎಂಬ ಅರ್ಥ.
Something is better than nothing :)
December 1, 2008
ಅಳಿಯನ ಕುರುಡು (ಉತ್ತರ ಕನ್ನಡದ ಗಾದೆ – 230)
ಹಿಂದಿನ ಕಾಲದಲ್ಲಿ ಗೋಧೂಳಿ ಮುಹೂರ್ತದ ಮದುವೆಗಳು ತುಂಬಾ ನಡೆಯುತ್ತಿದ್ದವಂತೆ. ಆ ದೀಪದ ಬೆಳಕಿನಲ್ಲಿ ಅಳಿಯನ ಕುರುಡುತನವನ್ನು (ದೃಷ್ಟಿ ದೋಷವನ್ನು) ಯಾರೂ ಸರಿಯಾಗಿ ಗಮನಿಸದಿದ್ದರೂ ಅದು ಬೆಳಗಾದ ಮೇಲೆ ಎಲ್ಲರಿಗೂ ಕಂಡೇ ಕಾಣುತ್ತದೆ. ಹೊಸ ವಸ್ತುವನ್ನು ಖರೀದಿಸಿ ತಂದಾಗ ಚೆನ್ನಾಗಿ ಕಂಡರೂ ಅದರ ಅವಗುಣಗಳು ಶೀಘ್ರದಲ್ಲಿ ಕಂಡುಬರುತ್ತವೆ ಎನ್ನುವಾಗ ಬಳಸಿ.
ಹಿಂದಿನ ಕಾಲದ ಮದುವೆಗಳು ಐದು ದಿನ ನಡೆಯುತ್ತಿದ್ದವಂತೆ. ಎಲ್ಲರಿಗೂ ಪುರಸೊತ್ತು ಇರುತ್ತಿತ್ತು. ಎಲ್ಲರೂ ಮದುವೆಯನ್ನು ಹಬ್ಬದಂತೆ ಆಚರಿಸಿ, ಮದುಮಕ್ಕಳಿಗೆ ಆಶೀರ್ವಾದ ಮಾಡುತ್ತಿದ್ದರು. ಈಗಿನ ಮದುವೆಗಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದರೆ 12-2 ಘಂಟೆಯ ವರೆಗೆ rush hour ಎನ್ನಬಹುದು. ಎಲ್ಲರೂ ಬಂದು queue ನಲ್ಲಿ ನುಗ್ಗಿ ಊಟ ಮಾಡಿ, ಮದುಮಕ್ಕಳ ಕೈಗೆ ಮುಂದೆ ಏನೂ ಉಪಯೋಗಕ್ಕೆ ಬಾರದ ಗಣಪತಿ ಚಿತ್ರವಿರುವ ಒಂದು ಗೋಡೆ ಗಡಿಯಾರವನ್ನು ತುರುಕಿ ತಮ್ಮ ತಮ್ಮ ವಾಹನಗಳನ್ನು ಹತ್ತಿ ಹೋಗಿಬಿಟ್ಟಿರುತ್ತಾರೆ. ಇನ್ನು ತೀರಾ ಗಡಿಬಿಡಿಯಲ್ಲಿದ್ದರೆ ಮದುಮಕ್ಕಳ ಅಪ್ಪ- ಅಮ್ಮರ ಎದುರು ಹಲ್ಲು ಕಿರಿದು ಹಾಜರಿ ಹಾಕಿ ಮದುಮಕ್ಕಳನ್ನೂ ನೋಡದೇ ಹೋಗಿಬಿಡುತ್ತಾರೆ. ಮತ್ತೆ 3 ಘಂಟೆಗೆ ಕಲ್ಯಾಣ ಮಂಟಪ ಬಣ ಬಣ. ತೀರಾ ಹತ್ತಿರದವರನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಅವರೂ ಕೂಡ ರಾತ್ರಿಯ VRL ಬಸ್ಸಿಗೆ ಬೆಂಗಳೂರಿಗೆ ಹೋಗಲು ತಮ್ಮನ್ನು bus-stand ಗೆ ಯಾರು ಮುಟ್ಟಿಸುತ್ತಾರೆ ಎಂಬ ಚಿಂತೆಯಲ್ಲಿರುತ್ತಾರೆ. ಮನೆಯಲ್ಲಿ ಮದುವೆ ನಡೆದರೂ ಸನ್ನಿವೇಶ ಬೇರೆ ಇರುವುದಿಲ್ಲ ಮತ್ತೆ! ಎಲ್ಲಾ ಕಡೆ ಹೀಗೆಯೇ!! ಜೀವನದಲ್ಲಿ ಯಾರಿಗೂ ಯಾವ ಕೆಲಸಕ್ಕೂ ಪುರಸೊತ್ತಿಲ್ಲ. ನಾವೆಲ್ಲಾ ಯಾವ ದಿಕ್ಕಿಗೆ ಮುಖ ಮಾಡಿ ಓಡುತ್ತಿದ್ದೇವೆ?