January 31, 2008

ಊರ ಮುಂದೆ … (ಉತ್ತರ ಕನ್ನಡದ ಗಾದೆ – 146)

ಊರ ಮುಂದೆ ಹೊಡೆದು ಒಲೆ ಮುಂದೆ ಎಣ್ಣೆ ಹಚ್ಚಿದಂತೆ.

ಇಡೀ ಊರವರ ಮುಂದೆ ಹೊಡೆದರೆ ಉರಿಯಾಗಿದ್ದಕ್ಕಿಂತ ಅವಮಾನವಾಗಿದ್ದು ಜಾಸ್ತಿ. ನಂತರ ಮನೆಯಲ್ಲಿ ಒಲೆಯ ಮುಂದೆ ಎಷ್ಟೇ ಎಣ್ಣೆ ಹಚ್ಚಿದರೂ ಆದ ಅವಮಾನ ಹೋಗುವುದಿಲ್ಲ. ಎಲ್ಲರ ಎದುರಲ್ಲಿ ಅವಮಾನ ಮಾಡಿ ಒಬ್ಬರೇ ಇದ್ದಾಗ ಬಂದು ಕ್ಷಮೆ ಕೇಳುವವರನ್ನು ಕುರಿತಾದ ಮಾತು ಇದು.

January 30, 2008

ಅಪ್ಪ, ಅಮ್ಮ ಮದುವೆಯಾದ ದಿನ

ಇಂದು ಅವರ ಮೂವತ್ತೊಂದನೆಯ wedding anniversary.
ಮೊದಲೆಂದೂ ನಾನು ಅವರ ಮದುವೆಯಾದ ದಿನದ ಬಗ್ಗೆ ತಲೆ ಕೆಡಿಸಿಕೊಂಡವಳೂ ಅಲ್ಲ, ಫೋನ್ ಮಾಡಿದವಳೂ ಅಲ್ಲ. ಆದರೆ ಈಗ ಎರಡು ವರ್ಷಗಳಿಂದ ಮಾಡುತ್ತಿದ್ದೇನೆ. ಏಕೆಂದರೆ ನನಗೆ ಮದುವೆ ಎಂದರೆ ಏನು ಎಂಬುದು ಅರ್ಥವಾಗಿದೆ ಎಂದು ಹೇಳಲಾಗದಿದ್ದರೂ ಕೂಡ ಅರ್ಥವಾಗತೊಡಗಿದೆ ಎಂದು ಹೇಳಬಲ್ಲೆ. ಅಪ್ಪ ಅಮ್ಮನ ಮದುವೆ ನನ್ನ ಕಲ್ಪನೆಗೂ ಮೀರಿದ್ದು. ವೀಡಿಯೋ ಇರದಿದ್ದ ಕಾಲ, ಆದರೆ ಒಂದು ಫೋಟೋ ಕೂಡ ಇಲ್ಲ. ಮದುವೆ ಕರೆಯೋಲೆಯನ್ನೂ ಇಟ್ಟುಕೊಳ್ಳುವ ಗೋಜಿಗೆ ಅವರು ಹೋಗಲಿಲ್ಲ. ಆದರೆ ಅವರ ಮದುವೆಯ ಕರೆಯೋಲೆಯನ್ನು ನಾನು, ರಘು ಇಬ್ಬರೂ ನೋಡಿದ್ದೇವೆ. ಏಕೆಂದರೆ ಅಜ್ಜ ಇಟ್ಟುಕೊಂಡಿದ್ದರು!

ಮದುವೆ, ಒಬ್ಬರ ಜೀವನದಲ್ಲಿ ಒಮ್ಮೆ ಮಾತ್ರ ಬರುವಂತಹ ಅಮೂಲ್ಯ ಘಳಿಗೆ. ಕೆಲವರ ಜೀವನದಲ್ಲಿ ಅದು ಎರಡು ಮೂರು ಬಾರಿಯೂ ಬರುವುದುಂಟು. ಆದರೆ ಆಗ ಅದು ಅರ್ಥ ಕಳೆದುಕೊಂಡಿರುತ್ತದೆ. ಎಲ್ಲೋ ಹುಟ್ಟಿ ಬೆಳೆದ ಬೇರೆ ಬೇರೆ ಮನಸ್ಥಿತಿಯ ಇಬ್ಬರನ್ನು ತಂದು ಆ ದಿನ ಒಟ್ಟಿಗೆ ನಿಲ್ಲಿಸಿ, ಮುಂದೆ ಜೀವನ ಪರ್ಯಂತ ಒಟ್ಟಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿರುತ್ತಾರೆ. ಅದಕ್ಕೆ ನೂರಾರು ಜನರ ಸಾಕ್ಷಿ ಬೇರೆ! ನನಗಂತೂ ಇದು ತೀರ ವಿಚಿತ್ರ ಎನಿಸಿತ್ತು. ಹಾಗೆಂದು ನನಗೆ ಇದಕ್ಕೆ ವಿರುದ್ಧವಾದ ಪಾಶಿಮಾತ್ಯ ಪದ್ಧತಿಯಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲ. ನನ್ನ ಮದುವೆಗೆ ಕೆಲವು ದಿನಗಳಿದ್ದಾಗ ಜ್ಯೋತಿ ಅಕ್ಕನನ್ನು ಕೇಳಿದ್ದೆ 'ಒಬ್ಬ ಗೊತ್ತಿಲ್ಲದ ಮನುಷ್ಯನ ಜೊತೆ ಹೇಗೆ ಬದುಕುವುದು, ಅದೂ ನನ್ನ ಮನೆ ಬಿಟ್ಟು ಹೋಗಿ?' ಎಂದು. ಅದಕ್ಕವಳು 'ನಾವೆಲ್ಲಾ ಬದುಕುತ್ತಿಲ್ಲವಾ ಈಗ? ನಿನಗೇ ಗೊತ್ತಾಗುತ್ತದೆ ನೋಡುತ್ತಿರು. ನೀನು ನಿನ್ನ ಅಮ್ಮನ ಬಳಿ ಇದ್ದಿದ್ದಕ್ಕಿಂತ close ಆಗಿ ಇರುತ್ತೀಯ ನಿನ್ನ ಗಂಡನ ಜೊತೆ.' ಸಾಧ್ಯವೇ ಇಲ್ಲ ಎಂಬ ತೀರ್ಪನ್ನೂ ಕೊಟ್ಟುಬಿಟ್ಟಿದ್ದೆ ಅವಳಿಗೆ.

ಆದರೆ ಆ ಮದುವೆಯ ಬಂಧನವೇ ವಿಚಿತ್ರವಾದುದು. ಅದು ನಿಧಾನವಾಗಿ ನನ್ನನ್ನು ತನ್ನೊಳಗೆ ಸೆಳೆದುಕೊಂಡು ಬಿಟ್ಟಿತು, ನನಗರಿವಿಲ್ಲದಂತೆಯೇ. ಅಮ್ಮನ ಬಳಿ ಹೇಳಲು ಹಿಂಜರಿಯುತ್ತಿದ್ದ ವಿಚಾರವನ್ನೂ ನಾನು ಇಂದು ರಾಜೀವನ ಬಳಿ ಅರೆಕ್ಷಣದಲ್ಲಿ ಹೇಳಿ ಮುಗಿಸಿರುತ್ತೇನೆ. ಜ್ಯೋತಿ ಅಕ್ಕ ಹೇಳಿದ್ದು ಎಷ್ಟು ನಿಜ! ರಾಜೀವ್ ಕೂಡಾ ಅಷ್ಟೇ, ಯಾವ ವಿಷಯವನ್ನು ಬೇಕಾದರೂ ನನ್ನ ಜೊತೆ ಹಂಚಿಕೊಳ್ಳಬಲ್ಲರು. ಅವರು ಒಬ್ಬ opposite sex ನ ಮನುಷ್ಯ ಎಂಬುದೂ ಕೂಡಾ ಮರೆತು ಹೋಗಿರುತ್ತದೆ.

ಒಂದು ಸಣ್ಣ ಕಾರಣವೇ ಅಲ್ಲದ ಕಾರಣಕ್ಕೆ ಜಗಳ, ಪ್ರೀತಿಸಲಂತೂ ಕಾರಣವೇ ಬೇಡ, ಮಾತಿಗೆ ಮಾತು ಬೆಳೆಸುವ ಜಗಳ, ಮಾತನಾಡದೇ ಇರುವ ಶೀತಲ ಸಮರ, ನಾನೇಕೆ sorry ಹೇಳಲಿ ಎಂಬ ego-ಹಟ, ಹೋಗಲಿ ಬಿಡು ಜಗಳವೇಕೆ ಎಂದು ಯಾರೋ ಒಬ್ಬರು ಬಿಟ್ಟುಕೊಡುವ ego, ಒಬ್ಬರಿಗೊಬ್ಬರ ಪ್ರೋತ್ಸಾಹ,-ಉತ್ತೇಜನ, ‘ನಾನಿದ್ದೇನೆ’ ಎಂದು ಇನ್ನೊಬ್ಬರು ಕೊಡುವ ಸಾಂತ್ವನ-ಧೈರ್ಯ, ಒಬ್ಬರ success ನಲ್ಲಿ ಇನ್ನೊಬ್ಬರು ಪಡುವ ಸಂತಸ, ನಾಲ್ಕು ಕಣ್ಣುಗಳು ಒಟ್ಟಾಗಿ ಕಾಣುವ ಕನಸುಗಳು, ಭವಿಷ್ಯದ ಬಗೆಗಿನ ಚಿಂತೆ, ಇನ್ನೊಬ್ಬರ ಬಗೆಗಿನ ಕಾಳಜಿ, ಪ್ರೀತಿ, ವಾತ್ಸಲ್ಯ,... ಹೋಗ್ಲಿ ಬಿಡಿ... ಇನ್ನೂ ಏನೇನೋ ಭಾವನೆಗಳು ಸೇರಿಕೊಂಡು ಈ ಸಂಬಂಧವನ್ನು ನಮಗೇ ಗೊತ್ತಾಗದಂತೆ ಭದ್ರವಾಗಿಸಿಬಿಡುತ್ತವೆ.

ನನಗೆ ಈಗೀಗ ಅರಿವಾಗುತ್ತಿರುವುದು ಅಪ್ಪ, ಅಮ್ಮನಿಗೆ ಮೂವತ್ತು ವರ್ಷಗಳ ಹಿಂದೆಯೇ ಅರಿವಾಗಿರುತ್ತದೆ. ಅದೇ ಅರಿವಿನ ಸೇತುವೆಯ ಮೇಲೆಯೇ ಅವರಿಬ್ಬರೂ ಇಷ್ಟೆಲ್ಲಾ ವರ್ಷಗಳ ಕಾಲ ನಡೆದು ಬರುತ್ತಿದ್ದಾರೆ; ಮುಂದೆ ನಾವೂ ನಡೆಯಲಿ ಎಂದು ಆಶಿಸುತ್ತಾರೆ. ಅಪ್ಪ, ಅಮ್ಮರಿಗೆ ಮದುವೆಯಾದ ದಿನದ ಹಾರ್ದಿಕ ಶುಭಾಶಯಗಳು :)

ಕುರಿ ಕೇಳಿ … (ಉತ್ತರ ಕನ್ನಡದ ಗಾದೆ – 145)

ಕುರಿ ಕೇಳಿ ಸಾಂಬಾರ ಅರೆಯುವುದಿಲ್ಲ.

ಕುರಿಯ ಬಳಿ 'ನಿನ್ನನ್ನು ಕಡಿಯಬೆಕಾಗಿದೆ, ಸಾಂಬಾರ ಅರೆಯಲಾ?' ಎಂದು ಕೇಳಿದರೆ ಅದು ಬೇಡ ಎಂದೇ ಹೇಳುತ್ತದೆ. ಆದ್ದರಿಂದ ಅದನ್ನು ಕೇಳುವುದಿಲ್ಲ, ಸಾಂಬಾರ ಅರೆಯುತ್ತಾರೆ. ಇನ್ನೊಬ್ಬರನ್ನು ಕೇಳಿದರೆ ಅವರು ಬೇಡವೆಂದೇ ಹೇಳುತ್ತಾರೆ ಅದಕ್ಕಾಗಿ ಅವರನ್ನು ಕೇಳುವುದಿಲ್ಲ ಆ ಕೆಲಸವನ್ನು ಮಾಡುತ್ತೇನೆ ಎನ್ನುವ ಅರ್ಥದಲ್ಲಿ ಹೇಳಬಹುದು.

ನಾನು High school ನಲ್ಲಿ ಓದುತ್ತಿದ್ದಾಗ ನಮ್ಮ ಕನ್ನಡ ಶಿಕ್ಷಕರಾದ ಶ್ರೀ ಜಿ. ಕೆ. ಭಟ್ಟರು ಪರೀಕ್ಷೆ ಪೇಪರ್ ತೆಗೆಯುವ ಮೊದಲು ನಾವು ‘ಸರ್, ಈ ಪರೀಕ್ಷೆಗೆ ಎರಡೇ ಪಾಠ ಸಾಕು, ಮೂರನೆಯದು ಬೇಡ’ ಎಂದು ಗೋಗರೆಯುತ್ತಿದ್ದೆವು. ಆಗ ಅವರು ಈ ಗಾದೆಯನ್ನು ಉಪಯೋಗಿಸುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಕಂಡ ಅತ್ಯುತ್ತಮ ಶಿಕ್ಷಕರಲ್ಲೊಬ್ಬರಾದ ಅವರನ್ನು ಈ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ನನಗೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿದವರೇ ಅವರು.

January 29, 2008

ಗೂಗಲ್ ಮತ್ತು ನಾನು

ಅಬ್ಬಾ! ಈ ವಿಕಿಪೀಡಿಯಾ, ಗೂಗಲ್ ಗಳ ಕಾಲದಲ್ಲಿ ಸುಖವಿಲ್ಲ.
ಮೊನ್ನೆ ಒಂದು ವಿಷಯ ತಲೆ ತಿನ್ನುತ್ತಿತ್ತು. Specific gravity, biomass estimation ಗಳ ನಡುವೆ ಸಿಕ್ಕಿ ಒದ್ದಾಡುತ್ತಿದ್ದೆ. Specific gravity ಬಗ್ಗೆ ಏನನ್ನೋ ಕೇಳಬೇಕಿತ್ತು. ರಾಜೀವ್ online ಇರುವುದನ್ನು ನೋಡಿ ಪಿಂಗ್ ಮಾಡಿದೆ. Office ನಲ್ಲಿ ಇದ್ದಿದ್ದು ನಿಜ. Busy ಇದ್ದಿರಲೂಬಹುದು. ನಾನು ಒಂದು ಪ್ರಶ್ನೆ ಕೇಳಿದ್ದೇ ತಡ, ಬಂತು ಉತ್ತರ 'ವಿಕಿಪೀಡಿಯಾ ನೋಡೇ'. ಸರಿ ಬಿಡು ಹೋಗ್ಲಿ ಎಂದುಕೊಂಡೆ.

ರಾಜೀವ್ ನ ಫ್ರೆಂಡ್ ರೋಹಿತ್ online ಇರುವುದನ್ನು ನೋಡಿ ಅವನಿಗೆ ಪಿಂಗ್ ಮಾಡಿದೆ. 'ನನಗೊಂದು doubt ಇತ್ತು....' ಅವನು ತಮಾಷೆ ಮಾಡಿದ 'ಏನು ಸಂಶಯ? ಜಪಾನಿನಿಂದ ಭೂಮಿಯನ್ನು ಕೊರೆದರೆ ಭಾರತವನ್ನೋ ಅಥವಾ ಪ್ರಪಂಚದ ಇನ್ಯಾವುದೋ ಮೂಲೆಯನ್ನು ತಲುಪಬಹುದಾ ಎಂಬುದಾ ;)?' ಅದಲ್ಲ ಎಂದು ಹೇಳಿ ನಾನು ನನ್ನ ಸಮಸ್ಯೆಯನ್ನು ಬರೆದೆ...ಒಂದೆರಡು ನಿಮಿಷ ರೋಹಿತ್ ಪತ್ತೆಯೇ ಇಲ್ಲ... ಮನಸ್ಸು ಹೇಳಿತು 'ಮುಗಿಯಿತು ಕಥೆ. ಇನ್ನು ಕನಿಷ್ಠ ಹತ್ತು ಲಿಂಕ್ ಗಳು ಬಂದು ಚಾಟ್ ವಿಂಡೋವಿನ ಬಾಗಿಲು ಬಡಿಯುವುದರಲ್ಲಿ ಸಂಶಯವೇ ಇಲ್ಲ....ಮೊದಲೇ ರೋಹಿತ್ ಗೂಗಲ್ ನಲ್ಲಿ expert'. ಮರು ಘಳಿಗೆಯಲ್ಲೇ 'r u there?' ಎನ್ನುತ್ತ ಒಂದು ಲಿಂಕ್ ಬಂದು ಅಪ್ಪಳಿಸಿತು. ಆದರೆ ಆಶ್ಚರ್ಯವೆನಿಸುವಂತೆ ಆ ದಿನ ಬಂದಿದ್ದು ಒಂದೇ ಒಂದು ಲಿಂಕ್!! ಅದು ಚೆನ್ನಾಗಿತ್ತು ನಿಜ, ಆದರೆ ನನ್ನ ಸಮಸ್ಯೆಗೆ ಪರಿಹಾರವನ್ನು ಕೊಡಲಿಲ್ಲ. ಸರಿ ಬಿಡು ಎಂದೆ.

ನನ್ನ ಹೈಸ್ಕೂಲ್ ಫ್ರೆಂಡ್ ವಿನಯ್ online ಕಾಣಿಸಿದ. ಅವನಿಗೂ ಹೇಳಿಯೇ ಬಿಡೋಣ...ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು ಎಂದುಕೊಂಡು ಅವನಿಗೆ ನನ್ನ ಸಮಸ್ಯೆಯನ್ನು ಹೇಳಿದೆ. ಅಬ್ಬಾ!!..ಮರುನಿಮಿಷದಲ್ಲಿ ಮೂರು pdf ಫೈಲುಗಳು ಮತ್ತು ಏಳೆಂಟು ಲಿಂಕ್ ಗಳು ಹಾರಿಕೊಂಡು ಬಂದು ದೊಪ್ಪೆಂದು ನನ್ನ inbox ನ ತಲೆಯ ಮೇಲೆ ಬಿದ್ದವು. ನೂರಾರು ಪುಟಗಳಿರುವ ಆ ಫೈಲುಗಳಲ್ಲಿ ನನಗೆ ಬೇಕಾಗಿರುವುದನ್ನು (ಅದು ಇದ್ದೇ ಇರುತ್ತದೆ ಎಂದು ಖಾತ್ರಿ ಇಲ್ಲ) ಹುಡುಕುವುದು ಎಂದರೆ ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ. ಇನ್ನು ಲಿಂಕ್ ಗಳೋ ಒಂದರಲ್ಲಿ ಇನ್ನೊಂದಕ್ಕೆ ಲಿಂಕ್ ಎಂದು ಒಳಗೊಳಗೆ ಹೋಗಿ ಅದರ ಸುಳಿಯಲ್ಲಿ ಸಿಕ್ಕಿಕೊಂಡು ಮುಳುಗಿಯೇ ಹೋಗುತ್ತೇನೆ.

ಅವರು ಕೊಟ್ಟ ಲಿಂಕ್ ಗಳೆಲ್ಲವೂ informative ನಿಜ. ಇನ್ನು ವಿಕಿಪೀಡಿಯಾ, ಗೂಗಲ್ ಗಳ ಬಗ್ಗೆ ಅಂತೂ ಎರಡು ಮಾತಿಲ್ಲ. ಆದರೆ ತಕ್ಷಣವೇ ಪರಿಹಾರ ಸಿಗಬಹುದು ಎಂದುಕೊಂಡು ಕೇಳಿದ ಪ್ರಶ್ನೆಗಳಿಗೆ ಯಾವುದಕ್ಕೂ ತಕ್ಷಣದ ಪರಿಹಾರ ಸಿಗುವುದಿಲ್ಲ. ಗಣಿಯಲ್ಲಿ ಚಿನ್ನ ಹುಡುಕಿದಂತೆ ಹುಡುಕುತ್ತಾ ಹೋಗುತ್ತೇನೆ... ಈ ಮಧ್ಯೆ ಕೊನೆ ಮೊದಲಿಲ್ಲದ ಯಾವುದೋ ಸೈಟ್ ನಲ್ಲಿ ಸಿಕ್ಕಿಕೊಂಡು ಬಿಡುತ್ತೇನೆ. ಏನು ಹುಡುಕುತ್ತಿದ್ದೇನೆ ಎಂಬುದನ್ನೂ ಕೆಲವೊಮ್ಮೆ ಮರೆತು ಇನ್ನೆಲ್ಲೋ ತಲುಪಿರುತ್ತೇನೆ.

ಶ್ರೀನಿವಾಸ ಕುಲಕರ್ಣಿಯವರು ಬರೆದ ಪುಟ್ಟ ಕವನ ನೆನಪಾಗುತ್ತದೆ.
ಮನಸು
ಗೂಗಲ್ ಸರ್ಚ್ ಎಂಜಿನ್ ನಂತೆ !!
ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!


ವಿನಯ್ ನಿಂದ ಅನೇಕ ಮಾಹಿತಿಗಳು ಬಂದವು. ಆದರೆ ರೋಹಿತ್ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸಿ ಮರುದಿನ ಒಂದು ಒಳ್ಳೆಯ mail ರವಾನಿಸಿದ. ಧನ್ಯವಾದಗಳು ರೋಹಿತ್, ವಿನಯ್ :)

ಗೂಗಲ್ ಕೂಡ ಮನಸ್ಸಿನಂತೆಯೇ ತಾನೆ?

ಕೋಲು ಕೊಟ್ಟು … (ಉತ್ತರ ಕನ್ನಡದ ಗಾದೆ – 143 ಮತ್ತು 144)

ಕೋಲು ಕೊಟ್ಟು ಹೊಡೆಸಿಕೊಂಡಂತೆ.

ನಿರಾಯುಧನಾಗಿದ್ದವನ ಕೈಗೆ ನಾವೇ ಕೊಲನ್ನು ಕೊಟ್ಟರೆ ಅವನು ನಮಗೇ ತಿರುಗಿ ಹೊಡೆಯುತ್ತಾನೆ. ಸುಮ್ಮನಿರಲಾರದೇ ನಾವೇ ಏನಾದರೂ ಹೇಳಿಕೊಟ್ಟು ಅದರಲ್ಲಿ ಸಿಕ್ಕಿ ಬೀಳುವಂತಾಗಿ ನಷ್ಟ ಅನುಭವಿಸಬೇಕಾಗಿ ಬಂದರೆ ಈ ಮಾತು ಅನ್ವಯಿಸುತ್ತದೆ. ಇನ್ನೊಂದು ಗಾದೆ ಇದೇ ಅರ್ಥಕೊಡುವಂತದು- ಹಗ್ಗ ಕೊಟ್ಟು ಕೈ ಕಾಲು ಕಟ್ಟಿಹಾಕಿಸಿಕೊಂಡಂತೆ.

January 28, 2008

ಆತ್ಮಹತ್ಯೆ… (ಉತ್ತರ ಕನ್ನಡದ ಗಾದೆ – 139, 140,141 ಮತ್ತು 142)

ಆತ್ಮಹತ್ಯೆ ಮಾಡಿಕೊಂಡವನಿಗೆ ಬ್ರಹ್ಮಹತ್ಯೆ ಮಾಡಿದವನು ಸಾಕ್ಷಿ ಹೇಳಿದ್ದ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸರಿಯಿಲ್ಲ ಎಂದುಕೊಂಡರೆ ಅವನಿಗೆ ಸಾಕ್ಷಿ ಹೇಳುವ ವ್ಯಕ್ತಿ ಬ್ರಾಹ್ಮಣನನ್ನೇ* ಕೊಂದವನು. ಯಾರ ಪರವಾಗಿಯೂ ಮಾತನಾಡುವ ಹಾಗಿಲ್ಲ. ಇಬ್ಬರೂ equally bad ಎಂದು ಹೇಳುವಾಗ ಬಳಸುವ ಇನ್ನೂ ಕೆಲವು ಗಾದೆಗಳೆಂದರೆ, ಹೊಟ್ಟು ಗಡಿಗೆ, ಹುಳುಕು ತೊಗರಿ- ಗಡಿಗೆ ಒಡಕು ಅದರ ಪರವಾಗಿ ಮಾತನಾಡುವಂತಿಲ್ಲ ಎಂದರೆ ಅದರ ಜೊತೆಗಿರುವ ತೊಗರಿ ಕೂಡ ಹುಳುಕು. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಮತ್ತು ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

ಚಿಕ್ಕವರಿದ್ದಾಗ (ಈಗಲೂ ಕೂಡ!) ನಾನು, ನನ್ನ ತಮ್ಮ ಒಬ್ಬರ ಪರವಾಗಿ ಇನ್ನೊಬ್ಬರು ವಕಾಲತ್ತು ನಡೆಸಿದಾಗ ಈ ಮೇಲಿನ ಗಾದೆಗಳಲ್ಲಿ ಯಾವುದೋ ಒಂದು ಅಮ್ಮನ ಬಾಯಿಂದ ಉದುರುತ್ತಿದ್ದುದು ಗ್ಯಾರೆಂಟಿ! ಇದೇ ಅರ್ಥವನ್ನು ಕೊಡುವ ಇನ್ನೊಂದು ಗಾದೆ ಕೂಡ ಗೊತ್ತು. ಅಮ್ಮನಿಂದ ಗೊತ್ತಾಗಿದ್ದಲ್ಲ; ಬೇರೆಲ್ಲೋ ಕೇಳಿದ್ದು. ಆದರೆ ಅದು ಅಷ್ಲೀಲವಾಗಿರುವುದರಿಂದ ಇಲ್ಲಿ ಹಾಕುವುದಿಲ್ಲ.


*ತಪ್ಪನ್ನು ತಿದ್ದಿದ ಹರೀಶ ಮತ್ತು ಗಣಪತಿಗೆ ಧನ್ಯವಾದಗಳು.

January 25, 2008

ಕುರುಡ ಕತ್ತ … (ಉತ್ತರ ಕನ್ನಡದ ಗಾದೆ – 136, 137 ಮತ್ತು 138)

ಕುರುಡ ಕತ್ತ ಹೊಸೆದಂತೆ.

ಬೆಂಕಿಯ ಪಕ್ಕದಲ್ಲಿ ಕುಳಿತು ಕುರುಡ ಒಂದು ಕಡೆಯಿಂದ ಕತ್ತ ಹೊಸೆಯುತ್ತಿದ್ದರೆ, ಹೊಸೆದ ಕತ್ತವೆಲ್ಲಾ ಇನ್ನೊಂದು ಕಡೆಯಲ್ಲಿ ಬೆಂಕಿಗೆ ತಾಗಿ ಸುಟ್ಟುಹೋಗಿತ್ತು. ಯಾವುದೋ ಕೆಲಸವನ್ನು ಒಂದು ಕಡೆಯಿಂದ ನಾವು ಮಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಅದು ಪ್ರಯೋಜನಕ್ಕೆ ಬಾರದಂತೆ ನಾಶ ಹೊಂದಿದರೆ ಈ ಗಾದೆಯನ್ನು ಬಳಸಬಹುದು. ಸಾಮಾನ್ಯವಾಗಿ ಮಾಡಿದ ಕೆಲಸ ಪ್ರಯೋಜನಕ್ಕೆ ಬಾರದಂತಾದಾಗ ಎಲ್ಲರೂ ಬಳಸುವ ಮಾತೆಂದರೆ ನೀರಿನಲ್ಲಿ ಹೋಮ ಮಾಡಿದಂತೆ ಅಥವಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.

January 24, 2008

ಕೆಪ್ಪಳಾದರೂ … (ಉತ್ತರ ಕನ್ನಡದ ಗಾದೆ – 135)

ಕೆಪ್ಪಳಾದರೂ ನಮ್ಮೊಳೇ ವಾಸಿ.

ಎಷ್ಟೇ ಆದರೂ ಅವಳು ನಮ್ಮವಳು. ಕೆಪ್ಪಳಾದರೂ ಪರವಾಗಿಲ್ಲ. ಕಿವಿ ಕೇಳುವ ಹೊರಗಿನವರಿಗಿಂತ ಇವಳೇ ಪರವಾಗಿಲ್ಲ. ಚೆನ್ನಾಗಿರುವ ಬೇರೆಯವರ ವಸ್ತುವನ್ನು ತೆಗೆದುಕೊಳ್ಳುವ ಬದಲು ಚೆನ್ನಾಗಿಲ್ಲದಿದ್ದರೂ ನಮ್ಮ ವಸ್ತುವೇ ನಮಗೆ ಪ್ರಿಯ ಎಂದು ಇದರ ಅರ್ಥ. ಚೆನ್ನಾಗಿರದಿದ್ದರೂ ಪರವಾಗಿಲ್ಲ, ನಮಗೆ ನಮ್ಮ ವಸ್ತುವಿನ ಜೊತೆಯಲ್ಲೇ ಹಿತವೆನಿಸುತ್ತದೆ.

January 23, 2008

ಗಂಡ ಹೊಸ ಸೀರೆ … (ಉತ್ತರ ಕನ್ನಡದ ಗಾದೆ – 134)

ಗಂಡ ಹೊಸ ಸೀರೆ ತರುತ್ತಾನೆಂದು ಹಳೆ ಸೀರೆ ಸುಟ್ಟುಹಾಕಿದ್ದಳು.

ಗಂಡ ಹೊಸ ಸೀರೆಯನ್ನು ತಂದೇ ತರುತ್ತಾನೆ ಎಂಬ ಬಲವಾದ ನಂಬಿಕೆಯಿಂದ ಹಳೆಯದನ್ನು ಸುಟ್ಟುಹಾಕುತ್ತಾಳೆ. ಆದರೆ ಗಂಡ ಹೊಸ ಸೀರೆ ತರಲಿಲ್ಲ. ಅವಳಿಗೆ ಹೊಸದೂ ಇಲ್ಲ, ಹಳೆಯದೂ ಇಲ್ಲವಾಯಿತು. ಹೊಸ ವಸ್ತು ಸಿಗುವ ಮೊದಲೇ ಅದು ಸಿಕ್ಕೇ ಸಿಗುತ್ತದೆ ಎಂಬ ಊಹೆಯಲ್ಲಿ ಹಳೆಯದನ್ನು ಬಿಟ್ಟುಬಿಡುವವರಿಗೆ ಇದು ಅನ್ವಯಿಸುತ್ತದೆ.

January 22, 2008

ದಂಡಿಗೆ ಹೆದರಲಿಲ್ಲ… (ಉತ್ತರ ಕನ್ನಡದ ಗಾದೆ – 132 ಮತ್ತು 133)

ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ದಾಸಯ್ಯನ ಜಾಗಟೆಗೆ ಹೆದರುತ್ತೀನಾ?

ಸೈನ್ಯ ಬಂದರೂ ಹೆದರಲಿಲ್ಲ, ಸೈನ್ಯ ದಾಳಿಯಿಟ್ಟರೂ ಹೆದರಲಿಲ್ಲ, ಯಕ್ಕಶ್ಚಿತ ಒಂದು ದಾಸಯ್ಯನ ಜಾಗಟೆ ನಾನು ಹೆದರುವುದಿಲ್ಲ ಎಂಬ ಅರ್ಥ. ದೊಡ್ಡ ದೊಡ್ಡ ಕಷ್ಟಗಳಿಗೇ ಹೆದರದವನು ಸಣ್ಣ ಪುಟ್ಟ ಕಷ್ಟಗಳಿಗೆ ಏಕೆ ಹೆದರುತ್ತೇನೆ ಎಂಬ ಅರ್ಥದಲ್ಲಿ ಇದನ್ನು ಬಳಸಲಾಗುತ್ತದೆ. ಇದೇ ಅರ್ಥವನ್ನು ಕೊಡುವ ಇನ್ನೊಂದು ಮಾತು- ಕರಡಿಗೇ ಹೆದರದವನು ನಾನು, ಕರಿ ಕಂಬಳಿಗೆ ಹೆದರುತ್ತೀನಾ?

January 21, 2008

ಅರಿಯೆನೆಂದರೆ … (ಉತ್ತರ ಕನ್ನಡದ ಗಾದೆ – 131)

ಅರಿಯೆನೆಂದರೆ ಅರವತ್ತು ಗುಣ, ಬಲ್ಲೆನೆಂದರೆ ಹೋಯ್ತವನ ಹೆಣ.

ಯಾವುದೋ ಒಂದು ಕೆಲಸ ಗೊತ್ತಿಲ್ಲ ಎಂದು ಹೇಳಿದರೆ, ಜನರು 'ಗೊತ್ತಿಲ್ಲ ಅವನಿಗೆ ಬಿಡಿ' ಎಂದು ಸುಮ್ಮನಾಗುತ್ತಾರೆ. ಕೆಲಸ ಗೊತ್ತು ಎಂದು ಹೇಳಿಕೊಂಡರೆ ಎಲ್ಲಾ ಕೆಲಸವನ್ನೂ ನಿಮಗೇ ಹಚ್ಚಿ ನಿಮ್ಮ ಹೆಣ ಬೀಳುವವರೆಗೂ ದುಡಿಸುತ್ತಾರೆ ಎಂದು ಅರ್ಥ.

January 17, 2008

ಮರೆತೇನೆಂದರೂ ಮರೆಯಲಿ ಹ್ಯಾಂಗಾ...?

ಊರನ್ನು ಬಿಟ್ಟು ಬಂದ ಮೇಲೆ ಊರಿನ ನೆನಪು ತುಂಬಾ ಕಾಡತೊಡಗಿದೆ. ಮೊನ್ನೆ ಅಪ್ಪನ ಜೊತೆ ಫೋನಿನಲ್ಲಿ ಮಾತನಾಡುತ್ತಿರುವಾಗ ನಾನೇನೋ ಹೇಳಿದ್ದಕ್ಕೆ ಅಪ್ಪ, 'ನಿನಗೆ ತಿಳುವಳಿಕೆ ಸಾಲದು ಸುಮ್ಮನಿರು, ಕುಂಬಾರಿ' ಎಂದಿದ್ದರು. ಕುಂಬಾರ ಎಂಬ ಪುಲ್ಲಿಂಗ ರೂಪವನ್ನು ಕುಂಬಾರಿ ಎಂದು ಅದ್ಭುತವಾಗಿ ಸ್ತ್ರೀಲಿಂಗ ರೂಪಕ್ಕೆ ಇಳಿಸಿದ್ದರು ಅಪ್ಪ! ನಗು ಬಂದಿತ್ತಾದರೂ ಮರು ಕ್ಷಣವೇ ಮನಸ್ಸು ಊರಿನ ಜನರ ಹೆಸರುಗಳನ್ನೆಲ್ಲಾ ಮೆಲುಕು ಹಾಕಿಬಿಟ್ಟಿತ್ತು.

ಅಂದ್ರೆ, ನಮ್ಮೂರಿನ ಜನ ಗಂಡಸರಿಗೆ ಇಡುವ ಹೆಸರನ್ನೇ ಸ್ತ್ರೀಲಿಂಗ ರೂಪಕ್ಕೆ ತಂದು ಹೆಂಗಸರಿಗೆ ಇಟ್ಟುಬಿಡುತ್ತಾರೆ. ಹೆಂಗಸರಿಗಾಗಿ ವಿಶೇಷ ಹೆಸರೇ ಬೇಕಾಗುವುದಿಲ್ಲ ಅವರಿಗೆ! ಕೆಲವು ಉದಾಹರಣೆ ಇಲ್ಲಿವೆ ನೋಡಿ... ನಾಗ್ಯಾ-ನಾಗಿ...ಇವರಿಬ್ಬರೂ ಅಣ್ಣ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ ಯಾರೂ ಅಲ್ಲ. ಬೇರೆ ಬೇರೆ ಮನೆಯವರು.

ಅಂತೆಯೇ... ಹನುಮ-ಹನುಮಿ... ಗುತ್ಯ-ಗುತ್ತಿ... ಬೊಮ್ಮ-ಬೊಮ್ಮಿ... ಕೆರಿಯ-ಕೆರೆದೇವಿ... ನರಸ-ನರಸಿ...ಮಾರ್ಯ-ಮಾರಿ...

ತಿಮ್ಮ-ತಿಮ್ಮಿ... ತಿಪ್ಪ-ತಿಪ್ಪಿ... ಯಲ್ಲ-ಯಲ್ಲಿ... ಭದ್ರ-ಭದ್ರಿ...
ಚಂದ್ರ-ಚಂದ್ರಿ... ಮೋಟ್ಯ-ಮೋಟಿ... ಬಸವ-ಬಸವಿ… ನಿಂಗ-ನಿಂಗಿ... ಚನ್ನ-ಚನ್ನಿ... ರುದ್ರ-ರುದ್ರಿ... ಗಿಡ್ಡ-ಗಿಡ್ದಿ... ಹುಲಿಯಾ-ಹುಲಿಗೆಮ್ಮ... ಗಣಪ-ಗಣಪಿ... ಬಂಗಾರ್ಯ-ಬಂಗಾರಿ... ಈರ-ಈರಿ (ವೀರಭದ್ರ ಎನ್ನುವುದು ವೀರ ಎಂದು ಮೊಟಕಾಗಿ ಈರ ಎಂದಾಗಿ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ). ನನಗೀಗ ನೆನಪಾಗುತ್ತಿರುವುದು ಇಷ್ಟು. ಇನ್ನೊ ಹಲವಾರು ಇವೆ.

ಈಗೀಗ ಹೊಸ ಹೆಸರುಗಳನ್ನು ಇಡಲು ತೊಡಗಿದ್ದಾರೆ. 'ನೆಹರು' ಎಂಬುದೇ ಒಬ್ಬ ವ್ಯಕ್ತಿಯ ಹೆಸರು ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು! ಇನ್ನು 'ವಸೇಕಾ' ಎಂದು ಕೂಗುತ್ತಿರುತ್ತಾರೆ. ಅವನ ಹೆಸರು 'ಅಶೋಕ'! 'ಸಬೈಚಂದ್ರಾ' ಎಂದು ಕೂಗುತ್ತಿದ್ದರೆ ಅದು ನಮಗೆ ಕೇಳಿ ಗೊತ್ತಿದ್ದವರಿಗಷ್ಟೇ ಗೊತ್ತಾಗುತ್ತದೆ 'ಸುಭಾಸಚಂದ್ರ'ನನ್ನು ಕರೆಯುತ್ತಿದ್ದಾರೆ ಎಂದು. ನನ್ನ ಅಮ್ಮ ಮದುವೆಯಾಗಿ ಆ ಊರಿಗೆ ಬಂದು ಸೇರಿದ ಕೆಲವು ದಿನಗಳಲ್ಲಿ ಹುಟ್ಟಿದ ಹೆಚ್ಚು ಕಮ್ಮಿ ಎಲ್ಲ ಮಕ್ಕಳಿಗೂ 'ಸಾವಿತ್ರಿ' ಎಂದೇ ಹೆಸರಿಟ್ಟಿದ್ದರಂತೆ! ನನಗಿಂತ ಎರಡು ವರ್ಷ ದೊಡ್ಡವರಾದ ಆ ಸಾವಿತ್ರಿಯರ ಜೊತೆಯಲ್ಲೆಲ್ಲಾ ನಾನು ಆಟ ಆಡಿದ್ದೇನೆ. ನಾಲ್ಕೈದು ಸಾವಿತ್ರಿಯರು ಇರುವುದರಿಂದ ಅವರನ್ನೆಲ್ಲಾ ಕರೆಯುತ್ತಿದ್ದುದು 'ಗಿಡ್ಡ ಸಾವುಂತ್ರಿ'... 'ಅಂಗಡಿ ಸಾವುಂತ್ರಿ'... 'ಬೊಮ್ಮನ ಮನೆ ಸಾವುಂತ್ರಿ'... 'ಕೆಳಗಿನ ಕೇರಿ ಸಾವುಂತ್ರಿ'....ಇತ್ಯಾದಿ. ಅಮ್ಮನನ್ನು ಕರೆಯುತ್ತಿದ್ದುದು 'ಸಾವುಂತ್ರಮ್ಮ' ಎಂದು. ಈಗ ಆ ಊರಲ್ಲಿ 'ಸಾವುಂತ್ರಮ್ಮ' ಒಬ್ಬರೇ. ಉಳಿದೆಲ್ಲಾ ಸಾವಿತ್ರಿಯರು ಮದುವೆಯಾಗಿ ಬೇರೆ ಬೇರೆ ಊರು ಸೇರಿ ನನ್ನಂತೆಯೇ ಸತಿ ಸಾವಿತ್ರಿಯರಾಗಿದ್ದಾರೆ.

ಊರು ಎಂದೊಡನೆ ಅಪ್ಪ, ಅಮ್ಮ, ತಮ್ಮ, ದನ-ಕರು, ಶಾಲೆಯವರೆಗೂ ಕಳುಹಿಸಲು ಬರುತ್ತಿದ್ದ ನಾಯಿ, ಹಾಸಿಗೆಯಲ್ಲಿ ಬೆಚ್ಚಗೆ ಮಲಗುತ್ತಿದ್ದ ಬೆಕ್ಕು, ಓದಿದ ಶಾಲೆ, ಕಲಿಸಿದ ಮಾಸ್ತರು-ಆಕ್ಕೋರು, ಶಾಲೆಗೆ ಇನ್ಸಸ್ಪೆಕ್ಟರ್ ಬರುತ್ತಾರೆಂದು ಕೈಯಾರೇ ಮಾಡಿದ್ದ ಮಣ್ಣಿನ ಆಟಿಗೆಗಳು, ಶಾಲೆಯಲ್ಲಿ ಆಡಿದ ಅಲೆಕ್ಸಾಂಡರ್ ನಾಟಕ, ಮಧ್ಯದಲ್ಲೇ ಮರೆತು ಹೋದ ಸ್ವಾತಂತ್ರ್ಯೋತ್ಸವದ ಭಾಷಣ, ಅಪ್ಪ ಬರೆದುಕೊಟ್ಟ ಭಾಷಣದ ಚೀಟಿ, ಅಪ್ಪ ರೇಡಿಯೋದಲ್ಲಿ ದಿನಲೂ ಕೇಳುತ್ತಿದ್ದ ಪ್ರದೇಶ ಸಮಾಚಾರ, ಇಂದು ಮುನಿಸಿಕೊಂಡರೂ ನಾಳೆ ಕೂಡಿ ಆಡುತ್ತಿದ್ದ ಗೆಳೆಯ-ಗೆಳತಿಯರು, ಕಣ್ಣಮುಚ್ಚಾಲೆ ಆಡುವಾಗ ಅವಿತುಕೊಳ್ಳುತ್ತಿದ್ದ ಮೂಲೆಗಳು, ಭತ್ತದ ಪಣತ, ಸುತ್ತಾಡಿದ ಬೆಟ್ಟ-ಗುಡ್ಡ, ಮೀನು ಹಿಡಿದ ಹೊಳೆ, ಸೂರ್ಯ ಕಿರಣ ಬೀಳದಷ್ಟು ದಟ್ಟವಾಗಿದ್ದ ಕಾಡು, ನಾಲ್ಕಾಳು ಎತ್ತರಕ್ಕೆ ಜೀಕಿದ ಆಲದ ಬೀಳಲಿನ ಜೋಕಾಲಿ, ಆಲೆಮನೆ, ಬೆಂಕಿ ಪೊಟ್ಟಣದಲ್ಲಿಟ್ಟ ಜೀರುಂಡೆ ಹುಳು, ಬಾಲಕ್ಕೆ ದಾರ ಕಟ್ಟಿಸಿಕೊಂಡ ಹೆಲಿಕಾಪ್ಟರ್ ಹುಳು, ಜಿಟಿ-ಜಿಟಿ ಮಳೆ, ಜಡಿ ಮಳೆ, ಅಡುಗೆ ಮನೆಯ ಒಲೆಯಲ್ಲಿ ಅಮ್ಮ ಸುಡುತ್ತಿದ್ದ ಹಪ್ಪಳ, ಬಚ್ಚಲ ಒಲೆಯ ಬೆಂಕಿಯಲ್ಲಿ ನಾವು ಸುಡುತ್ತಿದ್ದ ಹಲಸಿನ ಬೇಳೆ....ಒಂದೇ ಎರಡೇ....ಏನೆಲ್ಲಾ ನೆನಪಾಗುತ್ತದೆ.

ಈಗ ಯಾವುದೋ ಒಂದು ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶದ ಮೂಲೆಯಲ್ಲಿ ಕುಳಿತಿದ್ದರೂ ಕೂಡ ಎಷ್ಟೆಲ್ಲಾ ಸವಿನೆನಪುಗಳನ್ನು ಇತ್ತ ನನ್ನ ಊರನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗಾ?

ಗುಡ್ಡ ಅಗೆದು … (ಉತ್ತರ ಕನ್ನಡದ ಗಾದೆ – 130)

ಗುಡ್ಡ ಅಗೆದು ಇಲಿ ಹುಡುಕಿದಂತೆ.

ದೊಡ್ಡದೇನೋ ಹುಡುಕುವ ಉದ್ದೇಶದಿಂದ ಒಂದು ದೊಡ್ಡ ಗುಡ್ಡವನ್ನು ಆಗೆದರೆ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ ಒಂದು ಚಿಕ್ಕ ಇಲಿ. ದೊಡ್ಡದೇನೂ ಪತ್ತೆ ಮಾಡಲು ತುಂಬಾ ಪ್ರಯತ್ನ ಮಾಡಿ ಕೊನೆಯಲ್ಲಿ ಒಂದು ಸಣ್ಣ ವಿಷಯವನ್ನು ಪತ್ತೆ ಮಾಡಿಗಾಗ ಈ ಮಾತು ಅನ್ವಯಿಸುತ್ತದೆ.

January 16, 2008

ಗುರು ಕೊಟ್ಟ … (ಉತ್ತರ ಕನ್ನಡದ ಗಾದೆ – 129)

ಗುರು ಕೊಟ್ಟ ಜೋಳಿಗೆಯೆಂದು ಗೂಟಕ್ಕೆ ನೇತು ಹಾಕಿದರೆ ಭಿಕ್ಷೆ ಬಂದು ಬೀಳುವುದಿಲ್ಲ.

ಅದು ಗುರು ಕೊಟ್ಟ ಅದ್ಭುತ ಶಕ್ತಿಯುಳ್ಳ ಜೋಳಿಗೆಯಾದರೂ ಅದನ್ನು ಬರಿದೇ ಗೂಟಕ್ಕೆ ನೇತು ಹಾಕಿ ಇಟ್ಟರೆ ಭಿಕ್ಷೆ ತಾನಾಗಿಯೇ ಬಂದು ಅದರಲ್ಲಿ ಬೀಳುವುದಿಲ್ಲ. ತಾನೇ ಹೋಗಿ ಬೇಡಿದರೆ ಮಾತ್ರ ಭಿಕ್ಷೆ ಸಿಗುತ್ತದೆ.

ಅಂತೆಯೇ ಯಾರಿಗೋ ಹೇಳಿದ್ದೇನೆ, ಅಥವಾ ಇನ್ಯಾರೋ ಹೇಳಿದ್ದಾರೆ ಎಂದುಕೊಂಡು ನಾವು ಸುಮ್ಮನಿದ್ದರೆ ನಮ್ಮ ಕೆಲಸ ಆಗುವುದಿಲ್ಲ. ನಮ್ಮ ಕೆಲಸ ಆಗಬೇಕಾದರೆ ನಮ್ಮ ಪ್ರಯತ್ನ ತೀರಾ ಅವಶ್ಯ ಎಂಬುದನ್ನು ಈ ಗಾದೆ ಹೇಳುತ್ತದೆ.

January 15, 2008

ಗಂಗಾಳ ತೊಳೆಯಲು … (ಉತ್ತರ ಕನ್ನಡದ ಗಾದೆ – 128)

ಗಂಗಾಳ ತೊಳೆಯಲು ಮಂಗಳ ವಾರವೇ ಏಕೆ ಬರಬೇಕು?

ಪಾತ್ರೆ ತೊಳೆಯಲು ಮಂಗಳವಾರವೇ ಬರಬೇಕೆಂದು ಕಾಯುವ ಅಗತ್ಯವಿಲ್ಲ. ಅದೊಂದು ನೆಪ ಅಷ್ಟೇ. ಪಾತ್ರೆಯನ್ನು ಯಾವ ದಿನ ಬೇಕಾದರೂ ತೊಳೆಯಬಹುದು. ಯಾವುದಾದರೂ ಕೆಲಸವನ್ನು ಅನಗತ್ಯವಾದ ಅಥವಾ ಅಸಂಬದ್ಧವಾದ ಕಾರಣಗಳಿಗಾಗಿ ಮುಂದೂಡುವವರನ್ನು ಕುರಿತ ಗಾದೆ ಇದು.

January 14, 2008

ಮೊಳ ನೇಯುವಷ್ಟರಲ್ಲಿ … (ಉತ್ತರ ಕನ್ನಡದ ಗಾದೆ – 127)

ಮೊಳ ನೇಯುವಷ್ಟರಲ್ಲಿ ಮಾರು ಹೋಗಿತ್ತು.

ಬಟ್ಟೆಯನ್ನು ಒಂದು ಮೊಳದಷ್ಟು ನೇಯುವಷ್ಟರಲ್ಲಿ ಒಂದು ಮಾರಿನಷ್ಟು ಹಾಳಾಗಿ ಹೋಗಿತ್ತು. ಈ ಗಾದೆಯನ್ನು ಹಣಕಾಸಿನ ತೊಂದರೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕಷ್ಟಪಟ್ಟು ಸ್ವಲ್ಪ ಹಣವನ್ನು ಕೂಡಿಹಾಕುವಷ್ಟರಲ್ಲಿ ದೊಡ್ಡದೇನೋ ಖರ್ಚು ಬಂದು ಗಳಿಸಿದ್ದಕ್ಕಿಂತ ಜಾಸ್ತಿ ಖರ್ಚಾದರೆ ಈ ಮಾತು ಅನ್ವಯಿಸುತ್ತದೆ.

January 11, 2008

ಅನಿಸುತಿದೆ ಯಾಕೋ ಇಂದು...

ಈ ಹಾಡನ್ನು ನೀವೇ ಬರೆದಿದ್ದು ಅಂದುಕೊಳ್ಳಿ ಒಂದು ನಿಮಿಷ. ಅಯ್ಯೋ ಅದು ಜಯಂತ ಕಾಯ್ಕಿಣಿ ಅವರು ಬರೆದಿದ್ದು ನಾನು ನನ್ನದು ಅಂತ ಹೇಗೆ ಹೇಳಲಿ ಅಂತೀರಾ? ಒಂದು ನಿಮಿಷ ಹಾಗೇ ಅಂದುಕೊಳ್ಳಿ... ಯೋಚನೆಗೇನು... ಏನು ಬೇಕಾದರೂ ಮಾಡಬಹುದು! In fact ಬೇಕಾಗಿದ್ದನ್ನೆಲ್ಲಾ ಮಾಡಲು ಸಾಧ್ಯವಿರುವುದು ಯೋಚನೆಯಲ್ಲಿ ಮಾತ್ರ ತಾನೇ! ನಿಮ್ಮ ಮಗಳು ಪಿಕ್‌ನಿಕ್‌ಗೆ ಹೋದಾಗ ಯಾರೋ ಹುಡುಗರು ನೀವು ಬರೆದ ಹಾಡನ್ನೇ ಹೇಳಿ ನಿಮ್ಮ ಮಗಳನ್ನೇ tease ಮಾಡಿದರೆ ಎನೆನಿಸುತ್ತದೆ?

ಅದೇ ಆಗಿದ್ದು ಜಯಂತ ಕಾಯ್ಕಿಣಿಯವರಿಗೆ ಮತ್ತು ಅವರ ಮಗಳಿಗೂ ಕೂಡ. ಇದು ಯಾವುದೋ newspaper ನ ಮಸಾಲಾ column ನಲ್ಲಿ ಓದಿದ್ದಲ್ಲ. ಖುದ್ದಾಗಿ ಜಯಂತ ಕಾಯ್ಕಿಣಿಯವರೇ ಹೇಳಿದ್ದು… ನನಗಲ್ಲ, ನನ್ನ ಚಿಕ್ಕಮ್ಮನಿಗೆ. ಅವರು ನನ್ನ ಚಿಕ್ಕಪ್ಪನ ಹಳೆಯ friend. ಚಿಕ್ಕಪ್ಪನ ಮನೆಗೆ ಕಾಯ್ಕಿಣಿಯವರು ಹಿಂದಿನ ಬಾರಿ ಬಂದಾಗ ಚಿಕ್ಕಮ್ಮ ಹೇಳಿದರಂತೆ, ' ಜಯಂತ ನೀನು ಬರದಿದ್ದು ಹಾಡು... ಅನಿಸುತಿದೆ ಯಾಕೋ ಇಂದು... ರಾಶಿ ಚೊಲೊ ಇದ್ದು.' ಆಗ ಕಾಯ್ಕಿಣಿಯವರು ಹೇಳಿದ್ದರಂತೆ, 'ಅದೇ ಆಗಿದ್ದು ಮಜಾ ಶಕು ಅಕ್ಕಾ, ಈಗಿತ್ತಲಾಗಿ ನನ್ನ ಮಗಳು ಪಿಕ್‌ನಿಕ್‌ಗೆ ಹೋದಾಗ ಯಾರೋ ಹುಡುಗ್ರು ಅದೇ ಹಾಡು ಹೇಳಿ ನನ್ನ ಮಗಳನ್ನು ಗೇಲಿ ಮಾಡಿದಿದ್ವಡ, ಆವಾಗ ನನ್ನ ಮಗಳಿಗೂ ಅನಿಸಿತ್ತಡ ನನ್ನ ಅಪ್ಪ ಬರೆದ ಹಾಡನ್ನ ನನ್ಗೇ ಹೇಳ್ತಾ ಇದ್ದ ಹೇಳಿ!!’ (ಜಯಂತ ಕಾಯ್ಕಿಣಿಯವರು ಹವ್ಯಕರಷ್ಟೇ ಚೆನ್ನಾಗಿ ಹವ್ಯಕ ಭಾಷೆಯನ್ನು ಮಾತನಾಡುತ್ತಾರಂತೆ.)

ಸರಿ, ನಿಮಗೇನು ಅನಿಸ್ತಾ ಇದೆ?

ಹೊಸದರಲ್ಲಿ ಅಗಸ … (ಉತ್ತರ ಕನ್ನಡದ ಗಾದೆ – 126)

ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ ಎತ್ತಿ ಒಗೆದಿದ್ದ.

ಹೊಸದಾಗಿ ಅಗಸನ ಕೆಲಸವನ್ನು ಪ್ರಾರಂಭಿಸಿದ ಉತ್ಸಾಹದಲ್ಲಿ ಗೋಣಿಯನ್ನೂ ಕೂಡಾ ಎತ್ತಿ ಎತ್ತಿ ಒಗೆದು ತೊಳೆದಿದ್ದ. ನಂತರ ಅವನಿಗೆ ಬಟ್ಟೆಯನ್ನು ತೊಳೆಯಲೂ ಕೂಡ ಬೇಜಾರಾಗುತ್ತದೆ. ಆರಂಭ ಶೂರರು ಎಂದು ಹೇಳುತ್ತೇವಲ್ಲಾ ಅವರೇ ಇವರು. ಮೊದಲು ಇದ್ದ ಉತ್ಸಾಹ ಕೊನೆಯವರೆಗೂ ಇರುವುದಿಲ್ಲ. ಒಂದು ಕೆಲಸವನ್ನು ಎಲ್ಲಿಲ್ಲದ ಉತ್ಸಾಹದಿಂದ ಪ್ರಾರಂಭಿಸಿ ಸ್ವಲ್ಪ ಸಮಯದ ನಂತರ ಆ ಕೆಲಸದಲ್ಲಿ ನಿರಾಸಕ್ತಿಯನ್ನು ತಳೆಯುವವರ ಬಗೆಗಿನ ಗಾದೆ ಇದು. English ನಲ್ಲಿ ಹೇಳುವುದಾದರೆ New broom sweeps well.

January 10, 2008

ಕುರುಡನಿಗೆ ಕಣ್ಣು … (ಉತ್ತರ ಕನ್ನಡದ ಗಾದೆ – 125)

ಕುರುಡನಿಗೆ ಕಣ್ಣು ಬಂದಿದ್ದೇ ಗೊತ್ತು.

ಕಣ್ಣು ಯಾವುದರಿಂದ ಬಂದರೇನು, ಹೇಗೆ ಬಂದರೇನು? ಅವನಿಗೆ ಕಣ್ಣು ಬಂದಿದ್ದಷ್ಟೇ ಗೊತ್ತು. ಉಳಿದವುಗಳ ಬಗ್ಗೆ ಅವನು ತಲೆ ಕೆಡಿಸಿಕೊಳ್ಳುವುದಿಲ್ಲ.
ಹಾಗೆಯೇ, ನಮ್ಮ ಕೆಲಸ ಆದರಾಯಿತು; ಯಾರಿಂದಲಾದರೂ ಆಗಲಿ, ಹೇಗೆ ಬೇಕಾದರೂ ಆಗಲಿ, ಕೆಲಸ ಆಗುವುದಷ್ಟೇ ಮುಖ್ಯ ಎಂದಿದ್ದಾಗ ಈ ಮಾತನ್ನು ಬಳಸಿ.

January 8, 2008

ಕ0ಜೂಸಿಗೆ… (ಉತ್ತರ ಕನ್ನಡದ ಗಾದೆ – 124)

ಕ0ಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ...

ಕ0ಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ ಬಂದೆ ತೀರುತ್ತದೆ ಎಂದರೆ ಗಾದೆ ಪೂರ್ತಿಯಾಗುತ್ತದೆ. ಆದರೆ ವಾಡಿಕೆಯಲ್ಲಿ ಅದನ್ನು ಹೇಳುವುದು ಕಡಿಮೆ. ಕ0ಜೂಸಿಯು ಹಣ ಉಳಿಸಲು ಹೋಗಿ ಅಗ್ಗದ ವಸ್ತುವನ್ನು ಕೊಳ್ಳುತ್ತಾನೆ. ಅದು ಬೇಗ ಹಾಳಾಗುವುದರಿಂದ ಅವನಿಗೆ ಪುನಃ ಖರ್ಚು ಬರುತ್ತದೆ. ಮೈಗಳ್ಳನು ಕೆಲಸವನ್ನು ಸುಲಭದಲ್ಲಿ ಮಾಡಲು ಹೋಗಿ ಇನ್ನೊಂದು ಕೆಲಸವನ್ನು ಮೈಮೇಲೆ ಹಾಕಿಕೊಳ್ಳುತ್ತಾನೆ.


ನಾನು ಕುಳಿತಲ್ಲಿಂದಲೇ ಕಸವನ್ನು ಬುಟ್ಟಿಗೆ ಎಸೆಯಲು ಹೋದಾಗಲೆಲ್ಲಾ ಅದು ಬುಟ್ಟಿಯ ಪಕ್ಕದಲ್ಲಿ ಬೇಳುತ್ತದೆ. ಮತ್ತೆ ಎದ್ದು ಹೋಗಿ ಅದನ್ನು ಆರಿಸಿ ಬುಟ್ಟಿಗೆ ಹಾಕಬೇಕಾಗುತ್ತದೆ. ಹೀಗಾದಗಲೆಲ್ಲಾ ಈ ಗಾದೆ ನೆನಪಾಗುತ್ತದೆ.

January 7, 2008

ಉಗುರಿನಲ್ಲಿ ಹೋಗುವುದಕ್ಕೆ … (ಉತ್ತರ ಕನ್ನಡದ ಗಾದೆ – 123)

ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಿದ್ದನು.

ಯಾವುದೋ ಒಂದು ಸಣ್ಣ ವಸ್ತುವನ್ನು ಕೀಳಲು ಉಗುರೇ ಸಾಕಾಗುತ್ತಿತ್ತು. ಆದರೆ ಅವನು ಆ ಕೆಲಸವನ್ನು ಮಾಡಲು ಕೊಡಲಿಯನ್ನು ತೆಗೆದುಕೊಂಡಿದ್ದ.

ಸ್ವಲ್ಪದರಲ್ಲೇ ಬಗೆಹರಿಯುವ ಸಣ್ಣ ವಿಷಯವನ್ನೂ ದೊಡ್ಡದು ಮಾಡಿಕೊಂಡು ಅದನ್ನು ಬಗೆಹರಿಸಲು ದೊಡ್ಡ ಯೋಜನೆಯನ್ನು ಹಾಕುವವರಿಗೆ ಈ ಮಾತು ಅನ್ವಯಿಸುತ್ತದೆ.

January 4, 2008

ಒಕ್ಕಣ್ಣರ ರಾಜ್ಯದಲ್ಲಿ … (ಉತ್ತರ ಕನ್ನಡದ ಗಾದೆ – 122)

ಒಕ್ಕಣ್ಣರ ರಾಜ್ಯದಲ್ಲಿ ಒಂದು ಕಣ್ಣನ್ನು ಮುಚ್ಚಿಕೊಂಡೇ ಇರು.

ಆ ರಾಜ್ಯದಲ್ಲಿ ಎಲ್ಲರೂ ಒಕ್ಕಣ್ಣರು. ಅಲ್ಲಿ ಅದೇ ಸರಿ. ಅಲ್ಲಿಗೆ ನೀನು ಹೋದರೆ ಒಂದು ಕಣ್ಣನ್ನು ಮುಚ್ಚಿಕೊಂಡೇ ಇರು. ಇಲ್ಲವಾದರೆ ಒಂದು ಕಣ್ಣನ್ನು ಕಿತ್ತು ಹಾಕುತ್ತಾರೆ.

ಯಾವ ವ್ಯವಸ್ಥೆಯಲ್ಲಿ ಇರುತ್ತೇವೋ ಅದೇ ವ್ಯವಸ್ಥೆಯನ್ನು ಅನುಸರಿಸಿಕೊಂಡು ಹೋಗಬೇಕಾಗುತ್ತದೆ (ನಮಗೆ ಮನಸ್ಸಿಲ್ಲದಿದ್ದರೂ ಕೂಡ) ಎಂಬುದನ್ನು ಸೂಚಿಸುತ್ತದೆ. Be a Roman while you are in Rome!

January 1, 2008

ಮೊದಲಿದ್ದವಳೇ ಒಳ್ಳೆಯವಳು … (ಉತ್ತರ ಕನ್ನಡದ ಗಾದೆ – 120 ಮತ್ತು 121)

ಮೊದಲಿದ್ದವಳೇ ಒಳ್ಳೆಯವಳು ಎಬ್ಬಿಸಿದರಾದ್ರೂ ಉಣ್ಣೋಳು.

ಮೊದಲಿದ್ದವಳು ಮಲಗಿದ್ದವಳನ್ನು ಎಬ್ಬಿಸಿದರಾದ್ರೂ ಊಟ ಮಾಡುತ್ತಿದ್ದಳು. ಈಗಿನವಳದ್ದು ಇನ್ನೂ ಕಷ್ಟ. ಎಬ್ಬಿಸಿದರೂ ಊಟ ಮಾಡುವುದಿಲ್ಲ. ಬಹುಶಃ ಊಟವನ್ನೂ ಮಾಡಿಸಬೇಕು.

ಮೊದಲಿದ್ದ ವ್ಯಕ್ತಿ ಅಥವಾ ವ್ಯವಸ್ಥೆಯೇ ಕೆಟ್ಟದಾಗಿತ್ತು ಅಂದುಕೊಂಡರೆ ನಿಜವಾಗಿ ಅದೇ ಚೆನ್ನಾಗಿತ್ತು, ಹೊಸದಾಗಿ ಬಂದಿದ್ದು ಇನ್ನೊ ಕೆಟ್ಟದಾಗಿದೆ ಎನ್ನುವ ಅರ್ಥ. ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಭತ್ತ ತಿನ್ನುವವನು ಹೋದರೆ ಉಮಿ ತಿನ್ನುವವನು ಬರುತ್ತಾನೆ. ಉಮಿ ಎಂದರೆ ಭತ್ತದ ಮೇಲಿನ ಸಿಪ್ಪೆ ಅಥವಾ ಹೊಟ್ಟು. ಅವನು ಕೆಟ್ಟವನು, ಅಕ್ಕಿಯನ್ನು ತಿನ್ನುವುದಿಲ್ಲ, ಭತ್ತವನ್ನೇ ತಿಂದು ಮುಗಿಸುತ್ತಾನೆ ಅವನು ಹೋದರೆ ಒಳ್ಳೆಯದು ಎಂದುಕೊಂಡರೆ ನಂತರ ಬಂದವನು ಇನ್ನೂ ಕೆಟ್ಟವನು. ಅವನು ಉಮಿಯನ್ನೇ ತಿಂದು ಮುಗಿಸುತ್ತಾನೆ.