August 30, 2011

ಅರಿಶಿಣದ ಅನ್ನಕ್ಕೆ ಹೋಗಿ (ಉತ್ತರ ಕನ್ನಡದ ಗಾದೆ – 250)

ಅರಿಶಿಣ ಅನ್ನಕ್ಕೆ ಹೋಗಿ ವರುಷನ ಅನ್ನ ಕಳೆದುಕೊಂಡಿದ್ದ.

ಅರಿಶಿಣ ಇದರ correct form ‘ಅನ್ನಕ್ಕೆ ಹೋಗಿ ವರುಷದ ಅನ್ನ ಕಳೆದುಕೊಂಡಿದ್ದಎಂಬುದು. ಪ್ರಾಸಕ್ಕೆ ಸರಿ ಹೊಂದುವಂತೆವರುಷನ ಎಂದು ಹೇಳುತ್ತಾರೆ. ಅರಿಶಿಣದ ಅನ್ನ ಅಂದರೆ ಚಿತ್ರಾನ್ನ. ಪೇಟೆಯ ಜನರಿಗೆ ಇಂದಿನ ಅನ್ನ ಉಳಿದರೆ ಅದನ್ನು ಹಾಳುಮಾಡದೆ ಬಳಸಬೇಕೆಂದರೆ ಇರುವ ಪ್ರಮುಖ ದಾರಿ- ನಾಳೆ ಚಿತ್ರಾನ್ನ! ಹಳ್ಳಿಗಳಲ್ಲಿ ಇಂದು ಅನ್ನ ಉಳಿದರೆ ಅದನ್ನು ನಾಳೆಯವರೆಗೆ ಇಡುವ ಪ್ರಮೇಯವಿರುವುದಿಲ್ಲ. ಇಂದೇ ದನ-ಕರುಗಳಿಗೆ ಕೊಟ್ಟು ಖಾಲಿಮಾಡಿಬಿಡುತ್ತಾರೆ. ಹಳ್ಳಿಗಳಲ್ಲಿ ಚಿತ್ರಾನ್ನ ಮಾಡುವುದು ಕೇವಲ ವಿಶೇಷದ ದಿನಗಳಲ್ಲಿ ಮಾತ್ರ. ಅಂದರೆ ಹಬ್ಬ ಹರಿದಿನಗಳು ಅಥವಾ ಶ್ರಾದ್ಧದ ದಿನಗಳು. ಯಾರೋ ಒಬ್ಬ ಹಬ್ಬದೂಟದ ಆಸೆಗೆ (ಅರಿಶಿಣ ಅನ್ನಕ್ಕೆ) ಪ್ರತಿದಿನ ಬೇರೆಯವರ ಮನೆಗೆ ಹೋಗುತ್ತಿದ್ದನಂತೆ. ಇಂದಿನ ದಿನ ಕಳೆದರಾಯಿತೆಂಬಭಾವನೆ ಅವನಿಗೆ. ಪ್ರತಿದಿನ ಮನೆಯಲ್ಲಿರದ ಅವನಿಗೆ ತನ್ನ ಗದ್ದೆ-ತೋಟಗಳ ಕಡೆ ಗಮನವೇ ಇರಲಿಲ್ಲ. ಅವು ಹಾಳುಬಿದ್ದು ಆ ವರ್ಷ ಅವನಿಗೆ ಬೆಳೆಯೇ ಸಿಗಲಿಲ್ಲ. ಅರಿಶಿಣ ಅನ್ನದ ಆಸೆಯಲ್ಲಿ ವರ್ಷಾವಧಿಯ ಅನ್ನವನ್ನು ಕಳೆದುಕೊಂಡುಬಿಟ್ಟಿದ್ದ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡದೆ ಇಂದು ಸಿಗುವ ಸಣ್ಣ ಸುಖದ ಬೆನ್ನುಹತ್ತಿ ಹೋಗುವವರನ್ನು ಕುರಿತುಹೇಳಬಹುದಾದಂತ ಗಾದೆ ಇದು.

August 4, 2011

ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'

ಹದಿನೈದು ದಿನಗಳ ಹಿಂದೆ ಊರಿಗೆ ಹೊರಟಿದ್ದೆವು. ಊರಿನ ಮಳೆಗಾಲವನ್ನು ಅನುಭವಿಸದೆ ಎಷ್ಟೋ ವರ್ಷಗಳಾಗಿತ್ತು. ನಾನು ಊರಿನ ಮಳೆಯನ್ನು ಕಣ್ಣಲ್ಲಿ ತುಂಬಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಬೆಳಿಗ್ಗೆ ಆರು ಘಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಡುವ ಜನಶತಾಬ್ದಿ ರೈಲಿನಲ್ಲಿ ಕಾಯ್ದಿರಿಸಿದ್ದ ಸೀಟಿನಲ್ಲಿ ಎಂದಿನಂತೆಯೇ ಕಿಟಕಿಯ ಪಕ್ಕ ನಾನು, ನನ್ನ ಪಕ್ಕ ರಾಜೀವ ಕುಳಿತೆವು. ಹಾವೇರಿಯಲ್ಲಿ ಇಳಿದು ಶಿರಸಿಗೆ ಬಸ್ಸಿನಲ್ಲಿ ಹೋದರೆ ಮಧ್ಯಾನ್ಹದ ಊಟಕ್ಕೆ ಮನೆ ತಲುಪಬಹುದು. ರಾಜೀವನ ಪಕ್ಕದಲ್ಲಿ ಇನ್ಯಾರೋ ಕುಳಿತರು. ಎದುರು-ಬದುರಿಗೆ ಇರುವಂಥ ಸೀಟುಗಳಾಗಿದ್ದರಿಂದ ನಮ್ಮ ಎದುರಿಗೆ ಅಜ್ಜಿ-ಮೊಮ್ಮಗ, ಇನ್ನೊಬ್ಬ ವ್ಯಕ್ತಿ ನಮಗಿಂತ ಮೊದಲೇ ಆಸೀನರಾಗಿದ್ದರು. ನಮಗೆ diagonally opposite ಆಗಿ ಯಾರೋ ಒಬ್ಬರು ಮಧ್ಯ ವಯಸ್ಸಿನ uncle ಕುಳಿತಿದ್ದರು. ರೈಲು ಹೊರಟಿತು. ರಾಜೀವನಿಗೆ ನನಗಿಂತಲೂ ಓದುವ ಹುಚ್ಚು ತುಂಬಾ ಜಾಸ್ತಿ. ಮೂರ್ನಾಲ್ಕು ಪುಸ್ತಕ ತಂದಿದ್ದ.... ಒಂದನ್ನು ಚೀಲದಿಂದ ಎಳೆದು ಶುರು ಹಚ್ಚಿಕೊಂಡ.

ನಾನು ಕಿಟಕಿಯಿಂದ ಹೊರಗಡೆ ನೋಡಿ ರೈಲ್ವೆ ಟ್ರಾಕ್ ನ ಪಕ್ಕದ ಪ್ಲಾಸ್ಟಿಕ್ ನೋಡಿ ದುಃಖಿಸತೊಡಗಿದ್ದೆ . ನನಗಾದ ಕಿರಿಕಿರಿಯನ್ನು ಅವನಿಗೂ ಸ್ವಲ್ಪ ಅಂಟಿಸಿ ಕೃತಾರ್ಥಳಾಗೋಣವೆಂದು "ರಾಜೀವ..." ಎಂದೆ. "ತಡಿಯೇ" ಎಂಬ ಉತ್ತರ ಬಂತು. ಸುಮ್ಮನಾದೆ. ಪುಸ್ತಕದಲ್ಲಿ ಮುಳುಗಿ ಹೋಗಿದ್ದ. ನನಗೆ ಸ್ವಲ್ಪ ನಿದ್ದೆಯ ಜೋಂಪು ಹತ್ತಿ ಎಚ್ಚರವಾಗುವಷ್ಟರಲ್ಲಿ ಒಂದು ಘಂಟೆ ಕಳೆದಿತ್ತು. ರಾಜೀವ ಓದುತ್ತಿದ್ದ ಪುಸ್ತಕ ಮುಗಿಸಿ ಆಗಿತ್ತು. ಏನೋ ವಿಚಾರ ಮಾಡುತ್ತಿದ್ದವನಂತೆ ಕಂಡ. "ಏನು?!!" ಎಂದೆ. "ಈ ಪುಸ್ತಕ ಓದು" ಎಂದು ಕೈಲಿರುವ ಪುಸ್ತಕ ಕೊಟ್ಟ. ನೋಡಿದೆ. ಅಗ್ನಿ ಶ್ರೀಧರ್ ಬರೆದ 'ಎದೆಗಾರಿಕೆ' ಆಗಿತ್ತು. “Underworld ಬಗ್ಗೆಯಾ? ನಂಗೆ ಇಷ್ಟ ಇಲ್ಲ, ಓದಲ್ಲ. ಬೇರೆ ಪುಸ್ತಕ ಕೊಡು" ಎಂದೆ. "ಒಮ್ಮೆ ಓದಿ ನೋಡು, ತುಂಬಾ ಚೆನ್ನಾಗಿದೆ" ಎಂದ. "ಒಬ್ಬರನ್ನೊಬ್ಬರು ಕೊಚ್ಚಿ ಸಾಯಿಸೋದು- ಇನ್ನೆಷ್ಟು ಚೆನ್ನಾಗಿರಲು ಸಾಧ್ಯ?" ಎಂದು ಗೊಣಗಿದೆ. “Different ಆಗಿದೆ, ನೋಡು ಒಮ್ಮೆ" ಎಂದ. ತಾನು ರಜನೀಕಾಂತ್ ಬಗ್ಗೆ ಇನ್ಯಾವುದೋ ಪುಸ್ತಕದಲ್ಲಿ ಮುಳುಗಿದ. ಅವನ ಒತ್ತಾಯಕ್ಕೆ ತೆಗೆದುಕೊಂಡು ಶುರು ಮಾಡಿದೆ. 'ಎದೆಗಾರಿಕೆ' ಹೆಚ್ಚು ಕಡಿಮೆ ಅರವತ್ತು ಪುಟಗಳ ಸಣ್ಣ ಪುಸ್ತಕ. ಒಂದು-ಒಂದೂವರೆ ತಾಸಿನಲ್ಲಿ ಓದಿ ಮುಗಿಸಬಹುದು. ಓದುತ್ತಾ ಹೋದೆ... ಓದುತ್ತಾ ಹೋದೆ...ಓದುತ್ತಾ ಹೋದೆ... ರಾಜೀವ "ಸೀಮಾ.." ಎಂದ... ನಾನು "ಸ್ವಲ್ಪ ತಡಿಯೋ" ಎಂದೆ. ನಂಗೆ ಗೊತ್ತಿತ್ತು ಎನ್ನುವವರ ತರ ನಕ್ಕ.

ರಾಜೀವ ಹೇಳಿದಂತೆ ತುಂಬಾ different ಆಗಿತ್ತು ಕಥೆ. ಹೇಳುವಂಥ ದೊಡ್ಡ ಕಥೆಯೇನೂ ಇಲ್ಲ. ಆದರೆ ನಿರೂಪಿಸಿರುವ ರೀತಿ ಮಾತ್ರ ಅಮೋಘ! ಸಾರಾಂಶ ಇಷ್ಟೇ- ಮುಂಬೈನ underworld ನ ರೌಡಿಯಾಗಿದ್ದವನ ಪೈಕಿ ಒಬ್ಬನನ್ನು (ಕಥಾನಾಯಕ) ಮುಗಿಸಲು ಬೆಂಗಳೂರಿನ ಏಳೆಂಟು ಜನ ರೌಡಿಗಳು ತುಮಕೂರಿನ ಹತ್ತಿರ ಒಳಗೆಲ್ಲೋ farmhouse ಗೆ ಕರೆದುಕೊಂಡು ಹೋಗುತ್ತಾರೆ. ಅವನಿಗೆ ತನ್ನನ್ನು ಸಾಯಿಸಲು ಹೊರಟಿದ್ದಾರೆ ಎಂಬುದರ ಅರಿವಾಗಿರುತ್ತದೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂಬ ಅವರ ಊಹೆ ಸುಳ್ಳಾಗುತ್ತದೆ. ದಾರಿಯಲ್ಲಿ ಒಂದೆರಡು ಸಣ್ಣ-ಪುಟ್ಟ ಅವಕಾಶಗಳು ಸಿಕ್ಕಿದರೂ ಅವನು ಅವುಗಳನ್ನು ಬಳಸಿಕೊಳ್ಳುವುದಿಲ್ಲ. ಅವನು ವರ್ತನೆ ಎಷ್ಟು ಸಹಜವಾಗಿರುತ್ತದೆಯೆಂದರೆ ಅವನಿಗೆ ತಾನು ಸಾಯಲಿರುವುದು ಗೊತ್ತೇ ಆಗಿಲ್ಲವೇನೋ ಎಂಬ ಗುಮಾನಿ ಆ ರೌಡಿಗಳಿಗೆ ಬರತೊಡಗುತ್ತದೆ.

ನಡುವೆ ಬೆಕ್ಕುಗಳ ಒಂದು ಕಥೆ ಬರುತ್ತದೆ- ಸಾಯಿಸಲು ತೆಗೆದುಕೊಂಡು ಹೋಗುತ್ತಿರುವ ಎರಡು ಬೆಕ್ಕುಗಳ ಪೈಕಿ ಒಂದು ಸ್ಥಿತಪ್ರಜ್ನನಾಗಿ ಕುಳಿತು ಸಾವಿಗೆ ಮಾನಸಿಕ ತಯಾರಿ ನಡೆಸುತ್ತಿದ್ದಂತೆ ಕಂಡರೆ ಇನ್ನೊಂದು ಬೋನಿನಿಂದ ಜಿಗಿದು ಓಡಿ ಹೋಗಿ ತಪ್ಪಿಸಿಕೊಳ್ಳಲು ನೋಡಿ ಹಿಂದಿನಿಂದ ಬರುತ್ತಿರುವ ಕಾರಿನ ಚಕ್ರದಡಿ ಸಿಕ್ಕಿ ಸಾಯುತ್ತದೆ. ಇವೆರಡರಲ್ಲಿ ಯಾವ ಬೆಕ್ಕು ನಿಜವಾಗಿ ಹೀರೋ? ಸಾವನ್ನು ಎದುರಿಸಲು ಸಿದ್ಧವಾಗಿರುವ ಬೆಕ್ಕೋ ಅಥವಾ ಧೈರ್ಯ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಬೆಕ್ಕೋ?!

ಆ ರೌಡಿಗಳ ಪೈಕಿ ಒಬ್ಬರಲ್ಲಿ ನಾಯಕ ಮನಸ್ಸನ್ನು ತೆರೆದುಕೊಳ್ಳುತ್ತಾನೆ. ಆ ರೌಡಿಗೆ ತಮ್ಮನ್ನು ನಾಯಕ emotional blackmail ಮಾಡುತ್ತಿದ್ದಾನಾ ಎಂದು ಗುಮಾನಿ ಶುರುವಾಗುತ್ತದೆ. ನಾಯಕ ಒಮ್ಮೆ "ನನ್ನನ್ನು ಹೇಗೆ ಮತ್ತು ಯಾವಾಗ ಸಾಯಿಸಬೇಕೆಂದು ಪ್ಲಾನ್ ಮಾಡಿದ್ದೀರಿ?" ಎಂದೂ ಕೂಡ ಕೇಳುತ್ತಾನೆ. ತಾನು ಸಾಯಲಿರುವುದು ಅವನಿಗೆ ಗೊತ್ತಿದ್ದರೂ ಅವನ ಸಹಜ ವರ್ತನೆಯನ್ನು ಕಂಡು ರೌಡಿಗಳು ಹೌಹಾರುತ್ತಾರೆ! ಮುಂಬೈ ನಲ್ಲಿ ಅವನಿಗಾದ ಅನುಭವಗಳ ಪೈಕಿ ಎರಡು ಅನುಭವಗಳು ಅತ್ಯಂತ ನೋವುಂಟುಮಾಡಿದವು ಎಂದೆನ್ನುತ್ತಾ ಆ ಅನುಭವಗಳನ್ನು ಬಿಡಿಸಿಡುತ್ತಾನೆ. ಇಸ್ಪೀಟು ಆಡುವಾಗ ಇತರರು ಬೇಕೆಂತಲೇ ಅವನನ್ನು ಗೆಲ್ಲಿಸುತ್ತಾರೆ. ಅವನಿಗೂ ಗೊತ್ತು, ಹಾಗೆಂದು ಕೇಳಿಯೇ ಬಿಡುತ್ತಾನೆ.

ರೌಡಿಗಳ ಗ್ಯಾಂಗ್ ನ ಮುಖ್ಯಸ್ಥನೂ ಈತನನ್ನು ಪ್ರೀತಿಸತೊಡಗುತ್ತಾನೆ. ಗ್ಯಾಂಗ್ ನ ಇತರರಂತೂ ಅವನು ಹೇಗಾದರೂ ತಪ್ಪಿಸಿಕೊಂಡು ಓಡಿ ಹೋಗಲಿ ಎಂದು ಬಯಸತೊಡಗುತ್ತಾರೆ. ಆದರೆ ಕೊಲ್ಲದೆ ವಿಧಿಯಿಲ್ಲ- ಮುಂಬೈ ನಿಂದ ಆರ್ಡರ್ ಆಗಿದೆ. ಗ್ಯಾಂಗ್ ನ ಮುಖ್ಯಸ್ಥ ಅವನನ್ನು ಆದಷ್ಟು ಮಟ್ಟಿಗೆ ನೋವಾಗದಂತೆ ಸಾಯಿಸಿ. ಸಾಯಿಸುವಾಗ ಹೆಚ್ಚು ಸಮಯ ಹಿಡಿಯದಂತೆ ನೋಡಿಕೊಳ್ಳಿ" ಎಂದು ಆಜ್ಞೆ ನೀಡುತ್ತಾನೆ. ಅವನಿಂದ ಇಷ್ಟೇ ಸಾಧ್ಯ. ಸಾಯಿಸುವ ಹಿಂದಿನ ದಿನ ರಾತ್ರಿ ಜಾಗವನ್ನು ನೋಡಿಕೊಂಡು ಬರಲು ಗ್ಯಾಂಗ್ ನವರು ಹೋಗುತ್ತಾರೆ. ನಾಯಕನೂ ಜೊತೆಯಲ್ಲಿ ಹೋಗುತ್ತಾನೆ. ಗ್ಯಾಂಗ್ ನಲ್ಲಿ ಯಾರಿಗೆ ಇವನು ಹತ್ತಿರವಾಗಿದ್ದಾನೋ ಅವನು ಜಾರಿ ಬೀಳುತ್ತಾನೆ; ಅವನ ಪ್ಯಾಂಟ್ ಪೂರ್ತಿ ಕೆಸರಾಗುತ್ತದೆ. ಮನೆಗೆ ಬಂದ ನಂತರ ನಾಯಕನು ಅವನಿಗೆ ತನ್ನದೇ ಪ್ಯಾಂಟನ್ನು ಕೊಡುತ್ತಾನೆ, ಹೇಳಿಮಾಡಿಸಿದಂತೆ ಹೊಂದಿಕೆಯಾಗುತ್ತದೆ. ನಾಳೆ ಸಾಯಲಿರುವ ವ್ಯಕ್ತಿಯ ಪ್ಯಾಂಟನ್ನು ಹಾಕಿಕೊಳ್ಳಲು ಭಯವಾದರೂ ಒತ್ತಾಯಕ್ಕೆ ಮಣಿದು ಹಾಕಿಕೊಳ್ಳುತ್ತಾನೆ. ನಾಯಕನ ಪ್ಯಾಂಟ್ ನಲ್ಲಿರುವ ಈತ ನಾಯಕನ ಮನಸ್ಥಿತಿಯನ್ನು ತಾನೂ ಅನುಭವಿಸತೊಡಗುತ್ತಾನೆ.

ನಾಯಕನಿಗೆ ಗೊತ್ತು, ಇವತ್ತು ಓಡಿ ಹೋದರೂ ನಾಳೆ ಸಾವು ತಪ್ಪಿದ್ದಲ್ಲ ಎಂದು. ಸಾವನ್ನು ಎದುರುಗೊಳ್ಳುತ್ತಾನೆ; ಎದೆಗಾರಿಕೆ ತೋರಿಸುತ್ತಾನೆ. ನಾಯಕನ ಹೆಸರು ಎಲ್ಲಿಯೂ ಇಲ್ಲ. ಇತರ ಯಾರ ಹೆಸರೂ ಇಲ್ಲ. ಕೇವಲ ಕಥಾನಾಯಕಿಯ ಹೆಸರು ಮಾತ್ರ ಸಿಗುತ್ತದೆ; ರಶ್ಮಿ ಎಂದು. ಸಾವಿನ ಬಗ್ಗೆ ಅವನು ಹೇಳುವ ಕೆಲವು ಮಾತುಗಳಂತೂ ಮನ ಮುಟ್ಟುತ್ತವೆ. ಮನದಲ್ಲಿಯೇ ಉಳಿಯುತ್ತವೆ. ಹಿಂದಿನ ದಿನ ರಾತ್ರಿ ರಶ್ಮಿ ತನ್ನ ಕನಸಿನಲ್ಲಿ ಬಂದಿದ್ದಳು ಎಂದು ಹೇಳಿಕೊಳ್ಳುತ್ತಾನೆ.

ಮರುದಿನ ರಾತ್ರಿ ಅವನನ್ನು ಸಾಯಿಸುವ ಪ್ಲಾನ್…. ಅವನು ಓಡಿ ಹೋಗಬಾರದಾ ಎಂದು ಎಲ್ಲರೂ ಹಾತೊರೆಯುತ್ತಾರೆ, ಓದುಗನೂ ಹಾತೊರೆಯುತ್ತಾನೆ.... ಆದರೆ ಹಾಗಾಗುವುದೇ ಇಲ್ಲ. ಇಷ್ಟವಿಲ್ಲದಿದ್ದರೂ ಕುತ್ತಿಗೆಗೆ ಹಗ್ಗ ಬಿಗಿಯಲೇ ಬೇಕು, ಎಲ್ಲವೂ ಸರಾಗವಾಗಿ ನಡೆದುಹೋಗುತ್ತದೆ, ಯಾವುದೇ ಪ್ರತಿರೋಧವನ್ನೊಡ್ಡದೆಯೇ ಸಾವನ್ನಪ್ಪುತ್ತಾನೆ; ಕೆಲವೇ ಕೆಲವು ಸೆಕೆಂಡುಗಳಲ್ಲಿ ಪ್ರಾಣ ತ್ಯಜಿಸುತ್ತಾನೆ. ಇವರಿಗೆಲ್ಲ ಅವನ ಸಾವಿಗೆ ತಾವು ಕೇವಲ ನೆಪ ಮಾತ್ರವಾಗಿದ್ದೆವಾ ಎಂದೆನಿಸಿಬಿಡುತ್ತದೆ. ಅವನು ಯಾವಾಗಲೋ ಸಮಾಧಿ ಸ್ಥಿತಿ ತಲುಪಿಬಿಟ್ಟಿದ್ದ! "ದೇಹದಿಂದ ಬಟ್ಟೆಯನ್ನು ಕಳಚಿದ ಹಾಗೆ" ಎಂದು ಶ್ರೀಧರ್ ಬರೆಯುತ್ತಾರೆ. ಅವನಿಷ್ಟದಂತೆಯೇ ನಾಯಕಿಗೆ ಅವನು ಅಪಘಾತದಲ್ಲಿ ತೀರಿಹೋದಎಂದು ತಿಳಿಸಲು ಫೋನ್ ಮಾಡಲಾಗುತ್ತದೆ. ಮುಂದಿನ ಎಂಟು-ಹತ್ತು ಸಾಲುಗಳಲ್ಲಿ ಪುಸ್ತಕ ಮುಗಿದೇ ಹೋಗುತ್ತದೆ. ಅವುಗಳೇನೆಂದು ಇಲ್ಲಿ ಬರೆಯುವುದಿಲ್ಲ. ಓದಿ ಅನುಭವಿಸಿ.

ನಾನು ಒಂದೇ ಉಸಿರಿಗೆ ಪುಸ್ತಕ ಮುಗಿಸಿದೆ. ತಡೆಯಲಾಗಲಿಲ್ಲ; ಪಟಪಟನೆ ಕೆಲ ಹನಿ ಕಣ್ಣೀರು ಉದುರಿದವು. ಒರೆಸಿಕೊಳ್ಳುವಷ್ಟರಲ್ಲಿ diagonally opposite ಕೂತಿದ್ದ uncle ನೋಡಿಯೇ ಬಿಟ್ಟರು! ರಾಜೀವನ ಪಕ್ಕದಲ್ಲಿದ್ದ ವ್ಯಕ್ತಿ ಎದ್ದು ಹೋಗಿದ್ದ. ಕೆಲ ನಿಮಿಷಗಳ ನಂತರuncle ಬಂದು ರಾಜೀವನ ಪಕ್ಕದಲ್ಲಿ ಕುಳಿತರು; ಕುತೂಹಲವಿರಬೇಕು, ಏನು ಓದುತ್ತಿದ್ದಾರೆ ಎಂದು. ಪುಸ್ತಕ ಕೇಳಿ ಪಡೆದುಕೊಂಡರು. ರಾಜೀವ ಎರಡೂ ಪುಸ್ತಕ ಕೊಟ್ಟ. ಪುಸ್ತಕಗ ಮುಖಪುಟವನ್ನೊಮ್ಮೆ, ಹಿಂಭಾಗವನ್ನೊಮ್ಮೆ ಎರೆಡೆರೆಡು ಬಾರಿ ನೋಡಿದರು, ರಜನೀಕಾಂತ್ ಬಗೆಗಿನ ಪುಸ್ತಕದ ಒಂದು ಪುಟವನ್ನು ಓದಿ ಪುಸ್ತಕಗಳನ್ನು ಹಿಂದಿರುಗಿಸಿ ತಮ್ಮ ಸೀಟಿಗೆ ಮರಳಿದರು! ನಾನು ಕಿಟಕಿಯ ಕಡೆ ಮುಖ ಮಾಡಿಕೊಂಡು ಅಳುವನ್ನು ತಡೆಹಿಡಿಯುವ ಸಾಹಸ ನಡೆಸಿದ್ದೆ!

ಶ್ರೀಧರ್ ಹೊರಹಾಕಿರುವ ಎಲ್ಲಾ ಭಾವನೆಗಳನ್ನು ಇಲ್ಲಿ ಬರೆಯಲು ಏಕೋ ಸಾಧ್ಯವಾಗುತ್ತಿಲ್ಲ. ಕಥೆಯನ್ನು ಓದುವಾಗ ಮತ್ತು ಆ ನಂತರ ಅನುಭವಿಸಿದ ಕೆಲವೇ ಕೆಲವು ಭಾವನೆಗಳನ್ನು ಇಲ್ಲಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಎಷ್ಟೋ ಹೊತ್ತು ಮಾತಾಡಲಿಲ್ಲ; ಯೋಚಿಸುತ್ತಿದ್ದೆ. ಕಣ್ಣಿನಲ್ಲಿ, ಮನಸ್ಸಿನಲ್ಲಿ ಮಳೆ! ಊರು ತಲುಪಿದರೂ ಕಥೆಯಿಂದ ಹೊರಬಂದಿರಲಿಲ್ಲ. ಈಗಲೂ ಕೂಡ ಮನಸ್ಸಿನ ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಕೊರೆಯುತ್ತಲೇ ಇದೆ. Hats off to ಅಗ್ನಿ ಶ್ರೀಧರ್!

June 15, 2011

ಮಳೆಗಾಲದಲ್ಲಿ ನನ್ನೂರು; ಅಜ್ಜನ ಮಾತುಗಳು

ಊರಲ್ಲಿ ಮಳೆಗಾಲ ಆಗಲೇ ಪ್ರಾರಂಭವಾಗಿದೆಯಂತೆ; ಅಮ್ಮ phone receiver ಅನ್ನು ಕಿಟಕಿಯ ಬಳಿ ಹಿಡಿದು "ಕೇಳುತ್ತಿದೆಯಾ ಶಬ್ದ?" ಎಂದಳು. ಹೌದು, ಮಳೆ ಧೋ... ಎಂದು ಸುರಿಯುತ್ತಿದೆ ಅನಿಸ್ತು. "ಬಾವಿಗೆ ಹೊಸ ನೀರು ಕೂಡ ಬಂದಾಯ್ತು" ಎಂದಳು. "ಅಪ್ಪ ಎಲ್ಲಿ?" ಎಂದು ಕೇಳಿದ್ದಕ್ಕೆ, "ಬೀಜದ ಭತ್ತ ತಯಾರಿಕೆಯಲ್ಲಿ busy" ಎಂದು ನಕ್ಕಳು. ನಮ್ಮೂರ ಕಡೆ ಬಿತ್ತನೆಗೆ ಉಪಯೋಗಿಸುವ ಭತ್ತದ ಬೀಜಕ್ಕೆ 'ಬೀಜದ ಭತ್ತ' ಎನ್ನುತ್ತಾರೆ. "ನೀನೇನು ಮಾಡುತ್ತಿದ್ದೆ?" ಎಂದು ಕೇಳಿದ್ದಕ್ಕೆ, “ಯಾರೋ ನೆಂಟರು ಬರುವವರಿದ್ದಾರೆ, ಅದಕ್ಕೆ ಹಲಸಿನ ಹಣ್ಣಿನ ಕಡುಬು ಮಾಡಲು ತಯಾರಿ ನಡೆಸುತ್ತಿದ್ದೆ" ಎಂದಳು.

ಮುಂಗಾರಿನ ಸಮಯದಲ್ಲಿನ ಊರಿನ ಚಂದವೇ ಬೇರೆ. ಬೇಸಿಗೆಯಲ್ಲಿ ಆಗಾಗ ಬಿದ್ದ ಮಳೆಯಿಂದಾಗಿ ಆಗ ತಾನೇ ಚಿಗುರಿ ಹಸಿರಾದ ಹುಲ್ಲು, ಬೇಸಿಗೆಯಲ್ಲಿ ಮರಗಳ ಮೇಲೆ ಕುಳಿತ ಧೂಳೆಲ್ಲ ತೊಳೆದು ಹೋಗಿ ಎಲ್ಲಿ ನೋಡಿದರೂ ಸ್ವಚ್ಚ ಹಸಿರು, ಎಲ್ಲಿ ನೋಡಿದರೂ ನೀರು, ಹಲಸಿನ ಕಾಯಿಯ ಹಪ್ಪಳ, ಹಲಸಿನ ಹಣ್ಣಿನ ಕಡುಬು,.........ನಾವೆಲ್ಲಾ ಚಿಕ್ಕವರಿದ್ದಾಗ ಜೂನ್ ಒಂದನೇ ತಾರೀಖಿಗೆ ಶಾಲೆ ಪ್ರಾರಂಭವಾಗುತ್ತದೆ ಎನ್ನುತ್ತಿರುವಾಗಲೇ ಮಳೆಯೂ ಪ್ರಾರಂಭವಾಗಿರುತ್ತಿತ್ತು. ಆಗೆಲ್ಲ ನಾವು ಹೊರಗೆ ಆಟವಾಡಲು ಕಷ್ಟ ಎಂದು ಬೇಸಿಗೆಯೇ ಚೆನ್ನ ಎಂದು ಮಳೆಗೆ ಶಾಪ ಹಾಕುತ್ತಲೇ ಶಾಲೆಗೇ ಹೊರಡುತ್ತಿದ್ದೆವು. ಹಿಂದಿರುಗಿ ಬರುವಾಗ ಮಳೆಯಲ್ಲಿ ಆಟವಾಡಿ ನೆನೆದುಕೊಂಡು ಮನೆಗೆ ಬಂದು ಬೈಗುಳ ತಿನ್ನುವುದು ಮಾಮೂಲಾಗಿತ್ತು.

ಈ ವರ್ಷ ಮಳೆಗಾಲ ಮೊದಲಿನಂತೆಯೇ ಸಮಯಕ್ಕೆ ಸರಿಯಾಗಿ ಬಂದಿದ್ದು ಸಂತಸವಾಗಿದೆ. ಹಲವಾರು ವರ್ಷಗಳಿಂದ ಕೆಟ್ಟು ಹೋದಂತಿದ್ದ monsoon pattern ನೋಡಿ ಭಯವೇ ಆಗುತ್ತಿತ್ತು. ವಿಜ್ಞಾನಿಗಳು, ಸಂಶೋಧಕರು ಹೇಳುವಂತೆ- farmers have a greater potential to combat and mitigate climate change by maintaining greater biodiversity in their field, and through carbon sequestration. ನಂಬಬೇಕಾ?

ಇನ್ನೆಲ್ಲೋ ಓದಿದ್ದು- "Climate change puts the onus on the poor farmers to adapt – Think who is using the planes, the cars and the plastic bottles?" ಹವಾಮಾನದಲ್ಲಿ ಏನೇ ಏರುಪೇರಾದರೂ ನೇರ ಮತ್ತು ಮೊಟ್ಟ ಮೊದಲ ಏಟು ಬೀಳುವುದು ರೈತರಿಗೇ ತಾನೇ.ಈ ವರ್ಷ ಮಳೆಗಾಲ ಕಳೆದ ಕೆಲವು ವರ್ಷಗಳಿಗಿಂತ ಮೊದಲೇ ಶುರುವಾಗಿದ್ದಕ್ಕೆ ಎಲ್ಲ ರೈರತೂ ಒಂದೇ ಸಲ busy ಆಗಿದ್ದಾರಂತೆ. ನಾವು ಚಿಕ್ಕವರಿದ್ದಾಗಿನಂತೆ ಮಳೆ ಚೆನ್ನಾಗಿ ಹೊಯ್ದು, ಸಮೃದ್ಧಿ ತರಲಿ ಎಂದು ಪ್ರಾರ್ಥನೆ, ಹಾರೈಕೆ.

ಆಗಿನ ಮಳೆಗಾಲಕ್ಕೆ ಒಂದು ನಿಗದಿತ pattern ಇತ್ತು. ಇಪ್ಪತ್ತೇಳು ಮಳೆ ನಕ್ಷತ್ರಗಳಿಗೂ ಒಂದೊಂದು pattern ಇದೆ ಎಂದು ಅಜ್ಜ ಹೇಳುತ್ತಿದ್ದರು. ಒಂದೊಂದು ಮಳೆ ನಕ್ಷತ್ರವೂ ಸುಮಾರು 13 ರಿಂದ 15 ದಿನಗಳ ಕಾಲ ಇರುತ್ತದೆ. ನಕ್ಷತ್ರ ಬದಲಾದಂತೆ ಮಳೆ ಬೀಳುವ ಸ್ವರೂಪವೂ ಬದಲಾಗುತ್ತದೆ. ಅಜ್ಜ ಪಂಚಾಗ ನೋಡಿ "ನಾಳೆ ಬೆಳಿಗ್ಗೆ ನಾಲ್ಕು ಘಂಟೆಗೆ ಆರಿದ್ರ ನಕ್ಷತ್ರ ಬರುತ್ತದೆ" ಎಂದು ಹೇಳಿದ್ದರೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಮಳೆಯ ಸ್ವರೂಪ ಬದಲಾಗಿರುತ್ತಿತ್ತು. ಒಂದೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತದೆ. ಪ್ರತಿ ಪಾದವನ್ನು ಗಮನಿಸಿದರೂ ಮಳೆ ಬೀಳುವ ರೀತಿಯಲ್ಲಿ slight variation ಇರುತ್ತಿತ್ತು. ನನಗಿನ್ನೂ ಚೆನ್ನಾಗಿ ನೆನಪಿದೆ- ಅಪ್ಪ ಗದ್ದೆ ನಾಟಿ ಮಾಡಿ ಮುಗಿಸಿದ್ದರು. ಪುನರ್ವಸು ಎಂಬ ನಕ್ಷತ್ರದಲ್ಲಿ ಮಳೆ ಹೊಯ್ದಿರಲೇ ಇಲ್ಲ. ಅಪ್ಪ ಚಿಂತೆ ಮಾಡುತ್ತಿದ್ದರು. ಆಗ ಅಜ್ಜ, "ನಾಳೆ ಬೆಳಗಿನ ಜಾವದಿಂದಲೇ ಪುಷ್ಯ (ತಿಷ್ಯ ಎಂದು ಕೂಡ ಕರೆಯುತ್ತಾರೆ) ಬರುತ್ತದೆ. ಯೋಚನೆ ಮಾಡಬೇಡ. ಪುನರ್ವಸು-ಪುಷ್ಯ ನಕ್ಷತ್ರಗಳನ್ನು ಅಣ್ಣ-ತಮ್ಮ ಎಂದೂ ಕರೆಯುತ್ತಾರೆ. ಅವರು ರೈತರಿಗೆ ಮಾತು ಕೊಟ್ಟಿದ್ದಾರಂತೆ. ತಮ್ಮಿಬ್ಬರಲ್ಲಿ ಒಬ್ಬರಾದರೂ ಚೆನ್ನಾಗಿ ಹೊಯ್ದು ರೈತರ ಗದ್ದೆಗೆ ನೀರುಣಿಸುತ್ತೇವೆ ಎಂದು. ಹಾಗಾಗಿ ನೀನೇನೂ ಯೋಚನೆಮಾಡಬೇಡ" ಎಂದು ಹೇಳಿದ್ದರು. ರಾತ್ರಿ ಮಲಗುವ ಮುನ್ನ ಅಪ್ಪನ ಜೊತೆ ನಾವೆಲ್ಲಾ ಆಕಾಶ ನೋಡಿದ್ದೆವು. ಅಲ್ಲೊಂದು ಇಲ್ಲೊಂದು ಹೊಳೆಯುವ ನಕ್ಷತ್ರಗಳು ಸಹ ಕಾಣುವಷ್ಟು ಕಡಿಮೆ ಮೋಡಗಳಿದ್ದವು; ಅವೂ ಕೂಡ ನಿಲ್ಲದಂತೆ ಓಡುತ್ತಿದ್ದವು. ಆದರೆ ಅಜ್ಜ ಹೇಳಿದ್ದು ನಿಜ- ಬೆಳಗಿನ ಜಾವಕ್ಕೆ ಜಿಟಿಜಿಟಿ ಶುರುವಾದ ಮಳೆ ಪೂರ್ತಿ ಹಗಲಾಗುವಷ್ಟರಲ್ಲಿ ಜೋರಾಗಿ ಸುರಿಯಲಾರಂಭಿಸಿತ್ತು! ಚಂದಮಾಮ, ಬೊಂಬೆಮನೆ ಓದುವ ರಘು ಮತ್ತು ನನಗೆ ಅಜ್ಜ ಮಹಾ ಮಾಂತ್ರಿಕನಂತೆ ಕಂಡಿದ್ದರು! ಆಗಿನ ಕಾಲದಲ್ಲಿ ಪರಿಸರದಲ್ಲಿನ ಬದಲಾವಣೆಯನ್ನು ನೋಡಿಯೇ ಮಳೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಅರಿಯಬಹುದಾಗಿತ್ತು. ಅಜ್ಜ ಹೇಳುತ್ತಿದ್ದ, ನನಗೆ ಸಧ್ಯ ನೆನಪಾಗುತ್ತಿರುವ ಕೆಲವು ಮಾತುಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿದ್ದೇನೆ.....

ಮಳೆಹುಳುಗಳು ಮನೆಯೊಳಕ್ಕೆ ಬಂದರೆ ಮಳೆ ಬರುತ್ತದೆ. ಮಳೆಹುಳುಗಳು ಮುಸ್ಸಂಜೆಯಲ್ಲಿ ಭೂಮಿಯನ್ನು ಕೊರೆದು ದೀಪಕ್ಕೆ ಆಕರ್ಷಿತವಾಗಿ ಮನೆಯೊಳಕ್ಕೆ ಬರುತ್ತವೆ. ಆಗ ಮಳೆ ಬರುತ್ತದೆ ಎನ್ನುತ್ತಿದ್ದರು ಅಜ್ಜ. ರಘು ಮತ್ತು ನಾನು ಶಾಲೆಯ ವಿಜ್ಞಾನ ಪುಸ್ತಕದ ಉದಾಹರಣೆಯನ್ನು ಕೊಟ್ಟು "ಹುಳುಗಳು ಬರುವು ದೀಪಕ್ಕೆ, ಮಳೆ ಬರುತ್ತದೆ ಎಂದು ಅಲ್ಲ" ಎಂದು ಅಜ್ಜನೊಡನೆ ಯುದ್ಧ ಮಾಡುತ್ತಿದ್ದೆವು. ಹೆಲಿಕಾಪ್ಟರ್ ಹುಳುಗಳು ನೆಲಕ್ಕೆ ಹತ್ತಿರದಲ್ಲಿ ಹಾರಿದರೆ ಮಳೆ ಬರುತ್ತದೆ ಎಂದೂ ಕೂಡ ಹೇಳುತ್ತಾರೆ.

ಅಜ್ಜಿ ಅರಿವೆ ಹಾಸಿದರೆ ಮಳೆ ಬರುವುದಿಲ್ಲ; ಅಥವಾ ಮಳೆಗಾಲ ಮುಗಿಯುತ್ತಾ ಬಂತು ಎಂದರ್ಥ. 'ಅಜ್ಜಿ ಅರಿವೆ' ಎಂದರೆ ಹುಲ್ಲಿನ ಮೇಲೆ ಜೇಡರ ಹುಳುವಿನಂಥ ಹುಳುವೊಂದು ನೇಯ್ದ ಬಲೆ. ಅದರ ಮೇಲೆ ಬಿದ್ದ ಇಬ್ಬನಿಯಿಂದಾಗಿ ಅದು ಬಟ್ಟೆ ಹಾಸಿದಂತೆ ಕಾಣುತ್ತದೆ. ಅಂಗೈ ಅಷ್ಟು ಅಗಲ ಗಾತ್ರದಲ್ಲಿರುತ್ತದೆ.














ಮಳೆಗಾಲ ಮುಗಿಯುತ್ತಾ ಬಂದಂತೆ ಜೆಳಗಿನ ಹೊತ್ತು ಅಲ್ಲಲ್ಲಿ ಕಾಣುತ್ತದೆ. ಬಿಸಿಲು ಜಾಸ್ತಿಯಾದಂತೆ ಕರಗಿ ಹೋಗುತ್ತದೆ. ಅಜ್ಜ ಇದನ್ನು ನೋಡಿ ಅಮ್ಮನಿಗೆ ಹೇಳುತ್ತಿದ್ದರು- "ಸಾವಿತ್ರಿ ನೀನು ಕಾಳು-ಕಡಿ ಬಿಸಿಲಿಗೆ ಹಾಕಬಹುದು, ಅಜ್ಜಿ ಅರಿವೆ ಹಾಸಿದ್ದಾಳೆ ಮಳೆ ಬರುವುದಿಲ್ಲ" ಎಂದು. ಅಜ್ಜಿ ಹಾಸಿದ ಅರಿವೆಯಲ್ಲಿ ಹುಳುಗಳಿದ್ದರೆ ಮಳೆ ಮುಗಿದಿಲ್ಲ; ಮತ್ತೆ ಬರುತ್ತದೆ ಎಂದರ್ಥ!

ಗುಬ್ಬಿ ಮಣ್ಣು ಆಡಿದರೆ ಮಳೆ ಬರುತ್ತದೆ, ನೀರು ಆಡಿದರೆ ಮಳೆ ಬರುವುದಿಲ್ಲ. ಗುಬ್ಬಿಗಳು ತಮ್ಮ ರೆಕ್ಕೆಗಳನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಪಟಪಟನೆ ಬಡಿದು ಆಡುವುದನ್ನು ನೀವೂ ಕೂಡ ಗಮನಿಸಿರಬಹುದು. ಬೇಸಿಗೆಯಲ್ಲಿ ಇನ್ನೇನು ಮಳೆ ಬರುತ್ತದೆ ಎನ್ನುವ ಮೊದಲು ಗುಬ್ಬಿಗಳು ಮಣ್ಣಿನಲ್ಲಿ ಆಡುತ್ತವೆ.

ಸೂರ್ಯನಿಗೆ ಕೊಡೆ ಕಟ್ಟಿದರೆ ಮಳೆ ಬರುತ್ತದೆ. ಇದನ್ನು ನಾನೂ ಕೂಡ ನೋಡಿಲ್ಲ. ಹೇಳಿದ್ದನ್ನು ಮಾತ್ರ ಕೇಳಿದ್ದೇನೆ. ಸೂರ್ಯನ ಸುತ್ತಲೂ ಅಂದರೆ ಸೂರ್ಯನಿಂದ ಸುಮಾರು ದೂರದಲ್ಲಿ ಒಂದು ವರ್ತುಲಾಕಾರ ಕಂಡುಬರುತ್ತದೆಯಂತೆ. ಅದನ್ನು ಸೂರ್ಯನ ಕೊಡೆ ಎಂದು ಕರೆಯುತ್ತಾರೆ. ಅದೇ ರೀತಿ ಚಂದ್ರನಿಗೆ ಕೊಡೆ ಕಟ್ಟಿದರೆ ಮಳೆ ಬರುವುದಿಲ್ಲ; ಅಥವಾ ಮಳೆ ಬರುವುದು ಇನ್ನೂ ಕೆಲದಿನಗಳು ಮುಂದೆ ಹೋಗುತ್ತದೆ.

ಚಗಟೆ (ತಗಟೆ) ಗಿಡ-Cassia tora (http://www.vedicshop.co.in/wp-content/uploads/2010/11/Cassia-Tora.jpg) ಚಿಗುರಿದರೆ ಶುರುವಾದ ಮಳೆ ಹೋಗುವುದಿಲ್ಲ. ಮಳೆಗಾಲ ಸರಿಯಾಗಿ ಪ್ರಾರಂಭವಾದ ಹೊರತು ಚಗಟೆ ಗಿಡ ಸರಿಯಾಗಿ ಚಿಗುರುವುದೇ ಇಲ್ಲ. ಅಲ್ಲೊಂದು ಇಲ್ಲೊಂದು ಚಿಗುರಬಹುದು; ಆದರೆ ಹಿಂಡು ಹಿಂಡಾಗಿ ಅಲ್ಲ. ಈ ಗಿಡದ ಕಾಯಿಗಳು ಎತ್ತಿನ ಕೊಂಬಿನ ರೀತಿಯಲ್ಲಿ ತೊಟ್ಟಿನಲ್ಲಿ ಒಂದಕ್ಕೊಂದು ಸೇರಿಕೊಂಡಿರುವುದರಿಂದ ನಾವು ಶಾಲೆಗೇ ಹೋಗುವ ದಾರಿಯ ಬದಿಯಲ್ಲೆಲ್ಲ ಅವುಗಳನ್ನು ಕೊಯ್ದು ಒಂದಕ್ಕೊಂದು ಸಿಕ್ಕಿಸಿ ಎಳೆದು ಯಾರ ಎತ್ತು ಗೆದ್ದಿತು, ಯಾರ ಎತ್ತು ಸೋತಿತು ಎಂದು ಆಡಿದ್ದು ಈಗ ಬರೀ ನೆನಪು.

ಅಂತೆಯೇ ಬಸವನ ಹೂ ಆಗುವವರೆಗೂ ಮಳೆಗಾಲ ಹಿಡಿಯುವುದಿಲ್ಲ. ಇದರ ವೈಜ್ಞಾನಿಕ ಹೆಸರು ಗೊತ್ತಿಲ್ಲ. https://blogger.googleusercontent.com/img/b/R29vZ2xl/AVvXsEiBO1aGmp_hckigaNazx0aARCV4Uz4sKHE9adlO0-f_ebQw7gJj16-Xi6SQQfw_Hh0kcnZ5Q-f9fmJI_p2eDWssu1v5oJV_yjOdT4OUDI0eavigL0caAKhbq1ZT8-SqOxOGd1hOjHRzz-I/s1600/2.jpg

Thanks to V. D. Bhat Sugavi.... ಈ photo ಅವರ blog ನಿಂದ ಕದ್ದಿದ್ದು!
ಬಿಳಿಯ ಬಣ್ಣದ ಈ ಚಿಕ್ಕ ಹೂವು ನೆಲದಿಂದಲೇ ಎದ್ದು ಬರುತ್ತದೆ. ಬೇಸಿಗೆಯಲ್ಲಿ ಒಂದೂ ಕಾಣ ಸಿಗುವುದಿಲ್ಲ. ಮಳೆಗಾಲ ಪೂರ್ತಿಯಾಗಿ ಶುರುವಾದ ನಂತರ ಭೂಮಿಯಿಂದ ಹೊರಬರುತ್ತದೆ. ಹೂವಿನ ಒಳಭಾಗದಲ್ಲಿ ಎತ್ತಿನ ಮುಖದಂಥದೊಂದು ಅತಿ ಸೂಕ್ಷ್ಮವಾದ ಭಾಗವಿರುತ್ತದೆ.

'ಮೃಗಶಿರ ಮಳೆಯಲ್ಲಿ ಗಿಡವನ್ನು ಮುರಿದು ನೆಟ್ಟರೂ ಬದುಕುತ್ತದೆ'. ಮೃಗಶಿರ ಮಳೆಯನ್ನೂ 'ಗಿಡ ನೆಡುವ ಮಳೆ' ಎಂದೇ ಕರೆಯುತ್ತಾರೆ. ಆ ಸಮಯದಲ್ಲಿ ನೆಟ್ಟ ಗಿಡ ಸಾಮಾನ್ಯವಾಗಿ ಸಾಯುವುದಿಲ್ಲ.

'ಆರಿದ್ರಾ ಮಳೆ ಮಾಡಿದಂತೆ ಆರು ಮಳೆ ಮಾಡುತ್ತವೆ'. ಆರಿದ್ರಾ ನಕ್ಷತ್ರದ ಮಳೆ ಚೆನ್ನಾಗಿ ಹೊಯ್ದರೆ ನಂತರದ ಆರು ನಕ್ಷತ್ರಗಳೂ ಚೆನ್ನಾಗಿ ಹೊಯ್ಯುತ್ತವೆ; ಇಲ್ಲವಾದರೆ ಇಲ್ಲ. 'ಆರಿದ್ರಾ ನಕ್ಷತ್ರದಲ್ಲಿ ಆಚೆ ಮರದ ಕಾಗೆ ಈಚೆ ಮರಕ್ಕೆ ಹಾರಲಾರದಷ್ಟು ಮಳೆ ಹೊಯ್ಯುತ್ತದೆ'

ಮಘೆ ಮಳೆ ಕುರಿತು ಅನೇಕ ಮಾತುಗಳಿವೆ. 'ಮಘೆ ಮಳೆ ಮೊಗೆದು ಮೊಗೆದು ಹೊಯ್ಯುತ್ತದೆ'. 'ಹೊಯ್ದರೆ ಮಘೆ, ಹೋದರ ಹೊಗೆ'. ಸಾಮಾನ್ಯವಾಗಿ ಜೋರಾಗಿಯೇ ಸುರಿಯುವ ಮಘೆ ಮಳೆಯ ಸಮಯದಲ್ಲಿ ಕೆಲವೊಮ್ಮೆ ಮೋಡಗಳು ಹೊಗೆಯಂತೆ ಚದುರಿ ಹೋಗುತ್ತವೆ. 'ಮಘೆ ಮಳೆ ಹೊಯ್ದಷ್ಟೂ ಚೆನ್ನ; ಮನೆ ಮಗ ಉಂಡಷ್ಟೂ ಚೆನ್ನ'. ಈ ಮಾತಿಗೆ ನಾನು ಅಜ್ಜನ ಬಳಿ "ಮಗ ಮಾತ್ರ ಏಕೆ ಉಣ್ಣಬೇಕು? ಮಗಳೇಕೆ ಅಲ್ಲ?" ಎಂದು ವಾದಮಾದಿದ್ದೆ!

'ಹುಬ್ಬೆ ಮಳೆ ಹೊಯ್ದರೆ ಗಿಡಗಳಿಗೆ ಅಬ್ಬೆಯ ಹಾಲು ಕುಡಿದಂತೆ'. ಹುಬ್ಬಾ (ಅಥವಾ ಹುಬ್ಬೆ) ಮಳೆಯ ನೀರು ಗಿಡಗಳಿಗೆ ತಾಯಿಯ ಹಾಲಿನಲ್ಲಿರುವಷ್ಟು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆಯಂತೆ.

ಹಸ್ತೆ ಹನಿಸಿ, ಚಿತ್ತೆ ಭರಸಿ, ಸ್ವಾತಿ ಸುರಿದರೆ ಎತ್ತು ಕೊಟ್ಟು ಎಮ್ಮೆ ತತ್ತಾ (ತೆಗೆದುಕೊಂಡು ಬಾ) ಎಂದಿದ್ದಳು. ಹಸ್ತ ಮಳೆ ಚೆನ್ನಾಗಿ ಬೀಳಬೇಕು, ಚಿತ್ತ ಮತ್ತು ಸ್ವಾತಿ ಮಳೆಗಳು ಆಗೊಂದು ಈಗೊಂದು ಬಿದ್ದರೆ ಸಾಕು. ಆದರೆ ಅದೇನಾದರೂ ಉಲ್ಟಾಪಲ್ಟಾ ಆದರೆ ವ್ಯವಸಾಯಕ್ಕೆ ಅನುಕೂಲವಿಲ್ಲ, ಹೈನುಗಾರಿಕೆಯೇ ಗತಿ ಎಂಬುದನ್ನು ಸೂಚಿಸುತ್ತದೆ.

'ಸ್ವಾತಿ ಮಳೆ ಎಂದರೆ ಹೊಸ ಮಜ್ಜಿಗೆ ಮಳೆ'. ಆ ಮಳೆಯ ನೀರನ್ನು ಹಾಲಿಗೆ ಹಾಕಿದರೆ ಹಾಲು ಹೆಪ್ಪಾಗುತ್ತದೆ. ಹಳೆಯ ಕಾಲದಲ್ಲಿ ಸ್ವಾತಿ ಮಳೆಯ ನೀರನ್ನು ಹಿಡಿದು ವರ್ಷಕೊಮ್ಮೆ ಹೊಸ ಮಜ್ಜಿಗೆ ಮಾಡುತ್ತಿದ್ದರಂತೆ.

ನಾವು ವೈಜ್ಞಾನಿಕವಾಗಿ ಮುಂದುವರಿಯುತ್ತ ಹಳೆಯ ಕೊಂಡಿಗಳನ್ನೆಲ್ಲ ಕಳಚಿಕೊಳ್ಳುತ್ತಿದ್ದೇವೆ. ಹವಾಮಾನದ ವೈಪರೀತ್ಯದ ಬಗ್ಗೆ ಒಬ್ಬರನ್ನೊಬ್ಬರು ದೂರುತ್ತಾ ನಾವೇನು ಮಾಡಬಹುದೆಂಬುದನ್ನು ಮರೆತು ನಿಂತಿದ್ದೇವೆ. ಇದು ದುರದೃಷ್ಟಕರ.

April 14, 2011

ಕುರುಡನಿಗೆ ದೀಪ ಬೇಡವಾದರೆ (ಉತ್ತರ ಕನ್ನಡದ ಗಾದೆ – 249)

ಕುರುಡನಿಗೆ ದೀಪ ಬೇಡವಾದರೆ ಮನೆಮಂದಿಗೆಲ್ಲಾ ದೀಪ ಬೇಡವೇ? ಕುರುಡನಿಗೆ ದೀಪ ಇದ್ದರೂ, ಇಲ್ಲದಿದ್ದರೂ ವ್ಯತ್ಯಾಸವಾಗುವುದಿಲ್ಲ. ಆದರೆ ಮನೆಯಲ್ಲಿ ಕುರುಡರಲ್ಲದ ಇನ್ನಿತರರಿಗೆ ದೀಪದ ಅವಶ್ಯಕತೆ ಇರುತ್ತದೆ. ತನಗೆ ಉಪಯೋಗವಿಲ್ಲವೆಂದಾದ/ ಬೇಡವಾದ ವಸ್ತು ಇತರರಿಗೂ ಬೇಡವಾಗಿರುತ್ತದೆ ಎಂಬ ಅಭಿಪ್ರಾಯದಲ್ಲಿ ಕೆಲವರಿರುತ್ತಾರೆ. ಅಂಥವರ ಬಗ್ಗೆ ಬಳಸಬಹುದಾದ ಗಾದೆ ಇದು. ಉಳಿದೆಲ್ಲ ವೈಕಲ್ಯಗಳಿಗಿಂಥ ಕುರುಡುತನ ಕಷ್ಟದ್ದು. ಕಣ್ಣು ಇದ್ದವರಿಗಿಂತ ಎಷ್ಟೋ ಹೆಚ್ಚಿನ ಸಾಧನೆ ಮಾಡಿದ ಕುರುಡರೂ ಇದ್ದಾರೆ. ಎಲ್ಲಾ ಕುರುಡರ ಬಗ್ಗೆ ಅಪಾರ ಗೌರವಗಳೊಂದಿಗೆ ಈ ಗಾದೆಯನ್ನು ಬರೆಯುತ್ತಿದ್ದೇನೆ. ಓದುಗರು ಈ ಗಾದೆಯಲ್ಲಿ 'ಕುರುಡ' ಎಂಬ ಪದಕ್ಕೆ ಒತ್ತು ನೀಡದೆ, ಗಾದೆಯ ಒಳಾರ್ಥವನ್ನು ಗ್ರಹಿಸಲಿ ಎಂಬ ಆಶಯ ನನ್ನದು.

February 21, 2011

ತಾನು ಕೆಟ್ಟು ಇರಬಹುದು (ಉತ್ತರ ಕನ್ನಡದ ಗಾದೆ – 248)

ತಾನು ಕೆಟ್ಟು ಇರಬಹುದು; ತವರು ಕೆಟ್ಟು ಇರಲಾಗದು.
ಹೆಣ್ಣು ಮಕ್ಕಳಿಗೆ ತವರುಮನೆಯ ಬಗ್ಗೆ ಇರುವ ಪ್ರೀತಿಯನ್ನು ಹೇಳುವ ಗಾದೆ ಇದು. ತಮಗೇನಾದರೂ ಕಷ್ಟ ಬಂದರೆ ಸಹಿಸಿಕೊಳ್ಳುತ್ತಾರೆ. ಆದರೆ ತವರು ಮನೆಯಲ್ಲಿ ಕಷ್ಟ ಎಂದು ತಿಳಿದಾಗ ಹೆಣ್ಣುಮಕ್ಕಳು ಅನುಭವಿಸುವ ಚಡಪಡಿಕೆ ಅವರ್ಣನೀಯ. ತವರಿನ ಕಷ್ಟಕ್ಕೆ ಸಹಾಯ ಮಾಡಬೇಕೆಂದೆನಿಸಿದರೂ ಗಂಡನ ಮನೆಯಲ್ಲಿ ಬರುವ ಪ್ರತಿಕ್ರಿಯೆಯನ್ನು ನೆನೆನು ಸುಮ್ಮನಾಗುತ್ತಾರೆ. ಒಂದುವೇಳೆ ಅವರು ಸಹಾಯಕ್ಕೆ ಬಂದರೂ ಸಹಾಯ ತೆಗೆದುಕೊಳ್ಳಲು ತವರುಮನೆಯವರು ಸಮಾಜದಲ್ಲಿ ಜನರು ವಿಧ ವಿಧವಾಗಿ ಮಾತನಾಡುತ್ತಾರೆ ಎಂಬ ಭಯದಿಂದ ಹಿಂಜರಿಯುತ್ತಾರೆ. ಇದು ಹಿಂದಿನಕಾಲಕ್ಕೆ ಅನ್ವಯಿಸುವಂಥ ಮಾತು. ಈಗ ಪರಿಸ್ಥಿತಿ ಬದಲಾಗಿದೆ. ಆದರೆ ಹೆಣ್ಣುಮಕ್ಕಳ ತವರಿನ ಮೇಲಿನ ಪ್ರೀತಿ ಬದಲಾಗಲಿಲ್ಲ. ಇಬ್ಬರೂ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಾಯಮಾಡುವಂಥ ಸೌಹಾರ್ದ ಪರಿಸ್ಥಿತಿ ಇದೆ.

'ತವರುಮನೆ' ಎಂಬ ಶಬ್ದವನ್ನು ಕೇಳಿದಾಕ್ಷಣವೇ ಏನೋ ಒಂಥರಾ ಪುಳಕ. ಮದುವೆಯಾಗಿ ಬಂದ ಎಲ್ಲ ಹೆಣ್ಣುಮಕ್ಕಳೂ ಅನುಭವಿಸುತ್ತಾರೆ. ಮದುವೆಯಾಗಿ ಎಷ್ಟೋ ವರ್ಷಗಳ ನಂತರವೂ ಬಹುಪಾಲು ಹೆಣ್ಣುಮಕ್ಕಳಿಗೆ ತವರುಮನೆಯ ಮೇಲಿನ ಪ್ರೀತಿ ಅಷ್ಟೇ ತೀವ್ರವಾಗಿರುತ್ತದೆ; ಇರಬೇಕು ಕೂಡ. ನಾನೂ ಹಾಗೆ ಸ್ವಲ್ಪ ಭೂತಕಾಲಕ್ಕೆ.....


ನನ್ನ ಮದುವೆಯಾದ ಹೊಸದರಲ್ಲಿ ನಾವು ಶಿರಸಿಯಲ್ಲಿ ವಾಸವಾಗಿದ್ದೆವು. ನಮ್ಮ ಮನೆ main road ಗೆ ತುಂಬಾ ಹತ್ತಿರವಿದ್ದುದರಿಂದ ಊರ ಕಡೆಯಿಂದ ಬರುವ ಬಸ್ಸುಗಳನ್ನೆಲ್ಲ ನಾನು excited ಆಗಿ ನೋಡುತ್ತಿದ್ದೆ ಮತ್ತು "ನಮ್ಮನೆಗೆ ಹೋಗುವ ಬಸ್ಸು" ಎಂದು ಹೇಳುತ್ತಿದ್ದೆ! ಆಗ ರಾಜೀವ ತಮಾಷೆ ಮಾಡುತ್ತಿದ್ದುದು ಇನ್ನೂ ನೆನಪಿದೆ- "ನೋಡು, ನೋಡು ಆ ಬಸ್ಸಿನ ಮೇಲೆ ನಿನ್ನ ಅಮ್ಮ ತನ್ನ ಕೈ ಅಚ್ಚು ಹೊಡೆದು ಕಳಿಸಿದ್ದಾಳೆ.... ಸರಿಯಾಗಿ ನೋಡು...ಅಯ್ಯೋ ಬಸ್ಸು ಹೋಯಿತು ಬಿಡು...ನಂಗೆ ಕಾಣಿಸಿತು... ಮುಂದಿನ ಬಸ್ಸಿಗೂ ಇರುತ್ತದೆ...ಆಗ ನೋಡಬಹುದು." ನಗುತ್ತಿದ್ದೆ; ಆದರೆ ಕಣ್ಣಲ್ಲಿ ನೀರು ಬರುತ್ತಿದ್ದುದು ನಿಜ. ಈಗಿನ ನನ್ನ ಮನೆ 'ನನ್ನ ಮನೆ' ಎಂದು ಅನಿಸಲು ಎಷ್ಟೋ ದಿನಗಳು ಬೇಕಾದವು. ಎಷ್ಟೋ ಸಲ ರಾಜೀವನ ಬಳಿ "ನಿನ್ನ ಮನೆಯಲ್ಲಿ....." ಎನ್ನುತ್ತಾ ಮಾತಿಗಾರಂಭಿಸುತ್ತಿದ್ದೆ. ಮತ್ತೆ ನಗುವ ಸರದಿ ಅವನದು- "ಈ ಮನೆ ನಿಂದೂ ಕೂಡಾ" ಎನ್ನುತ್ತಿದ್ದ. ಅವನಿಗೂ ಗೊತ್ತು, ನನ್ನ ಒಳಗೆ ಏನು ನಡೆಯುತ್ತಿದೆಯೆಂದು. ಅವನು ಕೆಲವೊಮ್ಮೆ ಹೀಗೆ ಹೇಳಿದ್ದೂ ಇದೆ- "ನೋಡು, ನಿನಗಾದರೆ ಈಗ ಎರಡು ಮನೆ; ನನಗೆ ಒಂದೇ ಮನೆ". ಒಂದು ಕ್ಷಣ ಸಮಾಧಾನವಾದರೂ ಮರುಕ್ಷಣ ಮತ್ತದೇ ಬೇಜಾರು.

ನಂತರ ಕೆಲಸಗಳಲ್ಲಿ busy ಆಗುತ್ತಿತ್ತದ್ದಂತೆ ಈ ಬೇಜಾರು ಸ್ವಲ್ಪ ಸ್ವಲ್ಪ ಕಡಿಮೆಯಾಗುತ್ತಾ ಹೋಯಿತು. ಅಷ್ಟರಲ್ಲಿ ಮನಸ್ಸು ಕೂಡ ಪರಿಸ್ಥಿತಿಯನ್ನು ಒಪ್ಪಿಕೊಳ್ಳತೊಡಗಿತು. ಆದರೆ ಈಗ ಕೂಡ ಕೆಲವೊಮ್ಮೆ ಅಷ್ಟೇ ತೀವ್ರವಾಗಿ 'ನನ್ನ ಮನೆಯ' ನೆನಪು ಕಾಡುತ್ತದೆ. ಒಮ್ಮೆ ಹೋಗಿಯಾದರೂ ಬರೋಣ ಎನಿಸುತ್ತದೆ. ಇಲ್ಲಿರುವ ಕೆಲಸಗಳು ಕಟ್ಟಿಹಾಕುತ್ತವೆ; ಸುಮ್ಮನಾಗುತ್ತೇನೆ; ಮನಸ್ಸಿಗೆ ಬುದ್ಧಿ ಹೇಳುತ್ತೇನೆ.


January 28, 2011

ಪೇಸ್-ಭೂಪತಿ ಕ್ವಾರ್ಟರ್ ಫೈನಲ್ ಗೆ


ಇದೇನಿದು? ಅವರು ಆಗಲೇ ಸೆಮಿ ಫೈನಲ್ ಗೆ ಹೋಗಿದ್ದಾಯ್ತಲ್ಲ ಎಂದುಕೊಳ್ಳುತ್ತಿದ್ದೀರಾ? ಹೌದು, ನಾನು ಬರೆಯುವುದನ್ನು ತಡ ಮಾಡಿದೆ. ಮೊನ್ನೆ ಜನವರಿ 25, ಮಂಗಳವಾರ, ಕನ್ನಡ ಪ್ರಭದ ಕೊನೆಯ ಪುಟದಲ್ಲಿ ಕ್ರೀಡಾ ಸುದ್ದಿಯಲ್ಲಿ ಹೀಗಿತ್ತು (ಫೋಟೋ ನೋಡಿ). ಒಂದು ಪಕ್ಕದಲ್ಲ್ಲಿ 'ತಾರುಣ್ಯದ ಪರಿಚಯ' ಇದ್ದಿದ್ದರಿಂದ ಬಿಳಿಯ ಹಾಳೆಯನ್ನು ಇಟ್ಟಿದ್ದೇನೆ! ಪೇಪರ್ ನೋಡಿದ ತಕ್ಷಣ ರಾಜೀವ ಬಂದು ನನ್ನ ಮುಖಕ್ಕೆ ಹಿಡಿದು ಇದನ್ನು ಓದು ಎಂದ. ನಾನು ಓದಿದೆ. ಅರೆ! ಇದೇನು ಬರೆದಿದ್ದಾರೆ ಎಂದು ಯೋಚನೆ ಮಾಡುವಷ್ಟರಲ್ಲಿ ರಾಜೀವ ನಕ್ಕು- "ನೀನೂ ಕೂಡ ಹಾಗೆ ಓದಿದ್ಯ" ಎಂದ.












ಮುಂದಿನ ಎರಡು ದಿನಗಳಲ್ಲಿ ಹದಿನಾಲ್ಕು ಜನರ ಕೈಗೆ ಕೊಟ್ಟು ಓದಲು ಹೇಳಿದೆ- ನೀವಂದುಕೊಂಡಿದ್ದು ಸರಿ. ಅವರೂ ಹಾಗೆಯೇ ಓದಿದರು- "ಮಾನ ಕಳೆದ ಪೇಸ್-ಭೂಪತಿ ಕ್ವಾರ್ಟರ್ ಫೈನಲ್ ಗೆ" ಎಂದು! ಕನ್ನಡ ಪ್ರಭದಲ್ಲಿ ಬರೆಯುವವರಿಗೆ ಭಾಷೆಯಲ್ಲಂತೂ ಪ್ರೌಢಿಮೆಯಿದ್ದಂತೆ ಕಾಣುವುದಿಲ್ಲ. ಅಷ್ಟೇ ಅಲ್ಲದೆ ಪ್ರತಿ ದಿನದ ಪೇಪರ್ ನಲ್ಲಿ ಎಷ್ಟೊಂದು ತಪ್ಪುಗಳೂ ಕೂಡ ಮೇಲ್ನೋಟಕ್ಕೇ ಕಾಣ ಸಿಗುತ್ತವೆ. ಈ ಕ್ರೀಡಾ ಸುದ್ದಿಯಲ್ಲಿ font size ಸ್ವಲ್ಪ ಬೇರೆ ಇದೆ ನಿಜ. ಆದರೆ ನಮ್ಮಕಣ್ಣು ಮೊದಲು ಗ್ರಹಿಸುವುದು ಚಿತ್ರ ಮತ್ತು ಬಣ್ಣವನ್ನು ಅಲ್ಲವಾ? ಒಂದು ವೇಳೆ 'ಮಾನ ಕಳೆದ' ವನ್ನು ಕೆಂಪು ಬಣ್ಣದಲ್ಲಿ ಮುದ್ರಿಸಿದ್ದರೆ ಎಲ್ಲರೂ 'ಮಾನ ಕಳೆದ ಕಲ್ಮಾಡಿ ಮನೆಗೆ' ಎಂದು ಓದುತ್ತಿದ್ದರು ಅನಿಸುತ್ತದೆ.


ಪೇಪರ್ ನವರು ಮಾಡುವ ಅನಾಹುತ ಒಂದೆರಡಲ್ಲ. ಕೆಲವು ವರ್ಷಗಳ ಹಿಂದೆ ಶಿರಸಿಯ local ಪೇಪರ್ 'ಲೋಕ ಧ್ವನಿ' (ಜನರು ಅದನ್ನು 'ಲೋಕಲ್ ಧ್ವನಿ' ಎಂದೇ ಕರೆಯುತ್ತಾರೆ) ಯಲ್ಲಿ 'ತಟ್ಟಿಕೈ ರಾಮ ಭಟ್ಟರಿಗೆ ಪತ್ನಿ ಯೋಗ' ಎಂದು ಬರೆದಿತ್ತು. ತಟ್ಟಿಕೈ ಊರಿನ ರಾಮ ಭಟ್ಟರು ನನ್ನ ಅಜ್ಜನ cousin. ಅವರ ಪತ್ನಿ ತೀರಿಹೋಗಿ ಎರಡು ದಿನ ಆಗಿತ್ತು. ಲೋಕ ಧ್ವನಿ ರಾಮ ಭಟ್ಟರಿಗೆ 'ಪತ್ನಿ ವಿಯೋಗ' ದ ಬದಲು 'ಪತ್ನಿ ಯೋಗ' ವನ್ನೊದಗಿಸಿತ್ತು!

ಇನ್ನೂ ಒಂದು ಘಟನೆ- ಒಂದೆರಡು ವರ್ಷಗಳ ಹಿಂದೆ ನಮ್ಮ ನೆಂಟರಲ್ಲಿ ಒಬ್ಬನ ಮದುವೆ ಅವನ ಅಜ್ಜ ತೀರಿಹೊಗಿದ್ದರಿಂದ ಮುಂದೂಡಲ್ಪಟ್ಟಿತು. ಹೇಳಲು ಸಾಧ್ಯವಿದ್ದಲ್ಲೆಲ್ಲ ಅವರು phone ಮಾಡಿ ತಿಳಿಸಿ ನಂತರ ವಿಷಯವನ್ನು ಲೋಕ ಧ್ವನಿಗೆ ಕೊಟ್ಟರು. ಮರುದಿನದ ಲೋಕಧ್ವನಿಯಲ್ಲಿ- 'ಎಮ್ಮೆ ಹೊಂಡಕ್ಕೆ ಬಿದ್ದು ಸಾವು ಮದುವೆ ಮುಂದೂಡಿಕೆ' ಎಂದು ಬಂತು. 'ಎಮ್ಮೆ ಹೊಂಡಕ್ಕೆ ಬಿದ್ದು ಸಾವು' ಮತ್ತು 'ಮದುವೆ ಮುಂದೂಡಿಕೆ' ಗಳ ನಡುವೆ ಅಂತರ ತೀರಾ ಸ್ವಲ್ಪ ಇತ್ತು. ನನ್ನ ಅಜ್ಜಿ (ಆಗ 90 ವರ್ಷ ವಯಸ್ಸು ಅವರಿಗೆ) ಪೇಪರ್ ಓದಿದ ನಂತರ ಸ್ವಲ್ಪ ಸಿಟ್ಟು ಮಾಡಿಕೊಂಡು ಹೇಳಿದ್ದರು- "ವಯಸ್ಸಾದವರು ಎಂದರೆ ಈಗಿನ ಕಾಲದ ಜನರಿಗೆ ಸ್ವಲ್ಪವೂ ಗೌರವ ಇಲ್ಲ. ಅಜ್ಜ ತೀರಿಹೊಗಿದ್ದಾನೆ ಎಂದು ಕೊಡದೆ ಎಮ್ಮೆ ಸತ್ತು ಹೋಗಿದ್ದರಿಂದ ಮದುವೆ ಮುಂದೆ ಹೋಗಿದೆ ಎಂದು ಕೊಟ್ಟಿದ್ದಾರೆ ಪೇಪರ್ ಗೆ" ಎಂದು. ಅವರೇನೋ 'ಅನಿವಾರ್ಯ ಕಾರಣಗಳಿಂದ' ಎಂದು ಕೊಟ್ಟಿದ್ದರು. ಆದರೆ ಅಜ್ಜಿಗೆ ಇದನ್ನು ಅರ್ಥಮಾಡಿಸುವಷ್ಟರಲ್ಲಿ ಸಾಕು ಸಾಕಾಗಿತ್ತು!

January 7, 2011

ಕೋಡ ಕೋಡ ಹೆಣ್ಣುಮಕ್ಕಳಿಗೆ (ಉತ್ತರ ಕನ್ನಡದ ಗಾದೆ – 247)

ಕೋಡ ಕೋಡ ಹೆಣ್ಣುಮಕ್ಕಳಿಗೆ ಕೋಡುಬಳೆಯೇ ಕಜ್ಜಾಯ.
ಕೋಡ= ಕೊಡಗ= ಮಂಗ. ಕೋಡುಬಳೆಯನ್ನು ಯಾರೂ ಸಾಮಾನ್ಯವಾಗಿ ಕಜ್ಜಾಯ ಎಂದು ಪರಿಗಣಿಸುವುದಿಲ್ಲ.
ಮಂಗಗಳಂತೆ ನಡುವಳಿಕೆಯುಳ್ಳ ಹೆಣ್ಣುಮಕ್ಕಳಿಗೆ ಕೋಡುಬಳೆಯನ್ನೇ ಕಜ್ಜಾಯವೆಂದು ನೀಡುತ್ತಾರೆ; ಅವರ ಯೋಗ್ಯತೆಗೆ ಅದೇ ಸಾಕು ಎಂದು. ಹಗುರವಾದ ವ್ಯಕ್ತಿತ್ವವುಳ್ಳವರನ್ನು ಇತರರು ಯಾವುದೋ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಅಂಥವರಿಗೆ ಕೊಡುವ ಬೆಲೆ ಕಡಿಮೆ ಎಂಬರ್ಥದ ಗಾದೆ.