August 27, 2008

ಅಂಟು

ಈಗಂತೂ ಎಷ್ಟೆಲ್ಲಾ ಬಗೆಯ ಅಂಟುಗಳು ಮಾರುಕಟ್ಟೆಗೆ ಬಂದಿವೆ. ಮೊನ್ನೆ ಅಂಟು ತೆಗೆದುಕೊಳ್ಳಲೆಂದು ಇಲ್ಲಿನ ಒಂದು ಮಾರುಕಟ್ಟೆಯಲ್ಲಿ ಹೋಗಿ ನೋಡಿದೆ ಒಮ್ಮೆ ಬೆರಗಾಗಿ ನಿಂತೆ! ಒಂದು ನಿಮಿಷದಲ್ಲಿ ಎರಡು ವಸ್ತುಗಳನ್ನು ಅಂಟಿಸುವ ಫೆವಿಕಾಲ್ ನಂತಹ ಅಂಟಿನಿಂದ ಹಿಡಿದು ಒಂದೇ ಸೆಕೆಂಡಿನಲ್ಲಿ ಅಂಟಿಸುವ ಫೆವಿಕ್ವಿಕ್ ತರದ ಅಂಟಿನ ನಡುವೆ ಅದೆಷ್ಟು ಅಂಟುಗಳು ಬಂದು ನಮ್ಮನ್ನೂ ನಡುವೆ ಸಿಕ್ಕಿಸಿಕೊಂಡು ಆಯ್ಕೆಯನ್ನು ಕಷ್ಟ ಮಾಡಿಬಿಟ್ಟಿವೆ ಎನಿಸಿತು. ನಂತರ ಯಾವುದೋ ಒಂದು ಅಂಟನ್ನು ತೆಗೆದುಕೊಂಡು ಮನೆಯತ್ತ ನಡೆಯತೊಡಗಿದರೆ ದಾರಿಯಲ್ಲಿ ಅಂಟಿನ ಆಲೋಚನೆ ಮಾತ್ರ ತಲೆಗೆ ಅಂಟಿಕೊಂಡೇ ಇತ್ತು.

ನಾನು ಚಿಕ್ಕವಳಿದ್ದಾಗ ಗೊತ್ತಿದ್ದುದು ಒಂದೇ ಅಂಟು. ಬೇಸಿಗೆಯಲ್ಲಿ ಅಪ್ಪ ಗೇರು ಮರಕ್ಕೆ ಕತ್ತಿಯಿಂದ ಕಚ್ಚು ಹಾಕಿ ಗಾಯ ಮಾಡಿ, ಹಲವಾರು ದಿನಗಳವರೆಗೆ ಕಾಯ್ದು, ಆ ಗಾಯದಿಂದ ಸೋರಿದ ಗಟ್ಟಿಯಾದ ಅಂಟನ್ನು ತೆಗೆದು ಬಾಟಲಿಯಲ್ಲಿ ನೀರು ಹಾಕಿ ಆ ನೀರಿನಲ್ಲಿ ಅಂಟನ್ನು ಎರಡು ದಿನ ಮುಳುಗಿಸಿಟ್ಟು ನಂತರ ಅದನ್ನು ಕದಡಿ ಮಾಡಿದ, ಬಾಟಲಿಯ ಮುಚ್ಚಳವನ್ನು ತೆಗೆದರೆ ಕೆಟ್ಟ ವಾಸನೆ ಬೀರುತ್ತಿದ್ದ ಗೇರು ಮರದ ಅಂಟು. ತೆಂಗಿನ ಹಿಡಿಯ ಕಡ್ಡಿಗೆ ಹತ್ತಿಯನ್ನು ಸುತ್ತಿ ಮಾಡಿದ ಜುಂಜು ಅದನ್ನು ಹಚ್ಚುವ ಸಾಧನ. ನನಗೆ ಮತ್ತು ರಘುನಿಗೆ ಕಿತ್ತುಹೋದ ಪುಸ್ತಕದ ಹಾಳೆಗಳನ್ನು ಅಂಟಿಸಲು, ಗಾಳಿಪಟ ಮಾಡಲು ಅಪ್ಪ ಆ ಅಂಟನ್ನು ರೇಶನ್ ತರಹ ಕೊಡುತ್ತಿದ್ದರು - ಎಂದೋ ಒಡೆದು ಹೋದ ಗಾಜಿನ ಬಾಟಲಿಯ ಪ್ಲಾಸ್ಟಿಕ್ ಮುಚ್ಚಳದಲ್ಲಿ! ಅದು ಬೇಸಿಗೆಯಲ್ಲಿ ಕಾಗದವನ್ನು ಸುಮಾರು ಒಂದು ಒಪ್ಪತ್ತಿನಲ್ಲಿ ಅಂಟಿಸಿದರೆ, ಮಳೆಗಾಲದಲ್ಲಿ ಮಾತ್ರ ವಾರಗಟ್ಟಲೆ ತೆಗೆದುಕೊಂಡು ಅಂಟು ಹಚ್ಚಿದ ಜಾಗದಲ್ಲಿ (ಸಾಮಾನ್ಯವಾಗಿ ಪುಸ್ತಕದ ಕಿತ್ತು ಹೋದ ಹಾಳೆಗಳ ನಡುವಿನಲ್ಲಿ) ಬೂಸ್ಟು ಬೆಳೆಯುವಂತೆ ಮಾಡುತ್ತಿತ್ತು.


ನಂತರ ಬಂತು camel ನವರ ಅಂಟು ಕೆಂಪು ಮುಚ್ಚಳದ ಟ್ಯೂಬಿನಲ್ಲಿ. ಅದು ಆಗಿನ ಕಾಲದ ಅದ್ಭುತ ಅಂಟು! ತುಟ್ಟಿ ಬೇರೆ. ಅಪ್ಪ ಅದನ್ನು ನಮಗೆ ಮುಟ್ಟಲೂ ಕೂಡ ಕೊಡುತ್ತಿರಲಿಲ್ಲ. ಪುಸ್ತಕದ ಹಾಳೆಗಳು ಕಿತ್ತು ಹೋಗಿದ್ದರೆ ತಾವೇ ಹಚ್ಚಿಕೊಡುತ್ತಿದ್ದರು. ಗೇರು ಮರಕ್ಕೆ ಕಚ್ಚು ಹಾಕುವುದನ್ನು ಬಿಟ್ಟು ಬಿಟ್ಟಿದ್ದರು. ಗೇರು ಮರಕ್ಕೆ ಗಾಯ ಮಾಡುವುದು ಅಪ್ಪನಿಗೂ ಮನಸ್ಸಿರಲಿಲ್ಲವೆಂದು ಕಾಣಿಸುತ್ತದೆ. ಬಹುಶ ಬೇರೆ ಉಪಾಯ ಕಾಣದೆ ಮಾಡುತ್ತಿದ್ದರು. ಗಾಳಿಪಟಕ್ಕೆ ಗೇರು ಮರದ ಅಂಟು ಸಿಗದ ಕಾರಣ ನಾವು ಅಮ್ಮ ಮಾಡಿ ಕೊಡುವ ಮೈದಾ ಹಿಟ್ಟಿನ ಅಂಟಿಗೆ shift ಆದೆವು. ಶಾಲೆಯ ಪರಪರೆಗೂ ಅದೇ ಅಂಟು. ಅಜ್ಜನ ಮನೆಗೆ ಪತ್ರ ಬರೆದರೆ ಅದನ್ನು ಅಂಟಿಸಲು ಅಪ್ಪ ಬಂದು ಅದನ್ನು camel ಅಂಟಿನಿಂದ ಅಂಟಿಸುವ ತನಕ ಕಾಯುವ ತಾಳ್ಮೆ ಇಲ್ಲದೆಯೇ ಅಮ್ಮನ 'ಮುಸರೇ....' ಎಂಬ ಕೂಗಿನ ನಡುವೆಯೇ ಒಂದೆರಡು ಅನ್ನದ ಅಗುಳುಗಳನ್ನು ಹಾಕಿ ಅಂಟಿಸಿಬಿಡುತ್ತಿದ್ದೆವು!

ನಂತರ ಒಂದೊಂದೇ ಹೊಸ ಹೊಸ ಅಂಟುಗಳು ಬರಲು ಪ್ರಾರಂಭವಾದವು. ಫೆವಿಕಾಲ್ ಅಂಟು ನಮಗೆ ಆಗ ಹೊಸದರಲ್ಲಿ ಅತ್ಯದ್ಭುತವಾಗಿ ಕಂಡಿತ್ತು. ಅಪ್ಪ ತಂದಿಟ್ಟ ಬಾಟಲಿಯನ್ನು ಕದ್ದು ಉಪಯೋಗಿಸಿ ಮುಚ್ಚಳವನ್ನು ಸರಿಯಾಗಿ ಹಾಕದೆ ಓಡಿ ಹೋಗಿ ಫೆವಿಕಾಲ್ ಗಾಳಿಗೆ ಪೂರ್ತಿ ಗಟ್ಟಿಯಾಗಿ ಅಪ್ಪನಿಂದ ಬೈಗುಳ ಪಡೆದದ್ದು ಇನ್ನೂ ನೆನಪಿದೆ.

ಫೆವಿಕಾಲ್ ನ ನಂತರ ಎಷ್ಟೋ ಬಗೆಯ ಅಂಟುಗಳು ನಮ್ಮನೆಗೆ ಪ್ರವೇಶ ಪಡೆದಿವೆ. ಅಮ್ಮ ಕೈ ತಪ್ಪಿ ಒಡೆದುಕೊಂಡ ಉಪ್ಪಿನ ಕಾಯಿಯ ಭರಣಿಯ ಮುಚ್ಚಳವನ್ನು ಅಂಟಿಸುವ Araldite (ಎರಡು ಬೇರೆ ಬೇರೆ ಟ್ಯೂಬುಗಳಲ್ಲಿ ಬರುತ್ತಿತ್ತು. ಒಂದು ಬಿಳಿಯ ಬಣ್ಣದ ಮತ್ತು ಇನ್ನೊಂದು transparent ದ್ರವಗಳನ್ನು ಸೇರಿಸಿ ಚೆನ್ನಾಗಿ ತಿಕ್ಕಿ ಬಳಸುವಂತದು), ಸೋರುತ್ತಿದ್ದ ನಲ್ಲಿಯನ್ನು ಸರಿಪಡಿಸುವ M-seal (ಕೆಟ್ಟ ವಾಸನೆಯ ಎರೆಡು ರಬ್ಬರಿನಂಥ ವಸ್ತುಗಳನ್ನು ಸೇರಿಸಿ ತಿಕ್ಕಿ ಬಳಸುವಂಥದು), ಚಪ್ಪಲಿ ಅಂಟಿಸುವ Fevibond ಇನ್ನೂ ಏನೇನೋ ಸಣ್ಣ ಸಣ್ಣ ವಸ್ತುಗಳನ್ನು ಅಂಟಿಸುವ Feviquick, ಒಂದೇ ಎರಡೇ ಹತ್ತು ಹಲವಾರು ಬಗೆಯ ಅಂಟುಗಳು. ಈ ಎಲ್ಲ ಅಂಟುಗಳು ಮನೆ ಪ್ರವೇಶಿಸುವ ಹೊತ್ತಿಗೆ ನಾವೂ ಬೆಳೆದು ದೊಡ್ದವರಾಗಿದ್ದರಿಂದ ಅಪ್ಪ ಅವನ್ನು ಅಡಗಿಸಿಡುವ ಗೋಜಿಗೆ ಹೋಗುತ್ತಿರಲಿಲ್ಲ. ನಾವೂ ಜಾಗ್ರತೆಯಿಂದ ಬಳಸುವುದನ್ನು ಕಲಿತಿದ್ದೆವು. ಇಂದೂ ಸಹ ಅಪ್ಪನ ಹರಗಣದ ಪೆಟ್ಟಿಗೆಯಲ್ಲಿ ಹುಡುಕಿದರೆ ಇವುಗಳ ಅವಶೇಷಗಳು ಕಾಣ ಸಿಗುತ್ತವೆ. ಆದರೆ ಗೇರು ಮರದ ಅಂಟು ಮಾತ್ರ ಅವಶೇಷವೂ ಇಲ್ಲದಂತೆ ಮಾಯವಾಗಿದೆ. ಅದನ್ನು ಹಾಕಿ ಹಾಕಿ ಕಪ್ಪು ಬಣ್ಣಕ್ಕೆ ತಿರುಗಿದ್ದ ಬಾಟಲಿಯನ್ನೂ ಅಪ್ಪ ಎಂದೋ ಎಸೆದುಬಿಟ್ಟಿದ್ದಾರೆ. ಆದರೆ ಅದರ ವಾಸನೆ ಮಾತ್ರ ಇಂದಿಗೂ ಮೂಗಿನಲ್ಲಿಯೇ ಇದ್ದಂತಿದೆ ಮತ್ತು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ Aralditeನ ಜಾಹೀರಾತು ಕೂಡ ನೆನಪಿದೆ – “ಒಡೆದ ಹಾಲು ಮತ್ತು ಒಡೆದ ಹೃದಯಗಳನ್ನು ಬಿಟ್ಟು ಉಳಿದೆಲ್ಲವನ್ನೂ ಜೋಡಿಸುತ್ತದೆ!!”


ಯಾವ ಅಂಟು ಇದ್ದರೆಷ್ಟು ಬಿಟ್ಟರೆಷ್ಟು? ಇಂದು ನನಗೆ, ರಘುನಿಗೆ ಗಾಳಿಪಟ ಮಾಡಲೂ ಪುರಸೊತ್ತಿಲ್ಲ, ಪತ್ರ ಬರೆಯಲೂ ಪುರಸೊತ್ತಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುವುದೇ ವರ್ಷಕ್ಕೊಮ್ಮೆ. ಜೀವನದಲ್ಲಿ ತಾಳ್ಮೆ, ಪುರಸೊತ್ತು ಕಡಿಮೆ ಆಗುತ್ತಾ ಹೋದಂತೆಲ್ಲಾ, ಕ್ಷಣಮಾತ್ರದಲ್ಲಿ ಒಣಗುವ ಅಂಟಿನ ಅಗತ್ಯ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇಷ್ಟೆಲ್ಲಾ ಅಂಟುಗಳು ಇರದಿದ್ದ ಕಾಲದಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಳ್ಳುತ್ತಿದ್ದರು; ಸಂಬಂಧಗಳ ಮೂಲಕ. ದುರದೃಷ್ಟವಶಾತ್ ಇಂದು ಇಷ್ಟೆಲ್ಲಾ ಅಂಟುಗಳ ನಡುವೆಯೂ ನಮ್ಮನ್ನು ಇನ್ನೊಬ್ಬರಿಗೆ ಅಂಟಿಸುವ ಅಂಟು ಮಾತ್ರ ಕಾಣುತ್ತಿಲ್ಲ. ಎಲ್ಲರಿಗೂ ಅಂಟಿಸಿಕೊಳ್ಳದೇ ಇರುವುದೇ ಇಷ್ಟ.

ಕಂಚಿಗೆ ಹೋದರೂ … (ಉತ್ತರ ಕನ್ನಡದ ಗಾದೆ – 187)

ಕಂಚಿಗೆ ಹೋದರೂ ಮಂಚಕ್ಕೆ ನಾಲ್ಕೇ ಕಾಲು.
ನಮ್ಮ ಊರಿನಲ್ಲಿ ಇರುವ ಎಲ್ಲಾ ಮಂಚಗಳಿಗೂ ನಾಲ್ಕು ಕಾಲು, ಆದರೆ ಕಂಚಿ ಪಟ್ಟಣಕ್ಕೆ ಹೋಗಿ ನೋಡಿದರೂ ಅಲ್ಲಿನ ಮಂಚಗಳಿಗೂ ನಾಲ್ಕೇ ಕಾಲು. ಯಾವುದೋ ಒಂದು ವಿಷಯ ಎಲ್ಲಿದ್ದರೂ, ಎಂದಿದ್ದರೂ ಸತ್ಯವೇ ಎಂದು ಸರ್ವಕಾಲಿಕ ಸತ್ಯದ ಬಗ್ಗೆ ಹೇಳುವಾಗ ಬಳಸಬಹುದು. ಇನ್ನೊಂದು ಸಂದರ್ಭ ಎಂದರೆ, ಜನರ ನಡುವಳಿಕೆ, ಸ್ವಭಾವಗಳು ಎಲ್ಲಿ ಹೋದರೂ ಒಂದೇ ರೀತಿ ಎನ್ನುವಾಗ ಕೂಡ ಬಳಸಬಹುದು.

August 22, 2008

ಹೆಣ ಹೊರುವವನಿಗೆ … (ಉತ್ತರ ಕನ್ನಡದ ಗಾದೆ – 186)

ಹೆಣ ಹೊರುವವನಿಗೆ ಏನೋ ಭಾರವಾ?
'ಏನೋ' ಎನ್ನುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಅಥವಾ ಬೇರೆ ಯಾರಿಗಾದರೂ ಗೊತ್ತಿದ್ದರೆ ಕೇಳಿಕೊಳ್ಳಿ!
ಪೂರ್ತಿ ಹೆಣವನ್ನೇ ಹೊರುತ್ತಿದ್ದಾಗ 'ಏನೋ' ಭಾರವಾಗುವುದಿಲ್ಲ.
ಅಂತೆಯೇ, ಒಂದು ದೊಡ್ಡ ಕೆಲಸವನ್ನೇ ಮಾಡುತ್ತಿರುವವನಿಗೆ ಅದರ ಜೊತೆಗಿನ ಸಣ್ಣ ಕೆಲಸವೇನೂ ಕಷ್ಟವಲ್ಲ ಎಂಬ ಅರ್ಥ. ಇದು ಅಶ್ಲೀಲ ಗಾದೆಯಾದ್ದರಿಂದ ಸಾಮಾನ್ಯವಾಗಿ ಇದನ್ನು ಬೇರೆಯವರ ಕೆಲಸವನ್ನು ಮನಸ್ಸಿಲ್ಲದಿದ್ದರೂ ಮಾಡಬೇಕಾಗಿ ಬಂದಾಗ ಅದರ ಜೊತೆ ಬಂದು ಸೇರುವ ಇನ್ನೊಂದು ಕೆಲಸದ ಬಗ್ಗೆ ಹೇಳುತ್ತಾರೆ.

August 21, 2008

ಎತ್ತು ಹೌದು … (ಉತ್ತರ ಕನ್ನಡದ ಗಾದೆ – 185)

ಎತ್ತು ಹೌದು, ಕೋಡು ಅಲ್ಲ.
ಇದನ್ನು ವಿವರಿಸುವುದು ಕಷ್ಟ. ಎತ್ತಿನ ಬಗ್ಗೆ ಹೇಳುತ್ತಿರುವವನು ಅದರ ಕೋಡನ್ನೂ ಸೇರಿಸಿ ವಿವರಣೆ ಕೊಡಬೇಕಾಗುತ್ತದೆ. ಎತ್ತು ನನ್ನದು ಆದರೆ ಅದರ ಕೋಡು ನನ್ನದಲ್ಲ ಎಂದು ಹೇಳಲು ಸಾಧ್ಯವಿಲ್ಲ.
ಬೇರ್ಪಡಿಸಲು ಸಾಧ್ಯವಿಲ್ಲದಂತಹ ವಿಷಯದಲ್ಲಿ ಯಾರಾದರೂ ಅರ್ಧ ಮಾತ್ರ ತನಗೆ ಸಂಬಂಧ ಇರುವಂಥದು, ಇನ್ನರ್ಧ ಸಂಬಂಧವಿಲ್ಲ ಎಂದು ಹೇಳಿದಾಗ ಇದನ್ನು ಹೇಳಬಹುದು.
ಇದನ್ನೇ ಇನ್ನೊಂದು ಸಂದರ್ಭದಲ್ಲಿ ಬಳಸಬಹುದು... ಯಾರೋ ಒಬ್ಬರು ಒಂದು ಘಟನೆಯನ್ನು ವಿವರಿಸುತ್ತಿರುವಾಗ, ನಡೆದ ಘಟನೆಯ ಅರ್ಧ ಭಾಗವನ್ನು ವಿವರಿಸಿ ಉಳಿದರ್ಧ ಭಾಗವೂ ಅದಕ್ಕೆ ಸಂಬಂಧವಿದ್ದರೂ ಕೂಡ ಸಂಬಂಧವಿಲ್ಲ ಎಂದು ಹೇಳಿದಾಗ.

August 20, 2008

ನಿತ್ಯ ಸಾಯುವವರಿಗೆ … (ಉತ್ತರ ಕನ್ನಡದ ಗಾದೆ – 184)

ನಿತ್ಯ ಸಾಯುವವರಿಗೆ ಅತ್ತು ಯಾರು ಪೂರೈಸುತ್ತಾರೆ?
ಸಾವನ್ನು ಪದೇ ಪದೇ ನೋಡಿದರೆ ಅದರ ಬಗ್ಗೆ ಅತೀವ ದುಃಖ ಉಂಟಾಗುವುದೇ ಇಲ್ಲವಂತೆ.
ಉದಾಹರಣೆಗೆ ಡಾಕ್ಟರುಗಳೇ ಸಾಕ್ಷಿ. ದಿನವೂ ಅದನ್ನೇ ನೋಡಿ ನೋಡಿ ಅವರು ಸಾವಿನ ಬಗ್ಗೆ ಅವರು indifferent ಆಗಿ ಬಿಟ್ಟಿರುತ್ತಾರೆ. ಒಂದು ಬಗೆಯ ನಿರ್ಲಿಪ್ತತೆಯನ್ನು ಹೊಂದಿಬಿಟ್ಟಿರುತ್ತಾರೆ.
ಅಂತೆಯೇ, ಬೇರೆಯವರಿಗೆ ಕಷ್ಟ ಬಂದಾಗ ಒಂದೆರಡು ಬಾರಿ ನಾನು ಅದಕ್ಕಾಗಿ ಕೊರುಗುತ್ತೇವೆ, ಸಹಾಯ ಮಾಡಲು ಹೋಗುತ್ತೇವೆ. ಆದರೆ ದಿನಾಲೂ ಅದೇ ಗೋಳು ಆದರೆ ನಾವು ನಂತರದಲ್ಲಿ ಅವರ ಕಷ್ಟಗಳ ಬಗ್ಗೆ ನಿರ್ಲಿಪ್ತತೆಯನ್ನು ಹೊಂದುತ್ತೇವೆ ಎಂಬ ಅರ್ಥ.

August 8, 2008

ನೆರೆ ಹಾಳಾದರೆ … (ಉತ್ತರ ಕನ್ನಡದ ಗಾದೆ – 183)

ನೆರೆ ಹಾಳಾದರೆ ಕರು ಕಟ್ಟಲು ಜಾಗವಾಯಿತು.
ಪಕ್ಕದ ಮನೆ ನಾಶವಾದರೆ ನಮ್ಮ ಮನೆಯ ಕರುವನ್ನು ಕಟ್ಟಲು ಆ ಜಾಗವನ್ನು ಉಪಯೋಗಿಸಬಹುದು ಎಂಬ ಅರ್ಥ. ಬೇರೆಯವರ ತೊಂದರೆಯಲ್ಲಿ ತಮ್ಮ ಲಾಭವನ್ನು ಹುಡುಕುವವರ ಬಗ್ಗೆ ಈ ಗಾದೆಯನ್ನು ಹೇಳಬಹುದು.