December 17, 2008

ಹಾಡಿ ಹರಸಿ (ಉತ್ತರ ಕನ್ನಡದ ಗಾದೆ – 234 ಮತ್ತು 235 )

ಹಾಡಿ ಹರಸಿ ಮಗಳೇ ನಿನ್ನ ಪುಣ್ಯ ಎಂದಿದ್ದರು.
ಮಗಳಿಗೆ ಸಹಾಯ ಮಾಡುವಷ್ಟು ಮಾಡಬಹುದು ನಂತರ ಕೈಮೀರಿದಾಗ ಹಣೆಬರಹದಲ್ಲಿದ್ದಂತೆ ಆಗುತ್ತದೆ ಎಂದು ಸುಮ್ಮನಿರಬೇಕಾಗುತ್ತದೆ. ಬುದ್ಧಿ ಮಾತನ್ನು ಹೇಳುವಷ್ಟು ಹೇಳುವುದು ಒಂದು ವೇಳೆ ಅವರು ಕೇಳದಿದ್ದರೆ ನಂತರ ಅದೃಷ್ಟವಿದ್ದಂತೆ ಆಗುತ್ತದೆ ಎಂದು ಕೈಚೆಲ್ಲುವುದು. ಹೆಚ್ಚು-ಕಮ್ಮಿ ಇದೇ ಅರ್ಥದ ಇನ್ನೂ ಒಂದು ಮಾತಿದೆ- ಮರ ಹತ್ತುವವನನ್ನು ಕೈಗೆಟುಕುವವರೆಗೆ ಮಾತ್ರ ನೂಕಬಹುದು. ಮೊನ್ನೆ ಅಪ್ಪನ ಜೊತೆ phone ನಲ್ಲಿ ಮಾತನಾಡುವಾಗ ಅಪ್ಪ ಯಾರೋ ಒಬ್ಬರ ಬಗ್ಗೆ ಹೇಳುತ್ತಿದ್ದರು. ನಾನು ಆಗ ಹೇಳಿದೆ, "ಹೋಗ್ಲಿ ಬಿಡು ಅಪ್ಪ, ನೀನು ಎಷ್ಟು ಎಂದು ಸಹಾಯ ಮಾಡಲು ಸಾಧ್ಯ? ಮರ ಹತ್ತುವವನನ್ನು ಎಲ್ಲಿಯ ತನಕ ನೂಕಲು ಸಾಧ್ಯ?". ಆಗ ಅಪ್ಪ ಹೇಳಿದ್ದು- "ಈಗಿನ ಕಾಲಕ್ಕೆ ಮರ ಹತ್ತುವವನನ್ನು ಸ್ವಲ್ಪವೂ ನೂಕಲು ಸಾದ್ಯವಿಲ್ಲ, ಎಲ್ಲರೂ ಅವರವರೆ ಹತ್ತಬೇಕು. ನೋಡು ಅಲ್ಲೊಂದು ಮರ ಇದೆ, ಬೇಕಾದರೆ ಹತ್ತು ಎಂದು ತೋರಿಸಬಹುದು ಅಷ್ಟೇ!!"

December 13, 2008

ಗೆಣಸಿನ ಬಳ್ಳಿ

ಹಿಂದೊಮ್ಮೆ ಗೆಣಸಿನ ಗಡ್ಡೆಗಳನ್ನು ಕೊಂಡಿದ್ದೆ. ಅವುಗಳಲ್ಲಿ ಮೂರೋ ಅಥವಾ ನಾಲ್ಕೋ ಗಡ್ಡೆಗಳನ್ನು ಉಪಯೋಗಿಸಿ ಉಳಿದ ಒಂದೆರಡನ್ನು ಹಾಗೆಯೇ ಇಟ್ಟಿದ್ದೆ. ಎಷ್ಟೋ ದಿನಗಳ ನಂತರ ನೋಡಿದರೆ ಅದರಲ್ಲಿ ಒಂದು ಗಡ್ಡೆಗೆ ಬೇರುಬರಲು ಶುರುವಾಗಿತ್ತು. ಅದನ್ನು ಒಂದು pot ನಲ್ಲಿ ನೆಟ್ಟೆ. ಬಳ್ಳಿ ದಿನದಿಂದ ದಿನಕ್ಕೆ ಚಿಗುರಿ ಬೆಳೆಯತೊಡಗಿತ್ತು. ಒಂದು ತಿಂಗಳ ನಂತರ ಅದಕ್ಕೆ ಆ pot ಚಿಕ್ಕದಾಯಿತು ಎಂದೆನಿಸಲು ಶುರುವಾಯಿತು. ಒಂದು ದೊಡ್ಡ pot ಕೊಂಡು ತಂದು ಅಳುಕು ಮನಸ್ಸಿನಿಂದಲೇ ಚಿಕ್ಕ pot ನಿಂದ ದೊಡ್ಡ pot ಗೆ transfer ಮಾಡಿದೆ. ಬಳ್ಳಿ ಬಾಡತೊಡಗಿದಾಗ ಇನ್ನೆಲ್ಲಿ ಸತ್ತೇ ಹೋಗುತ್ತದೆಯೇನೋ ಎಂದು ಕೊರಗಿದ್ದೆ. ಒಂದೆರಡು ದಿನದಲ್ಲಿ ಮತ್ತೆ ಹಸಿರಾಗಿ ಬೆಳೆಯತೊಡಗಿತು. Balcony ಯ grills ಗೆ ಹಬ್ಬತೊಡಗಿತು. ಆದರೆ ನಾನು ಇಲ್ಲಿ ಮನೆ ಖಾಲಿ ಮಾಡಿ ಭಾರತಕ್ಕೆ ಮರಳುತ್ತಿರುವುದರಿಂದ ಆ ಬಳ್ಳಿಯನ್ನು ಏನು ಮಾಡಬೇಕು ಎನ್ನುವ ಸಮಸ್ಯೆ ಶುರುವಾಯಿತು. ನನ್ನ ಇನ್ನಿತರ ಕೆಲವು ಸಣ್ಣ-ಪುಟ್ಟ pot ಗಳನ್ನು ಇಲ್ಲಿಯ ಕೆಲವು ಸ್ನೇಹಿತರಿಗೆ ಕೊಟ್ಟೆ. ಕೆಲವೊಂದಷ್ಟು ಗಿಡಗಳು ಚಳಿ ತಡೆಯಲಾರದೇ ಆಗಲೇ ಒಣಗಿಹೋಗಿದ್ದವು. ಅವುಗಳ ಅವಷೇಶವನ್ನೂ, ಮಣ್ಣನ್ನೂ dispose ಮಾಡಬೇಕಾಗಿತ್ತು. ಗೆಣಸಿನ ಬಳ್ಳಿಯ pot ದೊಡ್ಡದಿರುವುದರಿಂದ ಅದನ್ನು ಸ್ನೇಹಿತರ ಮನೆಗೆ train ನಲ್ಲಿ ಸಾಗಿಸುವುದೂ ಕೂಡ ಕಷ್ಟ. ಈ ಬಳ್ಳಿಯೂ ಕೂಡ ಚಳಿಗೆ ತನ್ನ ಎಲೆ ಉದುರಿಸಲು ಶುರುಮಾಡಿತ್ತು. ಆದರೆ ಅದು ಸಾಯುವುದಿಲ್ಲ ಎಂಬುದು ಖಂಡಿತ. ಇಲ್ಲಿನ ಗಿಡಗಳು ಚಳಿಗೆ ಒಂದೂ ಎಲೆ ಇಲ್ಲದಂತೆ ಎಲ್ಲವನ್ನೂ ಉದುರಿಸಿ ನಂತರ April ತಿಂಗಳಿನಲ್ಲಿ ಮತ್ತೆ ಚಿಗುರುತ್ತವೆ; ಹೂವಿನ ಗಿಡಗಳೂ ಕೂಡ. ಇನ್ನು ಕೆಲವು ಚಳಿಗಾಲದಲ್ಲಿಯೇ ಹೂವು ಬಿಡುವ ಜಾತಿಯ ಗಿಡಗಳು ಬೇರೆ. ಹಿಂದಿನ ಚಳಿಗಾಲದಲ್ಲಿ ಎಲ್ಲ ಗಿಡಗಳೂ ಸತ್ತೇ ಹೋದವೆಂದು ನಾನು ತಿಳಿದುಕೊಂಡು ಊರಿಗೆ ಬಂದಿದ್ದೆ. ಏನಾದರೂ ಆಗಲೀ ನೀರು ಮಾತ್ರ ಹಾಕುವುದನ್ನು ಬಿಡಬೇಡ ಎಂದು ರಾಜೀವನಿಗೆ ಹೇಳಿದ್ದೆ. ಮತ್ತೆ spring ನಲ್ಲಿ ನಾನು ಊರಿಂದ ಇಲ್ಲಿನ ಮನೆಗೆ ಬಂದು ಮೊದಲು ಮಾಡಿದ ಕೆಲಸವೇ balcony ಗೆ ಹೋಗಿ ಗಿಡಗಳು ಏನಾಗಿವೆ ಎಂದು ನೋಡಿದ್ದು. ಎಲ್ಲ ಗಿಡಗಳೂ ರಾಜೀವ ಹಾಕಿದ ನೀರು ಉಂಡು ಮತ್ತೆ ಚಿಗುರಿ ನಗುತ್ತಿದ್ದವು! ಈ ವರ್ಷದ spring ನಲ್ಲಿಯೂ ಅವೆಲ್ಲಾ ಮತ್ತೆ ಚಿಗುರುತ್ತವೆ ಎಂಬುದು ಗೊತ್ತಿತ್ತು. ಆದರೆ ಈಗ dispose ಮಾಡದೆ ಬೇರೆ ವಿಧಿಯಿಲ್ಲ. ಒಲ್ಲದ ಮನಸ್ಸಿನಿಂದ ಎಲ್ಲವನ್ನೂ dispose ಮಾಡುವ ನಿರ್ಧಾರಕ್ಕೆ ಬಂದೆ. ಸತ್ತಂತಿರುವ ಇತರ ಗಿಡಗಳನ್ನೂ, ಅವುಗಳ ಮಣ್ಣನ್ನೂ plastic bag ನಲ್ಲಿ ಸುರುವಿಕೊಂಡೆ. ಗೆಣಸಿನ ಬಳ್ಳಿಯನ್ನು ಆಗಲೇ pot ನಿಂದ ಆಗಲೇ ಖಾಲಿ ಮಾಡಲು ಮನಸ್ಸಾಗಲಿಲ್ಲ. ಏಕೆಂದರೆ ಅದಿನ್ನೂ ಹಸಿರಾಗಿ ಕಾಣುತ್ತಿತ್ತು. ಅದನ್ನು pot ಸಮೇತ bicycle ಮೇಲೆ ಹೇರಿಕೊಂಡು disposal ಜಾಗಕ್ಕೆ ಹೊರಟೆ. ನದಿಯ ಅಂಚಿಗೆ ಮಣ್ಣನ್ನು dispose ಮಾಡಲು ಜಾಗ ಇದೆ. ಅಲ್ಲಿ ತಲುಪಿ plastic bag ನಲ್ಲಿದ್ದ ಎಲ್ಲಾ ಮಣ್ಣನ್ನೂ ಸುರುವಿದೆ. ಗೆಣಸಿನ ಬಳ್ಳಿಯ pot ಕೂಡ ಖಾಲಿ ಮಾಡಲೇ ಬೇಕಾಗಿತ್ತು. ಅದನ್ನು ಸುರುವಿ ನೋಡಿದರೆ ನಾನು ನೆಟ್ಟ ದೊಡ್ಡ ಗೆಣಸಿನ ಗಡ್ಡೆ ಮೂರು ನಾಲ್ಕು ಚಿಕ್ಕ ಚಿಕ್ಕ ಗಡ್ದೆಗಳಾಗಿ ಮರಿಯೊಡೆದಿತ್ತು. ನಾನೆಷ್ಟು ಕಟುಕಿ ಎಂದೆನಿಸಿ ಅಳುವೇ ಬಂತು. ಆ ಗಡ್ಡೆಗಳನ್ನೂ, ಬಳ್ಳಿಯನ್ನೂ ಅದೇ ಮಣ್ಣಿನಲ್ಲಿ ಊರಿದಂತೆ ಮಾಡಿ, ತಿರುಗಿ ನೋಡದೆ bicycle ಹತ್ತಿ ಹೊರಟೆ. ಅಯ್ಯೋ ದೇವರೇ ಒಂದು ಮಳೆಯಾದರೂ ಬಂದರೆ ನನ್ನ ಬಳ್ಳಿ ಅಲ್ಲಿಯೇ ಜೀವ ಹಿಡಿದುಕೊಂಡು ಪುನಃ ಹಬ್ಬಬಹುದೇನೋ. ಮನೆಗೆ ಬಂದವಳೇ weather forecast ನೋಡಿದೆ, ಭಾನುವಾರ ಮಳೆ ಎನ್ನುತ್ತಿತ್ತು. ಭಾರತಕ್ಕೆ ಹೊರಡುವ ಮೊದಲು ಮಾಡಿ ಮುಗಿಸಬೇಕಾಗಿರುವ ಕೆಲಸಗಳ list ನಲ್ಲಿ ‘dispose off plants and soil' ಎಂಬುದರ ಮೇಲೆ ಅಡ್ಡ ಗೆರೆ ಎಳೆದೆ ಆದರೆ ಆದರೆ ಮಗನ ಶ್ರಾದ್ಧ ಮಾಡಿ ಮುಗಿಸಿದ ತಂದೆಯೊಬ್ಬನ ಮನಸ್ಸಿನಂತಾಗಿತ್ತು ಮನಸ್ಸು.

December 8, 2008

ವಾಜೆ ಕಲಿಯೇ (ಉತ್ತರ ಕನ್ನಡದ ಗಾದೆ – 233)

ವಾಜೆ ಕಲಿಯೇ ಮಗಳೇ ಎಂದರೆ ಓಲೆ ಮುಂದೆ ಉಚ್ಚೆ ಹೊಯ್ದಿದ್ದಳು.
'ವಾಜೆ' ಎಂದರೆ ಕೆಲಸ, ಒಳ್ಳೆಯ ನಡತೆ ಎಂದು ಹೇಳಬಹುದು. ಒಳ್ಳೆಯ ಕೆಲಸವನ್ನು ಕಲಿ ಎಂದರೆ ಒಲೆಯ ಮುಂದೆ ಉಚ್ಚೆ ಹೊಯ್ದಿದ್ದಳಂತೆ. ಯಾರಿಗಾದರೂ ಏನಾದರೂ ಒಳ್ಳೆಯದನ್ನು ಕಲಿ ಎಂದರೆ ಅವರು ಏನೋ ಅನಾಹುತಕಾರಿ ಕೆಲಸವನ್ನು ಮಾಡಿದರೆ ಈ ಮಾತನ್ನು ಹೇಳಬಹುದು.

December 4, 2008

ಕದಿಯಲು ಹೋಗುವವನು (ಉತ್ತರ ಕನ್ನಡದ ಗಾದೆ – 232)

ಕದಿಯಲು ಹೋಗುವವನು ಬಳ್ಳನನ್ನು ಕಟ್ಟಿಕೊಂಡು ಹೋಗಿದ್ದನಂತೆ.
‘ಬಳ್ಳ’ ಎಂದರೆ ನರಿ. ನರಿಗಳು ವಿಚಿತ್ರ ರೀತಿಯಲ್ಲಿ ಕೂಗುವುದಕ್ಕೆ ಹೆಸರುವಾಸಿ. ಅವಕ್ಕೆ ತಾಳ್ಮೆ ಕಡಿಮೆ ಎನ್ನುತ್ತಾರೆ. ಕದಿಯಲು ಹೋಗುವಾಗ ನರಿಯನ್ನು ಕಟ್ಟಿಕೊಂಡು ಹೋದರೆ ಅವು ಕೂಗಿಬಿಡುತ್ತವೆ, ಅದರಿಂದಾಗಿ ಅಪಾಯ ಎಂದು ಅರ್ಥ. ಗುಟ್ಟಿನ ವಿಚಾರವನ್ನು ವಿಚಾರಹೀನರ ಬಳಿ ಹೇಳಬಾರದು ಎನ್ನುವಾಗ ಬಳಸಬಹುದು. ಇಂಥದೇ ಇನ್ನೊಂದು ಮಾತಿದೆಯಲ್ಲ- ಕಹಳೆಯ ಬಾಯಿಗೆ ಮುತ್ತಿಟ್ಟಂತೆ.

December 3, 2008

ಖಾಲಿ ಕೈಲಿರುವುದಕ್ಕಿಂತ (ಉತ್ತರ ಕನ್ನಡದ ಗಾದೆ – 231)

ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆ ಬಳೆ ಲೇಸು.
ಬಂಗಾರದ ಬಳೆ ಇಲ್ಲವೆಂದು ಖಾಲಿ ಕೈಲಿರುವುದಕ್ಕಿಂತ ಹಿತ್ತಾಳೆಯ ಬಳೆಯಾದರೂ ಅಡ್ಡಿಯಿಲ್ಲ ಎಂಬ ಅರ್ಥ.
Something is better than nothing :)

December 1, 2008

ಅಳಿಯನ ಕುರುಡು (ಉತ್ತರ ಕನ್ನಡದ ಗಾದೆ – 230)

ಅಳಿಯನ ಕುರುಡು(ತನ) ಬೆಳಗಾದರೆ ಕಾಣುತ್ತದೆ.
ಹಿಂದಿನ ಕಾಲದಲ್ಲಿ ಗೋಧೂಳಿ ಮುಹೂರ್ತದ ಮದುವೆಗಳು ತುಂಬಾ ನಡೆಯುತ್ತಿದ್ದವಂತೆ. ಆ ದೀಪದ ಬೆಳಕಿನಲ್ಲಿ ಅಳಿಯನ ಕುರುಡುತನವನ್ನು (ದೃಷ್ಟಿ ದೋಷವನ್ನು) ಯಾರೂ ಸರಿಯಾಗಿ ಗಮನಿಸದಿದ್ದರೂ ಅದು ಬೆಳಗಾದ ಮೇಲೆ ಎಲ್ಲರಿಗೂ ಕಂಡೇ ಕಾಣುತ್ತದೆ. ಹೊಸ ವಸ್ತುವನ್ನು ಖರೀದಿಸಿ ತಂದಾಗ ಚೆನ್ನಾಗಿ ಕಂಡರೂ ಅದರ ಅವಗುಣಗಳು ಶೀಘ್ರದಲ್ಲಿ ಕಂಡುಬರುತ್ತವೆ ಎನ್ನುವಾಗ ಬಳಸಿ.
ಹಿಂದಿನ ಕಾಲದ ಮದುವೆಗಳು ಐದು ದಿನ ನಡೆಯುತ್ತಿದ್ದವಂತೆ. ಎಲ್ಲರಿಗೂ ಪುರಸೊತ್ತು ಇರುತ್ತಿತ್ತು. ಎಲ್ಲರೂ ಮದುವೆಯನ್ನು ಹಬ್ಬದಂತೆ ಆಚರಿಸಿ, ಮದುಮಕ್ಕಳಿಗೆ ಆಶೀರ್ವಾದ ಮಾಡುತ್ತಿದ್ದರು. ಈಗಿನ ಮದುವೆಗಳು ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದರೆ 12-2 ಘಂಟೆಯ ವರೆಗೆ rush hour ಎನ್ನಬಹುದು. ಎಲ್ಲರೂ ಬಂದು queue ನಲ್ಲಿ ನುಗ್ಗಿ ಊಟ ಮಾಡಿ, ಮದುಮಕ್ಕಳ ಕೈಗೆ ಮುಂದೆ ಏನೂ ಉಪಯೋಗಕ್ಕೆ ಬಾರದ ಗಣಪತಿ ಚಿತ್ರವಿರುವ ಒಂದು ಗೋಡೆ ಗಡಿಯಾರವನ್ನು ತುರುಕಿ ತಮ್ಮ ತಮ್ಮ ವಾಹನಗಳನ್ನು ಹತ್ತಿ ಹೋಗಿಬಿಟ್ಟಿರುತ್ತಾರೆ. ಇನ್ನು ತೀರಾ ಗಡಿಬಿಡಿಯಲ್ಲಿದ್ದರೆ ಮದುಮಕ್ಕಳ ಅಪ್ಪ- ಅಮ್ಮರ ಎದುರು ಹಲ್ಲು ಕಿರಿದು ಹಾಜರಿ ಹಾಕಿ ಮದುಮಕ್ಕಳನ್ನೂ ನೋಡದೇ ಹೋಗಿಬಿಡುತ್ತಾರೆ. ಮತ್ತೆ 3 ಘಂಟೆಗೆ ಕಲ್ಯಾಣ ಮಂಟಪ ಬಣ ಬಣ. ತೀರಾ ಹತ್ತಿರದವರನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಅವರೂ ಕೂಡ ರಾತ್ರಿಯ VRL ಬಸ್ಸಿಗೆ ಬೆಂಗಳೂರಿಗೆ ಹೋಗಲು ತಮ್ಮನ್ನು bus-stand ಗೆ ಯಾರು ಮುಟ್ಟಿಸುತ್ತಾರೆ ಎಂಬ ಚಿಂತೆಯಲ್ಲಿರುತ್ತಾರೆ. ಮನೆಯಲ್ಲಿ ಮದುವೆ ನಡೆದರೂ ಸನ್ನಿವೇಶ ಬೇರೆ ಇರುವುದಿಲ್ಲ ಮತ್ತೆ! ಎಲ್ಲಾ ಕಡೆ ಹೀಗೆಯೇ!! ಜೀವನದಲ್ಲಿ ಯಾರಿಗೂ ಯಾವ ಕೆಲಸಕ್ಕೂ ಪುರಸೊತ್ತಿಲ್ಲ. ನಾವೆಲ್ಲಾ ಯಾವ ದಿಕ್ಕಿಗೆ ಮುಖ ಮಾಡಿ ಓಡುತ್ತಿದ್ದೇವೆ?