February 29, 2008

ಮುನ್ನೋಡಿ ಪಾಯಸ … (ಉತ್ತರ ಕನ್ನಡದ ಗಾದೆ – 177)

ಮುನ್ನೋಡಿ ಪಾಯಸ ಉಣ್ಣೋ ಮೂಳಾ ಎಂದರೆ ಯಾವ ಹೊಲದ ಗಸಗಸೆ ಎಂದು ಕೇಳಿದ.

ಗಸಗಸೆಯ ಪಾಯಸ ಬಡಿಸಿದ್ದೇನೆ ಊಟ ಮಾಡು ಎಂದರೆ, ಪಾಯಸದಲ್ಲಿ ಉಪಯೋಗಿಸಿದ ಗಸಗಸೆ ಯಾವ ಹೊಲದಲ್ಲಿ ಬೆಳೆದಿದ್ದು ಎಂದು ಕೇಳಿದ್ದನಂತೆ. ನಾವು ಗಡಿಬಿಡಿಯಲ್ಲಿದ್ದಾಗ ಬೇರೆಯವರ ಬಳಿ ಏನಾದರೂ ಕೆಲಸ ಮಾಡಲು ಹೇಳಿದರೆ (ಆ ಕೆಲಸದಿಂದ ಅವರಿಗೇ ಲಾಭ ಆಗುವಂತಿದ್ದರೂ ಸಹ) ಅವರು ತಿರುಗಿ ನಮ್ಮ ಬಳಿ ಆ ಕೆಲಸ ಏಕೆ ಹಾಗೆ? ಏನು? ಎತ್ತ? ಎಂದೆಲ್ಲಾ ವಿಚಾರಿಸತೊಡಗಿದರೆ ಈ ಮಾತನ್ನು ಹೇಳಬಹುದು. ಇದಕ್ಕೊಂದು ಅಶ್ಲೀಲ ಗಾದೆ ಇದೆ. ನಾನು ಹೇಳಲ್ಲ. ಬೇಕಿದ್ರೆ ಬೇರೆ ಯಾರನ್ನಾದರೂ ಕೇಳಿ ನೋಡಿ :)

'ಉಂಡೆಲೆ ಎತ್ತೋ ಗುಂಡ ಅಂದ್ರೆ ಉಂಡೋರು ಎಷ್ಟು ಜನ ಅಂತ ಕೇಳಿದ್ನಂತೆ'- ಈ ಗಾದೆ ನನಗೆ ಮರೆತು ಹೋಗಿತ್ತು. ನೆನಪಿಸಿದ್ದಕ್ಕೆ ವಿಕಾಸನಿಗೆ ಧನ್ಯವಾದಗಳು.

February 28, 2008

ಮೂರು ದೋಸೆ … (ಉತ್ತರ ಕನ್ನಡದ ಗಾದೆ – 176)

ಮೂರು ದೋಸೆ ಕೊಡುತ್ತೇನೆ ಹಾಡು ದಾಸಯ್ಯ, ಆರು ದೋಸೆ ಕೊಡುತ್ತೇನೆ ನಿಲ್ಲಿಸು ದಾಸಯ್ಯ.

ಮನೆ ಬಾಗಿಲಿಗೆ ದಾಸಯ್ಯ ಬಂದಾಗ ಅವನಿಗೆ ಮೂರು ದೋಸೆಯ ಆಮಿಷ ತೋರಿಸಿ ಹಾಡಲು ಹೇಳಿದರೆ ನಂತರ ಅವನ ಹಾಡನ್ನು ಕೇಳಲು ಸಾಧ್ಯವಿಲ್ಲದೇ ಆರು ದೋಸೆ ಕೊಟ್ಟು ನಿಲ್ಲಿಸು ಎಂದು ಹೇಳುವ ಪ್ರಸಂಗ ಬರಬಹುದು! ಅಂತೆಯೇ ಯಾರ ಬಳಿಯಾದರೂ ಒಂದು ಸಣ್ಣ ಕೆಲಸ ಮಾಡಿಸಿಕೊಳ್ಳಲು ಏನಾದರೂ ಆಮಿಷ ತೋರಿಸಿ ನಂತರ ಅವರಿಂದ ತಪ್ಪಿಸಿಕೊಳ್ಳಲು ಇನ್ನೂ ಹೆಚ್ಚಿನ ಬೆಲೆ ತೆರಬೇಕಾದಾಗ ಈ ಗಾದೆಯನ್ನು ನೆನಪಿಸಿಕೊಳ್ಳಿ.

February 27, 2008

ಹೆಚ್ಚು ಪ್ರೀತಿ ಯಾರಿಗೆ?

ಈ ಮೊದಲೊಮ್ಮೆ ಮದುವೆಯ ವಿಚಾರವನ್ನು ಬರೆದಿದ್ದೆ. ಆದರೆ ಅದನ್ನು ಪೂರ್ತಿ ಬರೆದ ಸಮಾಧಾನವಿರಲಿಲ್ಲ. ಈಗ ಅದೇ ವಿಚಾರವನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇನೆ... ಹೆಣ್ಣುಮಕ್ಕಳಿಗೆ ಮದುವೆಯಾಗಿ ಹೋದ ತಕ್ಷಣ ಒಂಥರಾ ವಿಚಿತ್ರ ಅನುಭವ. ತವರು ಮನೆಯಿಂದ ಹೊರಗೆ ಕಳುಹಿಸಿಬಿಟ್ಟಿದ್ದಾರೆ. ಅದು ಇನ್ನು ಮುಂದೆ ತನ್ನ ಮನೆಯಲ್ಲ. ಆ ಮನೆಯಲ್ಲಿ ತನ್ನ existence ಗೆ ಅರ್ಥ ಇಲ್ಲ. ಅಥವಾ ಬೇರೆಯದೇ ಆದ ಅರ್ಥವಿದೆ. ಗಂಡನ ಮನೆ, ಅಲ್ಲಿಯ ಆಚಾರ ವಿಚಾರಗಳು ತೀರಾ ಹೊಸದು. ಆ ಮನೆ ತನ್ನದೆಂದು ಅನಿಸುವುದಿಲ್ಲ. ಮನೆಯೇ ಇಲ್ಲದಂತಾದ ಅನುಭವ. ಮದುವೆಯಾದ ಮರುಕ್ಷಣದಿಂದಲೇ ಅವಳ ಊರು, ಮನೆ ಎಲ್ಲವೂ ಬದಲಾಗುತ್ತದೆ. ಇದೆಲ್ಲಾ ಆಗುತ್ತದೆ ಎಂದು ಗೊತ್ತಿದ್ದರೂ ಏನೋ ಒಂದು ತರಹದ ಮನಸ್ಸು ಒಪ್ಪಿಕೊಳ್ಳಲಾರದ ಸ್ಥಿತಿ. ನಿಧಾನಕ್ಕೆ ಮನಸ್ಸಿಗೆ ಬುದ್ಧಿ ಹೇಳುತ್ತಾ ಗಂಡನ ಮನೆಗೆ ಒಗ್ಗಿಕೊಳ್ಳುತ್ತಾಳೆ. ತವರನ್ನು ಮರೆತಳೆಂದು ಅದರ ಅರ್ಥವಲ್ಲ. ಗಂಡನ ಮನೆಯಲ್ಲಿದ್ದರೂ ಅವಳಿಗೆ ತನ್ನ ತವರಿನ ಚಿಂತೆ ಇದ್ದೆ ಇದೆ. ನಾಲ್ಕು ದಿನ ತವರಿಗೆ ಬಂದರೂ ಗಂಡನ ಮನೆಯ ಚಿಂತೆಯನ್ನು ಮಾಡುತ್ತಾಳೆ! ಇದಕ್ಕೆಲ್ಲಾ ಕನ್ನಡದ ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಉದಾಹರಣೆಗಳಿವೆ ಬಿಡಿ. ಅವಳಿಗೆ ಗಂಡನ ಮನೆಯ ಮೇಲೆ ಜಾಸ್ತಿ ಪ್ರೀತಿಯೋ ಅಥವಾ ತವರು ಮನೆಯ ಮೇಲೋ? ಗಂಡನ ಮೇಲೆ ಜಾಸ್ತಿ ಪ್ರೀತಿಯೋ ಅಥವಾ ಅಣ್ಣ/ತಮ್ಮನ ಮೇಲೋ? ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ.

ಇದು ನಾನು ಇಲ್ಲಿಗೆ ಬಂದು ತಲುಪುವ ಮುನ್ನ ಇನ್ನೂ ಧಾರವಾಡದಲ್ಲಿ ಇದ್ದಾಗಲೇ ನಡೆದ ಮಾತುಕತೆ. ನನ್ನ ಬಳಿ computer ಇರದಿದ್ದ ಕಾರಣ ಮತ್ತು ನನ್ನ ಕೆಲಸ ತುಂಬಾ urgent ಇದ್ದ ಕಾರಣ ನನ್ನ junior ರಾಜೇಶನ room ನಲ್ಲಿ ಕುಳಿತು ಅವನ computer ನಲ್ಲಿ ನನ್ನ ಕೆಲಸ ಮಾಡಿಕೊಳ್ಳುತ್ತಿದ್ದೆ. ನನ್ನ ಹತ್ತಿರದವರೆಲ್ಲರಿಗೂ ಗೊತ್ತು ನನ್ನ ಮಾತಿನಲ್ಲಿ ಪದೇ ಪದೇ ಇಣುಕುವವರೆಂದರೆ ರಾಜೀವ ಮತ್ತು ರಘು. ರಾಜೀವ ಗಂಡನಾದರೆ ರಘು ನನ್ನ ತಮ್ಮ. ಅಂತೆಯೇ ರಾಜೇಶನ ಜೊತೆಯಲ್ಲಿ ಮಾತನಾಡುವಾಗಲೂ ನಾನು ಎಂದಿನಂತೆಯೇ ರಾಜೀವ...ರಘು....ಎಂದಿರಬೇಕು... ಒಂದು ದಿನ ಏನೋ ಬರೆಯುತ್ತಾ (type ಮಾಡುತ್ತಾ) ಕುಳಿತಿದ್ದೆ; ರಾತ್ರಿಯಾಗಿಬಿಟ್ಟಿತ್ತು. ರಾಜೇಶ ನನ್ನನ್ನು ನನ್ನ room ನ ವರೆಗೂ ಕಳುಹಿಸಲೆಂದು ಬಂದ. ದಾರಿಯಲ್ಲಿ ನನ್ನನ್ನು ಕೇಳಿದ, "ನಿನಗೆ ಯಾರ ಮೇಲೆ ಹೆಚ್ಚು ಪ್ರೀತಿ? ರಘುನ ಮೇಲೋ ರಾಜೀವನ ಮೇಲೋ?" ನನಗೆ ತಕ್ಷಣದಲ್ಲಿ ನೆನಪಾಗಿದ್ದು ರಘು ಹೇಳಿಕೊಟ್ಟ readymade ಉತ್ತರ. "ಪ್ರೀತಿ ಎನ್ನುವುದು ಹಾಗೆ ಅಳೆಯಲು, ಚೂರು ಮಾಡಿ ಇಬ್ಬರಿಗೂ ಕೊಡಲು ಬಾರದ್ದು. ಅದನ್ನು ಇಡಿಯಾಗಿಯೇ ಇಬ್ಬರಿಗೂ ಕೊಡುತ್ತೇನೆ." (ಇದು Indian Army ಯ officer’s ಪರೀಕ್ಷೆಯ psychological test ನಲ್ಲಿ ಖಾಯಂ ಕೇಳುವ ಪ್ರಶ್ನೆಯಂತೆ; ಅಭ್ಯರ್ಥಿ ಒಂದು ವೇಳೆ select ಆದರೆ ತನ್ನ ಕೆಳಗಿನ ಸೈನಿಕರ ನಡುವೆ ತಾರತಮ್ಯ ತೋರುತ್ತಾನೋ ಇಲ್ಲವೊ ಎಂದು ಅಳೆಯಲು! ಹಾಗೆಯೇ ಅವನಿಗೂ ಕೇಳಿದ್ದರಂತೆ. ಇದೇ ಉತ್ತರವನ್ನೂ ಕೊಟ್ಟಿದ್ದನಂತೆ!).

ರಾಜೇಶನಿಗೆ ಸಮಾಧಾನವಾದಂತೆ ಕಾಣಲಿಲ್ಲ. ಮತ್ತೆ ಕೇಳಿದ, "ಇಲ್ಲ, ನೀನು ಸರಿಯಾದ ಉತ್ತರ ಹೇಳಲೇ ಬೇಕು." ನಾನೆಂದೆ, "ಅರೆ ಇದೆಂತ ಪ್ರಶ್ನೆ? ಇಬ್ಬರ ಮೇಲೂ ಅಷ್ಟೇ ಪ್ರೀತಿ." ಅವನು ಅದೇ ಉತ್ತರಕ್ಕಾಗಿ ಕಾಯುತ್ತಿದ್ದವನಂತೆ ತಕ್ಷಣ ಹೇಳಿದ, "ಎಷ್ಟೋ ವರ್ಷ ಒಟ್ಟಿಗೆ ಬದುಕಿದ ತಮ್ಮನೂ ಮತ್ತು ನಿನ್ನೆ ಮೊನ್ನೆ ಬಂದ ಗಂಡನೂ ಹೇಗೆ ಅಷ್ಟೇ ಪ್ರೀತಿಗೆ ಪಾತ್ರರಾಗುತ್ತಾರೆ? ಇಪ್ಪತೈದು ವರ್ಷ ಒಟ್ಟಿಗಿದ್ದ ತಮ್ಮನಿಗಿಂತ ಎರಡು ವರ್ಷ ನೋಡಿದ ಗಂಡನೇ ಹೆಚ್ಚಾ?" ಅರೆ ಹೌದಲ್ವಾ?!! ನಾನು ಅರೆಕ್ಷಣ ದಿಗಿಲುಗೊಂದೆ. ಅವನು ಹೇಳುತ್ತಿರುವುದು ಒಂದು ಲೆಕ್ಕದಲ್ಲಿ ನಿಜವೆನಿಸಿತು. ಒಂದು ಕ್ಷಣ ಬಿಟ್ಟು ಸುಧಾರಿಸಿಕೊಂಡು ಅವನಿಗೆ ಹೇಳಿದೆ, "ನೋಡು, ಇದರಲ್ಲಿ ಯಾರು ಹೆಚ್ಚೂ ಅಲ್ಲ, ಯಾರು ಕಡಿಮೆಯೂ ಅಲ್ಲ. ರಘುನ ಜೊತೆ ನಾನು ಇಪ್ಪತ್ತೈದು ವರ್ಷಗಳು ಬೆಳೆದಿದ್ದೇನೆ. ಆದರೆ ರಾಜೀವನ ಜೊತೆ ಮುಂದೆ ಇಪ್ಪತ್ತೈದು ವರ್ಷಗಳ ಕಾಲ ಬೆಳೆಯಲಿದ್ದೇನೆ. ರಘು ಕೂಡ ನಾಳೆ ಅವನ ಹೆಂಡತಿ ಬಂದ ಮೇಲೆ ನನ್ನನ್ನು ಪ್ರೀತಿಸಿದಷ್ಟೇ ಅವಳನ್ನೂ ಪ್ರೀತಿಸುತ್ತಾನೆ, ಪ್ರೀತಿಸಬೇಕು. ಇದು ಹೀಗೆಯೇ ನಡೆದರೆ ಮಾತ್ರ ಬದುಕಿಗೊಂದು ಅರ್ಥವಿರುತ್ತದೆ. ನಾನು ಅವನ ಬಗ್ಗೆ possessive ಆಗಲಾರೆ. ನಾನು possessive ಆದಷ್ಟೂ ಅದು ನಮ್ಮಿಬ್ಬರ ಸಂಬಂಧಕ್ಕೂ ಹಾಳು. ಅತಿಯಾದ possessiveness ಯಾವತ್ತಿದ್ದರೂ ಸಂಬಂಧವನ್ನು ಕೆಡಿಸುತ್ತದೆ. ಅವನಿಗೂ ಅವನದೇ ಆದ ಜೀವನವಿರಬೇಕು. ಅದರಲ್ಲಿ ನನಗೊಂದು ಜಾಗ ಇದ್ದರೆ ಸಾಕು. ಅಂತೆಯೇ ನನಗೂ ನನ್ನದೇ ಆದ ಜೀವನವಿದೆ, ಅದರಲ್ಲಿ ಅವನಿಗೆ ಜಾಗ ಎಂದೂ ಇದ್ದೇ ಇದೆ. ಒಬ್ಬರನ್ನೊಬ್ಬರು ಮರೆತುಬಿಡುತ್ತೇವೆ ಎಂದಲ್ಲ, ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿರುತ್ತೇವೆ ಅಷ್ಟೇ." ಮುಂದೆ ಅವನೂ ಮಾತನಾಡಲಿಲ್ಲ, ಅಂತೆಯೇ ನಾನೂ ಕೂಡ. ಬಹುಶ ಇಬ್ಬರೂ ಯೋಚಿಸುತ್ತಿದ್ದೆವು... ರಾಜೇಶನ ಪ್ರಶ್ನೆಯ ಬಗ್ಗೆ ನಾನು ಯೋಚಿಸುತ್ತಿದ್ದರೆ ಅವನು ನನ್ನ ಉತ್ತರದ ಬಗ್ಗೆ ಯೋಚಿಸುತ್ತಿದ್ದ.

ಬಿಸಿಯ ಹೊರತೂ… (ಉತ್ತರ ಕನ್ನಡದ ಗಾದೆ – 175)

ಬಿಸಿಯ ಹೊರತೂ ಬೆಣ್ಣೆ ಕರಗುವುದಿಲ್ಲ.

ಬೆಣ್ಣೆಯನ್ನು ಅದರ ಪಾಡಿಗೆ ಅದನ್ನು ಇಟ್ಟರೆ ಕರಗುವುದಿಲ್ಲ. ಆದರೆ ಬಿಸಿ ತಟ್ಟಿದಾಗ ಮಾತ್ರ ತಟ್ಟನೆ ಕರಗುತ್ತದೆ. ಅಂತೆಯೇ, ಕೆಲವೆಡೆ ನಾವು ಸುಮ್ಮನೆ ಇದ್ದರೆ ಕೆಲಸವಾಗುವುದಿಲ್ಲ, ಆದರೆ ಸ್ವಲ್ಪ ಬಾಯಿ ಜೋರು ಮಾಡಿದಾಗ ಅಥವಾ ಒತ್ತಡ ಹೇರಿದಾಗ ಮಾತ್ರ ಕೆಲಸ ಆಗುತ್ತದೆ ಎಂಬ ಸಂದರ್ಭದಲ್ಲಿ ಬಳಸಬಹುದು.

February 26, 2008

ಹೆದ್ದಿನಿಸು ಹಿತ್ತಲಿಗೆ… (ಉತ್ತರ ಕನ್ನಡದ ಗಾದೆ – 174)

ಹೆದ್ದಿನಿಸು ಹಿತ್ತಲಿಗೆ ಬಳಿ ಎಣ್ಣೆ ಬಚ್ಚಲಿಗೆ.

ಹೆದ್ದಿನಿಸು ಅಂದರೆ ಅಗತ್ಯಕ್ಕಿಂತ ಹೆಚ್ಚು ತಿಂದ ತಿಂಡಿ ತಿನಿಸು. ಅಗತ್ಯಕ್ಕಿಂತ ಜಾಸ್ತಿ ತಿಂದರೆ ಅದರಿಂದ ದೇಹಕ್ಕೆ ಪ್ರಯೋಜನವಿಲ್ಲ. ಅದು ವಿಸರ್ಜಿಸಿ ಹೋಗುತ್ತದೆ. ಅಂತೆಯೇ ತಲೆಯಿಂದ ಬಳಿದು ಹೋಗುವಷ್ಟು ಎಣ್ಣೆ ಹಾಕಿಕೊಂಡರೆ ಅದರಿಂದಲೂ ಪ್ರಯೋಜನವಿಲ್ಲ ಸ್ನಾನ ಮಾಡುವಾಗ ಅದು ಬಚ್ಚಲು ಮನೆಯಲ್ಲಿ ಹರಿದು ಹೋಗುತ್ತದೆ. ಯಾರಾದರೂ ಅತಿ ಎನಿಸುವಷ್ಟು ತಿನ್ನುವವರು ಅಥವಾ ದೇಹದ ಕಾಳಜಿಯ ನೆಪದಲ್ಲಿ ಅಗತ್ಯಕ್ಕಿಂತ ಜಾಸ್ತಿ ವಸ್ತುಗಳನ್ನು ಉಪಯೋಗಿಸುವವರ ಕುರಿತು ಇದನ್ನು ಹೇಳಬಹುದು.

February 25, 2008

ಹಣ ಇದ್ದರೂ … (ಉತ್ತರ ಕನ್ನಡದ ಗಾದೆ – 173)

ಹಣ ಇದ್ದರೂ ಋಣ ಇದ್ದಷ್ಟೇ ತಿನ್ನುತ್ತಾರೆ.

ಶ್ರೀಮಂತನಾದ ಮಾತ್ರಕ್ಕೆ ಜಾಸ್ತಿ ದಿನ ಬದುಕುತ್ತಾನೆ ಎಂಬುದು ಸುಳ್ಳು. ಅವನ ಬಳಿ ಎಷ್ಟು ಹಣವಿದ್ದರೂ ಋಣವಿದ್ದಷ್ಟೇ ಅನುಭವಿಸುತ್ತಾನೆ. ಯಾರಾದರೂ ಕೆಟ್ಟ ದಾರಿಯಿಂದ ಹಣ ಸಂಪಾದನೆ ಮಾಡಿ ಶ್ರೀಮಂತರಾಗಿ ಏನೋ ಕಾರಣದಿಂದ ಬೇಗ ಸತ್ತು ಹೋದರೆ ಅಥವಾ ಜೈಲು ಸೇರಿದರೆ ಈ ಮಾತು ಕೇಳಿ ಬರುತ್ತದೆ.

February 21, 2008

ಹುಚ್ಚು ಬಿಟ್ಟ … (ಉತ್ತರ ಕನ್ನಡದ ಗಾದೆ – 172)

ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ; ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.

ಒಬ್ಬನಿಗೆ ಮದುವೆಯಾಗಬೇಕೆಂಬ ಹುಚ್ಚು. ಆದರೆ ಅವನು ಹುಚ್ಚ ಎಂದು ಯಾರೂ ಹೆಣ್ಣು ಕೊಡುವವರಿಲ್ಲ. ಆದರೆ ಮದುವೆಯಾದ ಹೊರತೂ ಅವನಿಗೆ ಹುಚ್ಚು ಬಿಡುವುದಿಲ್ಲ. ಯಾವುದಾದರೂ ಎರಡು ಕೆಲಸಗಳು interdependnet ಇದ್ದು ಒಂದು ಕೆಲಸ ಆದ ಹೊರತೂ ಇನ್ನೊಂದು ಆಗುವುದಿಲ್ಲ ಎಂಬ ಸಂದರ್ಭದಲ್ಲಿ ಬಳಸಿ.

February 20, 2008

ಊರ ಉಪಕಾರಕ್ಕೆ … (ಉತ್ತರ ಕನ್ನಡದ ಗಾದೆ – 171)

ಊರ ಉಪಕಾರಕ್ಕೆ ಹೋಗಿ ಮುಲ್ಲಾ ಸೊರಗಿದ್ದ.

ಮುಲ್ಲಾ ಇಡೀ ಊರಿಗೆ ಉಪಕಾರ ಮಾಡಲು ಹೋಗಿ ಸೊರಗಿದರೂ ಅವನನ್ನು ಹೇಳುವವರು, ಕೆಳುವಾವರು ಯಾರೂ ಇರುವುದಿಲ್ಲ. ಅಂತೆಯೇ ಮಾಡಿದ ಉಪಕಾರವನ್ನು ಇನ್ನೊಬ್ಬರು ನೆನಪಿನಲ್ಲಿಟ್ಟುಕೊಳ್ಳದಿದ್ದಾಗ ಈ ಮಾತನ್ನು ಹೇಳಬಹುದು.
ಇದರಂತೆಯೇ ಇರುವ ಮಾತನ್ನು ಹಿಂದೊಮ್ಮೆ ಹಾಕಿದ್ದೇನೆ.

February 19, 2008

ಫ್ಯೂಜಿ ಪರ್ವತ

ನಮ್ಮ ಮೆನೆಯ ಹಿಂದುಗಡೆ balcony ಯಲ್ಲಿ ನಿಂತು ಪಶ್ಚಿಮ ದಿಕ್ಕಿನೆಡೆ ನೋಡಿದರೆ ಫ್ಯೂಜಿ ಪರ್ವತ ಮನೋಹರವಾಗಿ ಕಾಣಿಸುತ್ತದೆ. ಚಳಿಗಾಲವಾದ್ದರಿಂದ ಈಗ ಮೈತುಂಬಾ ಹಿಮದ ಹೊದಿಕೆಯನ್ನು ಹೊದ್ದುಕೊಂಡ ಫ್ಯೂಜಿ ಬೆಳಗಿನ ಸಮಯದಲ್ಲಿ ಪೂರ್ತಿ ಬೆಳ್ಳಗೆ ಕಾಣುತ್ತದೆ.















ಸಂಜೆಯ ಹೊತ್ತಿಗೆ ಸೂರ್ಯ ಅದಕ್ಕೆ ತಾಕಿಕೊಂಡೇ ಮುಳುಗುತ್ತಾನೆ ಎನ್ನುವಂತಿರುತ್ತದೆ. ಆ ಸಮಯದಲ್ಲಿ ಸುತ್ತಮುತ್ತಲೂ ಕೇಸರಿ- ಹಳದಿ ಬಣ್ಣದ ಹಿನ್ನೆಲೆಯಲ್ಲಿ ಫ್ಯೂಜಿ ದಟ್ಟ ಬೂದು ಬಣ್ಣದಲ್ಲಿ ಕಂಡು ಕಣ್ಣಿಗೆ ಮುದ ಕೊಡುತ್ತದೆ. ಆದರೆ ಕೆಲವು electric line ಗಳು ಅಡ್ಡ ಬಂದು ನೋಡುಗರ ಕಣ್ಣಿಗೂ, ಪರ್ವತಕ್ಕೂ ನಡುವೆ ಬೇಲಿ ಕಟ್ಟುತ್ತವೆ.















ಅಸಾಧ್ಯ ಚಳಿ ಇರುವ ಕಾರಣ ಅದನ್ನು ವರ್ಷದ ಎಲ್ಲ ಕಾಲದಲ್ಲಿಯೂ ಹತ್ತಲು ಅನುಮತಿ ಇರುವುದಿಲ್ಲ. ನಡು ಬೇಸಿಗೆಯಲ್ಲಿ ಕೆಲವು ದಿನಗಳು ಮಾತ್ರ ಚಾರಣಿಗರಿಗೆ ಅನುಮತಿ ಇರುತ್ತದೆ. ಅಂತಹ ದಿನಗಳಲ್ಲಿ ಆ ಪರ್ವತವನ್ನು ಲಕ್ಷಾಂತರ ಜನರು ಏರಿರುತ್ತಾರೆ. ಆ ಪರ್ವತವನ್ನು ದೇವತೆ ಎಂದು ತಿಳಿಯುವ ಜಪಾನಿಯರಲ್ಲಿ ಕೆಲವರು ತಮ್ಮ ಜೀವನದಲ್ಲಿ ಅದನ್ನು ಹಲವಾರು ಬಾರಿ ಏರಿರುತ್ತಾರೆ. 3,776 ಮೀಟರುಗಳನ್ನು ಕ್ರಮಿಸಿದ ಚಾರಣಿಗರು ರಾತ್ರಿ ಅಲ್ಲಿಯೇ ಉಳಿದು ಮರುದಿನದ ಸೂರ್ಯೋದಯವನ್ನು ನೋಡಿಕೊಂಡು ಹಿಂದಿರುಗುತ್ತಾರೆ. ಸೂರ್ಯೋದಯದ ಸಮಯದಲ್ಲಿ ಇಡಿಯ ಪರ್ವತವೂ ತಾಮ್ರದ ಬಣ್ಣದಲ್ಲಿ ಹೊಳೆಯುತ್ತದೆಯಂತೆ.






ಚಾರಣದ ಪ್ರಾರಂಭದಲ್ಲಿ.




ಫ್ಯೂಜಿ ಪರ್ವತದ ಮೇಲೆ ಸೂರ್ಯಾಸ್ತದ ನಂತರದ ರಾತ್ರಿ.




ಫ್ಯೂಜಿ ಪರ್ವತದಿಂದ ಕಾಣುವ ಸೂರ್ಯೋದಯ.





ಸೂರ್ಯೋದಯದ ಸಮಯದಲ್ಲಿ ಫ್ಯೂಜಿ ಪರ್ವತ.




ಜ್ವಾಲಾಮುಖಿ ಸಿಡಿದಾಗ ಉಂಟಾದ ಬಿರುಕುಗಳು.





ಒಂದು ದಿನಕ್ಕೆ ಪರ್ವತವನ್ನು ಏರಲು ಬರುವ ಜನಸಾಗರ!!

ಆನು, ಮಾಣಿ … (ಉತ್ತರ ಕನ್ನಡದ ಗಾದೆ – 170)

ಆನು, ಮಾಣಿ, ಗೋವಿಂದ.

ಇದನ್ನು ಗಾದೆ ಎನ್ನುವುದಕ್ಕಿಂತ ನುಡಿಗಟ್ಟು ಎನ್ನಬಹುದು. ಇದರಲ್ಲಿ ನೋಡಲು ಮೂರು ಜನರು ಸೇರಿರುವಂತೆ ಕಂಡರೂ ನಿಜವಾಗಿ ಇರುವವನು ಒಬ್ಬನೇ. ಆನು (ನಾನು) ಅವನೇ ಮಾಣಿ ಮತ್ತು ಗೋವಿಂದ ಎನ್ನುವ ಹೆಸರು ಅವನದು. ತನಗೆ ತಾನು ಹೇಳಿಕೊಂಡು ಮೂರು ಜನರಿರುವ ಕಲ್ಪನೆಯನ್ನು ಕೊಡುತ್ತಿದ್ದಾನೆ. ಯಾವುದಾದರೂ ಕೆಲಸವನ್ನು ಒಬ್ಬನೇ ಮಾಡಬೇಕು ಇನ್ಯಾರೂ ಸಹಾಯಕ್ಕೂ ಸಿಗುವುದಿಲ್ಲ ಎನ್ನುವಂಥ ಸಂದರ್ಭದಲ್ಲಿ ಇದನ್ನು ನಮಗೆ ನಾವೇ ಹೇಳಿಕೊಳ್ಳಬಹುದು. ಮನೆಯಲ್ಲಿ ಒಬ್ಬರೇ ಇದಾಗ ಕೂಡ ಹೇಳಿಕೊಳ್ಳುವ ರೂಢಿ ಇದೆ.

February 18, 2008

ಆದಷ್ಟು ಆಯಿತು … (ಉತ್ತರ ಕನ್ನಡದ ಗಾದೆ – 169)

ಆದಷ್ಟು ಆಯಿತು ಮಾದೇವ ಭಟ್ಟರ ಪುರಾಣ.

ಸುಮ್ಮನೆ ಕುಳಿತಿರುವ ಬದಲು ಮಾದೇವ (ಮಹಾದೇವ) ಭಟ್ಟರು ಪುರಾಣವನ್ನು ಅಷ್ಟಷ್ಟಾಗಿ ಓದಿ ಮುಗಿಸಿದ್ದರು. ಇಡೀ ಪುರಾಣವನ್ನು ಒಮ್ಮೆಲೇ ಓದುತ್ತೆನೆಂದು ಕುಳಿತರೆ ಆಗುವ ಕೆಲಸವಲ್ಲ. ಖಾಲಿ ಕುಳಿತುಕೊಳ್ಳದೆ ಸಮಯ ಸಿಕ್ಕಾಗಲೆಲ್ಲ ಸ್ವಲ್ಪ ಕೆಲಸ ಮಾಡಿಕೊಂಡಿದ್ದರ ಬಗ್ಗೆ ಹೇಳಬಹುದು. ಪೂರ್ತಿ ಕೆಲಸವನ್ನು ಒಮ್ಮೆಲೇ ಮಾಡಿ ಮುಗಿಸಲು ಸಾಧ್ಯವಿಲ್ಲದಿದ್ದರೂ ಚೂರು ಚೂರಾಗಿ ಮಾಡಿ ಮುಗಿಸಬಹುದು; ಮಾದೇವ ಭಟ್ಟರು ಪುರಾಣವನ್ನು ಓದಿ ಮುಗಿಸಿದಂತೆ.

February 15, 2008

ಹುಚ್ಚು ಮುಂಡೆಯ … (ಉತ್ತರ ಕನ್ನಡದ ಗಾದೆ – 166, 167 ಮತ್ತು 168)

ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ.

ಇದನ್ನು 'ಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ' ಎಂದೂ ಕೂಡ ಹೇಳುತ್ತಾರೆ. ಹೇಗಿದ್ದರೂ ಹೇಳುವವರು, ಕೇಳುವವರು ಇಲ್ಲದ ಮದುವೆ. ಅಲ್ಲಿ ಎಲ್ಲರೂ ತಮ್ಮ ತಮ್ಮ ಲಾಭವನ್ನು ನೋಡಿಕೊಳ್ಳುವವರೇ. ಸಿಕ್ಕ ಅವಕಾಶವನ್ನು ಕೈತಪ್ಪಿ ಹೋಗದಂತೆ ನೋಡಿಕೊಂಡು ಸಿಕ್ಕಷ್ಟು ದೋಚಿಕೊಳ್ಳುವವರ ಬಗೆಗಿನ ಮಾತು ಇದು. ಇದರ ಬದಲು ನೀವು ಉಪಯೋಗಿಸಬಹುದಾದಂಥವು- ಓಡಿ ಹೋಗುತ್ತಿರುವವನನ್ನು ಕಿತ್ತು ಕೊಂಡಷ್ಟೇ ಬಂತು ಮತ್ತು ಬಂದಷ್ಟೇ ಬಂತು ಬರಡೆಮ್ಮೆಯ ಹಾಲು.

February 14, 2008

ಆಳು ನೋಡಿದರೆ … (ಉತ್ತರ ಕನ್ನಡದ ಗಾದೆ – 163, 164 ಮತ್ತು 165)

ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡಿದುಕೊಳ್ಳುವ ಹಾಗಿದೆ.

ಮನೆಯಲ್ಲಿ ಊಟಕ್ಕೆ ಗತಿಯಿಲ್ಲದಿದ್ದರೂ ಕೂಡ ಮನೆಯ ಆಳಿಗೂ ಅಲಂಕಾರ ಮಾಡಿ ಇಟ್ಟಿದ್ದಾರೆ. ಹೊರಗಡೆಯಿಂದ ಆಳೂ ಕೂಡ ಚೆನ್ನಾಗಿಯೇ ಕಾಣುತ್ತಾನೆ. ಆದರೆ ಒಳಗಡೆಯ ಕಥೆಯೇ ಬೇರೆ. ಅಗತ್ಯ ಇದ್ದದ್ದನ್ನು ಬಿಟ್ಟು ಅನಗತ್ಯವಾದುದಕ್ಕೆ ಜಾಸ್ತಿ ಖರ್ಚು ಮಾಡಿಕೊಳ್ಳುವ ಜನರ ಬಗೆಗಿನ ಮಾತು ಇದು. ಅಥವಾ ಹೊರಗಡೆಯಿಂದ ಸ್ಥಿಥಿವಂತರಂತೆ ಕಂಡುಬಂದು ಒಳಗಡೆ ಕಷ್ಟದಲ್ಲಿರುವವರ ಬಗ್ಗೆಯೂ ಹೇಳಬಹುದು. ಇದೆ ರೀತಿಯ ಇನ್ನೊಂದು ಗಾದೆ- ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
ಇನ್ನೂ ಸ್ವಲ್ಪ ಬೇರೆಯ ರೀತಿಯಲ್ಲಿ ಬಳಸಬಹುದಾದರೆ, ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.

February 13, 2008

ಸ್ವಾರ್ಥ

ಹೀಗೊಂದು ಕಥೆ...ನೀವು ಕೇಳಿದ್ದಿರಲೂ ಬಹುದು...
'ಮನುಷ್ಯ ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥ ಸಿದ್ಧಿಯಿಲ್ಲದೆ ಯಾವ ಮನುಷ್ಯನೂ ಯಾವ ಕೆಲಸವನ್ನೂ ಮಾಡಲಾರ.' ಹೀಗೆಂದು ಹೇಳಿದವರು ಅಮೇರಿಕಾದ ಹಿಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್. ಅವರು ತಮ್ಮ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ಇದನ್ನು ಹೇಳಿದರು. ಸ್ನೇಹಿತ ಸುತರಾಂ ಒಪ್ಪಲಿಲ್ಲ. ಸಾಧ್ಯವೇ ಇಲ್ಲ ಎಂದು ತಳ್ಳಿ ಹಾಕಿದರು.

ಒಂದು ಭಾನುವಾರದಂದು ಇಬ್ಬರೂ ಕಾರಿನಲ್ಲಿ ಕುಳಿತು ಹೊರಟರು. ಹಳ್ಳಿಗೆ ಹೊರಟಾಗ ನಡುವೆ ದಾರಿಯಲ್ಲಿ ಅಬ್ರಹಾಂ ಲಿಂಕನ್ ಅವರು ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದರು. ಏಕೆಂದರೆ ಅವರು ಮುಳ್ಳಿನ ಬೇಲಿಯಲ್ಲಿ ಒಂದು ಹಂದಿಯ ಮರಿ ಸಿಕ್ಕಿ ಬಿದ್ದು ತಪ್ಪಿಸಿಕೊಳ್ಳಲು ಬಾರದೆ ಒದ್ದಾಡುತ್ತಿರುವುದನ್ನು ಕಂಡಿದ್ದರು. ಕಾರಿನಿಂದ ಇಳಿದು ಹೋಗಿ ಅವರು ಆ ಹಂದಿಯ ಮರಿಯನ್ನು ಮುಳ್ಳು ಬೇಲಿಯಿಂದ ತಪ್ಪಿಸಿ ಬಿಟ್ಟು ಬಂದರು.


ಅವರ ಸ್ನೇಹಿತ ಕೇಳಿದರು, "ನೀವು ಈಗ ಮಾಡಿದ ಕೆಲಸದಲ್ಲಿ ನನಗೇನೂ ಸ್ವಾರ್ಥ ಕಾಣಲಿಲ್ಲ." ಅದಕ್ಕೆ ಅಬ್ರಹಾಂ ಲಿಂಕನ್ ಹೇಳಿದ್ದು, "ಆ ಕೆಲಸದಲ್ಲಿಯೂ ಕೂಡ ಸ್ವಾರ್ಥವೇ ಇತ್ತು. ಹಂದಿಯ ಮರಿಯನ್ನು ನೋಡಿಕೊಂಡು ಹಾಗೆಯೇ ಬಿಟ್ಟು ಮುಂದೆ ಹೋಗಿದ್ದರೆ ನನಗೆ ರಾತ್ರಿಯಿಡೀ ನಿದ್ದೆ ಬರುತ್ತಿರಲಿಲ್ಲ!"

ಎಷ್ಟು ನಿಜ ಅಲ್ಲವೇ? ನಾವೂ ಕೂಡ ಸ್ವಾರ್ಥ ಸಾಧನೆಗಾಗಿಯೇ ಏನೆಲ್ಲಾ ಮಾಡುತ್ತಿರುತ್ತೇವೆ; ಕೆಲವೊಂದು ನಮಗೆ ಅರಿವಿರುತ್ತದೆ, ಇನ್ನು ಕೆಲವು ನಮಗೆ ಅರಿವಿಲ್ಲದಂತೆಯೇ.

ಹೊಗಳಿದ ಎಮ್ಮೆ … (ಉತ್ತರ ಕನ್ನಡದ ಗಾದೆ – 161 ಮತ್ತು 162)

ಹೊಗಳಿದ ಎಮ್ಮೆ ಹೋರಿಗರು ಹಾಕಿತ್ತು.

ಈ ಗಾದೆ ನಿಜವಾಗಿ ‘ಹೊಗಳಿಸಿಕೊಂಡ ಎಮ್ಮೆ ಹೋರಿಗರು ಹಾಕಿತ್ತು’ ಎಂದು ಆಗಬೇಕು. ಆದರೆ ರೂಢಿಯಲ್ಲಿ 'ಹೊಗಳಿದ ಎಮ್ಮೆ...' ಅಂತಲೇ ಇದೆ. ಆ ಎಮ್ಮೆ ಚೆನ್ನಾಗಿದೆ ಎಂದು ಹೋಗಳಿದರೆ ಅದು ಹೋರಿಗರುವನ್ನು ಹಾಕಿತ್ತಂತೆ. ಹೋರಿಗರು ಎಂದರೆ ಗಂಡು ಕರು. ಅದು ಹೆಣ್ಣು ಕರುವಿನಷ್ಟು ಉಪಯೋಗಕ್ಕೆ ಬರುವುದಿಲ್ಲ. ಯಾರೋ ಒಬ್ಬರು ಯಾವುದೋ ಒಂದು ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಎಂದು ಹೊಗಳಿದ ಮರು ಘಳಿಗೆಯಲ್ಲೇ ಅವರು ತಪ್ಪು ಮಾಡಿದಾಗ ಈ ಮಾತನ್ನು ಹೇಳುತ್ತಾರೆ. ಇದರ ಬದಲು ನೀವು ಹೊಗಳಿದ ಎಮ್ಮೆಯ ಮಜ್ಜಿಗೆ ಹುಳಿ ನಾರಿತ್ತು ಎಂದೂ ಕೂಡ ಉಪಯೋಗಿಸಬಹುದು.

February 12, 2008

ಕಂಡಿದ್ದು ಹೇಳೋ … (ಉತ್ತರ ಕನ್ನಡದ ಗಾದೆ – 158, 159 ಮತ್ತು 160)

ಕಂಡಿದ್ದು ಹೇಳೋ ಪಾರುಪತ್ಯಗಾರ ನನ್ನ ಮಠದಲ್ಲಿರಬೇಡ.

ಪಾರುಪತ್ಯಗಾರ ಎಂದರೆ ವ್ಯವಸ್ಥೆಯನ್ನೂ, ಆಗು ಹೋಗುಗಳನ್ನೂ ನೋಡಿಕೊಳ್ಳುವ ವ್ಯಕ್ತಿ. ನೀವು ಬೇಕಿದ್ದಲ್ಲಿ manager ಎಂದು ಕರೆಯಬಹುದು. ಕಂಡಿದ್ದನ್ನು ನಿಷ್ಠುರವಾಗಿ ಇದ್ದ ಹಾಗೆಯೇ ಹೇಳಿಬಿಡುವ ಪಾರುಪಾತ್ಯಾಗಾರನನ್ನು ಕಂಡರೆ ಎಲ್ಲರಿಗೂ ಅಸಹನೆ. ಮಠದ ಗುರುಗಳಿಗೂ ಕೂಡ. ಹಾಗಾಗಿ ಅವನನ್ನು ಮಠದಿಂದ ಓಡಿಸಿಬಿಡುತ್ತಾರೆ. ಸತ್ಯ ಮತ್ತು ನಿಷ್ಠುರ ವಾದಿಗಳ ಬಗ್ಗೆ ಜನರು ಅಸಹನೆ ತೋರಿದಾಗ ಈ ಗಾದೆಯನ್ನು ಹೇಳುತ್ತಾರೆ. ನಿಮಗೂ ಗೊತ್ತಲ್ಲ- ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದ ಮತ್ತು ಕಂಡದ್ದನ್ನು ಹೇಳಿದರೆ ಕೆಂಡದಂತಾ ಕೋಪ.

February 11, 2008

ಹುತ್ತವನ್ನು ನೋಡಿ … (ಉತ್ತರ ಕನ್ನಡದ ಗಾದೆ – 156 ಮತ್ತು 157)

ಹುತ್ತವನ್ನು ನೋಡಿ ಹಾವನ್ನು ಅಳೆಯಬಾರದು.

ಹಾವಿನ ಗಾತ್ರ ಅಥವಾ ವಿಷ ಹುತ್ತದ ಗಾತ್ರವನ್ನು ಅವಲಂಬಿಸಿ ಇರುವುದಿಲ್ಲ. ಹುತ್ತ ಸಣ್ಣದಿದ್ದರೂ ಅದರೊಳಗಿರುವ ಹಾವು ದೊಡ್ಡದಿರಬಹುದು ಅಥವಾ ಹುತ್ತ ನೋಡಲು ದೊಡ್ಡದಾಗಿ ಕಂಡರೂ ಹಾವು ಸಣ್ಣದಿರಬಹುದು. ಒಬ್ಬ ಮನುಷ್ಯನ ಗಾತ್ರವನ್ನು ನೋಡಿ ಅವನ ಸಾಮರ್ಥ್ಯ, ಬುದ್ಧಿಶಕ್ತಿಯನ್ನು ಅಳೆಯಬಾರದು
ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಇನ್ನೊ ಸರಿಯಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿಯ ಬಾಹ್ಯ ಇರುವಿಕೆಯನ್ನು ನೋಡಿ ಅವನನ್ನು ಅಳೆಯಬಾರದು, ಆಂತರ್ಯದಲ್ಲಿ ಅವನು ಬೇರೆಯೇ ಆಗಿರಬಹುದು. ಚೆನ್ನಾಗಿ ಮಾತನಾಡುವವರೆಲ್ಲಾ ಒಳ್ಳೆಯವರು ಎನ್ನಲು ಬರುವುದಿಲ್ಲ ಅಲ್ಲವೇ? ಸಾಮಾನ್ಯವಾಗಿ ಎಲ್ಲರೂ ಬಳಸುವುದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಆದರೆ ಮೇಲೆ ಹೇಳಿದ ಗಾದೆ ಅದಕ್ಕಿಂತ ವಿಭಿನ್ನವಾದುದು. ಭಿನ್ನತೆ ಎಲ್ಲಿ ಎಂದರೆ, ಮೂರ್ತಿ ಚಿಕ್ಕದಾದರೂ.... ಗಾದೆಯನ್ನು ಒಳ್ಳೆಯ ಗುಣಗಳನ್ನು ಹೇಳುವಾಗ ಉಪಯೋಗಿಸಿದರೆ, ಹುತ್ತವನ್ನು.... ಗಾದೆಯನ್ನು ಕೆಟ್ಟ ವ್ಯಕ್ತಿಯಿಂದ ಮೋಸ ಹೋಗದಿರು ಎನ್ನುವಾಗ, ಅಥವಾ ಅನಿಶ್ಚಿತವಾದುದನ್ನು ಹೇಳುವಾಗ ಉಪಯೋಗಿಸುತ್ತಾರೆ.

February 8, 2008

ಶಾಂತಲಾಳೊಂದಿಗೆ ಕೆಲವು ಕ್ಷಣಗಳು…

ಮೊನ್ನೆ gmail ನಲ್ಲಿ online ಇದ್ದೆ. ಶಾಂತಲಾ ping ಮಾಡಿದಳು. ನಾವಿಬ್ಬರೂ ಆಗಾಗ ಮಾತನಾಡುತ್ತಲೇ ಇರುತ್ತೇವೆ. ಅವಳು ನನ್ನ ಅತ್ಯಂತ ಆಪ್ತ ಸ್ನೇಹಿತೆಯರಲ್ಲಿ ಒಬ್ಬಳು. ನಾವಿಬ್ಬರು ಮಾತನಾಡತೊಡಗಿದರೆ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತದೆ. ಮೊದಲು ಹವಾಮಾನ ಹೇಗಿದೆ? ಚಳಿ ಎಷ್ಟಿದೆ? ಏನು ಅಡಿಗೆ? ಎಂಬೆಲ್ಲಾ ಮುಗಿದ ಮೇಲೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯತೊಡಗುತ್ತೇವೆ.
ಮಾತು ಕತೆ ಹೀಗಿತ್ತು ನೋಡಿ; ಮೊದಲಿನ hi ಕೊನೆಯಲ್ಲಿನ bye ಗಳನ್ನೆಲ್ಲ ಬಿಟ್ಟಿದ್ದೇನೆ.
.....
.....
.....
ನಾನು: ಮೊನ್ನೆ ಇಲ್ಲಿ snowfall ಆತು. ಫೋಟೋ link ಕಳಿಸ್ತಿ ತಡಿ. ಫೋಟೋದಲ್ಲಿ ಯನ್ನ ನೋಡು. ಎಷ್ಟು ದಪ್ಪ ಆಜಿ ಹೇಳಿ. ಯನ್ನ ಜೀವಮಾನದ ಗುರಿ ಆಗಿತ್ತು ಅದು :)
ಶಾಂತಲಾ: ಹೌದೇ, ಚೊಲೋ ದಪ್ಪ ಆಜೆ. ಆನೂ ಈಗ ದಪ್ಪ ಆಜಿ.
ನಾನು: ಒಳ್ಳೇದು ತಗ ಹಂಗಾರೆ ಇಬ್ಬರಿಗೂ. ಧಾರವಾಡದಲ್ಲಿ ಓದಲ್ಲೆ ಇದ್ದಾಗಲಂತೂ ಇಬ್ಬರೂ ಬರಗಾಲದ ಹೆಣಗಳ ತರ ಕಾಣ್ತಿದ್ಯ. ಯಾವಾಗ ನೋಡಿದ್ರೂ ಆರಾಮು ಇರ್ತಿತ್ತಿಲ್ಲೆ.
ಶಾಂತಲಾ: ಊರಿಗೆ ಯಾವಾಗ ಹೋಗ್ತಾ ಇದ್ದೆ?
ನಾನು: March ನಲ್ಲಿ.

(ಇನ್ನು ಶಾಂತಲಾ form ಗೆ ಬಂದಳು ಎಂದು ಕಾಣಿಸುತ್ತದೆ)
ಶಾಂತಲಾ: ಸೀಮಕ್ಕ, ನಿನ್ನ ಹತ್ರ ಜಗಳ ಮಾಡವು ಹೇಳಿ ಮಾಡ್ಕ್ಯಂಜಿ.
ನಾನು: ಯಂತಕ್ಕೆ?
ಶಾಂತಲಾ: ಯಂಗೆ ನಿನ್ನ ಮೇಲೆ ಹೊಟ್ಟೆಕಿಚ್ಚು ಬರ್ತಾ ಇದ್ದು.
ನಾನು: ಅಯ್ಯೋ ಯಂತಕ್ಕೆ?
ಶಾಂತಲಾ: ನೀನು ರಾಜೀವ ಭಾವ ಒಳ್ಳೆಯವ ಹೇಳಿ ಬರಿತೆ ಹಂಗಾಗಿ. ಯನ್ನ ಗಂಡನೂ ಒಳ್ಳೆಯವ ಹೇಳಿ ಬರದ್ದೆ ಇಲ್ಲೇ.
ನಾನು: ಅಷ್ಟೆಯ? ಬರದ್ರೆ ಆತು ಬಿಡು. ರಾಜೇಂದ್ರ ಭಾವ ಒಳ್ಳೆಯವ ಹೇಳಿ ಯಂಗೆ ಗೊತ್ತಿದ್ದು. ಮತ್ತೆ ಹೊಟ್ಟೆಕಿಚ್ಚು ಯಂತಕ್ಕೆ ಬಿಡು.
ಶಾಂತಲಾ: ಹೂಂ... ಸುಖ ಹೆಚ್ಚಾಗಿ, ಕೆಲ್ಸ ಇಲ್ದೆ ಹೋದ್ರೆ ಮತ್ತೆಂತ ಆಗ್ತು ಹೇಳು? ಎಲ್ಲರ ಮೇಲೂ ಹೊಟ್ಟೆಕಿಚ್ಚು ಹುಟ್ತು.
(ಜೀವನದ philosophy ಯನ್ನೇ ಹೇಳಿಬಿಟ್ಟಿದ್ದಳು, ಅವಳಿಗೆ ಗೊತ್ತಿಲ್ಲದೆಯೇ!)

ನಾನು: ಸರಿ ಬಿಡು. ಬರಿತಿ. (ನಿಜವಾಗಿಯೂ ರಾಜೇಂದ್ರ ಒಳ್ಳೆಯ ವ್ಯಕ್ತಿ; ಆ ಬಗ್ಗೆ ಎರಡು ಮಾತಿಲ್ಲ)
ಶಾಂತಲಾ: ಬರದ್ದಿಲ್ಲೇ ಅಂದ್ರೆ ನೋಡು ಮತ್ತೆ. ಕಡಿಗೆ ನೋಡ್ಕ್ಯತ್ತಿ ನಿನ್ನ. ಎಲ್ಲಾರೂ ಒಬ್ನೇ ಸಿಗು.
ನಾನು: ಕೊಡ್ಲ ಮಟ್ಟಿ ಕಾನಲ್ಲಿ ಹೊಡಿತ್ಯ?
ಶಾಂತಲಾ: ನೀನು ದಪ್ಪ ಆಜೆ. ಯನ್ನತ್ರ ನಿನಗೆ ಹೊಡಿಯಲ್ಲೇ ಆಗ್ತಿಲ್ಲೆ. ಜನರನ್ನ ಕರಸ್ತಿ :)
ನಾನು: ದೇವಿಕೆರೆ gang ಕರಸ್ತ್ಯ? :)
ಶಾಂತಲಾ: ಅವು ಸಾಕಾ ನಿನಗೆ?
ನಾನು: ಕೋಟೆ ಕೆರೆ gang ಕೂಡ ಕರಶ್ಗ್ಯ ಬೇಕಾರೆ. ಇನ್ನೂ ಬೇಕಾರೆ ಹೀಪನಳ್ಳಿ gang.
ಶಾಂತಲಾ: ಹೀಪನಳ್ಳಿ gang ನವು ಬಂದ್ರೆ ಯಂಗೆ ಹೊಡಿತ :)
ನಾನು: ಯಂತಕ್ಕೆ?
ಶಾಂತಲಾ: ಯಂಗ್ಳ ಊರಿನ ಮಾಣಿ ಮದುವೆ ಆಜೆ. ಗನಾ ಮಾಣಿ ಆಗಿದ್ದ, ಕೆಟ್ಟು ಹೋದ ಹೇಳಿ :)




ಟಿಪ್ಪಣಿ: ಶಾಂತಲಾ, ನೀನು ಹೊಡಿತೆ, ಹೊಡಸ್ತೆ ಹೇಳಿ ಹೆದ್ರಿಕ್ಯಂದು ಬರದ್ನಿಲ್ಲೇ ಮತ್ತೆ... ಬರೆಯವ್ವು ಅನಿಸ್ತು ಬರದ್ದಿ :)

ಕಲ್ಲಪ್ಪ ಗುಂಡಪ್ಪರ … (ಉತ್ತರ ಕನ್ನಡದ ಗಾದೆ – 154 ಮತ್ತು 155)

ಕಲ್ಲಪ್ಪ ಗುಂಡಪ್ಪರ ನಡುವೆ ಕಾಯಪ್ಪ ಚಟ್ನಿಯಾಗಿ ಹೋದ.

ರಬ್ಬುವ ಕಲ್ಲು ಮತ್ತು ಗುಂಡುಗಳ ನಡುವೆ ತೆಂಗಿನಕಾಯಿ ತುರಿ ಸಿಕ್ಕಿ ನುರಿದು ಚಟ್ನಿಯಾಗಿ ಹೋಗುತ್ತದೆ. ಅಂತೆಯೇ ಇಬ್ಬರ ಜಗಳ, ಮನಸ್ತಾಪಗಳ ನಡುವೆ ಮೂರನೆಯ ವ್ಯಕ್ತಿ ಸಿಕ್ಕಿ ನಲುಗಿ ಹೋಗುತ್ತಾನೆ. ಇದೇ ರೀತಿಯ ಇನ್ನೊಂದು ಗಾದೆ- ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು.

February 7, 2008

ಕಡ ಹುಟ್ಟಿ … (ಉತ್ತರ ಕನ್ನಡದ ಗಾದೆ – 153)

ಕಡ ಹುಟ್ಟಿ ಬಡವ ಕೆಟ್ಟ.

ಕಡ ಎಂದರೆ ಒಂದು ರೀತಿಯ ಸಾಲ. ಇದಕ್ಕೆ ಕೈಸಾಲ ಎಂದೂ ಕೂಡ ಹೇಳುತ್ತಾರೆ. ಹಣ ಅಥವಾ ಇನ್ಯಾವುದೇ ವಸ್ತುವನ್ನು ಎರವಲು ತೆಗೆದುಕೊಂಡು ಸ್ವಲ್ಪವೇ ದಿನಗಳಲ್ಲಿ ಹಿಂದಿರುಗಿ ಕೊಡುವಂತಹದು. ಇದಕ್ಕೆ ಯಾವುದೇ ಲೆಕ್ಕ ಪತ್ರಗಳ ದಾಖಲಾತಿ ಇರುವುದಿಲ್ಲ. ಬರಿಯ ನಂಬುಗೆಯ ಮೇಲೆಯೇ ನಡೆಯುತ್ತಿರುತ್ತದೆ. ಬಡವನಿಗೆ ಹಣದ ಅವಶ್ಯಕತೆ ಕಂಡಾಗ ಶ್ರೀಮಂತರ ಬಳಿಯಲ್ಲಿ ಕಡವನ್ನು ತೆಗೆದುಕೊಳ್ಳುತ್ತಾನೆ, ಬೇಗ ತೀರಿಸಬಹುದು ಎಂಬ ಆಶಯದಿಂದ. ಆದರೆ ಅವನಿಗೆ ತೊಂದರೆಯ ಮೇಲೆ ತೊಂದರೆ ಬರುತ್ತಲೇ ಇರುತ್ತದೆ. ಕಡವನ್ನು ತೀರಿಸಲು ಆಗುವುದೇ ಇಲ್ಲ. ನಂತರ ಅದನ್ನು ಸಾಲವಾಗಿ ಪರಿವರ್ತಿಸಲಾಗುತ್ತದೆ ಮತ್ತು ಬಡವ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಅದೇ ಒಂದು ವೇಳೆ ಕಡವೆಂಬ ವ್ಯವಸ್ಥೆ ಇಲ್ಲದೇ ಹೊಗಿದ್ದರೆ ಆ ಬಡವ ದೊಡ್ಡ ಸಾಲಕ್ಕೆ ಹೆದರಿ ಅದರ ಗೋಜಿಗೆ ಹೋಗದೇ ಪರಿಸ್ಥಿತಿಯನ್ನು ಹೇಗೋ ನಿಭಾಯಿಸುತ್ತಿದ್ದ . ಕಡವೆಂಬ ವ್ಯವಸ್ಥೆ ಹುಟ್ಟಿ ಅವನನ್ನು ಇನ್ನೂ ಕಷ್ಟಕ್ಕೆ ತಳ್ಳಿದೆ. ಯಾರಾದರೋ ಕಡವನ್ನು ತೆಗೆದುಕೊಂಡು ತೀರಿಸಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಈ ಗಾದೆ ಅನ್ವಯಿಸುತ್ತದೆ.

February 6, 2008

ಕತ್ತಿಯ ಮೇಲೆ … (ಉತ್ತರ ಕನ್ನಡದ ಗಾದೆ – 151 ಮತ್ತು 152)

ಕತ್ತಿಯ ಮೇಲೆ ಕುಂಬಳ ಕಾಯಿ ಬಿದ್ದರೂ ಒಂದೇ ಕುಂಬಳ ಕಾಯಿಯ ಮೇಲೆ ಕತ್ತಿ ಬಿದ್ದರೂ ಒಂದೇ.

ಇವೆರಡರಲ್ಲಿ ಯಾವುದೇ ಆದರೂ ಪರಿಣಾಮ ಮಾತ್ರ ಒಂದೇ- ಕುಂಬಳ ಕಾಯಿ ಚೂರಾಗುತ್ತದೆ. ಸನ್ನಿವೇಶ ಯಾವುದೇ ಇರಲಿ, ತೊಂದರೆಯಾಗುವುದು ಮಾತ್ರ ಮೆತ್ತಗಿರುವವರಿಗೇ ಎಂಬ ಅರ್ಥವನ್ನು ಕೊಡುತ್ತದೆ. ಇಂಥದೇ ಇನ್ನೊಂದು ಗಾದೆ- ಯಾವ ಕಾಲು ಜಾರಿದರೂ ಸೊಂಟಕ್ಕೇ ಮೃತ್ಯು. ಎಡಗಾಲು ಜಾರಿದರೂ ಅಷ್ಟೇ ಬಲಗಾಲು ಜಾರಿದರೂ ಅಷ್ಟೇ, ಪೆಟ್ಟಾಗುವುದು ಮಾತ್ರ ಸೊಂಟಕ್ಕೇ ತಾನೇ.


ಶಾಂತಲಾ ಮತ್ತು ಅರುಣ್ ಬರೆದ ನನಗೆ ಗೊತ್ತಿರದೇ ಇದ್ದ ಇನ್ನೂ ಮೂರು ಗಾದೆಗಳು. ಇಬ್ಬರಿಗೂ ಧನ್ಯವಾದಗಳು.
ಬಂಡೆ ಮೇಲೆ ಗಡಿಗೆ ಬಿದ್ರೂ ಒಂದೆ-ಗಡಿಗೆ ಮೇಲೆ ಬಂಡೆ ಬಿದ್ರೂ ಒಂದೆ.
ಗಾಜು ಕಲ್ಲಿನ ಮೇಲೆ ಬಿದ್ರೂ ಒಂದೆ-ಕಲ್ಲು ಗಾಜಿನ ಮೇಲೆ ಬಿದ್ರೂ ಒಂದೆ.
ಬಟ್ಟೆ ಮೇಲೆ ಮುಳ್ಳು ಬಿದ್ರೂ ಮುಳ್ಳಿನ ಮೇಲೆ ಬಟ್ಟೆ ಬಿದ್ರೂ ಒಂದೆ.

ನನ್ನ ಕಂದ ಅವರು ಹೇಳಿದ್ದು- ಹೂವಿನ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಹೂವು ಬಿದ್ದರೂ ನೋವಾಗುವುದು ಹೂವಿಗೆ.

February 5, 2008

ಬ್ಲಾಗ್ ಮತ್ತು ಜಪಾನಿನಲ್ಲಿ ತೆಂಗಿನಮರ

ನಾವು ಬ್ಲಾಗ್ ನಲ್ಲಿ ಏನೆಲ್ಲಾ ಬರೆಯುತ್ತೇವಲ್ಲಾ? ಮತ್ತು ಬರೆದಾದ ಮೇಲೆ ಏನೋ ಕಡಿದು ಕಟ್ಟೆ ಹಾಕಿದ್ದೇವೆಂದು ಬೀಗುತ್ತೇವಲ್ಲಾ? ಅದರ ಮಜಾ ಹೇಳುತ್ತೇನೆ ಕೇಳಿ. ಬೇರೆಯವರು ಏನನ್ನೋ ಹುಡುಕುತ್ತಿರುವಾಗ ಗೂಗಲ್ ನಲ್ಲಿ ಅವೆಲ್ಲಾ ಬಂದು ಅಡೆತಡೆಯನ್ನು ಉಂಟುಮಾಡುತ್ತವೆ; ಕಾಡಿನಲ್ಲಿ ಮೊದಲೇ ಗೊತ್ತಿಲ್ಲದ ದಾರಿಯಲ್ಲಿ ಹೋಗುತ್ತಿರುವಾಗ ಕಾಲಿಗೆ ಸಿಕ್ಕಿಕೊಳ್ಳುವ ಬಳ್ಳಿಯಂತೆ.

ಆ ದಿನ ರಾಜೀವ್ ನ colleague ಸತೀಶ್ ಊಟಕ್ಕೆ ಬಂದಿದ್ದರು. ಊಟವಾದ ಮೇಲೆ ಮಾತು ಕತೆ ಹೀಗೆ ಸುಮ್ಮನೆ ಸಾಗಿತ್ತು. ಸತೀಶ್ ಮಾತಾಡುತ್ತಿದ್ದರೆ ಕೇಳಲು ತುಂಬಾ ಚೆನ್ನಾಗಿರುತ್ತದೆ... ನಗುವುದೊಂದೇ ಕೆಲಸ. ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಎಷ್ಟು ಚೆನ್ನಾಗಿ ಅಂದರೆ ಮರದ ಮೇಲಿನ ಮಂಗ ಕೈ ಬಿಡುವಷ್ಟು! ಅವರ ಜೊತೆಯಲ್ಲಿ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿ ಹೋಗುತ್ತದೆ. ಮಾತು ಕತೆ ಹೀಗೆ ನಡೆದಿರಬೇಕಾದರೆ ನಾಳೆ ಎಲ್ಲಿ ಹೋಗೋಣ ಎಂಬುದರ ಬಗ್ಗೆ ಮಾತು ಬಂತು. ರಾಜೀವ್ ಮೊದಲೇ ಯೋಚಿಸಿದ್ದವರ ತರ ಹೇಳಿದರು "ತಕೆ (ಬಿದಿರು- ಜಪಾನಿಗಳ ಭಾಷೆಯಲ್ಲಿ) temple ಗೆ ಹೋಗೋಣ. ಹೋಗುವ ದಾರಿಯೂ ಚೆನ್ನಾಗಿದೆ, ತುಂಬಾ ಕಾಡು ಇದೆ, ಒಂದು ಸುಂದರವಾದ ಕೊಳವೂ ಇದೆ ಎಂದು ಕೇಳಿದ್ದೇನೆ.


(ಎಡದಿಂದ ಬಲಕ್ಕೆ- ತಕೆ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ನಾನು, ವಿನಾಯಕ, ಸತೀಶ್ ಮತ್ತು ರಾಜೀವ್)


(ತಕೆ ದೇವಸ್ಥಾನದ ಮುಖ್ಯ ದ್ವಾರದ ಬಳಿ)









"ಸತೀಶ್ ಕೇಳಿದರು, "ದಾರಿ ಹೇಗೆ, ಯಾವ train, ಎಷ್ಟು ಹೊತ್ತಿಗೆ ಎಂದು ಗೊತ್ತಾ ?" ರಾಜೀವ್ ಹೇಳಿದ್ದು "ಗೂಗಲ್ ನಲ್ಲಿ ನೋಡೋಣ." ಸತೀಶ್ ತಕ್ಷಣ ಹೇಳಿದರು, "ರಾಜೀವ್, forget it. ಯಾವ site ನೋಡಬೇಕೆಂದು specific ಆಗಿ ಗೊತ್ತಿಲ್ಲದಿದ್ದರೆ ಹುಡುಕುವುದು waste". ಮತ್ತು ತಮ್ಮ ಒಂದು ಅನುಭವವನ್ನು ಕೂಡ ಹೇಳಿದರು.

ಒಂದು ದಿನ ಅವರು ಆಫೀಸ್ ನಿಂದ ಬರುವಷ್ಟರಲ್ಲಿ ಅವರ ಪತ್ನಿ ಮೀನಾಕ್ಷಿ ಯಾವುದೋ cake ಮಾಡುವ ಬಗೆಯನ್ನು ಇಂಟರ್ನೆಟ್ ನಲ್ಲಿ ನೋಡಿಕೊಂಡಿದ್ದರಂತೆ. ಮತ್ತು ಇವರ ಹತ್ತಿರ ಬನ್ನಿ ಬೇಕಾಗುವ ವಸ್ತುಗಳನ್ನೆಲ್ಲ ತೆಗೆದುಕೊಂಡು ಬರೋಣ ಎಂದರಂತೆ. ಬೇಕಾಗುವ ವಸ್ತುಗಳ list ನೋಡಿದರೆ ಏನೋ ಒಂದು 'ದೆಮೆರಾ ಶುಗರ್' ಅಂತ ಒಂದು ಕಂಡಿತು. ಸತೀಶ್ ಹೇಳಿದರಂತೆ. "ಮೀನಾ, ಅದನ್ನು ಜಪಾನಿಗಳ ಅಂಗಡಿಯಲ್ಲಿ ಏನೆಂದು ಕೇಳುವುದು? ಸಾಧ್ಯವಿಲ್ಲ ಬಿಡು" ಎಂದು. ಮೀನಾ ಹೇಳಿದರಂತೆ, "ಇರಿ ಸತೀಶ್ ಗೂಗಲ್ ನಲ್ಲಿ ನೋಡುತ್ತೇನೆ." ಸರಿ ಕೊಟ್ಟರಂತೆ ಗೂಗಲ್ ನಲ್ಲಿ 'Demera sugar in Japanese'. ಅದು ಕರೆದುಕೊಂಡು ಹೋಯಿತಂತೆ ಯಾವುದೊ ಬ್ಲಾಗ್ ಗೆ ಅದರಲ್ಲಿ 'Demera sugar' ಮತ್ತು 'Japanese' ಅನ್ನುವ ಎರಡೂ ಶಬ್ದಗಳೂ ಇದ್ದವು. ಆದರೆ ಒಂದಕ್ಕೊಂದು ಸಂಬಂಧವಿಲ್ಲ; ಎರಡೂ ಒಂದೊಂದು ಮೂಲೆಯಲ್ಲಿ!

ಇನ್ನೂ ಏನೇನೋ ಮಾತಾಡುತ್ತಾ ನಾನು ಹೇಳಿದೆ, "ನಾನು ಜಪಾನಿನಲ್ಲಿ ಒಂದೇ ಒಂದು ತೆಂಗಿನ ಮರವನ್ನೂ ನೋಡಿಲ್ಲ". ರಾಜೀವ್ ಹೇಳಿದರು "ಜಪಾನಿನ ಇನ್ನೂ ದಕ್ಷಿಣ ಭಾಗಕ್ಕೆ ಹೋದರೆ ಕಾಣುತ್ತದೆ. Tropical plant ಅಲ್ವಾ? ಒಕಿನಾವಾ (ಜಪಾನಿನ ದಕ್ಷಿಣ ತುದಿ)ಗೆ ಹೋಗೋಣ್ವಾ?" ನಾನು ಹೇಳಿದೆ "ಒಹ್ ಹೌದಲ್ವಾ? ನನಗೆ ಗಮನವೇ ಇರಲಿಲ್ಲ. ಆದರೆ ಗೂಗಲ್ ನಲ್ಲಿ ಚಿತ್ರವನ್ನಾದರೂ ನೋಡಬಹುದಲ್ಲಾ?" ಸತೀಶ್ ಜೋರಾಗಿ ನಗಲಾರಂಭಿಸಿದರು. ನಾನು ಹುಬ್ಬೇರಿಸಿದೆ. "ದಯಮಾಡಿ ಅದರಲ್ಲಿ ಹುಡುಕಬೇಡ, ಯಾವುದೋ ಮಲೆಯಾಳಿ ಮನುಷ್ಯ ಬರೆದ ಬ್ಲಾಗ್ ಗೆ ಹೋಗಿ ಸೇರುತ್ತೀಯಾ!" ಎಂದರು. ಈಗ ಎಲ್ಲರೂ ನಗುತ್ತಿದ್ದೆವು.

ಗಣಪತಿಯವರು ಒಮ್ಮೆ ನನಗೆ comment ಬರೆದಿದ್ದರು, 'sometimes I feel like searching my car key also in Google!' ಎಂದು . ಆ ದಿನ ಬಹಳ ದೂರವಿಲ್ಲ ಎಂದೆನಿಸುತ್ತದೆ!! ನಮಗೆ ಗೂಗಲ್ ಮೇಲೆ ಎಷ್ಟು dependency ಎಂದರೆ ಏನು ಬೇಕಾದರೂ ಅದರಲ್ಲಿ ಹುಡುಕಲು ಮುಂದಾಗುತ್ತೇವೆ. ಇಷ್ಟೆಲ್ಲಾ ಆಗುವಷ್ಟರಲ್ಲಿ ರಾಜೀವ್ station, train, time, ಎಲ್ಲಾ ಇಂಟರ್ನೆಟ್ ನಲ್ಲಿ ನೋಡಿ ಆಗಿತ್ತು. ನಂತರ ರಾಜೀವ್ ಬಳಿ ಇರುವ ಪುಸ್ತಕ* ದಲ್ಲಿ ಉಳಿದ ಮಾಹಿತಿಗಳನ್ನು ನೋಡಿಕೊಂಡು ಮರುದಿನ ಹೋಗುವುದೆಂದು ನಿರ್ಧಾರ ಮಾಡಿದೆವು. ಮರುದಿನ ಬೆಳಿಗ್ಗೆ ಬೇಗ ಹೊರಟು ಕಾಡು, ಪರ್ವತಗಳ ನಡುವೆ ಹಾದು ಹೋಗಿ ತಕೆ ದೇವಸ್ಥಾನವನ್ನು
ನೋಡಿಕೊಂಡು, ಒಂದು ಸುಂದರ ಕೊಳವನ್ನೂ ನೋಡಿಕೊಂಡು ಬಂದ ಅನುಭವ ನಮ್ಮದಾಯಿತು.



(ಎಡದಿಂದ ಬಲಕ್ಕೆ- ತಕೆ ದೇವಸ್ಥಾನದ ಹತ್ತಿರವೇ ಇರುವ ಕೊಳದ ಬಳಿ ರಾಜೀವ್, ಸತೀಶ್, ನಾನು ಮತ್ತು ವಿನಾಯಕ)

(ಕೊಳದ ಬಳಿ ರಾಜೀವ್ ಮತ್ತು ನಾನು)









* Walters, Gary D’A. (1992), Day Walks Near Tokyo, Kodansha International, Tokyo. http://www.kodansha-intl.com/

ಕದ್ದವನು ಯಾರು? … (ಉತ್ತರ ಕನ್ನಡದ ಗಾದೆ – 150)

ಕದ್ದವನು ಯಾರು? ಎಂದರೆ ಕಾನುಗೋಡು ಸುಬ್ಬ.

ಕಾನುಗೋಡು ಎಂಬುದು ಒಂದು ಊರಿನ ಹೆಸರು. ಆ ಊರಿನ ಒಬ್ಬ ವ್ಯಕ್ತಿ ಸುಬ್ಬ ಎಂದೋ ಒಮ್ಮೆ ಕಳ್ಳತನ ಮಾಡಿರಬೇಕು. ಅದರ ನಂತರ ಎಲ್ಲಿ ಏನು ಕಳ್ಳತನವಾದರೂ ಎಲ್ಲರಿಗೂ ಕಾನುಗೋಡಿನ ಸುಬ್ಬನ ಮೇಲೆಯೇ ಅನುಮಾನ. ಒಮ್ಮೆ ಏನಾದರೂ ಕೆಲಸ ಮಾಡಿ ಸಿಕ್ಕಿ ಬಿದ್ದರೆ ಮುಂದೆ ಇನ್ಯಾರೇ ಆ ಕೆಲಸ ಮಾಡಿದರೂ ಅನುಮಾನ ನಮ್ಮ ಮೇಲೆಯೇ ಎಂದು ಹೇಳುವಾಗ ಈ ಮಾತನ್ನು ಬಳಸಬಹುದು.

February 4, 2008

ಅಗುಳು ಬರುತ್ತದೆ … (ಉತ್ತರ ಕನ್ನಡದ ಗಾದೆ – 149)

ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.

ಅನ್ನದ ನೀರನ್ನು ಬಸಿದಾಗ ಆ ತಿಳಿಯ ಜೊತೆ ಕೆಲವೊಂದು ಅಗುಳೂ ಸಹ ಬಿದ್ದಿರುತ್ತದೆ. ಹಾಗೆ ಬಿದ್ದ ಅನ್ನದ ಅಗುಳುಗಳು ತಳದಲ್ಲಿ ಸೇರಿಕೊಂಡಿರುತ್ತವೆ. ಅಗುಳನ್ನು ಪಡೆಯುವ ಆಸೆಯಿಂದ ತಿಳಿಯನ್ನು ಕುಡಿಯಬೇಕಾಗುತ್ತದೆ. ಕೆಲವೊಮ್ಮೆ ಅಗುಳುಗಳು ಬಿದ್ದಿರದ ಸಾಧ್ಯತೆಯೂ ಉಂಟು! ಯಾವುದೋ ಒಂದು ಕೆಲಸದಿಂದ ಸಿಗುವ ಫಲ ಅನಿಶ್ಚಿತವಾಗಿದ್ದಾಗಲೂ ಕೂಡ ಫಲ ಸಿಗುತ್ತದೆ ಎಂಬ ಆಸೆಯಿಂದ ಆ ಕೆಲಸದಲ್ಲಿ ಬರುವ ಕಷ್ಟಗಳನ್ನೆಲ್ಲಾ ಮೈಮೇಲೆ ಹಾಕಿಕೊಳ್ಳುತ್ತಿರುವವರ ಬಗೆಗಿನ ಮಾತು ಇದು.

February 1, 2008

ಅಜ್ಜಿ ಸುಟ್ಟ ಹಾಗೂ … (ಉತ್ತರ ಕನ್ನಡದ ಗಾದೆ – 147 ಮತ್ತು 148)

ಅಜ್ಜಿ ಸುಟ್ಟ ಹಾಗೂ ಆಯಿತು, ಚಳಿ ಕಾಯಿಸಿದ ಹಾಗೂ ಆಯಿತು.

ಅಜ್ಜಿ ಸತ್ತು ಹೋಗಿದ್ದಾಳೆ. ಹೇಗಿದ್ದರೂ ಅವಳನ್ನು ಸುಡಲು ಬೆಂಕಿ ಹಾಕಿಯೇ ಹಾಕುತ್ತಾರೆ. ಅದೇ ಬೆಂಕಿಯಲ್ಲೇ ಚಳಿಯನ್ನು ಕಾಯಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಜಿಪುಣರನ್ನು ಕುರಿತು ಹೇಳುವ ಮಾತಲ್ಲ. ಆದರೆ, ಒಂದರ ಜೊತೆಯಲ್ಲೇ ಇನ್ನೊಂದು ಕೆಲಸದ ಸಾಧ್ಯತೆಯನ್ನು ಅರಿತು ಎರಡೂ ಕೆಲಸವನ್ನು ಒಟ್ಟಿಗೆ ಮಾಡಿ ಮುಗಿಸಿಕೊಳ್ಳುವವರನ್ನು ಕುರಿತು ಹೇಳುವ ಮಾತು. ಇದನ್ನೇ ಸ್ವಲ್ಪ ಬದಲಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವವನು ಎಂದು ಕೂಡಾ ಹೇಳುತ್ತಾರೆ.