December 29, 2010

ಒಂದೇ ಮಳೆಗೆ ಒಂದು ಕೊಡೆ (ಉತ್ತರ ಕನ್ನಡದ ಗಾದೆ – 246)

ಒಂದೇ ಮಳೆಗೆ ಒಂದು ಕೊಡೆ ಹರಿಯಬಾರದು
ಯಾರೊಬ್ಬರನ್ನೂ ಒಂದೇ ಸಂದರ್ಭವನ್ನು ನೋಡಿ ಅಳೆಯಬಾರದು. ಹಲವಾರು ಪ್ರಕರಣಗಳ ನಂತರ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರಬೇಕು- ಇಂಥ ಸಂದರ್ಭಗಳಲ್ಲಿ ಬಳಸುತ್ತಾರೆ.

ಕೊಡೆ ಯಾವುದೊ ಒಂದು ಜೋರು ಮಳೆಗೆ ಸ್ವಲ್ಪ ಚೆನ್ನಾಗಿಲ್ಲ ಅನಿಸಿದರೂ ಅದು ಎಸೆದು ಬಿಡುವಂಥ ಕೊಡೆ ಅಲ್ಲದಿರಬಹುದು. ಮಳೆಯ ಅಬ್ಬರಕ್ಕೆ ಕೊಡೆ ಆ ಕಡೆ ಈ ಕಡೆ ಆಗಬಹುದು. ಅಂತೆಯೇ ಒಬ್ಬ ವ್ಯಕ್ತಿಯೂ ಕೂಡ ಸಂದರ್ಭಕ್ಕೆ ಸಿಲುಕಿ ವಿಚಿತ್ರವಾಗಿ ವರ್ತಿಸಿರಬಹುದು. ಅಂದ ಮಾತ್ರಕ್ಕೆ ಆ ವ್ಯಕ್ತಿಯೇ ಹಾಗೆ ಎಂದು ನಿರ್ಧರಿಸಬಾರದು. ಒಂದೆರಡು ಮಳೆಯನ್ನೂ ನೋಡಿದಾಗ ಕೊಡೆಯ ಯೋಗ್ಯತೆ ಗೊತ್ತಾಗುತ್ತದೆ; ಒಂದೆರಡು ಸನ್ನಿವೇಶಗಳನ್ನು ನೋಡಿದಾಗ ಒಬ್ಬ ವ್ಯಕ್ತಿಯ ಯೋಗ್ಯತೆ ಗೊತ್ತಾಗುತ್ತದೆ.

ಎಂಥ ಅರ್ಥಪೂರ್ಣ ಸುಂದರ ಗಾದೆ ಅಲ್ವ?

December 22, 2010

ಅಮಟೆ ಮರ (ಉತ್ತರ ಕನ್ನಡದ ಗಾದೆ – 244 ಮತ್ತು 245)

ಅಮಟೆ ಮರ ಅಪ್ಪನ ಮನೆಗೆ ಹೋದಂತೆ.
ಅಮಟೆ ಮರ ತವರಿಗೆ ಹೋಗಬೇಕು ಎಂದು ವಿಚಾರ ಮಾಡುತ್ತದೆಯಂತೆ. ವರ್ಷದ ಒಂದು ಕಾಲದಲ್ಲಿ ಮೈತುಂಬಾ ಕಾಯಿ ತುಂಬಿಕೊಡು ಬಿಡುತ್ತದೆ. ಆಗ ಆ ಭಾರವನ್ನು ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ಹೋಗುವುದಿಲ್ಲವಂತೆ. ನಂತರ ಕಾಯೆಲ್ಲ ಹಣ್ಣಾಗಿ ಉದುರುವಷ್ಟರಲ್ಲಿ ಚಳಿಗಾಲಕ್ಕೆ ಪೂರ್ತಿ ಎಲೆಯನ್ನು ಉದುರಿಸಿ ಬೋಳಾಗಿ ನಿಲ್ಲುತ್ತದೆ. ಈ ರೀತಿ ಬೋಳು ಮೈಯ್ಯಲ್ಲಿ ಹೋಗುವುದು ಬೇಡವೆಂದುಕೊಳ್ಳುತ್ತದೆಯಂತೆ. ವಸಂತ ಬಂದಾಗ ಚಿಗುರುವ ಸಮಯ. ಹೋಗಲು ಸಮಯವೇ ಇಲ್ಲ.

ಎಲ್ಲಿಗಾದರೂ ಹೋಗುವುದನ್ನು ಅಥವಾ ಮಾಡುವ ಕೆಲಸಗಳನ್ನು ಕಾರಣಾಂತರಗಳಿಂದ ಮುಂದೆ ಹಾಕ ಬೇಕಾಗಿ ಬಂದರೆ ಇದನ್ನು ಹೇಳುತ್ತಾರೆ. "ಈ ಕೆಲಸ ನೋಡಿದರೆ ಗಣಪತಿಯ ಮದುವೆಯೇ ಎಂದು ಕಾಣುತ್ತದೆ" ಎಂದು ಹೇಳುವುದನ್ನು ಕೇಳಿರಬಹುದು.

ದೊಡ್ಡ ಕೆಲಸ ಮಾಡುತ್ತಿರುವಾಗ ಇತರ ಸಣ್ಣ ಪುಟ್ಟ ಕೆಲಸಗಳು ಅದ್ದಬಂದರೆ ಹೇಳುವ ಗಾದೆ 'ತೆರೆ ಕಳಿದು ಸಮುದ್ರ ಮುಳುಗಿದಂತೆ'. Check
http://seemahegde78.blogspot.com/2007/11/64.html

ಇವೆಲ್ಲಕ್ಕೂ ವ್ಯತಿರಿಕ್ತವಾಗಿ ಇನ್ನೊಂದು ಗಾದೆ- ಹಾಸ್ಯಗಾರನ ಹೆಂಡತಿ ಅಪ್ಪನ ಮನೆಗೆ ಹೋದ ಹಾಗೆ.
ವರ್ಷಕ್ಕೆ ಎರಡೇ ಬಾರಿ ಹೋಗುತ್ತಾಳೆ. ಒಮ್ಮೆ ಹೋದರೆ ಆರು ತಿಂಗಳು ಮಾತ್ರ ಉಳಿಯುತ್ತಾಳೆ!