August 21, 2008

ಎತ್ತು ಹೌದು … (ಉತ್ತರ ಕನ್ನಡದ ಗಾದೆ – 185)

ಎತ್ತು ಹೌದು, ಕೋಡು ಅಲ್ಲ.
ಇದನ್ನು ವಿವರಿಸುವುದು ಕಷ್ಟ. ಎತ್ತಿನ ಬಗ್ಗೆ ಹೇಳುತ್ತಿರುವವನು ಅದರ ಕೋಡನ್ನೂ ಸೇರಿಸಿ ವಿವರಣೆ ಕೊಡಬೇಕಾಗುತ್ತದೆ. ಎತ್ತು ನನ್ನದು ಆದರೆ ಅದರ ಕೋಡು ನನ್ನದಲ್ಲ ಎಂದು ಹೇಳಲು ಸಾಧ್ಯವಿಲ್ಲ.
ಬೇರ್ಪಡಿಸಲು ಸಾಧ್ಯವಿಲ್ಲದಂತಹ ವಿಷಯದಲ್ಲಿ ಯಾರಾದರೂ ಅರ್ಧ ಮಾತ್ರ ತನಗೆ ಸಂಬಂಧ ಇರುವಂಥದು, ಇನ್ನರ್ಧ ಸಂಬಂಧವಿಲ್ಲ ಎಂದು ಹೇಳಿದಾಗ ಇದನ್ನು ಹೇಳಬಹುದು.
ಇದನ್ನೇ ಇನ್ನೊಂದು ಸಂದರ್ಭದಲ್ಲಿ ಬಳಸಬಹುದು... ಯಾರೋ ಒಬ್ಬರು ಒಂದು ಘಟನೆಯನ್ನು ವಿವರಿಸುತ್ತಿರುವಾಗ, ನಡೆದ ಘಟನೆಯ ಅರ್ಧ ಭಾಗವನ್ನು ವಿವರಿಸಿ ಉಳಿದರ್ಧ ಭಾಗವೂ ಅದಕ್ಕೆ ಸಂಬಂಧವಿದ್ದರೂ ಕೂಡ ಸಂಬಂಧವಿಲ್ಲ ಎಂದು ಹೇಳಿದಾಗ.

August 20, 2008

ನಿತ್ಯ ಸಾಯುವವರಿಗೆ … (ಉತ್ತರ ಕನ್ನಡದ ಗಾದೆ – 184)

ನಿತ್ಯ ಸಾಯುವವರಿಗೆ ಅತ್ತು ಯಾರು ಪೂರೈಸುತ್ತಾರೆ?
ಸಾವನ್ನು ಪದೇ ಪದೇ ನೋಡಿದರೆ ಅದರ ಬಗ್ಗೆ ಅತೀವ ದುಃಖ ಉಂಟಾಗುವುದೇ ಇಲ್ಲವಂತೆ.
ಉದಾಹರಣೆಗೆ ಡಾಕ್ಟರುಗಳೇ ಸಾಕ್ಷಿ. ದಿನವೂ ಅದನ್ನೇ ನೋಡಿ ನೋಡಿ ಅವರು ಸಾವಿನ ಬಗ್ಗೆ ಅವರು indifferent ಆಗಿ ಬಿಟ್ಟಿರುತ್ತಾರೆ. ಒಂದು ಬಗೆಯ ನಿರ್ಲಿಪ್ತತೆಯನ್ನು ಹೊಂದಿಬಿಟ್ಟಿರುತ್ತಾರೆ.
ಅಂತೆಯೇ, ಬೇರೆಯವರಿಗೆ ಕಷ್ಟ ಬಂದಾಗ ಒಂದೆರಡು ಬಾರಿ ನಾನು ಅದಕ್ಕಾಗಿ ಕೊರುಗುತ್ತೇವೆ, ಸಹಾಯ ಮಾಡಲು ಹೋಗುತ್ತೇವೆ. ಆದರೆ ದಿನಾಲೂ ಅದೇ ಗೋಳು ಆದರೆ ನಾವು ನಂತರದಲ್ಲಿ ಅವರ ಕಷ್ಟಗಳ ಬಗ್ಗೆ ನಿರ್ಲಿಪ್ತತೆಯನ್ನು ಹೊಂದುತ್ತೇವೆ ಎಂಬ ಅರ್ಥ.

August 8, 2008

ನೆರೆ ಹಾಳಾದರೆ … (ಉತ್ತರ ಕನ್ನಡದ ಗಾದೆ – 183)

ನೆರೆ ಹಾಳಾದರೆ ಕರು ಕಟ್ಟಲು ಜಾಗವಾಯಿತು.
ಪಕ್ಕದ ಮನೆ ನಾಶವಾದರೆ ನಮ್ಮ ಮನೆಯ ಕರುವನ್ನು ಕಟ್ಟಲು ಆ ಜಾಗವನ್ನು ಉಪಯೋಗಿಸಬಹುದು ಎಂಬ ಅರ್ಥ. ಬೇರೆಯವರ ತೊಂದರೆಯಲ್ಲಿ ತಮ್ಮ ಲಾಭವನ್ನು ಹುಡುಕುವವರ ಬಗ್ಗೆ ಈ ಗಾದೆಯನ್ನು ಹೇಳಬಹುದು.

March 5, 2008

ಗಾದೆ ಹೇಳುವವನ… (ಉತ್ತರ ಕನ್ನಡದ ಗಾದೆ – 180, 181 ಮತ್ತು 182)

ಗಾದೆ ಹೇಳುವವನ ಬಾಯಿಗೆ ಬೂದಿ ಬೀಳುತ್ತದೆ.

ಹೌದು, ಹೀಗೂ ಒಂದು ಗಾದೆ ಇದೆ. ಗಾದೆ ಹೇಳುವ ರೂಢಿ ಇರುವವರು ಒಂದು ಗಾದೆ ಹೇಳಿಕೊಂಡು ತಮಗೇ ತಾವು ಹೇಳಿಕೊಳ್ಳುವ ಇನ್ನೊಂದು ಗಾದೆ ಇದು. ಹಾಗಾಗಿ ನಾನು ಕೊಟ್ಟ ಗಾದೆಗಳನ್ನೆಲ್ಲ ಹೇಳಿಕೊಂಡು ಓಡಾಡುವ idea ನಿಮಗಿದ್ದರೆ ಸ್ವಲ್ಪ ಯೋಚನೆ ಮಾಡಿ! ಇನ್ನೂ ಒಂದು ಎಚ್ಚರಿಕೆ... ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲವಂತೆ!!


ಈ ನನ್ನ ಗಾದೆಗಳ ಪ್ರವಾಹಕ್ಕೆ ಒಂದು ಅಲ್ಪವಿರಾಮ ಹಾಕುತ್ತಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಒಂದೆರಡು ತಿಂಗಳುಗಳ ಕಾಲ blog ಜೀವನಕ್ಕೆ ವಿದ್ಯುಕ್ತವಾಗಿ ರಜೆ ಘೋಷಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆಗಳಿದ್ದರೆ ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಗಾದೆಗಳನ್ನು ನಿಮಗೆ ಕೊಟ್ಟೇನು. ಎಲ್ಲಾ commitment ಗಳನ್ನೂ ಮುಗಿಸಿ ಎಂದು ಹಿಂದಿರುಗುತ್ತೇನೆಂದು ನಿರ್ದಿಷ್ಟವಾಗಿ ಹೇಳಲಾರೆ. ಇತರ ಎಲ್ಲಾ ಕೆಲಸಗಳನ್ನು ಮುಗಿಸಿ ಬರುವುದು ಎಂದರೆ ತೆರೆ ಕಳೆದು ಸಮುದ್ರ ಮುಳುಗಿದಂತೆ. ಆದರೆ ಇಷ್ಟು ದಿನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಿಮ್ಮೆಲ್ಲರನ್ನೂ ನಾನು miss ಮಾಡಿಕೊಳ್ಳಲಿರುವುದಂತೂ ನಿಜ. ಏನೋ ಒಂಥರಾ ಬೇಜಾರಾಗ್ತಾ ಇದೆ. ತನ್ನ ಮಗುವನ್ನು ಎಲ್ಲೋ ನಡುದಾರಿಯಲ್ಲಿ ಅನಾಥವಾಗಿ ಬಿಟ್ಟು ಸ್ವಲ್ಪ ಕಾಯುತ್ತಿರು ಮತ್ತೆ ಬರುತ್ತೇನೆ ಎಂದು ಹೊರಟ ಅಮ್ಮ ಆಗಿದ್ದೇನೆ ಬಹುಶ. ಹಿಂದಿರುಗಿ ಎಂದು ಬರುತ್ತೇನೆ ಎಂಬುದು ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲ. ಅಥವಾ ನನ್ನದೇ ದೇಹದ ಒಂದು ಅಂಗವನ್ನು ಕಿತ್ತಿಟ್ಟು ಇನ್ನೆಲ್ಲೋ ಹೊರಟಂತೆ... ನಾನು ಪ್ರೀತಿಯಿಂದ ಸಾಕಿ ಸಲಹಿದ blog... ಅಯ್ಯೋ ಹೋಗ್ಲಿ ಬಿಡಿ ಯಾಕೆ ಈಗ ಅವೆಲ್ಲಾ ಪುರಾಣ?

ನಿಮಗೆಲ್ಲಾ ದಿನಾಲೂ ಒಂದು ಗಾದೆಯ ಸಲುವಾಗಿ ನನ್ನ blog ಗೆ ಇಣುಕುವ ಕೆಲಸ ತಿಪ್ಪಿತು. ಒಂದು ಗಾದೆಯನ್ನು ಓದುವ ಆಸೆಗಾಗಿ ನಾನು ಬರೆಯುತ್ತಿದ್ದ ಉಳಿದೆಲ್ಲಾ bla bla bla ಗಳನ್ನೆಲ್ಲಾ ಓದುವ ತೊಂದರೆಯಿಲ್ಲ- ಅಗುಳು ಬರುತ್ತದೆ ಎಂದು ತಿಳಿ ಕುಡಿದಂತೆ.

ಸದ್ಯಕ್ಕೆ ಮಜಾ ಮಾಡಿ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲ್ಲಿ ಎಂದು ಮುಂದೆ ಮತ್ತೆ ಬರಲಿದ್ದೇನೆ :)

March 4, 2008

ಬಾಲ್ಯ ಮರುಕಳಿಸಿದೆ!

ಮಕ್ಕಳಿಗೆ ಮೊದಲ ಬಾರಿಗೆ ಅಕ್ಷರ ಕಲಿತು ಓದಲು ತೊಡಗಿದಾಗ ಎನೆನಿಸುತ್ತದೆ? ಅಥವಾ ನನಗೆ ಪ್ರಥಮ ಬಾರಿಗೆ ಕನ್ನಡದ ಎಲ್ಲಾ ಅಕ್ಷರಗಳನ್ನೂ ಗುರುತಿಸಲು ಬಂದಾಗ ಎನೆನಿಸಿತ್ತು? ಈಗ ಮರೆತು ಹೋಗಿದೆ. ಆದರೆ ಅಂತಹದೇ ಒಂದು ಅನುಭವ ಮತ್ತೊಮ್ಮೆ ಆಗಿದೆ! ಹೌದು, ನನಗೀಗ ಜಪಾನಿಗಳ ಭಾಷೆಯ ಎಲ್ಲಾ ಅಕ್ಷರಗಳನ್ನೂ ಗುರುತಿಸಲು ಬರುತ್ತದೆ. ಮತ್ತೊಮ್ಮೆ ಮಗುವಾಗಿದ್ದೇನೆ. ಬಾಲ್ಯದ ನೆನಪಾಗಿದೆ. ಮಕ್ಕಳು ಅಕ್ಷರಗಳನ್ನು ಜೋಡಿಸಿ ಓದುತ್ತಿರುತ್ತಾರೆ ಆದರೆ ಆ ಶಬ್ದಗಳ ಅರ್ಥವೇನೆಂದು ಗೊತ್ತಿರುವುದಿಲ್ಲ. ನಾನೂ ಈಗ ಅದೇ ಪರಿಸ್ಥಿತಿಯಲ್ಲಿದ್ದೇನೆ. ಓದಲು ಬರುತ್ತದೆ ಆದರೆ ಬಹುತೇಕ ಶಬ್ದಗಳು ಅರ್ಥವಾಗುವುದಿಲ್ಲ. ಇಲ್ಲಿಗೆ ಬಂದ ಹೊಸದರಲ್ಲಿ ಅವರ ಎಲ್ಲಾ ಅಕ್ಷರಗಳೂ ಒಂದೇ ತರಹ ಕಾಣಿಸುತ್ತಿದ್ದವು ಮತ್ತು ಅವು ನನ್ನ ಜೀವನದಲ್ಲಿ ಅವುಗಳಿಗೆ ಯಾವುದೇ ಪ್ರಾಮುಖ್ಯತೆ ಇರಲಿಲ್ಲ. ಈಗ ಒಮ್ಮೆಲೇ ಅವಕ್ಕೆಲ್ಲಾ ಪ್ರಾಮುಖ್ಯತೆ ಬಂದಿದೆ ಏಕೆಂದರೆ they do make sense to me! ಎಲ್ಲಿ ಯಾವ ಅಕ್ಷರಗಳು ಕಂಡರೂ ಓದಲು ಖುಷಿಯಾಗುತ್ತದೆ. ಏನೋ ಸಾಧಿಸಿದ ಭಾವನೆ! ಕನ್ನಡ ಓದಲು ಬಂದಾಗ ಏನೆನಿಸಿರಬಹುದೆಂದು ಈಗ ನಿಜವಾಗಿಯೂ ಅರ್ಥವಾಗಿದೆ.

ಜಪಾನಿಗಳ ಭಾಷೆಗೆ ಮೂರು ವಿಧದ ಲಿಪಿಗಳಿವೆ. ‘ಹಿರಗನಾ’, ‘ಕತಕನಾ’ ಮತ್ತು 'ಕಾಂಜಿ'. ಹಿರಗನಾ ಲಿಪಿಯನ್ನು ಬಳಸಿ ಕೇವಲ ಜಪಾನಿಗಳ ಹೆಸರುಗಳು, ಸ್ಥಳಗಳು, ಮತ್ತು ವಸ್ತುಗಳನ್ನು ಬರೆಯಲಾಗುತ್ತದೆ. ಇನ್ಯಾವುದೇ ಜಪಾನಿನ ಹೊರತಾದ ಹೆಸರು, ಸ್ಥಳಗಳು, ವಸ್ತುಗಳನ್ನು ಬರೆಯುವಾಗ ಕತಕನಾ ಲಿಪಿಯನ್ನೇ ಬಳಸಬೇಕು. ಇನ್ನೊಂದು ಚೀನೀಯರಿಂದ ಎರವಲು ಪಡೆದ ಲಿಪಿ- ಕಾಂಜಿ. ಒಂದೇ ಒಂದು ಚಿತ್ರ ಏನೆಲ್ಲಾ ಹೇಳುತ್ತದೆ; ಬಹಳ complicated. ನನಗೆ ಕೇವಲ ಏಳೆಂಟು ಕಾಂಜಿಯನ್ನು ಗುರುತಿಸಲು, ಬರೆಯಲು ಬರುತ್ತದೆ ಅಷ್ಟೇ. ಅವೂ ಕೂಡ ಅತ್ಯಂತ ಸರಳವಾದವು. ಒಂದೇ ಕಾಂಜಿಗೆ ಕೆಲವೊಮ್ಮೆ ಎರಡು ಮೂರು ಅರ್ಥಗಳೂ ಇರುವುದು ಉಂಟಂತೆ. ಅವು ಸಂದರ್ಭದ ಮೇಲೆ ನಿರ್ಧಾರವಾಗುವಂಥವು. ಜಪಾನಿಗಳ computer ನಲ್ಲಿ ಹಿರಗನಾ ಲಿಪಿಯಲ್ಲಿ type ಮಾಡುತ್ತಾ ಹೋದಂತೆ ಅದು ಸಾಧ್ಯವಾದಷ್ಟು ಮಟ್ಟಿಗೆ ಕಾಂಜಿಯಾಗಿ ಪರಿವರ್ತಿಸುತ್ತದೆ; ನಾವು ಗೂಗಲ್ ಕನ್ನಡದಲ್ಲಿ type ಮಾಡುವಾಗ ತನ್ನಷ್ಟಕ್ಕೆ ತಾನು ಕೆಲವು ಶಬ್ದಗಳನ್ನು ಪರಿವರ್ತಿಸಿದಂತೆ. ಕಾಂಜಿಯನ್ನು ಬರೆಯಲು ತುಂಬಾ ಕ್ಲಿಷ್ಟಕರ ಎನಿಸುವುದರಿಂದ ಹೆಚ್ಚುಪಾಲು ಜಪಾನಿಯರಿಗೆ ಬಹಳಷ್ಟು ಕಾಂಜಿಯನ್ನು ಓದಲು ಮಾತ್ರ ಬರುತ್ತದೆ, ಬರೆಯಲು ಬರುವುದಿಲ್ಲ ಎಂದು ಕೇಳಿದ್ದೇನೆ. ಹಿರಗನಾ ಲಿಪಿಗೆ ಸರಳವಾದ 46 ಅಕ್ಷರಗಳು (syllable ಎನ್ನಬಹುದು) ಮತ್ತು 58 modified syllable ಗಳು ಇವೆ. ಅಂತೆಯೇ ಕತಕನಾ ಲಿಪಿಗೆ 46 syllable ಗಳು ಮತ್ತು 79 modified syllable ಗಳು ಇವೆ. ಅವೆಲ್ಲವನ್ನೂ ನಾನು ಈಗ ಓದಬಲ್ಲೆ, ಬರೆಯಬಲ್ಲೆ. ಬಾಲ್ಯ ಮರುಕಳಿಸಿದೆ!

ಆರತಿ ತೆಗೆದುಕೊಂಡರೆ… (ಉತ್ತರ ಕನ್ನಡದ ಗಾದೆ – 179)

ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ.

ಮಂಗಳಾರತಿಯ ಬಳಿ ಕೈ ತೆಗೆದುಕೊಂಡು ಹೋದರೆ ಸಾಕು ಉಷ್ಣವಾಗಿಬಿಡುತ್ತದೆ. ಕುಡಿದ ಒಂದೇ ಒಂದು ಚಮಚ ತೀರ್ಥ ಶೀತವನ್ನುಂಟುಮಾಡುತ್ತದೆ. ಅತ್ಯಂತ ನಾಜೂಕಿನ ಮನುಷ್ಯರ ಬಗೆಗಿನ ಮಾತು ಇದು. ಎಲ್ಲರೂ ತಿನ್ನುವ, ಕುಡಿಯುವ ವಸ್ತುಗಳು ಅಂಥವರ ಆರೋಗ್ಯವನ್ನು ಕೆಡಿಸುತ್ತವೆ. ಯಾರಾದರೊಬ್ಬರು ತನಗೆ ಅದನ್ನು ತಿಂದರೆ, ಇದನ್ನು ಕುಡಿದರೆ ಆರೋಗ್ಯ ಕೆಡುತ್ತದೆ ಎಂದು ಹೇಳುತ್ತಿದ್ದರೆ ನೀವು ಈ ಮಾತನ್ನು ಉದಾಹರಿಸಬಹುದು.

March 3, 2008

ಮುಂಡೆಯ ಮದುವೆಗೆ… (ಉತ್ತರ ಕನ್ನಡದ ಗಾದೆ – 178)

ಮುಂಡೆಯ ಮದುವೆಗೆ ಮುನ್ನೂರು ವಿಘ್ನ.

ಅವಳು ವಿಧವೆ, ಅವಳಿಗೆ ಮರು ಮದುವೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಆ ಮದುವೆಗೆ ಒಂದಲ್ಲ ಒಂದು ಅಡೆತಡೆ ಬರುತ್ತಲೇ ಇದೆ. ನಾವು ಕಷ್ಟಪಟ್ಟು ಮಾಡುತ್ತಿರುವ ಅಪರೂಪದ, ಮತ್ತು ಒಳ್ಳೆಯ ಉದ್ದೇಶದ ಕೆಲಸಕ್ಕೆ ಪದೇ ಪದೇ ಅಡ್ಡಿ ಉಂಟಾದರೆ ಈ ಮಾತನ್ನು ಬಳಸಬಹುದು.