August 30, 2011

ಅರಿಶಿಣದ ಅನ್ನಕ್ಕೆ ಹೋಗಿ (ಉತ್ತರ ಕನ್ನಡದ ಗಾದೆ – 250)

ಅರಿಶಿಣ ಅನ್ನಕ್ಕೆ ಹೋಗಿ ವರುಷನ ಅನ್ನ ಕಳೆದುಕೊಂಡಿದ್ದ.

ಅರಿಶಿಣ ಇದರ correct form ‘ಅನ್ನಕ್ಕೆ ಹೋಗಿ ವರುಷದ ಅನ್ನ ಕಳೆದುಕೊಂಡಿದ್ದಎಂಬುದು. ಪ್ರಾಸಕ್ಕೆ ಸರಿ ಹೊಂದುವಂತೆವರುಷನ ಎಂದು ಹೇಳುತ್ತಾರೆ. ಅರಿಶಿಣದ ಅನ್ನ ಅಂದರೆ ಚಿತ್ರಾನ್ನ. ಪೇಟೆಯ ಜನರಿಗೆ ಇಂದಿನ ಅನ್ನ ಉಳಿದರೆ ಅದನ್ನು ಹಾಳುಮಾಡದೆ ಬಳಸಬೇಕೆಂದರೆ ಇರುವ ಪ್ರಮುಖ ದಾರಿ- ನಾಳೆ ಚಿತ್ರಾನ್ನ! ಹಳ್ಳಿಗಳಲ್ಲಿ ಇಂದು ಅನ್ನ ಉಳಿದರೆ ಅದನ್ನು ನಾಳೆಯವರೆಗೆ ಇಡುವ ಪ್ರಮೇಯವಿರುವುದಿಲ್ಲ. ಇಂದೇ ದನ-ಕರುಗಳಿಗೆ ಕೊಟ್ಟು ಖಾಲಿಮಾಡಿಬಿಡುತ್ತಾರೆ. ಹಳ್ಳಿಗಳಲ್ಲಿ ಚಿತ್ರಾನ್ನ ಮಾಡುವುದು ಕೇವಲ ವಿಶೇಷದ ದಿನಗಳಲ್ಲಿ ಮಾತ್ರ. ಅಂದರೆ ಹಬ್ಬ ಹರಿದಿನಗಳು ಅಥವಾ ಶ್ರಾದ್ಧದ ದಿನಗಳು. ಯಾರೋ ಒಬ್ಬ ಹಬ್ಬದೂಟದ ಆಸೆಗೆ (ಅರಿಶಿಣ ಅನ್ನಕ್ಕೆ) ಪ್ರತಿದಿನ ಬೇರೆಯವರ ಮನೆಗೆ ಹೋಗುತ್ತಿದ್ದನಂತೆ. ಇಂದಿನ ದಿನ ಕಳೆದರಾಯಿತೆಂಬಭಾವನೆ ಅವನಿಗೆ. ಪ್ರತಿದಿನ ಮನೆಯಲ್ಲಿರದ ಅವನಿಗೆ ತನ್ನ ಗದ್ದೆ-ತೋಟಗಳ ಕಡೆ ಗಮನವೇ ಇರಲಿಲ್ಲ. ಅವು ಹಾಳುಬಿದ್ದು ಆ ವರ್ಷ ಅವನಿಗೆ ಬೆಳೆಯೇ ಸಿಗಲಿಲ್ಲ. ಅರಿಶಿಣ ಅನ್ನದ ಆಸೆಯಲ್ಲಿ ವರ್ಷಾವಧಿಯ ಅನ್ನವನ್ನು ಕಳೆದುಕೊಂಡುಬಿಟ್ಟಿದ್ದ. ಮುಂದಿನ ದಿನಗಳ ಬಗ್ಗೆ ಆಲೋಚನೆ ಮಾಡದೆ ಇಂದು ಸಿಗುವ ಸಣ್ಣ ಸುಖದ ಬೆನ್ನುಹತ್ತಿ ಹೋಗುವವರನ್ನು ಕುರಿತುಹೇಳಬಹುದಾದಂತ ಗಾದೆ ಇದು.

5 comments:

ಗಿರೀಶ್.ಎಸ್ said...

ಹರ್ಷದ(ಸಂತೋಷದ) ಉಟಕ್ಕೆ ಹೋಗಿ ವರ್ಷದ ಊಟ ಕಳೆದುಕೊಂಡೆ... ಈ ರೀತಿ ಇರಬಹುದು.... ನನಗೆ ಅನ್ನಿಸಿದ ಮಟ್ಟಿಗೆ ಇದು ಅರಿಶಿನ ಅಲ್ಲ ಹರ್ಷ ಅಂತ.... ಇನ್ನೊಮ್ಮೆ ಯಾವುದಕ್ಕೂ ಖಾತರಿ ಪಡಿಸಿಕೊಳ್ಳಿ...

ಈಶ್ವರ said...

ಗಾದೆಯನ್ನು ವಿವರಿಸಿದ ರೀತಿ ಒಪ್ಪಿಸುವಂತಿದೆ. ಗಿರೀಶ್ ಅವರು ಹೇಳಿದಂತೆಯೂ ಇರಬಹುದೆಂದೆನಿಸುತ್ತದೆ. ಚೆನ್ನಾಗಿದೆ.

ವಿ.ರಾ.ಹೆ. said...

ಹರುಷದ ಕೂಳಿಗೆ ವರುಷದ ಕೂಳು ಕಳೆದುಕೊಂಡಂತೆ ಎಂಬುದು ಇನ್ನೊಂದು version of this gaade

Ravindra said...

ಗಾದೆಯನ್ನು ಇನ್ನೊಮ್ಮೆ ಖಾತರಿ ಪಡಿಸಿಕೊಳ್ಳಿ...

Seema S. Hegde said...

@ All,
ಈ ಗಾದೆಯನ್ನು ಮತ್ತೊಮ್ಮೆ ಕೇಳಿ ಖಾತರಿಪಡಿಸಿಕೊಳ್ಳಲಾಗಿದೆ. ಗಾದೆ ಸರಿಯಾಗಿದೆ. ನೀವು ಉಪಯೋಗಿಸಿಕೊಳ್ಳಬಹುದು :-)