January 31, 2008

ಊರ ಮುಂದೆ … (ಉತ್ತರ ಕನ್ನಡದ ಗಾದೆ – 146)

ಊರ ಮುಂದೆ ಹೊಡೆದು ಒಲೆ ಮುಂದೆ ಎಣ್ಣೆ ಹಚ್ಚಿದಂತೆ.

ಇಡೀ ಊರವರ ಮುಂದೆ ಹೊಡೆದರೆ ಉರಿಯಾಗಿದ್ದಕ್ಕಿಂತ ಅವಮಾನವಾಗಿದ್ದು ಜಾಸ್ತಿ. ನಂತರ ಮನೆಯಲ್ಲಿ ಒಲೆಯ ಮುಂದೆ ಎಷ್ಟೇ ಎಣ್ಣೆ ಹಚ್ಚಿದರೂ ಆದ ಅವಮಾನ ಹೋಗುವುದಿಲ್ಲ. ಎಲ್ಲರ ಎದುರಲ್ಲಿ ಅವಮಾನ ಮಾಡಿ ಒಬ್ಬರೇ ಇದ್ದಾಗ ಬಂದು ಕ್ಷಮೆ ಕೇಳುವವರನ್ನು ಕುರಿತಾದ ಮಾತು ಇದು.

January 30, 2008

ಅಪ್ಪ, ಅಮ್ಮ ಮದುವೆಯಾದ ದಿನ

ಇಂದು ಅವರ ಮೂವತ್ತೊಂದನೆಯ wedding anniversary.
ಮೊದಲೆಂದೂ ನಾನು ಅವರ ಮದುವೆಯಾದ ದಿನದ ಬಗ್ಗೆ ತಲೆ ಕೆಡಿಸಿಕೊಂಡವಳೂ ಅಲ್ಲ, ಫೋನ್ ಮಾಡಿದವಳೂ ಅಲ್ಲ. ಆದರೆ ಈಗ ಎರಡು ವರ್ಷಗಳಿಂದ ಮಾಡುತ್ತಿದ್ದೇನೆ. ಏಕೆಂದರೆ ನನಗೆ ಮದುವೆ ಎಂದರೆ ಏನು ಎಂಬುದು ಅರ್ಥವಾಗಿದೆ ಎಂದು ಹೇಳಲಾಗದಿದ್ದರೂ ಕೂಡ ಅರ್ಥವಾಗತೊಡಗಿದೆ ಎಂದು ಹೇಳಬಲ್ಲೆ. ಅಪ್ಪ ಅಮ್ಮನ ಮದುವೆ ನನ್ನ ಕಲ್ಪನೆಗೂ ಮೀರಿದ್ದು. ವೀಡಿಯೋ ಇರದಿದ್ದ ಕಾಲ, ಆದರೆ ಒಂದು ಫೋಟೋ ಕೂಡ ಇಲ್ಲ. ಮದುವೆ ಕರೆಯೋಲೆಯನ್ನೂ ಇಟ್ಟುಕೊಳ್ಳುವ ಗೋಜಿಗೆ ಅವರು ಹೋಗಲಿಲ್ಲ. ಆದರೆ ಅವರ ಮದುವೆಯ ಕರೆಯೋಲೆಯನ್ನು ನಾನು, ರಘು ಇಬ್ಬರೂ ನೋಡಿದ್ದೇವೆ. ಏಕೆಂದರೆ ಅಜ್ಜ ಇಟ್ಟುಕೊಂಡಿದ್ದರು!

ಮದುವೆ, ಒಬ್ಬರ ಜೀವನದಲ್ಲಿ ಒಮ್ಮೆ ಮಾತ್ರ ಬರುವಂತಹ ಅಮೂಲ್ಯ ಘಳಿಗೆ. ಕೆಲವರ ಜೀವನದಲ್ಲಿ ಅದು ಎರಡು ಮೂರು ಬಾರಿಯೂ ಬರುವುದುಂಟು. ಆದರೆ ಆಗ ಅದು ಅರ್ಥ ಕಳೆದುಕೊಂಡಿರುತ್ತದೆ. ಎಲ್ಲೋ ಹುಟ್ಟಿ ಬೆಳೆದ ಬೇರೆ ಬೇರೆ ಮನಸ್ಥಿತಿಯ ಇಬ್ಬರನ್ನು ತಂದು ಆ ದಿನ ಒಟ್ಟಿಗೆ ನಿಲ್ಲಿಸಿ, ಮುಂದೆ ಜೀವನ ಪರ್ಯಂತ ಒಟ್ಟಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿರುತ್ತಾರೆ. ಅದಕ್ಕೆ ನೂರಾರು ಜನರ ಸಾಕ್ಷಿ ಬೇರೆ! ನನಗಂತೂ ಇದು ತೀರ ವಿಚಿತ್ರ ಎನಿಸಿತ್ತು. ಹಾಗೆಂದು ನನಗೆ ಇದಕ್ಕೆ ವಿರುದ್ಧವಾದ ಪಾಶಿಮಾತ್ಯ ಪದ್ಧತಿಯಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲ. ನನ್ನ ಮದುವೆಗೆ ಕೆಲವು ದಿನಗಳಿದ್ದಾಗ ಜ್ಯೋತಿ ಅಕ್ಕನನ್ನು ಕೇಳಿದ್ದೆ 'ಒಬ್ಬ ಗೊತ್ತಿಲ್ಲದ ಮನುಷ್ಯನ ಜೊತೆ ಹೇಗೆ ಬದುಕುವುದು, ಅದೂ ನನ್ನ ಮನೆ ಬಿಟ್ಟು ಹೋಗಿ?' ಎಂದು. ಅದಕ್ಕವಳು 'ನಾವೆಲ್ಲಾ ಬದುಕುತ್ತಿಲ್ಲವಾ ಈಗ? ನಿನಗೇ ಗೊತ್ತಾಗುತ್ತದೆ ನೋಡುತ್ತಿರು. ನೀನು ನಿನ್ನ ಅಮ್ಮನ ಬಳಿ ಇದ್ದಿದ್ದಕ್ಕಿಂತ close ಆಗಿ ಇರುತ್ತೀಯ ನಿನ್ನ ಗಂಡನ ಜೊತೆ.' ಸಾಧ್ಯವೇ ಇಲ್ಲ ಎಂಬ ತೀರ್ಪನ್ನೂ ಕೊಟ್ಟುಬಿಟ್ಟಿದ್ದೆ ಅವಳಿಗೆ.

ಆದರೆ ಆ ಮದುವೆಯ ಬಂಧನವೇ ವಿಚಿತ್ರವಾದುದು. ಅದು ನಿಧಾನವಾಗಿ ನನ್ನನ್ನು ತನ್ನೊಳಗೆ ಸೆಳೆದುಕೊಂಡು ಬಿಟ್ಟಿತು, ನನಗರಿವಿಲ್ಲದಂತೆಯೇ. ಅಮ್ಮನ ಬಳಿ ಹೇಳಲು ಹಿಂಜರಿಯುತ್ತಿದ್ದ ವಿಚಾರವನ್ನೂ ನಾನು ಇಂದು ರಾಜೀವನ ಬಳಿ ಅರೆಕ್ಷಣದಲ್ಲಿ ಹೇಳಿ ಮುಗಿಸಿರುತ್ತೇನೆ. ಜ್ಯೋತಿ ಅಕ್ಕ ಹೇಳಿದ್ದು ಎಷ್ಟು ನಿಜ! ರಾಜೀವ್ ಕೂಡಾ ಅಷ್ಟೇ, ಯಾವ ವಿಷಯವನ್ನು ಬೇಕಾದರೂ ನನ್ನ ಜೊತೆ ಹಂಚಿಕೊಳ್ಳಬಲ್ಲರು. ಅವರು ಒಬ್ಬ opposite sex ನ ಮನುಷ್ಯ ಎಂಬುದೂ ಕೂಡಾ ಮರೆತು ಹೋಗಿರುತ್ತದೆ.

ಒಂದು ಸಣ್ಣ ಕಾರಣವೇ ಅಲ್ಲದ ಕಾರಣಕ್ಕೆ ಜಗಳ, ಪ್ರೀತಿಸಲಂತೂ ಕಾರಣವೇ ಬೇಡ, ಮಾತಿಗೆ ಮಾತು ಬೆಳೆಸುವ ಜಗಳ, ಮಾತನಾಡದೇ ಇರುವ ಶೀತಲ ಸಮರ, ನಾನೇಕೆ sorry ಹೇಳಲಿ ಎಂಬ ego-ಹಟ, ಹೋಗಲಿ ಬಿಡು ಜಗಳವೇಕೆ ಎಂದು ಯಾರೋ ಒಬ್ಬರು ಬಿಟ್ಟುಕೊಡುವ ego, ಒಬ್ಬರಿಗೊಬ್ಬರ ಪ್ರೋತ್ಸಾಹ,-ಉತ್ತೇಜನ, ‘ನಾನಿದ್ದೇನೆ’ ಎಂದು ಇನ್ನೊಬ್ಬರು ಕೊಡುವ ಸಾಂತ್ವನ-ಧೈರ್ಯ, ಒಬ್ಬರ success ನಲ್ಲಿ ಇನ್ನೊಬ್ಬರು ಪಡುವ ಸಂತಸ, ನಾಲ್ಕು ಕಣ್ಣುಗಳು ಒಟ್ಟಾಗಿ ಕಾಣುವ ಕನಸುಗಳು, ಭವಿಷ್ಯದ ಬಗೆಗಿನ ಚಿಂತೆ, ಇನ್ನೊಬ್ಬರ ಬಗೆಗಿನ ಕಾಳಜಿ, ಪ್ರೀತಿ, ವಾತ್ಸಲ್ಯ,... ಹೋಗ್ಲಿ ಬಿಡಿ... ಇನ್ನೂ ಏನೇನೋ ಭಾವನೆಗಳು ಸೇರಿಕೊಂಡು ಈ ಸಂಬಂಧವನ್ನು ನಮಗೇ ಗೊತ್ತಾಗದಂತೆ ಭದ್ರವಾಗಿಸಿಬಿಡುತ್ತವೆ.

ನನಗೆ ಈಗೀಗ ಅರಿವಾಗುತ್ತಿರುವುದು ಅಪ್ಪ, ಅಮ್ಮನಿಗೆ ಮೂವತ್ತು ವರ್ಷಗಳ ಹಿಂದೆಯೇ ಅರಿವಾಗಿರುತ್ತದೆ. ಅದೇ ಅರಿವಿನ ಸೇತುವೆಯ ಮೇಲೆಯೇ ಅವರಿಬ್ಬರೂ ಇಷ್ಟೆಲ್ಲಾ ವರ್ಷಗಳ ಕಾಲ ನಡೆದು ಬರುತ್ತಿದ್ದಾರೆ; ಮುಂದೆ ನಾವೂ ನಡೆಯಲಿ ಎಂದು ಆಶಿಸುತ್ತಾರೆ. ಅಪ್ಪ, ಅಮ್ಮರಿಗೆ ಮದುವೆಯಾದ ದಿನದ ಹಾರ್ದಿಕ ಶುಭಾಶಯಗಳು :)

ಕುರಿ ಕೇಳಿ … (ಉತ್ತರ ಕನ್ನಡದ ಗಾದೆ – 145)

ಕುರಿ ಕೇಳಿ ಸಾಂಬಾರ ಅರೆಯುವುದಿಲ್ಲ.

ಕುರಿಯ ಬಳಿ 'ನಿನ್ನನ್ನು ಕಡಿಯಬೆಕಾಗಿದೆ, ಸಾಂಬಾರ ಅರೆಯಲಾ?' ಎಂದು ಕೇಳಿದರೆ ಅದು ಬೇಡ ಎಂದೇ ಹೇಳುತ್ತದೆ. ಆದ್ದರಿಂದ ಅದನ್ನು ಕೇಳುವುದಿಲ್ಲ, ಸಾಂಬಾರ ಅರೆಯುತ್ತಾರೆ. ಇನ್ನೊಬ್ಬರನ್ನು ಕೇಳಿದರೆ ಅವರು ಬೇಡವೆಂದೇ ಹೇಳುತ್ತಾರೆ ಅದಕ್ಕಾಗಿ ಅವರನ್ನು ಕೇಳುವುದಿಲ್ಲ ಆ ಕೆಲಸವನ್ನು ಮಾಡುತ್ತೇನೆ ಎನ್ನುವ ಅರ್ಥದಲ್ಲಿ ಹೇಳಬಹುದು.

ನಾನು High school ನಲ್ಲಿ ಓದುತ್ತಿದ್ದಾಗ ನಮ್ಮ ಕನ್ನಡ ಶಿಕ್ಷಕರಾದ ಶ್ರೀ ಜಿ. ಕೆ. ಭಟ್ಟರು ಪರೀಕ್ಷೆ ಪೇಪರ್ ತೆಗೆಯುವ ಮೊದಲು ನಾವು ‘ಸರ್, ಈ ಪರೀಕ್ಷೆಗೆ ಎರಡೇ ಪಾಠ ಸಾಕು, ಮೂರನೆಯದು ಬೇಡ’ ಎಂದು ಗೋಗರೆಯುತ್ತಿದ್ದೆವು. ಆಗ ಅವರು ಈ ಗಾದೆಯನ್ನು ಉಪಯೋಗಿಸುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಕಂಡ ಅತ್ಯುತ್ತಮ ಶಿಕ್ಷಕರಲ್ಲೊಬ್ಬರಾದ ಅವರನ್ನು ಈ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ನನಗೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿದವರೇ ಅವರು.

January 29, 2008

ಗೂಗಲ್ ಮತ್ತು ನಾನು

ಅಬ್ಬಾ! ಈ ವಿಕಿಪೀಡಿಯಾ, ಗೂಗಲ್ ಗಳ ಕಾಲದಲ್ಲಿ ಸುಖವಿಲ್ಲ.
ಮೊನ್ನೆ ಒಂದು ವಿಷಯ ತಲೆ ತಿನ್ನುತ್ತಿತ್ತು. Specific gravity, biomass estimation ಗಳ ನಡುವೆ ಸಿಕ್ಕಿ ಒದ್ದಾಡುತ್ತಿದ್ದೆ. Specific gravity ಬಗ್ಗೆ ಏನನ್ನೋ ಕೇಳಬೇಕಿತ್ತು. ರಾಜೀವ್ online ಇರುವುದನ್ನು ನೋಡಿ ಪಿಂಗ್ ಮಾಡಿದೆ. Office ನಲ್ಲಿ ಇದ್ದಿದ್ದು ನಿಜ. Busy ಇದ್ದಿರಲೂಬಹುದು. ನಾನು ಒಂದು ಪ್ರಶ್ನೆ ಕೇಳಿದ್ದೇ ತಡ, ಬಂತು ಉತ್ತರ 'ವಿಕಿಪೀಡಿಯಾ ನೋಡೇ'. ಸರಿ ಬಿಡು ಹೋಗ್ಲಿ ಎಂದುಕೊಂಡೆ.

ರಾಜೀವ್ ನ ಫ್ರೆಂಡ್ ರೋಹಿತ್ online ಇರುವುದನ್ನು ನೋಡಿ ಅವನಿಗೆ ಪಿಂಗ್ ಮಾಡಿದೆ. 'ನನಗೊಂದು doubt ಇತ್ತು....' ಅವನು ತಮಾಷೆ ಮಾಡಿದ 'ಏನು ಸಂಶಯ? ಜಪಾನಿನಿಂದ ಭೂಮಿಯನ್ನು ಕೊರೆದರೆ ಭಾರತವನ್ನೋ ಅಥವಾ ಪ್ರಪಂಚದ ಇನ್ಯಾವುದೋ ಮೂಲೆಯನ್ನು ತಲುಪಬಹುದಾ ಎಂಬುದಾ ;)?' ಅದಲ್ಲ ಎಂದು ಹೇಳಿ ನಾನು ನನ್ನ ಸಮಸ್ಯೆಯನ್ನು ಬರೆದೆ...ಒಂದೆರಡು ನಿಮಿಷ ರೋಹಿತ್ ಪತ್ತೆಯೇ ಇಲ್ಲ... ಮನಸ್ಸು ಹೇಳಿತು 'ಮುಗಿಯಿತು ಕಥೆ. ಇನ್ನು ಕನಿಷ್ಠ ಹತ್ತು ಲಿಂಕ್ ಗಳು ಬಂದು ಚಾಟ್ ವಿಂಡೋವಿನ ಬಾಗಿಲು ಬಡಿಯುವುದರಲ್ಲಿ ಸಂಶಯವೇ ಇಲ್ಲ....ಮೊದಲೇ ರೋಹಿತ್ ಗೂಗಲ್ ನಲ್ಲಿ expert'. ಮರು ಘಳಿಗೆಯಲ್ಲೇ 'r u there?' ಎನ್ನುತ್ತ ಒಂದು ಲಿಂಕ್ ಬಂದು ಅಪ್ಪಳಿಸಿತು. ಆದರೆ ಆಶ್ಚರ್ಯವೆನಿಸುವಂತೆ ಆ ದಿನ ಬಂದಿದ್ದು ಒಂದೇ ಒಂದು ಲಿಂಕ್!! ಅದು ಚೆನ್ನಾಗಿತ್ತು ನಿಜ, ಆದರೆ ನನ್ನ ಸಮಸ್ಯೆಗೆ ಪರಿಹಾರವನ್ನು ಕೊಡಲಿಲ್ಲ. ಸರಿ ಬಿಡು ಎಂದೆ.

ನನ್ನ ಹೈಸ್ಕೂಲ್ ಫ್ರೆಂಡ್ ವಿನಯ್ online ಕಾಣಿಸಿದ. ಅವನಿಗೂ ಹೇಳಿಯೇ ಬಿಡೋಣ...ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು ಎಂದುಕೊಂಡು ಅವನಿಗೆ ನನ್ನ ಸಮಸ್ಯೆಯನ್ನು ಹೇಳಿದೆ. ಅಬ್ಬಾ!!..ಮರುನಿಮಿಷದಲ್ಲಿ ಮೂರು pdf ಫೈಲುಗಳು ಮತ್ತು ಏಳೆಂಟು ಲಿಂಕ್ ಗಳು ಹಾರಿಕೊಂಡು ಬಂದು ದೊಪ್ಪೆಂದು ನನ್ನ inbox ನ ತಲೆಯ ಮೇಲೆ ಬಿದ್ದವು. ನೂರಾರು ಪುಟಗಳಿರುವ ಆ ಫೈಲುಗಳಲ್ಲಿ ನನಗೆ ಬೇಕಾಗಿರುವುದನ್ನು (ಅದು ಇದ್ದೇ ಇರುತ್ತದೆ ಎಂದು ಖಾತ್ರಿ ಇಲ್ಲ) ಹುಡುಕುವುದು ಎಂದರೆ ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ. ಇನ್ನು ಲಿಂಕ್ ಗಳೋ ಒಂದರಲ್ಲಿ ಇನ್ನೊಂದಕ್ಕೆ ಲಿಂಕ್ ಎಂದು ಒಳಗೊಳಗೆ ಹೋಗಿ ಅದರ ಸುಳಿಯಲ್ಲಿ ಸಿಕ್ಕಿಕೊಂಡು ಮುಳುಗಿಯೇ ಹೋಗುತ್ತೇನೆ.

ಅವರು ಕೊಟ್ಟ ಲಿಂಕ್ ಗಳೆಲ್ಲವೂ informative ನಿಜ. ಇನ್ನು ವಿಕಿಪೀಡಿಯಾ, ಗೂಗಲ್ ಗಳ ಬಗ್ಗೆ ಅಂತೂ ಎರಡು ಮಾತಿಲ್ಲ. ಆದರೆ ತಕ್ಷಣವೇ ಪರಿಹಾರ ಸಿಗಬಹುದು ಎಂದುಕೊಂಡು ಕೇಳಿದ ಪ್ರಶ್ನೆಗಳಿಗೆ ಯಾವುದಕ್ಕೂ ತಕ್ಷಣದ ಪರಿಹಾರ ಸಿಗುವುದಿಲ್ಲ. ಗಣಿಯಲ್ಲಿ ಚಿನ್ನ ಹುಡುಕಿದಂತೆ ಹುಡುಕುತ್ತಾ ಹೋಗುತ್ತೇನೆ... ಈ ಮಧ್ಯೆ ಕೊನೆ ಮೊದಲಿಲ್ಲದ ಯಾವುದೋ ಸೈಟ್ ನಲ್ಲಿ ಸಿಕ್ಕಿಕೊಂಡು ಬಿಡುತ್ತೇನೆ. ಏನು ಹುಡುಕುತ್ತಿದ್ದೇನೆ ಎಂಬುದನ್ನೂ ಕೆಲವೊಮ್ಮೆ ಮರೆತು ಇನ್ನೆಲ್ಲೋ ತಲುಪಿರುತ್ತೇನೆ.

ಶ್ರೀನಿವಾಸ ಕುಲಕರ್ಣಿಯವರು ಬರೆದ ಪುಟ್ಟ ಕವನ ನೆನಪಾಗುತ್ತದೆ.
ಮನಸು
ಗೂಗಲ್ ಸರ್ಚ್ ಎಂಜಿನ್ ನಂತೆ !!
ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!


ವಿನಯ್ ನಿಂದ ಅನೇಕ ಮಾಹಿತಿಗಳು ಬಂದವು. ಆದರೆ ರೋಹಿತ್ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸಿ ಮರುದಿನ ಒಂದು ಒಳ್ಳೆಯ mail ರವಾನಿಸಿದ. ಧನ್ಯವಾದಗಳು ರೋಹಿತ್, ವಿನಯ್ :)

ಗೂಗಲ್ ಕೂಡ ಮನಸ್ಸಿನಂತೆಯೇ ತಾನೆ?

ಕೋಲು ಕೊಟ್ಟು … (ಉತ್ತರ ಕನ್ನಡದ ಗಾದೆ – 143 ಮತ್ತು 144)

ಕೋಲು ಕೊಟ್ಟು ಹೊಡೆಸಿಕೊಂಡಂತೆ.

ನಿರಾಯುಧನಾಗಿದ್ದವನ ಕೈಗೆ ನಾವೇ ಕೊಲನ್ನು ಕೊಟ್ಟರೆ ಅವನು ನಮಗೇ ತಿರುಗಿ ಹೊಡೆಯುತ್ತಾನೆ. ಸುಮ್ಮನಿರಲಾರದೇ ನಾವೇ ಏನಾದರೂ ಹೇಳಿಕೊಟ್ಟು ಅದರಲ್ಲಿ ಸಿಕ್ಕಿ ಬೀಳುವಂತಾಗಿ ನಷ್ಟ ಅನುಭವಿಸಬೇಕಾಗಿ ಬಂದರೆ ಈ ಮಾತು ಅನ್ವಯಿಸುತ್ತದೆ. ಇನ್ನೊಂದು ಗಾದೆ ಇದೇ ಅರ್ಥಕೊಡುವಂತದು- ಹಗ್ಗ ಕೊಟ್ಟು ಕೈ ಕಾಲು ಕಟ್ಟಿಹಾಕಿಸಿಕೊಂಡಂತೆ.

January 28, 2008

ಆತ್ಮಹತ್ಯೆ… (ಉತ್ತರ ಕನ್ನಡದ ಗಾದೆ – 139, 140,141 ಮತ್ತು 142)

ಆತ್ಮಹತ್ಯೆ ಮಾಡಿಕೊಂಡವನಿಗೆ ಬ್ರಹ್ಮಹತ್ಯೆ ಮಾಡಿದವನು ಸಾಕ್ಷಿ ಹೇಳಿದ್ದ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸರಿಯಿಲ್ಲ ಎಂದುಕೊಂಡರೆ ಅವನಿಗೆ ಸಾಕ್ಷಿ ಹೇಳುವ ವ್ಯಕ್ತಿ ಬ್ರಾಹ್ಮಣನನ್ನೇ* ಕೊಂದವನು. ಯಾರ ಪರವಾಗಿಯೂ ಮಾತನಾಡುವ ಹಾಗಿಲ್ಲ. ಇಬ್ಬರೂ equally bad ಎಂದು ಹೇಳುವಾಗ ಬಳಸುವ ಇನ್ನೂ ಕೆಲವು ಗಾದೆಗಳೆಂದರೆ, ಹೊಟ್ಟು ಗಡಿಗೆ, ಹುಳುಕು ತೊಗರಿ- ಗಡಿಗೆ ಒಡಕು ಅದರ ಪರವಾಗಿ ಮಾತನಾಡುವಂತಿಲ್ಲ ಎಂದರೆ ಅದರ ಜೊತೆಗಿರುವ ತೊಗರಿ ಕೂಡ ಹುಳುಕು. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಮತ್ತು ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

ಚಿಕ್ಕವರಿದ್ದಾಗ (ಈಗಲೂ ಕೂಡ!) ನಾನು, ನನ್ನ ತಮ್ಮ ಒಬ್ಬರ ಪರವಾಗಿ ಇನ್ನೊಬ್ಬರು ವಕಾಲತ್ತು ನಡೆಸಿದಾಗ ಈ ಮೇಲಿನ ಗಾದೆಗಳಲ್ಲಿ ಯಾವುದೋ ಒಂದು ಅಮ್ಮನ ಬಾಯಿಂದ ಉದುರುತ್ತಿದ್ದುದು ಗ್ಯಾರೆಂಟಿ! ಇದೇ ಅರ್ಥವನ್ನು ಕೊಡುವ ಇನ್ನೊಂದು ಗಾದೆ ಕೂಡ ಗೊತ್ತು. ಅಮ್ಮನಿಂದ ಗೊತ್ತಾಗಿದ್ದಲ್ಲ; ಬೇರೆಲ್ಲೋ ಕೇಳಿದ್ದು. ಆದರೆ ಅದು ಅಷ್ಲೀಲವಾಗಿರುವುದರಿಂದ ಇಲ್ಲಿ ಹಾಕುವುದಿಲ್ಲ.


*ತಪ್ಪನ್ನು ತಿದ್ದಿದ ಹರೀಶ ಮತ್ತು ಗಣಪತಿಗೆ ಧನ್ಯವಾದಗಳು.

January 25, 2008

ಕುರುಡ ಕತ್ತ … (ಉತ್ತರ ಕನ್ನಡದ ಗಾದೆ – 136, 137 ಮತ್ತು 138)

ಕುರುಡ ಕತ್ತ ಹೊಸೆದಂತೆ.

ಬೆಂಕಿಯ ಪಕ್ಕದಲ್ಲಿ ಕುಳಿತು ಕುರುಡ ಒಂದು ಕಡೆಯಿಂದ ಕತ್ತ ಹೊಸೆಯುತ್ತಿದ್ದರೆ, ಹೊಸೆದ ಕತ್ತವೆಲ್ಲಾ ಇನ್ನೊಂದು ಕಡೆಯಲ್ಲಿ ಬೆಂಕಿಗೆ ತಾಗಿ ಸುಟ್ಟುಹೋಗಿತ್ತು. ಯಾವುದೋ ಕೆಲಸವನ್ನು ಒಂದು ಕಡೆಯಿಂದ ನಾವು ಮಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಅದು ಪ್ರಯೋಜನಕ್ಕೆ ಬಾರದಂತೆ ನಾಶ ಹೊಂದಿದರೆ ಈ ಗಾದೆಯನ್ನು ಬಳಸಬಹುದು. ಸಾಮಾನ್ಯವಾಗಿ ಮಾಡಿದ ಕೆಲಸ ಪ್ರಯೋಜನಕ್ಕೆ ಬಾರದಂತಾದಾಗ ಎಲ್ಲರೂ ಬಳಸುವ ಮಾತೆಂದರೆ ನೀರಿನಲ್ಲಿ ಹೋಮ ಮಾಡಿದಂತೆ ಅಥವಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.