December 11, 2007

ಬರಗಾಲದಲ್ಲಿ… (ಉತ್ತರ ಕನ್ನಡದ ಗಾದೆ – 99)

ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.

ಮೊದಲೆಂದೂ ಉಣ್ಣಲು ಆಸಕ್ತಿ ತೋರಿಸದ ಮಗ ಬರಗಾಲ ಬಂದೊಡನೆಯೇ ಉಣ್ಣಲು ಕಲಿಯತೊಡಗಿದ್ದ.

ಯಾವುದಾದರೂ ವಸ್ತುವಿನ ಕೊರತೆಯಿದ್ದಾಗ ಅದು ಬೇಕೆಂದು ಯಾರಾದರೂ ಕೇಳಿದರೆ ಈ ಗಾದೆ ಅನ್ವಯಿಸುತ್ತದೆ. ಸಿಹಿ ತಿಂಡಿಗಳನ್ನು ತಿನ್ನಲು ಎಂದೂ ಹೆಚ್ಚು ಆಸಕ್ತಿ ತೊರದ ನನ್ನ ತಮ್ಮ ಚಿಕ್ಕವನಿದ್ದಾಗ, ನೆಂಟರು ಬಂದಾಗ ಅದರಲ್ಲೂ ವಿಶೇಷವಾಗಿ ತಿಂಡಿ ಕಡಿಮೆಯಾಗಬಹುದು ಎಂಬ ಆತಂಕವಿದ್ದಾಗ ಅದನ್ನು ತಿನ್ನುತ್ತೇನೆಂದು ಕೇಳುತ್ತಿದ್ದ. ಆಗ ಅಮ್ಮ ಅವನಿಗೆ ಈ ಮಾತನ್ನು ಹೇಳುತ್ತಿದ್ದುದು ಇಂದೂ ಕೂಡ ನಮಗಿಬ್ಬರಿಗೂ ನೆನಪಿದೆ!!

December 10, 2007

ನನಗೂ ಸಾಕಾಗಿತ್ತು … (ಉತ್ತರ ಕನ್ನಡದ ಗಾದೆ – 98)

ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು.

ನನಗೂ ಅಲ್ಲಿರುವುದು ಬೇಕಾಗಿರಲಿಲ್ಲ. ಆದರೂ ಸುಮ್ಮನಿದ್ದೆ. ಅಷ್ಟರಲ್ಲಿ ನಾಯಕರೂ ಛೀ ಎಂದು ಹೀಯಾಳಿಸಿದರು. ತಕ್ಷಣ ಹೊರಬಿದ್ದು ಬಂದೆ.

ಅವನಿಗೆ ಯಾವುದೋ ಒಂದು ಸ್ಥಳದಿಂದ ಅಥವಾ ವ್ಯವಸ್ಥೆಯಿಂದ ಅಥವಾ ವ್ಯಕ್ತಿಯಿಂದ ದೂರವಾಗುವ ಮನಸ್ಸಿದೆ. ಆದರೆ ನಿರ್ಧಾರ ಮಾಡಲು ಆಗುತ್ತಿಲ್ಲ. ಅಷ್ಟರಲ್ಲಿ ಆ ವ್ಯವಸ್ಥೆ / ವ್ಯಕ್ತಿಯೇ ಅವನನ್ನು ದೂರಮಾಡಿಕೊಳ್ಳಲು ತಯಾರಿ ನಡೆಸಿದೆ/ ನಡೆಸಿದ್ದಾನೆ. ಅವನು ತಕ್ಷಣ ಹೊರಬಿದ್ದು ಬಂದು ಈ ಮಾತನ್ನು ಹೇಳುತ್ತಾನೆ.

December 7, 2007

ನಾವೇ ಸಾಯಬೇಕು … (ಉತ್ತರ ಕನ್ನಡದ ಗಾದೆ – 95, 96 ಮತ್ತು 97)

ನಾವೇ ಸಾಯಬೇಕು ಸ್ವರ್ಗ ಕಾಣಬೇಕು.

ಬೇರೆಯವರು ಸತ್ತರೆ ನಮಗೆ ಸ್ವರ್ಗ ಸಿಗುವುದಿಲ್ಲ. ನಾವು ಸತ್ತರೆ ಮಾತ್ರ ಸ್ವರ್ಗವನ್ನು ಕಾಣಲು ಸಾಧ್ಯ.

ಬೇರೆಯವರನ್ನು ನಂಬಿ ಕುಳಿತರೆ ನಮ್ಮ ಕೆಲಸ ಆಗುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು ಎಂಬುದು ಇದರ ಅರ್ಥ.

ಹೆಚ್ಚು ಕಡಿಮೆ ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಮಾತುಗಳೆಂದರೆ, ನಮ್ಮ ತಲೆಗೆ ನಮ್ಮ ಕೈ. ನಮಗೆ ಸಮಸ್ಯೆಗಳು ಬಂದಾಗ ನಮ್ಮ ತಲೆಯ ಮೇಲೆ ನಾವೇ ಕೈ ಹೊತ್ತುಕೊಳ್ಳಬೇಕೇ ವಿನಃ ಬೇರೆಯವರು ನಮ್ಮ ತಲೆಯ ಮೇಲೆ ಕೈ ಹೊರಿಸುವುದಿಲ್ಲ. ಅಂದರೆ ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳಬೇಕು.

ನಮಗೆ ನಾವು, ಗೋಡೆಗೆ ಮಣ್ಣು. ಮಣ್ಣಿನಿಂದಾದ ಗೋಡೆ ಹೇಗೆ ತನ್ನಷ್ಟಕ್ಕೇ ತಾನು ಭದ್ರವಾಗಿ ನಿಂತಿರುತ್ತದೆಯೋ ಹಾಗೆಯೇ ನಮ್ಮಷ್ಟ್ಟಕ್ಕೇ ನಾವು ಭದ್ರವಾಗಿ ನಿಲ್ಲಬೇಕು, ಇತರರು ಸಹಾಯ ಮಾಡಲಾರರು ಎಂದು ಅರ್ಥ.

December 6, 2007

ನಾನೂ ನಾಗಪ್ಪನೂ … (ಉತ್ತರ ಕನ್ನಡದ ಗಾದೆ – 94)

ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.

ನಾಗಪ್ಪ ಎಂದರೆ ಇಲ್ಲಿ ಹಾವು ಎಂದು ಅರ್ಥ. ನಿಜವಾಗಿ ಕಚ್ಚಿದವನು ನಾಗಪ್ಪ. ಹೇಳುವಾಗ ನಾನೂ ಮತ್ತು ನಾಗಪ್ಪನೂ ಸೇರಿ ಕಚ್ಚಿದೆವು ಎಂದು ಹೇಳಲಾಗಿದೆ.

ತಾನೇನೂ ಮಾಡದಿದ್ದರೂ ಕೆಲಸ ಆದ ಮೇಲೆ ತಾನೂ ಕೆಲಸದಲ್ಲಿ ಶಾಮೀಲಾಗಿದ್ದೆ, ತಾನು ಮತ್ತು ಇನ್ನೊಬ್ಬರು ಕೂಡಿ ಕೆಲಸ ಮಾಡಿದೆವು ಎಂದು ಹೇಳಿಕೊಳ್ಳುವವರ ಬಗೆಗಿನ ಮಾತು ಇದು. ಆದರೆ ನಿಜವಾಗಿ ಕೆಲಸವನ್ನು ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ!

December 5, 2007

ನೆತ್ತಿಯ ಮೇಲೆ ಬಾಯಿ … (ಉತ್ತರ ಕನ್ನಡದ ಗಾದೆ – 93)

ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.

ಗಂಟಲ ಮೇಲೆಯೇ ಬಾಯಿ ಇರುವುದರಿಂದ ಕಡಿಮೆ ಊಟ ಮಾಡಬೇಕಾಗುತ್ತದೆ. ಅದೇ ಬಾಯಿ ನೆತ್ತಿಯ ಮೇಲೆ ಇದ್ದಿದ್ದರೆ ಇನ್ನೂ ಹೆಚ್ಚು ಊಟ ಮಾಡಬಹುದಾಗಿತ್ತು.

ಹಣ ಗಳಿಸಲು ಇರುವ ಎಲ್ಲಾ ಮಾರ್ಗಗಳನ್ನೂ ಉಪಯೋಗಿಸಿದ ನಂತರವೂ ಹೊಸ ಮಾರ್ಗಕ್ಕಾಗಿ ಹಾತೊರೆಯುವವರನ್ನು ಕುರಿತು ಮಾಡಲಾದ ಗಾದೆ ಇದು. ಕೆಲವೊಮ್ಮೆ ತೀರಾ ಕಾಂಜೂಸಿ ವ್ಯಕ್ತಿಗಳ ಬಗ್ಗೆಯೂ ಬಳಸುವುದುಂಟು ಏಕೆಂದರೆ ಅವರು ಇನ್ನೂ ಹಣ ಉಳಿಸುವುದು ಹೇಗೆ ಎಂದು ಹಾತೊರೆಯುತ್ತಿರುತ್ತಾರೆ.

December 4, 2007

ಕುಂಬಳಕ್ಕೆ ಹೋಗುವುದರೊಳಗೇ … (ಉತ್ತರ ಕನ್ನಡದ ಗಾದೆ – 92)

ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.

ಕುಂಬಳ ಎಂದರೆ ಕರ್ನಾಟಕ-ಕೇರಳದ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಚಾಲ್ತಿಯಲ್ಲಿರುವ ಪ್ರದೇಶ. ಇದನ್ನು ಕುಂಬಳ ಸೀಮೆ ಎನ್ನುವುದು ರೂಢಿ. ಉತ್ತರ ಕನ್ನಡದ ಹುಡುಗರಿಗೆ ಕೆಲವೊಮ್ಮೆ ಇಲ್ಲಿಂದ ಹೆಣ್ಣು ತರುವುದೂ ಇದೆ.ಈ ಕುಂಬಳ ಪ್ರದೇಶದ ಜನರು ಹಿಂದಿನ ಕಾಲದಲ್ಲಿ ತಮ್ಮ ಕಿವಿಯನ್ನು ಹರಿದುಕೊಂಡಿರುತ್ತಿದ್ದರಂತೆ. ಅಂದರೆ ಕಿವಿಗೆ ಒಲೆ ಹಾಕಿಕೊಳ್ಳಲೆಂದು ಮಾಡಿರುವ ತೂತನ್ನು ತುಂಬಾ ದೊಡ್ಡದಾಗಿ ಮಾಡಿಕೊಂಡಿರುತ್ತಿದ್ದರು ಎಂದು ಕೇಳಿದ್ದೇನೆ. ಇತರ ಜನರು ಅಲ್ಲಿಗೆ ಹೋಗಬೇಕಾದ ಅಗತ್ಯ ಬಂದರೆ ಹೋಗುವ ಮೊದಲೇ ಕಿವಿ ಹರಿದುಕೊಳ್ಳುವ ಅಗತ್ಯವಿಲ್ಲ. ಅಲ್ಲಿ ಹೋಗಿ ನೋಡಿ, ಅಗತ್ಯ ಬಿದ್ದರೆ ಮಾತ್ರ ಹರಿದುಕೊಂಡರೆ ಸಾಕು.

ಏನಾದರೂ ಕೆಲಸವನ್ನು ಮಾಡುವಾಗ ಅಗತ್ಯವಿಲ್ಲದಿದ್ದರೂ ಮೊದಲೇ ಮಾಡಿಬಿಡುವುದು, ಆತವಾ ಯಾರಾದರೂ ಒಂದು ವಿಷಯವನ್ನು ವಿವರಿಸುತ್ತಿರುವಾಗ ಅವರಿಗೆ ಹೇಳಲೂ ಅವಕಾಶ ಕೊಡದೇ ಪ್ರಶ್ನೆ ಕೇಳಿದಾಗ ಈ ಮಾತನ್ನು ಹೇಳುತ್ತಾರೆ. ಬೇರೆಯವರಿಗೆ ವಿವರಿಸಲು ಬಿಟ್ಟು, ಅವರು ಮುಗಿಸಿದ ನಂತರ ಅಗತ್ಯವಿದ್ದರೆ ಮಾತ್ರ ಪ್ರಶ್ನಿಸಿದರೆ ಈ ಗಾದೆಯಿಂದ ತಪ್ಪಿಸಿಕೊಳ್ಳಬಹುದು!

December 3, 2007

ಒಲೆಯಿಂದ ಮೇಲೆ … (ಉತ್ತರ ಕನ್ನಡದ ಗಾದೆ – 91)

ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.

ಈ ಎರಡರಲ್ಲಿ ಯಾವುದು ಆದರೂ ಅನಾಹುತ ತಪ್ಪಿದ್ದಲ್ಲ. ಒಲೆಯಿಂದ ಮೇಲೆ ಬೆಂಕಿ ಆದರೆ ಈಡೀ ಮನೆಗೇ ಬೆಂಕಿ ಹೊತ್ತಿಕೊಳ್ಳಬಹುದು. ತೀರಿಸಲಾರದಷ್ಟು ಸಾಲವಾದರೂ ಸಂಕಷ್ಟಗಳು ಬರುತ್ತವೆ ಎಂಬ ಅರ್ಥವನ್ನು ಕೊಡುತ್ತದೆ.